ಕಿರುತೆರೆಯಿಂದ ಹಿರಿತೆರೆಗೆ ಬಡ್ತಿ ಪಡೆದ ಗುಂಡಮ್ಮ ಗೀತಾ ಭಾರತಿ ಭಟ್
'ಬ್ರಹ್ಮಗಂಟು' ಧಾರಾವಾಹಿ ಹಾಗೂ 'ಸೂಪರ್ ಕ್ವೀನ್' ರಿಯಾಲಿಟಿ ಶೋ ಮೂಲಕ ಚಿರಪರಿಚಿತರಾಗಿರುವ ನಟಿ ಗೀತಾ ಭಾರತಿ ಭಟ್ ಈಗ ಸ್ಯಾಂಡಲ್ವುಡ್ನಲ್ಲಿ ಬ್ಯುಸಿಯಾಗಿದ್ದಾರೆ. 'ಸರಿಗಮಪ' ರಿಯಾಲಿಟಿ ಶೋನಲ್ಲಿ ಭಾಗವಹಿಸುವ ಆಸೆಯಿಂದ ಕಿರುತೆರೆಗೆ ಎಂಟ್ರಿಕೊಟ್ಟು, ಕೊನೆಗೆ 'ಬ್ರಹ್ಮಗಂಟು' ಧಾರಾವಾಹಿಯಲ್ಲಿ ನಾಯಕಿಯಾಗಿ ಕಾಣಿಸಿಕೊಂಡು ಗೀತಾ, ದಪ್ಪಗಿದ್ದರೂ ಕೂಡ ಎಲ್ಲರ ಗಮನ ಸೆಳೆದರು.
ಕಾರಣಾಂತರಗಳಿಂದ ಗೀತಾ ಅವರು ದಪ್ಪಗಿದ್ದರು. ಅನೇಕ ವರ್ಷಗಳ ಬಳಿಕ ಸಣ್ಣಗಾಗಲು ನಿರ್ಧಾರ ಮಾಡಿದ್ದಾರೆ. ಇದು ಗೀತಾ ಅವರ ಹಲವು ವರ್ಷಗಳ ಕನಸು. ಕಳೆದ ಹತ್ತು ತಿಂಗಳಿಂದ ಸತತ ಪ್ರಯತ್ನ ಪಡುತ್ತಿದ್ದಾರೆ. ಗೀತಾ ಭಾರತಿ ಭಟ್ ಬಾಸ್ಕೆಟ್ ಬಾಲ್ ಆಡುತ್ತಿದ್ದದ್ದೇ ಹೆಚ್ಚಂತೆ. ಹೀಗೆ ಬಾಸ್ಕೆಟ್ ಬಾಲ್ ಆಡುವಾಗ ಬಿದ್ದು, ಪೆಟ್ಟಾಗಿ ಸರ್ಜರಿ ಮಾಡಿಸಿದ ಬಳಿಕ ನಡೆದಾಡಲು ಆಗುತ್ತಿರಲಿಲ್ಲವಂತೆ. ಆಗ ದಪ್ಪಗಾದ ಗೀತಾ ಅವರು ಥೈರಾಯ್ಡ್ ಸಮಸ್ಯೆಯಿಂದಲೂ ಬಳಲಿದ್ದಾರೆ.

ಮಿಡಲ್ ಕ್ಲಾಸ್ ಕುಟುಂಬದಲ್ಲಿ ಜನಿಸಿದ ಗೀತಾ ಅವರಿಗೆ ತಮ್ಮ ತಾಯಿ ಎಂದರೆ ಅಚ್ಚುಮೆಚ್ಚು. ತಮ್ಮ ಮನೆಯಲ್ಲಿ ಕಷ್ಟ ಬಂದಾಗ ತಾಯಿ ಕೆಲಸಕ್ಕೆ ಹೋಗಿ, ಮನೆ ಹಾಗೂ ಕೆಲಸ ಎರಡನ್ನೂ ನಿಭಾಯಿಸಿ ಕಷ್ಟಪಟ್ಟಿದ್ದಾರೆ ಎಂದು ರಿಯಾಲಿಟಿ ಶೋ ಒಂದರಲ್ಲಿ ಹೇಳಿಕೊಂಡಿದ್ದಾರೆ. ಅಮ್ಮನ ಹೆಸರನ್ನು ಟ್ಯಾಟೂ ಹಾಕಿಸಿಕೊಂಡಿದ್ದಾರೆ.
ಗೀತಾ ಭಾರತಿ ಭಟ್ ಅವರು ಕಳೆದ ಒಂದೂವರೆ ವರ್ಷದಿಂದ ಡಯಟ್, ವರ್ಕೌಟ್ ಎಂದು ಬ್ಯುಸಿಯಾಗಿದ್ದಾರೆ. ಇದರ ನಡುವೆಯೇ 'ಸೂಪರ್ ಕ್ವೀನ್' ರಿಯಾಲಿಟಿ ಶೋನಲ್ಲೂ ಭಾಗವಹಿಸಿ ಪ್ರೇಕ್ಷಕರ ಮನ ಗೆದ್ದಿದ್ದರು. ಡಯೆಟಿಷಿಯನ್ ಸಲಹೆ ಮೇರೆಗೆ ಡಯೆಟ್ ಮಾಡುತ್ತಿದ್ದಾರೆ. ಇದರಿಂದ ತಮ್ಮ ಆರೋಗ್ಯದ ಕಡೆಗೆ ಹೆಚ್ಚು ಗಮನ ನೀಡಿದ್ದಾರೆ.
ವರ್ಕೌಟ್, ಡಯೆಟ್ ಮಾಡಿರೋದರಿಂದ ಗೀತಾ ಅವರು ಈಗ ತುಂಬ ಲೈಟ್ ಆಗಿ ಫೀಲ್ ಆಗಲು ಶುರುವಾಗಿದೆಯಂತೆ. ಜೀವನ ಶೈಲಿ ಒಳ್ಳೆಯ ರೀತಿಯಲ್ಲಿ ಕೂಡ ಬದಲಾಗಿದೆಯಂತೆ. ಗೀತಾ ಅವರು 50 ಕೆಜಿ ತೂಕ ಇಳಿಸಿಕೊಳ್ಳುವ ಟಾರ್ಗೆಟ್ ಇಟ್ಟುಕೊಂಡಿದ್ದು, ಸದ್ಯ 30 ಕೆಜಿ ತೂಕವನ್ನು ಇಳಿಸಿಕೊಂಡಿದ್ದಾರೆ. ಇನ್ನು ಕೆಲವೇ ತಿಂಗಳಲ್ಲಿ ಟಾರ್ಗೆಟ್ ಕಂಪ್ಲೀಟ್ ಮಾಡಲಿದ್ದಾರೆ.

