ಕನ್ಯಾದಾನದ ಕಥೆ ಹೇಳಲು ಬರುತ್ತಿದೆ ಹೊಸ ಧಾರಾವಾಹಿ: ಉದಯ ಟಿವಿಯಲ್ಲಿ 5 ಹೆಣ್ಣು ಮಕ್ಕಳು- ತಂದೆಯ ಕಥೆ
ಕಳೆದ 27 ವರ್ಷಗಳಿಂದ ನಿರಂತರವಾಗಿ ಕನ್ನಡಿಗರಿಗೆ ತನ್ನ ವಿಶಿಷ್ಟ ಶೈಲಿಯ ಮನರಂಜನಾ ಕಾರ್ಯ ಕ್ರಮಗಳನ್ನು ಜನರಿಗೆ ನೀಡುತ್ತಿರುವ ಅತ್ಯಂತ ಜನಪ್ರಿಯ ವಾಹಿನಿ ಉದಯ ಟವಿ. ಈ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಗೌರಿಪುರದ ಗಯ್ಯಾಳಿಗಳು, ನೇತ್ರಾವತಿ, ಸುಂದರಿ, ಕಾವ್ಯಾಂಜಲಿ, ನಯನತಾರ, ಸೇವಂತಿ, ಕಸ್ತೂರಿ ನಿವಾಸ ಧಾರಾವಾಹಿಗಳು ಕನ್ನಡಿಗರ ದೈನಂದಿನ ಮನರಂಜನೆಯ ಭಾಗ ಆಗಿವೆ. ಜೊತೆಗೆ ಈ ಕಾರ್ಯಕ್ರಮಗಳು ಯಶಸ್ವಿಯಾಗಿ ಮುಂದುವರೆಯುತ್ತಿವೆ.
ಕಿರುತೆರೆಯಲ್ಲಿ ಹಲವು ಕಥೆಗಳು ಹೆಚ್ಚು ಕಡಿಮೆ ಒಂದೇ ಮಾದರಿಯಲ್ಲಿ ಬರುತ್ತಿವೆ. ಹಾಗಾಗಿ ಧಾರಾವಾಹಿ ಪ್ರೇಕ್ಷಕರು ಬದಲಾವಣೆಯನ್ನು ಬಯಸುತ್ತಿದ್ದಾರೆ. ಅಂತಹ ಬದಲಾವಣೆಗೆ ಉದಯ ಟಿವಿಯ ಧಾರಾವಾಹಿಗಳು ಸದಾ ಒತ್ತು ಕೊಡುತ್ತವೆ. ಈಗ ಮತ್ತೊಂದು ಹೊಸ ಧಾರಾವಾಹಿ ಮೂಲಕ ಪ್ರೇಕ್ಷಕರ ಮನ ಗೆಲ್ಲಲು ಮುಂದಾಗಿದೆ. ಹೊಸ ಧಾರಾವಾಹಿ ಹೊಸ ಕಥೆಯ ಜೊತೆಗೆ, ಹೊಸ ತಾರಾ ಬಳಗದ ಜೊತೆಗೆ ವೀಕ್ಷಕರ ಮುಂದೆ ಬರುತ್ತಿದೆ.
ಸದಾ ಹೊಸ ರೂಪದ ಕಥೆಗಳನ್ನು ಆಯ್ಕೆ ಮಾಡಿ ಕೊಳ್ಳುವ ಉದಯ ಟಿವಿ, ಹೊಸ ತನದ ಮೆರುಗನ್ನು ನೀಡಲು ಈಗ ವೀಕ್ಷಕರಿಗೆ ಮತ್ತೊಂದು ಹೊಸ ಧಾರಾವಾಹಿ "ಕನ್ಯಾದಾನ"ವನ್ನು ಅರ್ಪಿಸುತ್ತಿದೆ. ಕನ್ಯಾದಾನ ಉದಯ ಟಿವಿಯಲ್ಲಿ ಪ್ರಸಾರ ಆಗಲಿರುವ ಹೊಸ ಧಾರಾವಾಹಿ. ಈ ಧಾರಾವಾಹಿ ಕಥೆಯ ಅಂಶ ಏನು ಎನ್ನುವ ಕುತೂಹಲಕ್ಕೆ ಉತ್ತರ ಇಲ್ಲಿದೆ.

