ಕಿರುತೆರೆಯ ಚಾಕಲೇಟ್ ಹುಡುಗನಿಗೆ ವಿಲನ್ ಆಗಿ ಅಬ್ಬರಿಸುವ ಬಯಕೆ!
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಒಲವಿನ ನಿಲ್ದಾಣ' ಧಾರಾವಾಹಿಯಲ್ಲಿ ನಾಯಕ ಸಿದ್ಧಾಂತ್ ಅಣ್ಣ ಆಗಿ ಅಭಿನಯಿಸುತ್ತಿರುವ ಶ್ರೀರಾಮ್ ಪೋಷಕ ಪಾತ್ರಗಳ ಮೂಲಕ ಗುರುತಿಸಿಕೊಂಡಿರುವ ಹುಡುಗ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಶ್ರೀರಾಮ್ ಇಂಜಿನಿಯರಿಂಗ್ ಪದವೀಧರ ಸಹ ಹೌದು. ಬೆರಳೆಣಿಕೆಯಷ್ಟು ಧಾರಾವಾಹಿಗಳಲ್ಲಿ ನಟಿಸಿ ಸೀರಿಯಲ್ ಪ್ರಿಯರ ಮನ ಸೆಳೆದಿರುವ ಶ್ರೀರಾಮ್ಗೆ ವಿಲನ್ ಪಾತ್ರಕ್ಕೆ ಜೀವ ತುಂಬುವ ಮಹಾದಾಸೆ.
ಮುದ್ದು ಮುಖದ ತುಂಬಾ ಮುಗುಳುನಗೆ ತುಂಬಿರುವ ಕಾಣಲು ಚಾಕಲೇಟ್ ಹುಡುಗನಂತೆ ಇರುವ ಶ್ರೀರಾಮ್ ಗೆ ಹೀರೋ ಆಗಿ ರೊಮ್ಯಾನ್ಸ್ ಮಾಡಲು ಇಷ್ಟವಿಲ್ಲ. ಬದಲಿಗೆ ಮಚ್ಚು, ಲಾಂಗ್ ಹಿಡಿದು ಖಳನಾಯಕನಾಗುವ ಬಯಕೆ.
"ವಿಲನ್ ಆಗಿ ಕಾಣಿಸಿಕೊಳ್ಳಬೇಕು ಎಂಬುದು ನನ್ನ ಬಹುದಿನದ ಕನಸು. ಮೊದಲಿನಿಂದಲೂ ನನಗೆ ಹೀರೋ ಆಗಿ ನಟಿಸಬೇಕು ಎಂದು ಅನಿಸಲೇ ಇಲ್ಲ. ಬದಲಿಗೆ ವಿಲನ್ ಆಗಿ ಅಬ್ಬರಿಸಬೇಕು ಎಂಬುದೇ ನನ್ನ ಬಯಕೆ. ಆಕಸ್ಮಿಕವಾಗಿ ನಾನು ನಟನೆಗೆ ಕಾಲಿಟ್ಟಿದ್ದೇನೆ ನಿಜ, ಆದರೆ ಎಂದಿಗೂ ನಟನಾಗಿ ಮಿಂಚಬೇಕು ಎಂದು ಅನಿಸಿರಲೇ ಇಲ್ಲ. ಸಣ್ಣ ವಯಸ್ಸಿನಿಂದಲೂ ಬರೀ ಖಳನಾಯಕರೇ ನನ್ನನ್ನು ಆಕರ್ಷಿಸಿದ್ದು. ಹೊರತಾಗಿ ಯಾವುದೇ ಹೀರೋಗಳಲ್ಲ" ಎಂದು ನಗುತ್ತಾ ಹೇಳುತ್ತಾರೆ ಶ್ರೀರಾಮ್.

