'ಹಿಟ್ಲರ್ ಕಲ್ಯಾಣ' ಧಾರಾವಾಹಿ ಅಂತ್ಯ: ಪ್ರೋತ್ಸಾಹ ನೀಡಿದ ವೀಕ್ಷಕರಿಗೆ ಧನ್ಯವಾದ ಎಂದ ನಟಿ ರಜಿನಿ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಧಾರಾವಾಹಿಗಳ ಪೈಕಿ 'ಹಿಟ್ಲರ್ ಕಲ್ಯಾಣ'ವೂ ಒಂದು. ದಿಲೀಪ್ ರಾಜ್ ಹಾಗೂ ಮಲೈಕಾ ವಸುಪಾಲ್ ನಾಯಕ - ನಾಯಕಿಯಾಗಿ ನಟಿಸುತ್ತಿದ್ದ 'ಹಿಟ್ಲರ್ ಕಲ್ಯಾಣ' ಧಾರಾವಾಹಿ ಕಳೆದ ವಾರ ತನ್ನ ಪಯಣವನ್ನು ನಿಲ್ಲಿಸಿದೆ. ಈ ಧಾರಾವಾಹಿಯಲ್ಲಿ ಅಂತರಾ ಆಲಿಯಾಸ್ ಪ್ರಾರ್ಥನಾ ಆಗಿ ನಟಿಸುತ್ತಿದ್ದ ನಟಿ ರಜಿನಿ ಅವರು ಧಾರಾವಾಹಿ ಮುಕ್ತಾಯದ ಬಗ್ಗೆ ಮಾತನಾಡಿದ್ದಾರೆ.
ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ನಟಿ ರಜಿನಿ ಅವರು ದಶಕಕ್ಕೂ ಹೆಚ್ಚಿನ ಕಾಲದಿಂದಲೂ ಪರಿಚಯ. ಸ್ಟಾರ್ ಸುವರ್ಣ ವಾಹಿನಿಯ ಜನಪ್ರಿಯ ಧಾರಾವಾಹಿ 'ಅಮೃತವರ್ಷಿಣಿ'ಯಲ್ಲಿ ನಾಯಕಿ ಅಮೃತಾಳಾಗಿ ನಟಿಸುವ ಮೂಲಕ ನಟನ ಕ್ಷೇತ್ರಕ್ಕೆ ಕಾಲಿಟ್ಟಿದ್ದರು ಈಕೆ. ಅದಾದ ಮೇಲೆ 'ಆತ್ಮಬಂಧನ' ಧಾರಾವಾಹಿ, ಮಜಾ ಟಾಕೀಸ್, ಸೂಪರ್ ಕ್ವೀನ್ ಸೇರಿದಂತೆ ಹಲವಾರು ರಿಯಾಲಿಟಿ ಶೋ ಗಳಲ್ಲಿ ತಮ್ಮ ಪ್ರತಿಭೆಯನ್ನು ಸಾಬೀತು ಮಾಡಿದ್ದಾರೆ.

ಮನೋಜ್ಞ ನಟನೆಯ ಮೂಲಕ ಹಿರಿತೆರೆಯಲ್ಲಿಯೂ ಮೋಡಿ ಮಾಡಿದ ಈಕೆ 'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ನೆಗೆಟಿವ್ ರೋಲ್ ಅನ್ನು ಮಾಡಿದರು. ಅಂತರಾ ಆಲಿಯಾಸ್ ಪ್ರಾರ್ಥನಾ ಎಂಬ ಪಾತ್ರಕ್ಕೆ ಅಚ್ಚುಕಟ್ಟಾಗಿ ಜೀವ ತುಂಬಿದ ಈಕೆ ಇದೀಗ ಈ ಧಾರಾವಾಹಿ ಮುಕ್ತಾಯವಾಗುತ್ತಿರುವುದರಿಂದ ತಮ್ಮ ಅನಿಸಿಕೆ ಹಾಗೂ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಒಂದು ವಿಡಿಯೋ ಮೂಲಕ ಇನ್ಸ್ಟಾಗ್ರಾಮ್ ಅಲ್ಲಿ ಈ ವಿಚಾರವನ್ನು ಶೇರ್ ಮಾಡಿಕೊಂಡಿರುವ ನಟಿ ರಜಿನಿಯವರು "ಅಂತರ ಪಾತ್ರವನ್ನು ಬಹಳಷ್ಟು ಜನ ಮೆಚ್ಚಿಕೊಂಡಿದ್ದೀರ. ಇಷ್ಟು ದಿನ ಪಾಸಿಟಿವ್ ಹಾಗೂ ನೆಗೆಟಿವ್ ಎರಡೂ ರೀತಿಯ ಕಾಮೆಂಟ್ಗಳು ನನಗೆ ಬಂದಿದೆ. ಇದು ನನಗೆ ಪಾತ್ರ ಪೋಷಣೆಗೆ ಬಹಳಷ್ಟು ಸಹಾಯ ಮಾಡಿದೆ. ಇಷ್ಟು ದಿನಗಳ ಕಾಲ 'ಹಿಟ್ಲರ್ ಕಲ್ಯಾಣ' ಧಾರಾವಾಹಿಯನ್ನು ವೀಕ್ಷಿಸಿ ನಮ್ಮೆಲ್ಲರಿಗೂ ಸಪೋರ್ಟ್ ನೀಡಿದ ಎಲ್ಲಾ ಪ್ರೇಕ್ಷಕರಿಗೂ ನನ್ನ ಪ್ರೀತಿಯ ವಂದನೆಗಳು" ಎಂದು ಆ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

