ಅಪ್ಪು ಟ್ಯಾಟು: ಬುಲ್ಲಿ ಅಮ್ಮನ ಕೈನಲ್ಲಿ ಅರಳಿದ ಅಪ್ಪು ಟ್ಯಾಟು : ʻಕಸ್ತೂರಿ ನಿವಾಸʼದ ಪಾರ್ವತಮ್ಮ ಹೇಳಿದ್ದೇನು?
ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ʻಕಸ್ತೂರಿ ನಿವಾಸʼ ಧಾರಾವಾಹಿ ಇಡೀ ಕುಟುಂಬದ ಜನರನ್ನು ಸೆಳೆದಿದೆ. ಅದರಲ್ಲೂ ಎಲ್ಲರನ್ನು ಪ್ರೀತಿಯಿಂದ ಸಂಭಾಳಿಸಿಕೊಂಡು ಹೋಗುತ್ತಿರುವ ಪಾರ್ವತಿ ಯಾರಿಗೆ ತಾನೇ ಇಷ್ಟವಾಗುವುದಿಲ್ಲ. ಎಷ್ಟು ಇಷ್ಟವಾಗುತ್ತೋ ಒಂದು ಕ್ಷಣ ಅವರ ಗತ್ತು, ಗಾಂಭೀರ್ಯ ನೋಡಿದಾಗ ಭಯ ಕೂಡ ಕಾಡುತ್ತದೆ. ಪಾರ್ವತಮ್ಮ ಪಾತ್ರದಲ್ಲಿ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿರುವ ನಟಿಯೇ ಆಶಾರಾಣಿ.
ಧಾರಾವಾಹಿಯಲ್ಲಿ ಕಂಡಷ್ಟೇ ರಫ್ ಆಗಿ ನಿಜ ಜೀವನದಲ್ಲಿ ಆಶಾರಾಣಿ ಇಲ್ಲ. ಅವರನ್ನು ಒಮ್ಮೆ ನೇರವಾಗಿ ನೋಡಿಬಿಟ್ಟರೆ ಅದೆಷ್ಟು ಮುಗ್ಧತೆ ಇದೆ ಅಂತ ಅನಿಸದೆ ಇರುವುದಿಲ್ಲ. ಇದು ಅತಿಶಯೋಕ್ತಿಯೂ ಅಲ್ಲ. ಸ್ಟಾರ್ ಸುವರ್ಣದಲ್ಲಿ 'ಮುದ್ದುಲಕ್ಷ್ಮಿಯ ಮುದ್ದುಮಣಿಗಳು' ಸೇರಿದಂತೆ ಹಲವು ಧಾರಾವಾಹಿ, ಸಿನಿಮಾಗಳಲ್ಲಿ ನಟಿಸುತ್ತಾ ತನ್ನೊಳಗಿನ ದೊಡ್ಡ ನೋವನ್ನು ಮರೆಯುತ್ತಿದ್ದಾರೆ. ಎಲ್ಲಾ ಕನಸುಗಳನ್ನು ಕ್ರೂಢೀಕರಿಸಿ ಮಗನನ್ನು ಬೆಳೆಸುತ್ತಿದ್ದ ಆಶಾರಾಣಿಗೆ ವಿಧಿ ನೀಡಬಾರದ ನೋವನ್ನು ಕೊಟ್ಟಿದೆ. ಚಿಕ್ಕ ವಯಸ್ಸಿನಲ್ಲೇ ಇವರ ಪುತ್ರ ಬುಲ್ಲಿ ಅಲಿಯಾಸ್ ರಾಕೇಶ್ ನನ್ನು ಕರೆದುಕೊಂಡು ಬಿಟ್ಟಿದೆ. ಆದರೆ ಮಗನ ನೆನಪಿನೊಂದಿಗೆ ಖುಷಿ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ.

