ಕಲರ್ಸ್ ಕನ್ನಡದಿಂದ ಬಂದ ಒಂದು ಕರೆ ಈ ನಟಿಯ ಬದುಕನ್ನೇ ಬದಲಿಸಿದ್ದೇಗೆ?
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ 'ಆಸೆ'ಯೂ ಒಂದು. ಚಂದನವನದ ಎವರ್ ಗ್ರೀನ್ ನಟ ರಮೇಶ್ ಅರವಿಂದ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಆಸೆ' ಧಾರಾವಾಹಿಯಲ್ಲಿ ನಾಯಕಿ ಮೀನಾಳಾಗಿ ಪ್ರಿಯಾಂಕಾ ನಟಿಸುತ್ತಿದ್ದಾರೆ. ತಮ್ಮ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿರುವ ಪ್ರಿಯಾಂಕಾ ಬಾಲ್ಯದಲ್ಲಿಯೇ ನಟಿಯಾಗಬೇಕು ಎಂದು ಬಯಸಿದ್ದರು.
ಸಣ್ಣ ವಯಸ್ಸಿನಿಂದಲೂ ನಟಿಯಾಗಬೇಕು, ಬಣ್ಣದ ಲೋಕದಲ್ಲಿ ಬದುಕು ರೂಪಿಸಿಕೊಳ್ಳಬೇಕು ಎಂಬ ಬಯಕೆ ಹೊಂದಿದ್ದ ಪ್ರಿಯಾಂಕಾ ಇಂದು ಕಿರುತೆರೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ತಮ್ಮ ಬಯಕೆಯನ್ನು ಈಡೇರಿಸಿಕೊಂಡಿದ್ದಾರೆ. ಮೊದಲಿನಿಂದಲೂ ಸೋಶಿಯಲ್ ಮೀಡಿಯಾದಲ್ಲಿ ಕೊಂಚ ಆ್ಯಕ್ಟಿವ್ ಆಗಿದ್ದ ಈಕೆ ಸಮಯ ಸಿಕ್ಕಾಗಲೆಲ್ಲಾ ರೀಲ್ಸ್ ಮಾಡಿ ಪೋಸ್ಟ್ ಮಾಡುತ್ತಿದ್ದರು. ಮುಂದೆ ನಟಿಯಾಗಬೇಕು ಎಂಬ ನಿರ್ಧಾರ ಮಾಡಿದ್ದೇ ಆಡಿಶನ್ ನೀಡುವ ಯೋಚನೆ ಮಾಡಿದರು.