"ಮೊದಲನೆಯದಾಗಿ ಜೀ ವಾಹಿನಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಈ ಧಾರಾವಾಹಿಯಲ್ಲಿ ನಾನು ಇಷ್ಟು ಚೆನ್ನಾಗಿ ಕಾಣಲು ನಮ್ಮ ನಿರ್ಮಾಪಕರಾದ ವಿದ್ಯಾ ಮೇಡಂ ಅವರೇ ಕಾರಣ. ಜೊತೆಗೆ ನಟನೆ ಯುದ್ದಕ್ಕೂ ನಮ್ಮೊಂದಿಗಿದ್ದು ಸಹಕರಿಸಿರುವ ಎಲ್ಲಾ ಸಹ ಕಲಾವಿದರಿಗೂ ನಾನು ಚಿರಋಣಿ. ಮೊದಲ ಬಾರಿ ನೆಗೆಟಿವ್ ರೋಲ್ ಮಾಡಲು ನನಗೆ ಸ್ಪೂರ್ತಿ ತುಂಬಿದ ನಮ್ಮ ನಿರ್ದೇಶಕರಾದ ಧರಣಿ ಸರ್ಗೂ ತುಂಬಾ ಥ್ಯಾಂಕ್ಸ್. ಹಾಗೆ ಟೆಕ್ನಿಷಿಯನ್ಸ್ ಹಾಗೂ ಕ್ಯಾಮೆರಾಮೆನ್ ಎಲ್ಲರಿಗೂ ನಾನು ಥ್ಯಾಂಕ್ಸ್ ಹೇಳಲು ಬಯಸುತ್ತೇನೆ. ನಿಮ್ಮ ಪ್ರೀತಿ ಹಾಗೂ ಪ್ರೋತ್ಸಾಹ ಹೀಗೆ ಮುಂದುವರೆಯಲಿ" ಎಂದು ಭಾವುಕವಾಗಿ ಹೇಳಿಕೊಂಡಿದ್ದಾರೆ.
ಅಂದ ಹಾಗೇ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ತೆರೆಯ ಹಿಂದೆ ನಡೆದಿರುವಂತಹ ಸೀನ್ ಗಳ ತುಣುಕೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ನಮ್ಮ ತಮ್ಮ ಸಹ ಕಲಾವಿದರೊಂದಿಗೆ ಮಾಡಿರುವ ಮೋಜು ಮಸ್ತಿಗಳ ಕೆಲವು ತುಣುಕುಗಳನ್ನು ಶೇರ್ ಮಾಡಿದ್ದಾರೆ. ಕೊನೆಗೆ ನನ್ನ ನೀನು ಗೆಲ್ಲಲಾರೆ ತಿಳಿದು ತಿಳಿದು ಛಲವೇತಕೆ ಎಂಬ ಹಾಡಿನೊಂದಿಗೆ ವಿಡಿಯೋವನ್ನು ಮುಕ್ತಾಯಗೊಳಿಸಿದ್ದಾರೆ.
ಈ ವಿಡಿಯೋಗೆ ಮೂರು ಸಾವಿರಕ್ಕೂ ಹೆಚ್ಚು ಲೈಕ್ಗಳು ಬಂದಿದ್ದು, ಪ್ರೇಕ್ಷಕರು ಹಾಗೂ ಅಭಿಮಾನಿಗಳು ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಇಷ್ಟು ಬೇಗ ಧಾರಾವಾಹಿ ನಿಲ್ಲಬಾರದಿತ್ತು, ತುಂಬಾ ಬೇಸರವಾಗಿದೆ ಎಂಬೆಲ್ಲಾ ಪ್ರತಿಕ್ರಿಯೆಗಳು ಬಂದಿವೆ. ಎಲ್ಲಾ ಪ್ರತಿಕ್ರಿಯೆಗಳು ಹಾಗೂ ಪ್ರೇಕ್ಷಕರ ಬೇಡಿಕೆ ಧಾರವಾಹಿಯ ಒಳ್ಳೆಯ ರೀತಿಯಲ್ಲಿ ಸಾಗಿರುವ ಹಾದಿ ಹಾಗೂ ಧಾರಾವಾಹಿ ಯಶಸ್ಸನ್ನು ತೋರಿಸುತ್ತದೆ.


Click it and Unblock the Notifications











