ಐದು ವರ್ಷಗಳ ಬಳಿಕ ಬಂದ ಮಜಾ ಟಾಕೀಸ್ಗೆ ರೆಸ್ಪಾನ್ಸ್ ಹೇಗಿದೆ?
ಕನ್ನಡದ ಅತ್ಯಂತ ಜನಪ್ರಿಯ ಹಾಸ್ಯ ಕಾರ್ಯಕ್ರಮ 'ಮಜಾ ಟಾಕೀಸ್' ಐದು ವರ್ಷಗಳ ನಂತರ ಮತ್ತೆ ಅದ್ದೂರಿಯಾಗಿ ತೆರೆಗೆ ಮರಳಿ ಬಂದಿದೆ. ಕನ್ನಡ ಕಿರುತೆರೆ ಪ್ರೇಕ್ಷಕರನ್ನು ಬಹಳಷ್ಟು ಕಾಲ ರಂಜಿಸಿದ್ದ ಈ ಕಾರ್ಯಕ್ರಮ ಮತ್ತು ಪ್ರಸಾರವಾಗುತ್ತದೆ ಎಂದರೆ ಯಾರಿಗೆ ತಾನೇ ಖುಷಿಯಾಗುವುದಿಲ್ಲ ಹೇಳಿ? ಪ್ರೋಮೋ ಬಿಡುಗಡೆಯಾದಾಗಿನಿಂದ ಕಾತುರದಿಂದ ಕಾಯುತ್ತಿದ್ದ ಅಭಿಮಾನಿಗಳಲ್ಲಿ ಈಗ ಸಂತೋಷವನ್ನು ಮಾಡಿದೆ. ಮಾತಿನ ಮಲ್ಲ ಸೃಜನ್ ಲೋಕೇಶ್ ಅವರ ನಿರೂಪಣೆಯಲ್ಲಿ ಮತ್ತೆ ಸದ್ದು ಮಾಡಲು ಮಜಾ ಟಾಕೀಸ್ ಹಿಂದಿರುಗಿದೆ.
ಇದೆಲ್ಲದರ ನಡುವೆ ಒಂದು ಬೇಸರವೆಂದರೆ ಅಪರ್ಣಾ ವಸ್ತಾರೆ ಇಂದು ನಮ್ಮ ನಡುವೆ ಇಲ್ಲದಿರುವುದು. ಎಷ್ಟೋ ಪ್ರೇಕ್ಷಕರಿಗೆ ಅವರು ಮಜಾ ಟಾಕೀಸ್ ವರಲಕ್ಷ್ಮಿಯಾಗಿ ಪರಿಚಿತರಾಗಿದ್ದರು. ಸುಲಲಿತವಾಗಿ ಕನ್ನಡವನ್ನು ಮಾತನಾಡುತ್ತಿದ್ದ, ನಿರೂಪಣೆಯಲ್ಲಿ ಅದ್ಭುತವಾದ ಕೈ ಚಳಕವನ್ನು ತೋರಿಸುತ್ತಿದ್ದ ಪ್ರೇಕ್ಷಕರನ್ನು ರಂಜಿಸುತ್ತಿದ್ದ ಮಜಾ ಟಾಕೀಸ್ ಸ್ವೀಟ್ 16 ವರಲಕ್ಷ್ಮಿ ಅಪರ್ಣಾ ಇನ್ನೆಂದಿಗೂ ಮಜಾ ಟಾಕೀಸ್ ನಲ್ಲಿ ಕಾಣಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವುದು ಪ್ರೇಕ್ಷಕರಿಗೆ, ಮಜಾ ಟಾಕೀಸ್ ತಂಡಕ್ಕೆ ಬೇಸರದಾಯಕ ವಿಷಯ.

ಇನ್ನು ಮುಂದಿನ ದಿನಗಳಲ್ಲಿ ಅವರ ಅನುಪಸ್ಥಿತಿ ಎದ್ದು ಕಾಣುವುದಂತೂ ನಿಜ. ಪ್ರಥಮ ದಿನದಂದು ಕಾರ್ಯಕ್ರಮದ ಆರಂಭಕ್ಕೂ ಮುನ್ನ ಅಪರ್ಣಾ ಅವರಿಗೆ ನುಡಿ ನಮನಗಳನ್ನು ಸಲ್ಲಿಸಿ ವಿಡಿಯೋ ಮೂಲಕ ಅವರ ನೆನಪುಗಳನ್ನು ಮೆಲುಕು ಹಾಕಿ ಈ ಇಡೀ ಸೀಸನನ್ನು ಅವರಿಗೆ ಸಮರ್ಪಿಸಲಾಗುತ್ತದೆ ಎಂದು ಸೃಜನ್ ಲೋಕೇಶ್ ಹೇಳಿದರು.