ಆಶಾರಾಣಿ ಕೈಯಲ್ಲಿ ಅಪ್ಪು ಟ್ಯಾಟೂ
"ಅಪ್ಪು ವ್ಯಕ್ತಿತ್ವವೇ ಒಂದು ವಿಶೇಷ. ಅವರ ಮೇಲಿರುವ ಪ್ರೀತಿ ಅಭಿಮಾನವನ್ನು ತೋರಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಬೆಟ್ಟದಷ್ಟು ಅಂತಾರಲ್ಲ ಅಷ್ಟು. ಅವರು ಬೇರು, ಬೇರಿನ ಬಗ್ಗೆ ಮಾತಾಡುವಷ್ಟು ದೊಡ್ಡವರು ನಾವಲ್ಲ. ಪವರ್ ಸ್ಟಾರ್ ಅಂತ ಈ ಮುಂಚೆ ಒಂದು ಸ್ಟಾರ್ ಅಚ್ಚೆ ಹಾಕಿಸಿಕೊಂಡಿದ್ದೆ. ಅವರ ಹೆಸರನ್ನು ಹಾಕಿಸಿಕೊಳ್ಳಬೇಕು ಅನ್ನೋದು ಮೊದಲಿನಿಂದಲೂ ಇದ್ದಂತಹ ಆಸೆಯಾಗಿತ್ತು. ಆದರೆ ನಾನು ಕಲಾವಿದೆಯಾಗಿದ್ದರಿಂದ ಟ್ಯಾಟೂ ಹಾಕಿಸಿಕೊಳ್ಳುವುದು ಕೊಂಚ ಕಷ್ಟವಾಗಿತ್ತು. ಸೀನ್ಗಳಿಗೆಲ್ಲಾ ಅದು ಕಾಣುವ ಹಾಗಿರಲಿಲ್ಲ. ಆದರೂ ಅದ್ಯಾಕೋ ಮನಸ್ಸು ತಡೆಯಲಿಲ್ಲ. ಅವರ ಹೆಸರನ್ನು ಹಚ್ಚೆ ಹಾಕಿಸಿಕೊಂಡಿದ್ದೇನೆ." ಎನ್ನುತ್ತಾರೆ ಆಶಾರಾಣಿ.

ಅಪ್ಪು ನನ್ನ ಜೊತೆಗಿರಬೇಕು
"ಅಪ್ಪು ಎಂದರೆ ಅಭಿಮಾನ ಯಾರಿಗಿಲ್ಲ ಹೇಳಿ. ನನಗೂ ಅಷ್ಟೇ ಇದೆ. ಮೊದಲು ಪವರ್ ಸ್ಟಾರ್ ಅಂತ ಚಿಹ್ನೆ ಹಾಕಿಸಿದ್ದೆ. ಬಳಿಕ ಹೆಸರು ಹಾಕಿಸಿದ್ದೀನಿ, ಮುಂದೆ ಅವರ ಚಿತ್ರವನ್ನು ನನ್ನ ತೋಳ ಮೇಲೆ ಬಿಡಿಸಿಕೊಳ್ಳಬೇಕು ಎಂದುಕೊಂಡಿದ್ದೇನೆ. ದೊಡ್ಡದೊಂಡು ಚಿತ್ರ ಬಿಡಿಸಿಕೊಳ್ಳುವ ಬಯಕೆ ಇದೆ. ಅದಕ್ಕೆ ಕಾರಣ ಅವರು ಯಾವಾಗಲೂ ನನ್ನ ಜೊತೆಗೇನೆ ಇರಬೇಕು ಎಂಬುದು. ಆ ಪ್ರೀತಿ, ಅಭಿಮಾನ ಯಾವಾಗಲೂ ನಮ್ಮ ಮನಸ್ಸಲ್ಲಿ ಸದಾ ಕಾಲ ಉಳಿದಿರುತ್ತೆ. ಅವರ ಬಗ್ಗೆ ಸ್ನೇಹಿತರು ಸಿಕ್ಕಾಗ, ಮನೆಯವರು ಕೂತಾಗ ಮಾತಾಡುತ್ತಲೇ ಇರುತ್ತೇವೆ. ಆದರೆ ಎಷ್ಟು ಮಾತಾಡಿದರೂ ಆ ಮಾತುಗಳು ಮುಗಿಯಲ್ಲ. ಅವರೆಂದರೆ ಹಾಗೇನೆ ಎಂದು ಅಪ್ಪು ಬಗ್ಗೆ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.