ಬೆಂಗಳೂರಿನ ಪಕ್ಕದ ಹಳ್ಳಿಯಲ್ಲಿ ವಾಸಿಸುತ್ತಿರುವ ಅಶ್ವತ್ ಎನ್ನುವ ವ್ಯಕ್ತಿಗೆ 5 ಜನ ಹೆಣ್ಣು ಮಕ್ಕಳು. ಅಶ್ವತ್ ಮೌಲ್ಯಗಳಿಗೆ ಬೆಲೆ ಕೊಡುವ ಮನುಷ್ಯ. ತಾಯಿ ಇಲ್ಲದ ಮಕ್ಕಳಿಗೆ ಯಾವುದೇ ಕೊರತೆ ಇಲ್ಲದ ಹಾಗೆ ಅಕ್ಕರೆಯಿಂದ ಸಂಸ್ಕಾರವಂತರಾಗಿ ಬೆಳೆಸಿರುತ್ತಾನೆ. ತನ್ನ ಮಕ್ಕಳಿಗೆ ಮದುವೆ ಮಾಡಿ ಅವರಿಗೆ ಹೊಸ ಜೀವನ ಕೊಡುವ ಭರದಲ್ಲಿದ್ದಾನೆ. ಅವನ ಇಚ್ಚೆಯಂತೆ ತನ್ನಿಬ್ಬರ ಮಕ್ಕಳಿಗೆ ಮದುವೆ ಮಾಡುತ್ತಾನೆ. ಆದರೆ ಮದುವೆ ಮಾಡಿ ಕಳುಹಿಸಿದ ತಕ್ಷಣ ಒಬ್ಬ ತಂದೆಯ ಜವಾಬ್ದಾರಿ ಮುಗಿಯುವುದಿಲ್ಲ ಎಂಬುದರ ಅರಿವಿದೆ. ಹೇಗೆ ಮಕ್ಕಳ ಮೇಲಿನ ಜವಾಬ್ದಾರಿ ತಂದೆಗೆ ಕೊನೆ ಉಸಿರಿನವರೆಗೂ ಇರುತ್ತದೆ ಎನ್ನುವ ಕಥೆ "ಕನ್ಯಾದಾನ".
ಹಿರಿಯ ನಟ ಮೈಕೊ ಮಂಜು ತಂದೆಯ ಪಾತ್ರ ವಹಿಸಿದ್ದಾರೆ. 5 ಜನ ಮುದ್ದು ಹೆಣ್ಣು ಮಕ್ಕಳ ಪಾತ್ರವನ್ನು ಮಾನಸ ನಾರಾಯಣ್, ಕೀರ್ತಿ ವೆಂಕಟೇಶ್, ಯಶಸ್ವಿನಿ, ವಿದ್ಯಾ ರಾಜ್ ಹಾಗು ಪ್ರಾರ್ಥನಾ ಕಿರಣ್ ನಿರ್ವಹಿಸಿದ್ದಾರೆ. ಇನ್ನು ಉಳಿದಂತೆ ಈ ಕನ್ಯಾದಾನ ಧಾರಾವಾಹಿಯನ್ನು ಅರುಣ್ ಹರಿಹರನ್ ನಿರ್ದೇಶನ ಮಾಡುತ್ತಿದ್ದಾರೆ. ಅಂಜಲಿ ವೆಂಚರ್ಸ್ ನಿರ್ಮಾಣದಲ್ಲಿ ಈ ಧಾರಾವಾಹಿ ವೀಕ್ಷಕರ ಮುಂದೆ ಬರಲಿದೆ.

"ಈ ಧಾರಾವಾಹಿಯ ವಿಷಯ ಬೇರೆ ಕಥೆಗಳಿಗಿಂತ ಭಿನ್ನವಾಗಿದೆ. ಅಪರೂಪವಾದ ಜೋಡಿಗಳು ಕನ್ಯಾದಾನ ಧಾರಾವಾಹಿಯಲ್ಲಿದ್ದು, ಒಂದು ಜೋಡಿ ಅಪ್ಪ ಹಾಗು ಅವರ 5 ಜನ ಹೆಣ್ಣು ಮಕ್ಕಳಾದರೆ, ಮತ್ತೊಂದು ಜೋಡಿ ಕಥೆ ಮತ್ತು ಚಿತ್ರಕಥೆ. ಈ ಕಥೆ ಕನ್ನಡ ವೀಕ್ಷಕರಿಗೆ ತುಂಬಾ ಇಷ್ಟವಾಗಲಿದೆ ಎಂದು ಧಾರಾವಾಹಿಯ ನಿರ್ದೇಶಕ ಅರುಣ್ ಅಭಿಪ್ರಾಯ ಪಟ್ಟಿದ್ದಾರೆ. ಪ್ರತಿ ಕುಟುಂಬದ ತಂದೆ ಮಕ್ಕಳು ಈ ಧಾರಾವಾಹಿಯ ಕಥೆಗೆ ಕನೆಕ್ಟ್ ಆಗುತ್ತಾರೆ. ನಿತ್ಯ ಜೀವನದಲ್ಲಿ ನಡೆಯುವ ಹಲವು ಸನ್ನಿವೇಶಗಳು ಈ ಧಾರಾವಾಹಿಯಲ್ಲಿ ಇರಲಿವೆ. ಹಾಗಾಗಿ ವೀಕ್ಷಕರು ಇದನ್ನು ತಮ್ಮದೇ ಕಥೆ ಎಂದೇ ಭಾವಿಸುವ ನಿರೀಕ್ಷೆ ಇದೆ.
"ಕನ್ಯಾದಾನ" ಇದೇ ನವೆಂಬರ್ 15ರಿಂದ ಆರಂಭ ಆಗಿಲಿದೆ. ಸೋಮವಾರದಿಂದ ಶನಿವಾರ ರಾತ್ರಿ 8:30 ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.


Click it and Unblock the Notifications