ಬೆಳ್ಳಿತೆರೆಯಲ್ಲಿ ಕಿರುತೆರೆ ನಟಿ ಅಮೂಲ್ಯ ಗೌಡ ಅದೃಷ್ಟ ಪರೀಕ್ಷೆ
ಕಿರುತೆರೆಯಲ್ಲಿ ನಾಲ್ಕು ಧಾರಾವಾಹಿಗಳಲ್ಲಿ ನಟಿಸಿ ಹೆಸರು ಮಾಡಿ ಮುಂದೆ ಪರಭಾಷೆಗಳಲ್ಲೋ ಅಥವಾ ಸಿನಿಮಾಗಳಲ್ಲಿ ಚಾನ್ಸ್ ಗಿಟ್ಟಿಸಿಕೊಲ್ಳುವುದು ಸರ್ವೇ ಸಾಮಾನ್ಯ. ಸಾಕಷ್ಟು ನಟ-ನಟಿಯರು ಕಿರುತೆರೆಗೆ ಎಂಟ್ರಿ ಕೊಟ್ಟು ಹಿರಿತೆರೆಯಲ್ಲಿ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿದ್ದಾರೆ.
ಗೋಲ್ಡನ್ ಸ್ಟಾರ್ ಗಣೇಶ್, ರಾಕಿಂಗ್ ಸ್ಟಾರ್ ಯಶ್, ರಾಧಿಕಾ ಪಂಡಿತ್ ಸೇರಿದಂತೆ ಸಾಕಷ್ಟು ಸ್ಟಾರ್ ಕಲಾವಿದರು ಕಿರುತೆರೆಯಲ್ಲಿ ಸಣ್ಣ-ಪುಟ್ಟ ಪಾತ್ರಗಳಲ್ಲಿ ಮೊದಲು ನಟಿಸಿದವರು. ಬಳಿಕ ನಿಧಾನವಾಗಿ ಸ್ಯಾಂಡಲ್ವುಡ್ಗೆ ಪಾದಾರ್ಪಣೆ ಮಾಡಿ ಒಳ್ಳೊಳ್ಳೆಯ ಸಿನಿಮಾಗಳನ್ನು ನೀಡಿದರು.
ಈಗಂತೂ ಕಿರುತೆರೆಗೆ ಬರುವ ಸಾಕಷ್ಟು ನಟ-ನಟಿಯರು ಸೀರಿಯಲ್ಗಳಲ್ಲಿ ಮಿಂಚಿ ಬಳಿಕ ಸಿನಿಮಾ ಕ್ಷೇತ್ರದಲ್ಲಿ ಮಿನುಗುವುದೇ ಹೆಚ್ಚು. ಇತ್ತೀಚಿಗೆ 'ಜೊತೆ ಜೊತೆಯಲಿ' ಅನು ಸಿರಿಮನೆ ಖ್ಯಾತಿಯ ನಟಿ ಮೇಘಾ ಶೆಟ್ಟಿ ನಾಯಕಿಯಾಗಿ ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. ಈ ಸಾಲಿಗೆ ಈಗ ಮತ್ತೊಬ್ಬ ನಟಿ ಸೇರಿಕೊಂಡಿದ್ದಾರೆ.

'ಕುರುಡು ಕಾಂಚಾಣ'ದಲ್ಲಿ ನಾಯಕಿ
ನಿಮಗೆಲ್ಲಾ ನಟಿ ಅಮೂಲ್ಯ ಗೌಡ ನೆನಪಿರಬಹುದು. ಕನ್ನಡದ ಕೆಲ ಧಾರಾವಾಹಿಗಳಲ್ಲಿ ನಟಿಸಿ ಮನೆ ಮಾತಾದವರು. ಈಗ ಅಮೂಲ್ಯ ಗೌಡ ಅವರು ತಮ್ಮ ಕನಸಿನ ಬೆನ್ನೇರಿದ್ದಾರೆ. ಸಿನಿಮಾದಲ್ಲಿ ನಟಿಸುತ್ತಿದ್ದು, ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ. 'ಕುರುಡು ಕಾಂಚಾಣ' ಎನ್ನುವ ಸಿನಿಮಾದಲ್ಲಿ ಅಮೂಲ್ಯ ಗೌಡ ಅವರು ಬಣ್ಣ ಹಚ್ಚಿದ್ದಾರೆ. ನಾಯಕಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕಿರುತೆರೆಯಲ್ಲಿ ನಟಿಸಿರುವ ಅನುಭವಿರುವ ಅಮೂಲ್ಯ ಗೌಡ ಅವರು ಸಾಕಷ್ಟು ತಾರೆಯರನ್ನು ಸಂದರ್ಶನ ಮಾಡಿದ್ದಾರೆ ಕೂಡ. ಅಮೂಲ್ಯ ಗೌಡ ಅವರಿಗೆ ನಿರೂಪಣೆಯ ಅನುಭವವೂ ಇದ್ದು, ಈಗ ಸಿನಿಮಾದಲ್ಲಿ ನಟಿಸುತ್ತಿರುವುದಕ್ಕೆ ಸಂತಸಗೊಂಡಿದ್ದಾರೆ.

