ಕಿರುತೆರೆ ನಟಿ ತುನಿಷಾ ಶರ್ಮಾ ಸಾವಿನ ಪ್ರಕರಣ: ಮರಣೋತ್ತರ ಪರೀಕ್ಷೆ ವರದಿಯಲ್ಲಿ ಏನಿದೆ?
ಹಿಂದಿ ಕಿರುತೆರೆ ನಟಿ ತುನಿಷಾ ಶರ್ಮಾ ಶೂಟಿಂಗ್ ಸೆಟ್ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದು, ಸಂಚಲನ ಸೃಷ್ಟಿಸಿತ್ತು. ಮೇಲ್ನೋಟಕ್ಕೆ ಆತ್ಮಹತ್ಯೆ ರೀತಿ ಕಂಡಿದ್ದರೂ ಈ ಬಗ್ಗೆ ತನಿಖೆ ನಡೆಯುತ್ತಿದೆ. ಆದರೆ ಇದು ಆತ್ಮಹತ್ಯೆ ಅಲ್ಲ ಎಂದು ಆಕೆಯ ತಾಯಿ ಸೇರಿದಂತೆ ಹಲವರು ಅನುಮಾನ ವ್ಯಕ್ತಪಡಿಸಿದ್ದರು. ಮುಂದಿನ ವಾರ 21ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಿದ್ದ ನಟಿ ಹೀಗೆ ಕೊನೆಯುಸಿರೆಳೆದಿದ್ದು ಬಾಲಿವುಡ್ಗೆ ಆಘಾತ ತಂದಿತ್ತು.
ಕರಿಯರ್ ಬಗ್ಗೆ ಬಹಳ ಕನಸು ಕಂಡಿದ್ದ ಹುಡುಗಿ ಇಷ್ಟು ಚಿಕ್ಕ ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದು ಸುಳ್ಳು. ಖಂಡಿತವಾಗಿ ಇದರ ಹಿಂದೆ ಬೇರೆ ಏನೋ ಕಾರಣ ಇದೆ ಎಂದು ಕೆಲವರು ಭಾವಿಸಿದ್ದರು. ಆದರೆ ತುನಿಷಾ ಶರ್ಮಾ ಅವರದ್ದು ಆತ್ಮಹತ್ಯೆ ಎಂದು ಮರಣೋತ್ತರ ಪರೀಕ್ಷೆ ವರದಿಯಲ್ಲಿ ಬಹಿರಂಗವಾಗಿದೆ. ತುನಿಷಾ ಶರ್ಮಾ ಹಾಗೂ ಷಿಜಾನ್ ಖಾನ್ ಪ್ರೀತಿಸುತ್ತಿದ್ದರು. 15 ದಿನಗಳ ಹಿಂದೆ ಇವರ ಲವ್ ಬ್ರೇಕಪ್ ಆಗಿತ್ತು. ಅದನ್ನು ಸಹಿಸಲಾಗದೇ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನೇಣು ಬಿಗಿದುಕೊಂಡ ಕಾರಣಕ್ಕೆ ಉಸಿರಾಡಲು ಸಾಧ್ಯವಾಗದೇ ಆಕೆ ಕೊನೆಯುಸಿರೆಳೆದಿರುವುದಾಗಿ ಹೇಳಿದ್ದಾರೆ. ಆಕೆಯ ದೇಹದ ಮೇಲೆ ಯಾವುದೇ ಗಾಯದ ಗುರುತು ಇಲ್ಲ. ತುನಿಷಾ ಶರ್ಮಾ ಆತ್ಮಹತ್ಯೆಯ ಹಿಂದೆ ಯಾವುದೇ ಲವ್ ಜಿಹಾದ್ ಅಂಶ ಕಂಡುಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕೆಲವರು ಆಕೆ ಗರ್ಭಿಣಿ ಆಗಿದ್ದಳು ಎಂದು ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಇದು ಸುಳ್ಳು ಎನ್ನುವುದು ಮರಣೋತ್ತರ ಪರೀಕ್ಷೆ ವರದಿಯಲ್ಲಿ ಗೊತ್ತಾಗಿದೆ. ಈಗಾಗಲೇ ಆಕೆಯ ಮಾಜಿ ಪ್ರಿಯಕರ ಷಿಜಾನ್ ಅಹ್ಮದ್ ಖಾನ್ನ ಪೊಲೀಸರು ಬಂಧಿಸಿದ್ದಾರೆ. ಆತನನ್ನು 4 ದಿನಗಳ ಕಾಲ ಜ್ಯುಡಿಷಿಯಲ್ ಕಸ್ಟಡಿಗೆ ನೀಡಲಾಗಿದೆ.

ಕಿರುತೆರೆಯ 'ಅಲಿ ಬಾಬಾ ದಾಸ್ತಾನ್ ಎ ಕಾಬೂಲ್' ಶೋನಲ್ಲಿ ತುನಿಷಾ ಶರ್ಮಾ ಕಾಣಿಸಿಕೊಳ್ಳುತ್ತಿದ್ದರು. ಅದೇ ಶೋನ ಶೂಟಿಂಗ್ ಸೆಟ್ನಲ್ಲಿ ಆಕೆ ಶವವಾಗಿ ಪತ್ತೆ ಆಗಿದ್ದರು. ಮುಂಬೈನ ವಾಸವಿ ಸ್ಟುಡಿಯೋದಲ್ಲಿ ಚಿತ್ರೀಕರಣ ನಡೀತಿತ್ತು. ಬ್ರೇಕ್ ವೇಳೆ ಮೇಕಪ್ ರೂಮ್ಗೆ ಹೋಗಿದ್ದ ತುನಿಷಾ ಮೃತದೇಹ ಅಲ್ಲೇ ಪತ್ತೆ ಆಗಿತ್ತು. ಸೋನಿ ಟಿವಿಯ 'ಮಹಾರಾಣ ಪ್ರತಾಪ್' ಧಾರಾವಾಹಿಯ ಮೂಲಕ ತುನಿಷಾ ನಟನೆ ಶುರು ಮಾಡಿದ್ದರು. 'ಚಕ್ರವರ್ತಿ ಅಶೋಕ್ ಸಾಮ್ರಾಟ್' ಧಾರಾವಾಹಿಯಲ್ಲಿ ರಾಣಿ ಅಹಿಂಕರ ಪಾತ್ರದಲ್ಲಿ ಮಿಂಚಿದ್ದರು. ಇನ್ನು 'ಫಿತೂರ್' ಸಿನಿಮಾದಲ್ಲಿ ಜ್ಯೂನಿಯರ್ ಕತ್ರೀನಾ ಕೈಫ್ ಆಗಿ ಬಣ್ಣ ಹಚ್ಚಿದ್ದಾರೆ. ಇನ್ನು ಕೆಲ ಧಾರಾವಾಹಿಗಳಲ್ಲಿ ತುನಿಷಾ ಶರ್ಮಾ ನಟಿಸಿದ್ದರು. ನಾಳೆ ತುನಿಷಾ ಶರ್ಮಾ ಪಾರ್ಥೀವ ಶರೀರದ ಅಂತ್ಯಕ್ರಿಯೆ ನಡೆಯಲಿದೆ ಎಂದು ವರದಿಯಾಗಿದೆ.


Click it and Unblock the Notifications











