Radhika Serial: ಕುಟುಂಬವೇ ಎಲ್ಲ ಅಂತಿರೋ ʻರಾಧಿಕಾʼಗೆ ಅವರೆಷ್ಟು ಸ್ವಾರ್ಥಿಗಳೆಂದು ತಿಳಿದೇ ಇಲ್ಲ!
ಇಡೀ ಮನೆಯ ಜವಾಬ್ದಾರಿ ಹೊರುವುದು ಅಂದರೆ ಅಷ್ಟು ಸುಲಭವಲ್ಲ. ತನ್ನವರಿಗಾಗಿ ತನ್ನೆಲ್ಲಾ ಜೀವನವನ್ನು ತ್ಯಾಗ ಮಾಡಿ, ಕಷ್ಟಗಳನ್ನೆಲ್ಲಾ ಪಕ್ಕಕ್ಕಿಟ್ಟು, ಧೈರ್ಯದಿಂದ ಮುನ್ನುಗ್ಗೋದು ಇದೆಯಲ್ಲ ಅದು ಎಲ್ಲರಿಗೂ ಬರಲ್ಲ. ಅಂಥ ಜವಾಬ್ದಾರಿಯುತ ಸ್ಥಾನದಲ್ಲಿ ನಿಂತಿರುವುದೇ ಈ ʻರಾಧಿಕಾʼ.
'ರಾಧಿಕಾ' ಧಾರಾವಾಹಿ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದೆ. ಮಧ್ಯಮವರ್ಗದ ಕುಟುಂಬದವರ ಕಥೆ ಅದು. ಮನೆಯಲ್ಲಿ ತಂಗಿಯಂದಿರು, ತಮ್ಮ, ಅಮ್ಮ, ಅಣ್ಣನ ಸಂಸಾರ. ಇಷ್ಟನ್ನು ನಿಭಾಯಿಸುವ ಗಟ್ಟಿಗಿತ್ತಿ ಇದೇ 'ರಾಧಿಕಾ'. ಈ ಧಾರಾವಾಹಿ ಶುರುವಾದಾಗಿನಿಂದ ಎಲ್ಲರ ಮನಸ್ಸನ್ನು ಗೆದ್ದುಬಿಟ್ಟಿದೆ. ಕಾರಣ ಮಿಡಲ್ ಕ್ಲಾಸ್ ಫ್ಯಾಮಿಲಿಯ ಪ್ರತಿಯೊಂದು ಮನೆಯಲ್ಲೂ ಇಂತಹ ಒಬ್ಬ 'ರಾಧಿಕಾ' ಇದ್ದೇ ಇರುತ್ತಾಳೆ.
'ರಾಧಿಕಾ' ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾಳೆ. ಆಸ್ಪತ್ರೆಯ ರೋಗಿಗಳಿಗೂ ಈಕೆಯೇ ಬೆಸ್ಟ್ ನರ್ಸ್. 'ರಾಧಿಕಾ' ಬಂದರೇ ಅದೇನೋ ಉತ್ಸಾಹ, ಉಲ್ಲಾಸ ಅಂತೀರಿ. ರೋಗಿಗಳ ರೋಗವೆಲ್ಲಾ ಒಂದು ಕ್ಷಣ ಮಾಯವಾಗಿ, ಹಾಗೇ ಮೈಯ್ಯಲ್ಲೆಲ್ಲಾ ಶಕ್ತಿ ಹರಿದಾಡಿಬಿಡುತ್ತೆ. 'ರಾಧಿಕಾ' ಬೇರೆ ನರ್ಸ್ ಗಳಂತಲ್ಲ ಎಂಬುದನ್ನು ಈಕೆ ಈಗಾಗಲೇ ಪ್ರೂವ್ ಮಾಡಿದ್ದಾಳೆ.