ಹೊಸದಾಗಿ ಆರಂಭವಾಗುತ್ತಿರುವ ಮಜಾ ಟಾಕೀಸ್ ಕುರಿತಂತೆ ಹಂಚಿಕೊಂಡ ಸೃಜನ್ ಲೋಕೇಶ್ ಮಜಾ ಟಾಕೀಸ್ ಕಳೆದ ವರ್ಷಗಳಲ್ಲಿ ಮಹತ್ವದ ಪ್ರಭಾವವನ್ನು ಬೀರಿದೆ. ಮಜಾ ಟಾಕೀಸ್ ನಿರ್ಮಾಪಕರಿಂದ ಒಂದು ಪೈಸೆಯನ್ನೂ ಪಡೆಯದೆ 500 ಕ್ಕೂ ಹೆಚ್ಚು ಚಲನಚಿತ್ರಗಳನ್ನು ಅಕ್ಷರಶಃ ಪ್ರಚಾರ ಮಾಡಿದೆ. ಇದು ಅನೇಕ ಪ್ರತಿಭೆಗಳಿಗೆ ವೇದಿಕೆಯನ್ನು ನೀಡಿದೆ ಎಂಬ ಹೆಮ್ಮೆಯಿದೆ ಎಂದರು.
ಈ ಕಾರ್ಯಕ್ರಮವು ನಟನಾ ರಂಗಕ್ಕೆ ಹೊಸ ಪ್ರತಿಭೆಗಳನ್ನು ಪರಿಚಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಮಾತ್ರವಲ್ಲದೆ ಪ್ರೇಕ್ಷಕರಿಗೂ ಮನ್ನಣೆಯನ್ನೂ ನೀಡಿದೆ. ಶನಿವಾರ ಹಾಗೂ ಆದಿತ್ಯವಾರ ಒಂದಷ್ಟು ಪ್ರೇಕ್ಷಕರಿಗೆ ಲೈವ್ ಆಗಿ ನೋಡಲು ಅವಕಾಶ ನೀಡುವ ಶೋ ಪ್ರೇಕ್ಷಕರಲ್ಲಿ ಕೆಲವರಿಗೆ ತಮ್ಮ ಪ್ರತಿಭೆಯನ್ನು ವೇದಿಕೆಗೆ ಬಂದು ಪ್ರದರ್ಶಿಸಲು ಅವಕಾಶವನ್ನು ಕೊಡುತ್ತದೆ.
ಒಬ್ಬ ಸಾಮಾನ್ಯ ವ್ಯಕ್ತಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆಗೆ ಬಂದು ಅಂತಾರಾಷ್ಟ್ರೀಯ ವೇದಿಕೆಯಲ್ಲೂ ಮಿಂಚಿದ ನಿದರ್ಶನಗಳಿವೆ. ಮಜಾ ಟಾಕೀಸ್ ಕೇವಲ ಹಾಸ್ಯ ಕಾರ್ಯಕ್ರಮವಲ್ಲ, ಇದು ಪ್ರತಿಭೆಯನ್ನು ಗೌರವಿಸುವ, ಉತ್ಸಾಹವನ್ನು ಹೆಚ್ಚಿಸುವ, ತನ್ನ ಪ್ರೇಕ್ಷಕರಿಗೆ ಶಾಶ್ವತವಾದ ನೆನಪುಗಳನ್ನು ಸೃಷ್ಟಿಸುವ ವೇದಿಕೆಯಾಗಿದೆ. ನೋಡುಗರನ್ನು ನಗೆಗಡಲಿನಲ್ಲಿ ತೇಲಿಸುವುದರೊಂದಿಗೆ ಅವಕಾಶಗಳನ್ನು ಕೂಡ ನೀಡುತ್ತಿರುವ ಇಂತಹ ಶೋ ಕನ್ನಡದಲ್ಲಿ ಇರುವುದು ನಮ್ಮ ಹೆಮ್ಮೆಯೇ ಸರಿ.