ಅಪರಂಜಿ ಧಾರಾವಾಹಿಯಲ್ಲಿ ನಟನೆ
'ಅಪರಂಜಿ' ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ಅಮೂಲ್ಯ ಗೌಡ ಕೆಲ ಧಾರಾವಾಹಿಗಳಲ್ಲಿ ನಟಿಸಿದರು. 'ಅಗ್ನಿಸಾಕ್ಷಿ' ಮತ್ತು 'ನನ್ನರಸಿ ರಾಧೆ' ಧಾರಾವಾಹಿಗಳಲ್ಲಿ ಮಿಂಚಿದರು. 'ಅಗ್ನಿಸಾಕ್ಷಿ' ಧಾರಾವಾಹಿಯ ಬಳಿಕ ಅಮೂಲ್ಯ ಗೌಡ ಅವರು ಎರಡು ವರ್ಷಗಳ ಬ್ರೇಕ್ ಪಡೆದಿದ್ದರು. ನಂತರ 'ನನ್ನರಸಿ' ಧಾರಾವಾಹಿಯಲ್ಲಿ ಅಶ್ವಿನಿ ಪಾತ್ರದಲ್ಲಿ ಮನೆ ಮನೆ ತಲುಪಿದರು. ಅಗಸ್ತ್ಯನ ಸಹೋದರಿ ಪಾತ್ರವನ್ನು ಅಚ್ಚುಕಟ್ಟಾಗಿ ಅಮೂಲ್ಯ ಗೌಡ ಅವರು ನಿಭಾಯಿಸಿದರು.

ಹೊಸ ಭರವಸೆ ಕೊಟ್ಟ ಸಿನಿಮಾ
ಅಮೂಲ್ಯ ಗೌಡ ಅವರು ಈಗಾಗಲೇ ಶಿವರಾಜಕುಮಾರ್, ಉಪೇಂದ್ರ, ಮಾಲಾಶ್ರೀ, ರಮ್ಯಾ, ಸಂಗೀತ ಶೃಂಗೇರಿ, ಮತ್ತು ಭಾರತಿ ವಿಷ್ಣುವರ್ಧನ್ ಸೇರಿದಂತೆ ಹಲವು ತಾರೆಯರನ್ನು ಸಂದರ್ಶನ ಮಾಡಿದ್ದಾರೆ. ಇವರ ಜೊತೆಗಿನ ಸಂಪರ್ಕ ಅಮೂಲ್ಯ ಗೌಡ ಅವರಿಗೆ ಸಿನಿಮಾದತ್ತ ಬರುವಂತೆ ಮಾಡಿದೆಯಂತೆ. ಸಿನಿಮಾ ಮೇಲಿನ ಸೆಳೆತ ಹೆಚ್ಚಾದ ಬಳಿ ಅಮೂಲ್ಯ ಗೌಡ ಅವರು ಸ್ಯಾಂಡಲ್ವುಡ್ ನಲ್ಲಿ ಸಕ್ರಿಯರಾಗಲು ಮುಂದಾದರು. ಆರಂಭಿಕ ಪ್ರಾಜೆಕ್ಟ್ ಗಳು ಕೈಕೊಟ್ಟರೂ ಈಗ 'ಕುರುಡು ಕಾಂಚಾಣ' ಸಿನಿಮಾ ಅಮೂಲ್ಯ ಗೌಡ ಅವರಲ್ಲಿ ಹೊಸ ಬೆಳಕನ್ನು ಮೂಡಿಸಿದೆ.

ಕೇರಳದಲ್ಲಿ ಸಾಂಗ್ ಶೂಟಿಂಗ್
ಇನ್ನು 'ಕುರುಡು ಕಾಂಚಾಣ' ಚಿತ್ರದಲ್ಲಿ ಅಮೂಲ್ಯ ಗೌಡ ನಾಯಕಿಯಾಗಿದ್ದು, ಕಿರಣ್ ರಾಜ್ ನಾಯಕರಾಗಿ ಬಣ್ಣ ಹಚ್ಚಿದ್ದಾರೆ. ಇದರಲ್ಲಿ ಅಮೂಲ್ಯ ಅವರದ್ದು, ಹೈಪರ್, ಬಬ್ಲಿ ಮತ್ತು ನೇರ ಸ್ವಾಭಾವದ ಪಾತ್ರ. ಜನ್ನಿ ಎಂಬ ಪಾತ್ರದಲ್ಲಿ ಅಮೂಲ್ಯ ಕಾಣಿಸಿಕೊಂಡಿದ್ದಾರೆ. ಅದಾಗಲೇ ಚಿತ್ರದ ಪೋಸ್ಟರ್ ಕೂಡ ರಿಲೀಸ್ ಆಗಿದೆ. ಸಿನಿಮಾದ ಹಾಡಿನ ಶೂಟಿಂಗ್ ಗಾಗಿ ಮುಂದಿನ ವಾರ ಕೇರಳಕ್ಕೆ ತೆರಳುತ್ತಿದ್ದಾರೆ. ಇನ್ನು 'ಕುರುಡು ಕಾಂಚಾಣ' ಚಿತ್ರವನ್ನು ಎಸ್. ಪ್ರದೀಪ್ ವರ್ಮಾ ನಿರ್ದೇಶಿಸುತ್ತಿದ್ದಾರೆ. ವಿ ಟಾಕೀಸ್ ನಿರ್ಮಾಣದ ಹೊಣೆ ಹೊತ್ತಿದ್ದು, ಗೀತಾ ಕೈವರ್ ಅವರ ಸಂಗೀತವಿದೆ. ಈ ಚಿತ್ರವನ್ನು ಪ್ರವೇಣ್ ಶೆಟ್ಟಿ ಅವರ ಛಾಯಾಗ್ರಹಣವಿದ್ದು, ಇನ್ನೇನು ಕೆಲವೇ ತಿಂಗಳಲ್ಲಿ ತೆರೆ ಮೇಲೆ ಬರಲಿದೆ.


Click it and Unblock the Notifications











