ಅನಿರುದ್ಧ್ ಅನ್ನು 'ಜೊತೆ ಜೊತೆಯಲಿ' ಧಾರಾವಾಹಿಯಿಂದ ಕೈಬಿಡಲು ಕಾರಣವೇನು?
ನಟ ಅನಿರುದ್ಧ್ ಅನ್ನು 'ಜೊತೆ ಜೊತೆಯಲಿ' ಧಾರಾವಾಹಿಯಿಂದ ಕೈಬಿಡಲಾಗಿದೆ. ಇದು ಮಾತ್ರವೇ ಅಲ್ಲದೆ, ಇನ್ನೆರಡು ವರ್ಷ ಅನಿರುದ್ಧ್ಗೆ ಯಾವುದೇ ಧಾರಾವಾಹಿಯಲ್ಲಿ ಅವಕಾಶ ಕೊಡಬಾರದು ಎಂದು ಸಹ ಹೇಳಲಾಗುತ್ತಿದೆ.
'ಜೊತೆ ಜೊತೆಯಲಿ' ಧಾರಾವಾಹಿ ಚೆನ್ನಾಗಿ ಮೂಡಿಬರುತ್ತಿತ್ತು. ಈ ಧಾರಾವಾಹಿಯ ನಾಯಕ ಪಾತ್ರಧಾರಿಯನ್ನೇ ಬದಲಾಯಿಸುವುದು ಬಹಳ ಕಠಿಣ ನಿರ್ಧಾರ. ಆದರೆ ಈ ನಿರ್ಧಾರಕ್ಕೆ ಧಾರಾವಾಹಿ ನಿರ್ದೇಶಕರು ಹಾಗೂ ನಿರ್ಮಾಪಕರು ಬಂದಿದ್ದು ಹೇಗೆ ಎಂಬುದು ಕುತೂಹಲ ಕೆರಳಿಸಿದೆ. ಇಷ್ಟು ಕಠಿಣ ನಿರ್ಧಾರ ತೆಗೆದುಕೊಳ್ಳಲು ಮುಂದಾಗುವಂತೆ ಅನಿರುದ್ಧ್ ಮಾಡಿದ್ದಾದರೂ ಏನು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ.
Recommended Video
ಈ ಬಗ್ಗೆ ಮಾಧ್ಯಮದೊಟ್ಟಿಗೆ ಮಾತನಾಡಿರುವ ಟಿವಿ ನಿರ್ಮಾಪಕರ ಸಂಘದ ಅಧ್ಯಕ್ಷ ಭಾಸ್ಕರ್, ''ಅನಿರುದ್ಧ್ ಅವರ ಅಹಂಕಾರದ ವರ್ತನೆ, ಹಿಡಿತವಿಲ್ಲದ ಮಾತು, ಕೆಲಸದ ಬಗ್ಗೆ ಶ್ರದ್ಧೆ ಇಲ್ಲದಿರುವ ಕಾರಣವೇ ಇಂದಿನ ಈ ಪರಿಸ್ಥಿತಿಗೆ ಕಾರಣ'' ಎಂದಿದ್ದಾರೆ.
''ಸಂಚಿಕೆ ನಿರ್ದೇಶಕ ಮಧು ಉತ್ತಮ್ ಬಗ್ಗೆ ಅವಾಚ್ಯವಾಗಿ ಮಾತನಾಡಿದ್ದಾರೆ. ಮಧು ಉತ್ತಮ್ ಎಪಿಸೋಡ್ ಶೂಟಿಂಗ್ಗೆ ಮುಂದಾದಾಗ, ಅನಿರುದ್ಧ್ ನಾನು ಡೈಲಾಗ್ ಒಂದನ್ನು ಹೇಳುವುದಿಲ್ಲ ಎಂದಿದ್ದಾರೆ. ಈ ಡೈಲಾಗ್ ಯಾಕಿದೆ, ನಾನು ಇದನ್ನು ಹೇಳುವುದಿಲ್ಲ. ನಾನು ಈ ಸಂಭಾಷಣೆ ಹೇಳುವುದಿಲ್ಲ ಎಂದಿದ್ದಾರೆ. ಅಲ್ಲದೆ, ನಿನ್ನಂಥಹಾ ಮೂರ್ಖನೊಂದಿಗೆ ನಾನು ಕೆಲಸ ಮಾಡುವುದಿಲ್ಲ'' ಎಂದು ಸೆಟ್ ಬಿಟ್ಟು ಹೋಗಿದ್ದಾರೆ ಎಂದಿದ್ದಾರೆ ಭಾಸ್ಕರ್.