'ರಾಧಿಕಾ' ಅವತಾರವೆತ್ತಿದ ಕಾವ್ಯಾ ಶಾಸ್ತ್ರಿ
ಕಾವ್ಯಶಾಸ್ತ್ರಿ ಈಗ ರಾಧಿಕಾ
ಆಂಕರ್ ಆಗಿ, ನಟಿಯಾಗಿ ಇಷ್ಟು ದಿನ ಮನರಂಜಿಸಿದ್ದ ಕಾವ್ಯಾ ಶಾಸ್ತ್ರಿ, ಈಗ 'ರಾಧಿಕಾ'ಳಾಗಿ ಎಲ್ಲರ ಮನ ಮನೆಗಳಲ್ಲೂ ರಂಜಿಸುತ್ತಿದ್ದಾರೆ. ಈಕೆಗೆ ಕುಟುಂಬವೇ ದೊಡ್ಡ ಪ್ರಪಂಚ. ತನ್ನವರು ಚೆನ್ನಾಗಿರಬೇಕೆಂಬ ಕಾರಣಕ್ಕೆ ತನ್ನ ಆಸೆ-ಆಕಾಂಕ್ಷೆಗಳನ್ನೆಲ್ಲಾ ತ್ಯಾಗ ಮಾಡುತ್ತಿದ್ದಾಳೆ. ತಿಂಗಳು ಬಂತೆಂದರೆ ಅಕ್ಕ ದುಡಿದ ಹಣದಲ್ಲಿ ಮಜಾ ಮಾಡೋದಕ್ಕೆ ಒಡಹುಟ್ಟಿದವರು ಹೊಂಚು ಹಾಕುತ್ತಿರುತ್ತಾರೆ. ಇದು ಹೆತ್ತ ತಾಯಿಯ ಅರಿವೆಗೆ ಬಾರದೆ ಇರುತ್ತದೆಯೇ..?
ರಾಧಿಕಾ ತಾಯಿ ಅದೆಷ್ಟೇ ಬುದ್ದಿ ಹೇಳಿದರೂ ಈಕೆ ಕೇಳೋದೆ ಇಲ್ಲ. ಯಾಕಂದ್ರೆ ತಾನಿಷ್ಟ ಪಟ್ಟಂತೆ, ತನ್ನಿಲ್ಲಿರುವ ನಿಷ್ಕಲ್ಮಶ ಪ್ರೀತಿಯಂತೆ ತನ್ನವರು ಇದ್ದಾರೆಂಬ ಭ್ರಮಾಲೋಕದಲ್ಲಿ ರಾಧಿಕಾ ಜೀವಿಸುತ್ತಿದ್ದಾಳೆ. ಆದರೆ, ರಾಧಿಕಾ ವೈಯಕ್ತಿಕ ಜೀವನ ಚರ್ಚೆಗೆ ಬಂದಾಗಲೇ ಮನೆಯವರ ಬಂಡವಾಳ ಬಟಾ ಬಯಲಾಗುತ್ತಿರೋದು.
ಅಕ್ಕನ ಜೀವನಕ್ಕಿಂತ ತಮ್ಮ ಜೀವನ ಮುಖ್ಯ ಆಯ್ತಾ?
ರಾಧಿಕಾಗೆ ಮದುವೆ ಮಾಡಿ, ಆಕೆಯ ಜೀವನವನ್ನು ಒಂದು ಸೇಫರ್ ಝೋನ್ನಲ್ಲಿಡಬೇಕೆಂಬುದು ತಾಯಿಯ ಆಸೆ. ಅದರಂತೆ ಗಂಡನ್ನು ಹುಡುಕೋದಕ್ಕೆ ಹೇಳಿರುತ್ತಾಳೆ. ಒಳ್ಳೆ ಸಂಬಂಧವೇ ಒಲಿದು ಬಂದಿದೆ. ಹೆಣ್ಣು ನೋಡೋದಕ್ಕೆ ಗಂಡಿನ ಕಡೆಯವರು ಬರುತ್ತಾರೆಂಬ ವಿಚಾರವನ್ನು ಮನೆ ಮಂದಿಗೆಲ್ಲಾ ಜಾನಕಮ್ಮ ತಿಳಿಸುತ್ತಾರೆ. ಅಲ್ಲೇ ಇರೋದು ನೋಡಿ ಪ್ರೇಕ್ಷಕರ ಮನಸ್ಸು ಕೆರಳಿ ಕೆಂಡವಾಗುವಂತ ವಿಚಾರ.