ಬುಲ್ಲಿಗೆ ಅಪ್ಪು ಇಷ್ಟ
"ಬುಲ್ಲಿ ಎಂದರೆ ನಮಗೆಲ್ಲಾ ಖಂಡಿತ ನೆನಪು ಕಾಡಿಯೇ ಕಾಡುತ್ತೆ. ಯಾವ ಪಾತ್ರವನ್ನೇ ಮರೆತರೂ, ಆ ಬುಲ್ಲಿ ಅನ್ನುವ ಹೆಸರಿನ ಪಾತ್ರವನ್ನು ಇನ್ನು ಹಲವು ವರ್ಷಗಳು ಉರುಳಿದರು ಮರೆಯುವುದಕ್ಕೆ ಸಾಧ್ಯವಿಲ್ಲ. 'ಚೆಲುವಿನ ಚಿತ್ತಾರ'ದಲ್ಲಿ ನಮ್ಮನ್ನೆಲ್ಲಾ ಅಷ್ಟು ಗಮನ ಸೆಳೆದ ನಟ. ಆದರೆ ದುರಾದೃಷ್ಟವಶಾತ್ ಯಾವುದೋ ಕಾರಣಕ್ಕೆ ವಿಧಿ ಆತನನ್ನು ಬಲು ಬೇಗ ಕರೆದುಕೊಂಡು ಬಿಟ್ಟಿದೆ. ತಾಯಿ ಆಶಾರಾಣಿ ಮಗನನ್ನು ನೆನೆಯದ ದಿನಗಳಿಲ್ಲ. ಈಗ ಟ್ಯಾಟೂ ಹಾಕಿಸಿದ್ದು ಕೂಡ ಮಗನ ನೆನಪನ್ನು ಹೆಚ್ಚು ಕಾಡುವಂತೆ ಮಾಡಿದೆ. ಆ ಬಗ್ಗೆ ಫಿಲ್ಮಂಬೀಟ್ ಜೊತೆ ಮಾತನಾಡಿರುವ ಆಶಾರಾಣಿ, "ನನ್ನ ಮಗ ಬುಲ್ಲಿ ಈಗ ಇಲ್ಲ. ಆದರೆ ಚಿಕ್ಕ ವಯಸ್ಸಿನಲ್ಲಿ ಅಪ್ಪು ಎಂದರೆ ಅವನಿಗೆ ಪ್ರಾಣ. ಶಾಂತವಾದಾಗ ಅಪ್ಪು ರೀತಿಯೇ ಒಂದು ಫೋಟೋ ಮಾಡಿ ಮನೆಯಲ್ಲಿಟ್ಟಿದ್ದೀವಿ. 'ರಾಜಕುಮಾರ' ಸಿನಿಮಾದಲ್ಲಿ ಅಪ್ಪು ಭುಜದ ಮೇಲೆ ಪಾರಿವಾಳ ಕೂರುವಂತೆ. ಇರುವ ಫೋಟೋಗೆ ಎಡಿಟ್ ಮಾಡಿಸಿ ಇಟ್ಟಿದ್ದೀವಿ." ಎಂದು ನೆನಪಿಸಿಕೊಳ್ಳುತ್ತಾರೆ.

ಅಣ್ಣಾವ್ರ ಕುಟುಂಬದ ಮೇಲೆ ಪ್ರೀತಿ
"ಮೊದಲಿನಿಂದಲೂ ಅಣ್ಣಾವ್ರ ಕುಟುಂಬ ಎಂದರೆ ಪ್ರೀತಿ ಸ್ವಲ್ಪ ಜಾಸ್ತಿಯೇ. ದೇವರಂತೆಯೇ ಅವರನ್ನು ನಾವೂ ಪೂಜೆ ಮಾಡುತ್ತೀವಿ. ಅವರ ಹುಟ್ಟುಹಬ್ಬದ ದಿನ ಸಾಮಾನ್ಯ ಅಭಿಮಾನಿಯಂತೆ ನಾವೂ ಸಂಭ್ರಮ ಪಡುತ್ತೀವಿ. ಅವರಿಗಿಷ್ಟವಾದ ಅಡುಗೆ ತಂದು, ಸ್ವೀಟ್ಸ್ ತಂದು, ಅಕ್ಕಪಕ್ಕದವರಿಗೂ ಬಡಿಸಿ ಅವರ ಹುಟ್ಟುಹಬ್ಬ ಆಚರಿಸುತ್ತೇವೆ. ಇದು ದೊಡ್ಡಸ್ತಿಕೆಗಾಗಿ ಹೇಳುತ್ತಿರುವುದಲ್ಲ. ಅವರ ಮೇಲಿನ ಪ್ರೀತಿ ಅಂತು ಅಷ್ಟಿದೆ. ಅದರಲ್ಲೂ ಅಪ್ಪು ಮೇಲೆ ಒಂಥರ ಹೆಚ್ಚು. ನಮಗೆ ಗೊತ್ತಿರಲಿಲ್ಲ. ಅಪ್ಪು ಮೇಲೆ ಇಷ್ಟೊಂದು ಗೌರವ ಇದೆಯಾ ಅಂತ. ದೈಹಿಕವಾಗಿ ನಮ್ಮ ಜೊತೆ ಅಪ್ಪು ಇಲ್ಲದೆ ಇರಬಹುದು. ಆದರೆ ಅವರು ಮಾಡಿರುವ ಒಳ್ಳೆ ಕೆಲಸಗಳು, ಸಹಾಯ, ಅವರು ತೋರಿಸುತ್ತಿದ್ದಂತಹ ಪ್ರೀತಿ ಮೂಲಕ ನಮ್ಮ ಹೃದಯದಲ್ಲಿ ಯಾವಾಗಲೂ ಜೀವಂತವಾಗಿರುತ್ತಾರೆ.


Click it and Unblock the Notifications