ಜಗದೀಶ್ ಲಿಖಿತ ದೂರು ನೀಡಿದ್ದಾರೆ: ಭಾಸ್ಕರ್
''ಇದು ಮೊದಲೇನೂ ಅಲ್ಲ. ಇದೇ ರೀತಿ ಹಲವು ಬಾರಿ ಆಗಿದೆ. ಈತ ನೀಡುವ ಟೆನ್ಶನ್ ತಾಳಲಾರದೆ ಧಾರಾವಾಹಿಯ ಮುಖ್ಯ ನಿರ್ದೇಶಕ ಆರೂರು ಜಗದೀಶ್ ಖಿನ್ನತೆಗೆ ಹೋಗಿದ್ದರು. ಕೊರೊನಾ ಸಮಯದಲ್ಲಿ ಹೈದರಾಬಾದ್ಗೆ ಹೋಗಿ ಶೂಟಿಂಗ್ನಲ್ಲಿ ಭಾಗವಹಿಸಿದಾಗ ಹಲವು ಬಾರಿ ಆರೂರು ಜಗದೀಶ್ ನನ್ನ ಬಳಿ ಹೇಳಿಕೊಂಡು ಕಣ್ಣೀರು ಹಾಕಿಕೊಂಡಿದ್ದರು. ಮೊದಲಿನಿಂದಲೂ ಹಲವು ಬಾರಿ ಅನಿರುದ್ಧ್ ಹೀಗೆ ಮಾಡಿದ್ದರು. ಈ ಬಗ್ಗೆ ನಮಗೆ ಲಿಖಿತ ದೂರು ಸಹ ಜಗದೀಶ್ ಆರೂರು ನೀಡಿದ್ದರು'' ಎಂದಿದ್ದಾರೆ ಭಾಸ್ಕರ್.

''ನಿರ್ದೇಶಕ, ನಿರ್ಮಾಪಕ ಸೆಟ್ಗೆ ಬರುತ್ತಿಲ್ಲ''
''ಅನಿರುದ್ಧ್ ಕೊಡುತ್ತಿರುವ ಕಾಟಕ್ಕೆ ಪ್ರಧಾನ ನಿರ್ದೇಶಕರು, ಸಿನಿಮಾದ ನಿರ್ಮಾಪಕರು ಸೆಟ್ಗೆ ಸಹ ಬರುತ್ತಿಲ್ಲ. ಧಾರಾವಾಹಿ ತಂಡ ಒಂದು ಕುಟುಂಬ ಎಂದಾದರೆ ಅನಿರುದ್ದ್ ಸೆಟ್ನಿಂದ ಹೊರಗೆ ಹೋಗಬೇಕಾದರೆ ಪ್ರಧಾನ ನಿರ್ದೇಶಕರಿಗೆ, ನಿರ್ಮಾಫಕರಿಗೆ ದೂರು ನೀಡಿ, ನನಗೆ ಸಮಸ್ಯೆ ಆಗುತ್ತಿದೆ ಎಂದು ಹೇಳಬಿಕ್ಕೇತಲ್ಲವೆ? ಹೀಗೆ ಒಮ್ಮೆಲೆ ಸೆಟ್ನಿಂದ ಹೊರಗೆ ನಡೆದರೆ ನಿರ್ಮಾಪಕರಿಗೆ ಆಗುವ ನಷ್ಟವನ್ನು ತುಂಬಿಕೊಡುವುದು ಯಾರು?'' ಎಂದು ಅವರು ಪ್ರಶ್ನಿಸಿದ್ದಾರೆ.