ಅದೇ ಕಾರಣದಿಂದ ಪದವಿ ವಿದ್ಯಾಭ್ಯಾಸ ಮುಗಿದದ್ದೇ ಆಡಿಶನ್ಗಳನ್ನು ನೀಡಲು ಬೇಕಾದ ತಯಾರಿಗಳನ್ನು ಈಕೆ ಮಾಡಿಕೊಂಡಿದ್ದರು. ಅದೇ ಸಮಯದಲ್ಲಿ ಕಲರ್ಸ್ ಕನ್ನಡ ವಾಹಿನಿಯಿಂದ ಬಂದ ಕರೆಯೊಂದು ಆಕೆಯ ಬದುಕನ್ನೇ ಬದಲಾಯಿಸಿತು. ಆಡಿಶನ್ ಇದೆ ಬನ್ನಿ ಎಂದ ಕರೆಗೆ ಓಗೊಟ್ಟು ಹೋದ ಪ್ರಿಯಾಂಕಾ ಅವರು ಕೊಟ್ಟ ಸೀನ್ನಲ್ಲಿ ನಟಿಸಿದರು. ಮೊದಲ ಆಡಿಶನ್ ಆಗಿತ್ತು. ಹಾಗಾಗಿ ಒಳಗೊಳಗೆ ಕೊಂಚ ಭಯವಿತ್ತು. ಆಡಿಶನ್ ಕೊಟ್ಟ ಪ್ರಿಯಾಂಕಾಗೆ ಆಯ್ಕೆ ಆಗುತ್ತಾರಾ ಇಲ್ಲವೋ ಎಂಬ ಅಳುಕು ಕೂಡಾ ಇತ್ತು.
ಮುಂದೆ ನೀವು ಆಯ್ಕೆಯಾಗಿದ್ದೀರಾ ಎಂದು ವಾಹಿನಿಯಿಂದ ಕರೆಬಂದಾಗ ಸ್ವರ್ಗಕ್ಕೆ ಮೂರೇ ಗೇಣು. ಕಲರ್ಸ್ ಕನ್ನಡ ಧಾರಾವಾಹಿಯಲ್ಲಿ ಪ್ರಸಾರವಾಗುತ್ತಿದ್ದ "ಪುಣ್ಯವತಿ" ಧಾರಾವಾಹಿಗೆ ನಾಯಕಿಯಾಗಿ ಆಯ್ಕೆಯಾಗಿದ್ದರು ಪ್ರಿಯಾಂಕಾ. ಮೊದಲ ಧಾರಾವಾಹಿಯಲ್ಲಿ ಹಳ್ಳಿ ಹುಡುಗಿಯಾಗಿ ನಟಿಸಿ ಸೀರಿಯಲ್ ಪ್ರಿಯರ ಮನ ಗೆದ್ದ ಪ್ರಿಯಾಂಕಾ ಇದೀಗ ಮೀನಾ ಆಗಿ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ.
ಉತ್ತಮ ಕಥೆ, ಪಾತ್ರಗಳು ದೊರೆತರೆ ನಾನು ಖಂಡಿತವಾಗಿಯೂ ಸಿನಿಮಾದಲ್ಲಿ ಅಭಿನಯಿಸುತ್ತೇನೆ ಎಂದು ಹೇಳುವ ಪ್ರಿಯಾಂಕಾ ಅವರಿಗೆ ನಟನೆಯ ಮೇಲೆ ಹುಚ್ಚು ಪ್ರೀತಿ ಮೂಡಲು ಮೂಲ ಕಾರಣ ಥಿಯೇಟರ್ ಕ್ಲಬ್. ಆಶ್ಚರ್ಯ ಎಂದೆನಿಸಿದರೂ ಇದು ಸತ್ಯ.

ಪದವಿ ವಿದ್ಯಾರ್ಥಿನಿಯಾಗಿದ್ದಾಗ ಬೇಲೂರು ರಘುನಂದನ್ ಅವರ ರಂಗ ಚಿರಂತನ ಕ್ಲಬ್ನ ರಂಗ ಚಟುವಟಿಕೆಗಳನ್ನು ಕಂಡು ಪ್ರಿಯಾಂಕಾ ಮನಸೋತಿದ್ದರು. ಮುಂದೆ ಆ ಥಿಯೇಟರ್ ಕ್ಲಬ್ ಸೇರಿದ ಈಕೆಗೆ ದಿನವೂ ರಂಗ ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿರಲಿಲ್ಲ. ಈಕೆ ಸೈನ್ಸ್ ವಿದ್ಯಾರ್ಥಿನಿಯಾಗಿದ್ದ ಕಾರಣ ಬರೀ ಒಂದರಿಂದ ಎರಡು ತಿಂಗಳುಗಳ ಕಾಲ ಮಾತ್ರ ಆ ಥಿಯೇಟರ್ನಲ್ಲಿ ಸಕ್ರಿಯರಾಗಿದ್ದರು.
ಸದ್ಯ ಮೀನಾ ಪಾತ್ರದ ಮೂಲಕ ಕಿರುತೆರೆಯಲ್ಲಿ ಬ್ಯುಸಿಯಾಗಿರುವ ಪ್ರಿಯಾಂಕಾ ಅವರಿಗೆ 'ಆಸೆ' ಧಾರಾವಾಹಿಯಲ್ಲಿ ಅಭಿನಯಿಸುತ್ತಿರುವುದಕ್ಕೆ ಖುಷಿಯಿದೆ.


Click it and Unblock the Notifications