'ನಾಯಕನಾದರೆ ನಟನೆಗೆ ಅವಕಾಶ ಕಡಿಮೆ'
"ನಾಯಕನಾಗಿ ತೆರೆ ಮೇಲೆ ಕಾಣಿಸಿಕೊಳ್ಳಲು ಇಷ್ಟವಿಲ್ಲವೆಂದೇನಿಲ್ಲ. ಆದರೆ ನಾಯಕನ ಪಾತ್ರ ಮಾಡುವಾಗ ಒಳ್ಳೆಯವನಾಗಿರಬೇಕು. ತುಂಬಾ ಸಾಫ್ಟ್ ಕ್ಯಾರೆಕ್ಟರ್. ರೊಮ್ಯಾನ್ಸ್ ಮಾಡುವ ಲವರ್ ಬಾಯ್ ಥರ ಕಾಣಿಸಬೇಕಾಗುತ್ತದೆ. ಖಳನಾಯಕನ ಪಾತ್ರದಲ್ಲಿ ಹಾಗಲ್ಲ. ನಟನೆಗೆ ಅವಕಾಶ ಜಾಸ್ತಿ. ಎಕ್ಸ್ ಪ್ರೇಶನ್ ಅಲ್ಲಿ ತುಂಬಾ ಮುಖ್ಯವಾಗುತ್ತದೆ. ಹಾಗಾಗಿ ನನಗೆ ಖಳನಾಯಕನಾಗುವ ಕನಸು" ಎನ್ನುತ್ತಾರೆ ಶ್ರೀರಾಮ್.

ಶ್ಯಾಮಲತ್ತೆ ಮಗ ಶ್ಯಾಮಸುಂದರ!
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಾಧಾ ರಮಣ ಧಾರಾವಾಹಿಯಲ್ಲಿ ನಾಯಕ ರಮಣನ ಅಸಿಸ್ಟೆಂಟ್ ಸುಮೇಧ ಆಗಿ ಅಭಿನಯಿಸಿದ್ದ ಶ್ರೀರಾಮ್ ಮುಂದೆ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮಗಳು ಜಾನಕಿ ಧಾರಾವಾಹಿಯಲ್ಲಿ ಶ್ಯಾಮಲತ್ತೆ ಮಗ ಶ್ಯಾಮಸುಂದರ ಆಗಿ ನಟಿಸಿದರು.

ವೀಕ್ಷಕರ ಮನ ಸೆಳೆದಿದ್ದ ಶ್ರೀರಾಮ್
ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಹೂಮಳೆ ಧಾರಾವಾಹಿಯಲ್ಲಿ ಕಾರ್ಪೋರೇಟರ್ ಕಾವೇರಿ ಹಿರಿಯ ಮಗ ಉದಯ್ ಆಗಿ ನಟಿಸಿ ವೀಕ್ಷಕರ ಮನ ಸೆಳೆದಿದ್ದ ಶ್ರೀರಾಮ್ ಕಿರುತೆರೆ ಮಾತ್ರವಲ್ಲದೇ ಹಿರಿತೆರೆಯಲ್ಲಿಯೂ ಮೋಡಿ ಮಾಡಿದ್ದಾರೆ.

ಹಿರಿತೆರೆಯಲ್ಲೂ ಮಿಂಚಿದ ಪ್ರತಿಭೆ
"ದಿ ಪ್ಲಾನ್" ಸಿನಿಮಾದಲ್ಲಿ ನಟಿಸುವ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿರುವ ಶ್ರೀರಾಮ್ ನಂತರ "ದರ್ಪಣ" ಸಿನಿಮಾದಲ್ಲಿ ಖಳನಾಯಕನಾಗಿ ಅಬ್ಬರಿಸಿದರು. ಮುಂದೆ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ "ಗಿಮ್ಮಿಕ್" ಸಿನಿಮಾದಲ್ಲಿ ಗಣೇಶ್ ಸ್ನೇಹಿತನಾಗಿ ನಟಿಸಿರುವ ಶ್ರೀರಾಮ್ ಕೋಸ್ಟಲ್ ವುಡ್ ನಲ್ಲಿಯೂ ನಟನಾ ಕಂಪನ್ನು ಪಸರಿಸಿದ್ದಾರೆ. ತುಳುವಿನ ಪೆಟ್ಕಮ್ಮಿ ಸಿನಿಮಾದಲ್ಲಿ ಬಣ್ಣ ಹಚ್ಚಿರುವ ಶ್ರೀರಾಮ್ ಸದ್ಯ ಒಲವಿನ ನಿಲ್ದಾಣದ ಅದ್ವೈತ್ ಆಗಿ ವೀಕ್ಷಕರನ್ನು ರಂಜಿಸುತ್ತಿದ್ದಾರೆ.


Click it and Unblock the Notifications