ಇನ್ನು ಗೀತಾ ಅವರು ಕಿರುತೆರೆ ಅಷ್ಟೇ ಅಲ್ಲದೇ, ಹಿರಿತೆರೆಯಲ್ಲೂ ಕಾಣಿಸಿಕೊಂಡಿದ್ದಾರೆ. ಸಿನಿಮಾ ಒಂದಕ್ಕೆ ಬಣ್ಣ ಹಚ್ಚಿರುವ ಗೀತಾ, ಇದೀಗ ಅದರ ಪೋಸ್ಟರ್ ಹಾಗೂ ಟೀಸರ್ ರಿಲೀಸ್ ಆಗಿದೆ. ಕೆಲವೇ ದಿನಗಳಲ್ಲಿ ಟ್ರೈಲರ್ ಕೂಡ ರಿಲೀಸ್ ಆಗುತ್ತದೆ ಎಂದು ಹೇಳಿದ್ದಾರೆ. ವರ್ಕೌಟ್ ಜೊತೆಗೆ ಸದ್ದಿಲ್ಲದೇ, ಗೀತಾ ಅವರು ಸಿನಿಮಾದಲ್ಲೂ ನಟಿಸಿದ್ದು, ಚಿತ್ರದ ಹೆಸರು ಡಿಫರೆಂಟ್ ಆಗಿದೆ. 'ರವಿಕೆ ಪ್ರಸಂಗ' ಚಿತ್ರದಲ್ಲಿ ಗೀತಾ ಅವರು ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ನ್ಯಾಷನಲ್ ಇಶ್ಯು ಎಂದು ಟ್ಯಾಗ್ ಲೈನ್ ಕೊಡಲಾಗಿದೆ.
ಸಂತೋಷ್ ಕೋಡೆನ್ಕೇರೆ ಅವರ ನಿರ್ದೇಶನಲ್ಲಿ 'ರವಿಕೆ ಪ್ರಸಂಗ' ಸಿನಿಮಾ ಮೂಡಿ ಬಂದಿದೆ. ಈ ಚಿತ್ರದಲ್ಲಿ ಸುಮನ್ ರಂಗನಾಥ್, ರಾಕೇಶ್ ಮಯ್ಯ, ಸಂಪತ್ ಮೈತ್ರೇಯ, ಪದ್ಮಜಾ ರಾವ್, ಕೃಷ್ಣ ಮೂರ್ತಿ ಕಾಟಾರ್, ಪ್ರವೀಣ್ ಅಥರ್ವ, ರಘು ಪಾದೇಶ್ವರ್, ಕುಶಿ ಆಚಾರ್ ಮತ್ತು ರಾಹು ಪಾದೇಶ್ವರ್ ಸೇರಿದಂತೆ ಹಲವರು ನಟಿಸಿದ್ದಾರೆ.
ಇನ್ನು ರವಿಕೆ ವಿಚಾರವಾಗಿ ಕೋರ್ಟ್ನಲ್ಲಿ ದಾವೆ ಹೂಡಿರುವ ಕಥೆ ಇದಾಗಿದ್ದು, ಎಲ್ಲರನ್ನು ನಗಿಸುವ ಕಾಮಿಡಿ ಸಿನಿಮಾ ಇದಾಗಿದೆ. ಇದರಲ್ಲಿ ಗೀತಾ ಅವರದ್ದು, ಸೋಲೋ ಲೀಡ್ ರೋಲ್ ಆಗಿದೆ. ಕೇವಲ ಒಂದು ರವಿಕೆಯ ಸುತ್ತ ನಡೆಯುವ ಈ ಕಥೆಯ ಟೀಸರ್ ನೋಡಲು ಚೆನ್ನಾಗಿದ್ದು, ಇದನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.


Click it and Unblock the Notifications