ಅಂದ ಹಾಗೆ ಈ ಕಾರ್ಯಕ್ರಮದ ಹಿನ್ನೆಲೆಯನ್ನು ಗಮನಿಸುತ್ತಾ ಹೋದರೆ ಫೆಬ್ರವರಿ 7, 2015 ರಂದು ETV ಕನ್ನಡ ಅಂದರೆ ಈಗಿನ ಕಲರ್ಸ್ ಕನ್ನಡದಲ್ಲಿ ಇದು ಪ್ರಥಮವಾಗಿ ಪ್ರದರ್ಶನಗೊಂಡಿತು. ಜೂನ್ 2015 ರಲ್ಲಿ ಕರ್ನಾಟಕದ ಅತೀ ಹೆಚ್ಚು ರೇಟಿಂಗ್ ಪಡೆದ ಕಾರ್ಯಕ್ರಮವಾಗಿ ಹೊರಹೊಮ್ಮಿತ್ತು. ಸೆಪ್ಟೆಂಬರ್ 2015 ರ ಹೊತ್ತಿಗೆ ಗರಿಷ್ಠ TRP ಅನ್ನು ಸಾಧಿಸಿ ಕನ್ನಡ ದೂರದರ್ಶನದಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿತು.
ಹಾಸ್ಯ-ಕೇಂದ್ರಿತ ಟಾಕ್ ಶೋ ರೂಪದಲ್ಲಿ ಮೂಡಿ ಬರುವ ಮಜಾ ಟಾಕೀಸ್ ಇದರೊಂದಿಗೆ ಇತ್ತೀಚಿನ ಚಲನಚಿತ್ರಗಳನ್ನು ಪ್ರಚಾರ ಮಾಡಲು ಚಿತ್ರತಂಡವನ್ನು ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಹ್ವಾನಿಸುತ್ತದೆ. ಈ ಕಾರ್ಯಕ್ರಮದ ಪಾತ್ರವರ್ಗದಲ್ಲಿ ಚಲನಚಿತ್ರ ನಿರ್ಮಾಪಕ ಇಂದ್ರಜಿತ್ ಲಂಕೇಶ್ ಖಾಯಂ ಅತಿಥಿಯಾಗಿದ್ದರು. ಈಗ ಮೂಡಿ ಬರುತ್ತಿರುವ ಹೊಸ ಸೀಸನ್ ನಲ್ಲಿ ಈ ಸ್ಥಾನವನ್ನು ಯೋಗರಾಜ್ ಭಟ್ ತುಂಬುತ್ತಿದ್ದಾರೆ. ಉಳಿದಂತೆ ರಂಗಭೂಮಿ ಕ್ಷೇತ್ರದ ಅನುಭವಿಗಳಾದ ಮಿಮಿಕ್ರಿ ದಯಾನಂದ್ , ವಿ. ಮನೋಹರ್, ಮಂಡ್ಯ ರಮೇಶ್ ಸೇರಿದಂತೆ ಹಲವು ಕಲಾವಿದರು ತಂಡದಲ್ಲಿದ್ದಾರೆ. ಸೃಜನ್ ಪತ್ನಿ ರಾಣಿಯ ಪಾತ್ರವನ್ನು ಶ್ವೇತಾ ಚಂಗಪ್ಪ ನಿಭಾಯಿಸಿದ್ದರು. ಆದರೆ ಈ ಸೀಸನ್ನಲ್ಲಿ ಆಕೆಯಿಲ್ಲ. ಉಳಿದಂತೆ ಒಂದಷ್ಟು ಜನ ಹೊಸ ಕಲಾವಿದರಿದ್ದು ಹೊಸ ಮಜಾ ಟಾಕೀಸ್ ಟೀಂ ರೆಡಿಯಾಗಿದೆ. ಇವೆಲ್ಲದರೊಂದಿಗೆ ಒಂದು ಬ್ಯಾಂಡ್ ಸೆಟ್ ಕೂಡ ವೇದಿಕೆಯಲ್ಲಿರುತ್ತದೆ. ಸಂದರ್ಭಕ್ಕೆ ಅನುಸಾರವಾಗಿ ಹಾಡನ್ನು ಹಾಡುವ ಮ್ಯೂಸಿಕ್ ಬಾರಿಸುವ ಕೆಲಸ ಇವರದ್ದು. ಒಟ್ಟಿನಲ್ಲಿ ಸದ್ದು ಗದ್ದಲದೊಂದಿಗೆ ಮತ್ತೆ ಹಾಜರಾಗಿರುವ ನಗಿಸುವ ಟೀಮ್ ನಿಂದ ಪ್ರೇಕ್ಷಕರಿಗೆ ಮನರಂಜನೆ ಸಿಗುವುದಂತೂ ಪಕ್ಕಾ.


Click it and Unblock the Notifications