ಅಯ್ಯೋ ಅಕ್ಕ ಮದುವೆಯಾಗಿ ಹೋದರೆ ನಮ್ಮ ಗತಿಯೇನು ಅಂತ ಯೋಚನೆ ಮಾಡಿದ್ದೀಯಾ..? ನಾನು ಪೊಲೀಸ್ ಆಗುವ ತನಕವಾದರೂ ಅಕ್ಕನಿಗೆ ಮದುವೆ ಬೇಡಮ್ಮ, ನಾನು ಡಾಕ್ಟರ್ ಆದ ಮೇಲೂ ಮದುವೆ ಮಾಡಬಹುದಲ್ಲವಾ..? ಹೀಗೆ ವೆರೈಟಿ ವೆರೈಟಿ ಮಾತುಗಳು ತನ್ನವರೇ ಸ್ವರ್ಗ ಎಂದುಕೊಂಡಿದ್ದವರು ರಾಧಿಕಾ ಮದುವೆ ವಿಚಾರದ ವೇಳೆ ಕೇಳಿ ಬರುತ್ತಿದೆ.
ಮಕ್ಕಳಿಗೆ ಕ್ಲಾಸ್ ತೆಗೆದುಕೊಂಡ ಜಾನಕಮ್ಮ
ಈ ಮಾತುಗಳನ್ನ ಕೇಳಿಸಿಕೊಂಡ ಜಾನಕಮ್ಮನಿಗೆ ನಿಜಕ್ಕೂ ಶಾಕ್ ಆಗದೆ ಇರದು. ಮಕ್ಕಳು ಇಷ್ಟೊಂದು ಸ್ವಾರ್ಥಿಗಳ ಅನ್ನೋದು. ಇದೆಲ್ಲವನ್ನೂ ತಲೆಗೆ ಹಾಕಿಕೊಳ್ಳದೆ, ಮೊದಲು ರಾಧಿಕಾ ಬಳಿ ಹೋಗಿ ಇವತ್ತು ಗಂಡಿನ ಕಡೆಯವರು ಬರುತ್ತಿದ್ದಾರೆ. ನನ್ನ ಮಗಳು ಬೇರೆಯವರ ಮುಂದೆ ತಾಯಿ ಮರ್ಯಾದೆ ಕಳೆಯಲ್ಲ ಅಂತ ಭಾವಿಸುತ್ತೇನೆಂದು ಎಮೋಷನಲ್ ಬ್ಲಾಕ್ ಮೇಲ್ ಮಾಡಿ ಬಂದಾಗಿದೆ.
ಈ ಎಪಿಸೋಡ್ ನೋಡಿದ ಹೆಣ್ಣು ಮಕ್ಕಳು ಅರೆ ಕ್ಷಣ ಯಾರಿಗೋಸ್ಕರ ಬದುಕನ್ನೇ ತ್ಯಾಗ ಮಾಡುತ್ತಾ ಕುಳಿತಿದ್ದಾರೋ ಅವರೆಡೆಗೆ ಒಂದು ನೋಟ ಬೀರದೆ ಇರಲಾರರು. ಸ್ವಾರ್ಥದ ಈ ಜಗತ್ತಲ್ಲಿ, ರಾಧಿಕಾಳ ನಿಸ್ವಾರ್ಥ ಸೇವೆಗೆ ಯಾವ ಒಳ್ಳೆಯ ಫಲ ಸಿಗುತ್ತೆ ನೋಡಬೇಕು. ವೀಕ್ಷಕರ ಹಾರೈಕೆಯಂತು ತುಸು ಹೆಚ್ಚಾಗಿಯೇ 'ರಾಧಿಕಾ' ಮೇಲೆ ಇರೋದಂತು ಎದ್ದು ಕಾಣುತ್ತಿದೆ.


Click it and Unblock the Notifications