''ಎರಡು ವರ್ಷ ಯಾರೂ ಅವರೊಟ್ಟಿಗೆ ಕೆಲಸ ಮಾಡುವುದಿಲ್ಲ''
''ಕೋವಿಡ್ ಕಾಲದಲ್ಲಿ ಅದೇ ಧಾರಾವಾಹಿಯ ನಟಿಯನ್ನು ಅಶಿಸ್ತಿನ ಕಾರಣಕ್ಕೆ ಹೊರಗೆ ಹಾಕಬೇಕು ಎಂದಾಯಿತು. ಆ ಬಳಿಕ ಆಕೆ ಕ್ಷಮಾಪಣೆ ಕೇಳಿದ ಕಾರಣ ಆಕೆಯನ್ನು ಮುಂದುವರೆಸಲಾಯಿತು. ಈಗ ಈತನ್ದು ಸಮಸ್ಯೆಯಾಗಿದೆ. ಹೀಗಾಗುತ್ತಿದ್ದರೆ ನಿರ್ದೇಶಕರು ನಿರ್ಮಾಪಕರು ಏನಾಗಬೇಡ. ಅವರಿಗೆ ಆಗುವ ನಷ್ಟಕ್ಕೆ ಯಾರು ಹೊಣೆ?'' ಎಂದು ಪ್ರಶ್ನೆ ಮಾಡಿದ್ದಾರೆ ಭಾಸ್ಕರ್. ಹಾಗಾಗಿ ಇದೇ ರೀತಿ ಬೇರೆ ಯಾವ ನಿರ್ಮಾಪಕರಿಗೂ ಆಗಬಾರದೆಂಬ ಕಾರಣಕ್ಕೆ ಇನ್ನೆರಡು ವರ್ಷ ಅವರೊಟ್ಟಿಗೆ ಯಾರೂ ಕೆಲಸ ಮಾಡಬಾರದು ಎಂದು ನಿಶ್ಚಯಿಸಿದ್ದೇವೆ'' ಎಂದಿದ್ದಾರೆ ಭಾಸ್ಕರ್.

ಈ ಹಿಂದೆಯೂ ನಾಯಕ ನಟರ ಬದಲಾವಣೆ ಆಗಿದೆ: ಭಾಸ್ಕರ್
ಆರೂರು ಜಗದೀಶ್ ಅವರು ನಮ್ಮ ಸಂಘಕ್ಕೆ ಲಿಖಿತ ದೂರು ನೀಡಿರುವ ಕಾರಣ ಅವರೊಟ್ಟಿಗೆ ಬೆಂಬಲವಾಗಿ ನಾವು ನಿಂತಿದ್ದೇವೆ. ಧಾರಾವಾಹಿಗೆ ಕತೆಯೇ ನಾಯಕ ಕತೆಯೇ ನಾಯಕಿ. ಈ ಹಿಂದೆ ಟಾಪ್ನಲ್ಲಿದ್ದ ಧಾರಾವಾಹಿಯ ನಾಯಕನನ್ನು, ನಾಯಕಿಯನ್ನು ಬದಲಾಯಿಸಿದ್ದನ್ನು ನಾವು ನೋಡಿದ್ದೇವೆ. ಆ ಧಾರಾವಾಹಿಗಳು ಚೆನ್ನಾಗಿಯೇ ಓಡಿವೆ. ಈಗಲೂ ಹೀಗೆ ಆಗಲಿದೆ'' ಎಂದಿದ್ದಾರೆ.


Click it and Unblock the Notifications











