ಉದಯ ಟಿವಿಯಲ್ಲಿ ಹೊಸ ಧಾರಾವಾಹಿ 'ಗಂಗೆ ಗೌರಿ': ಕಳಸದಲ್ಲಿ ಚಿತ್ರೀಕರಿಸಿದ ಸೀರಿಯಲ್ ವಿಶೇಷತೆ ಏನು?
ಕಿರುತೆರೆಯಲ್ಲಿ ಪ್ರತಿ ತಿಂಗಳು ಒಂದಲ್ಲ ಒಂದು ಮನರಂಜನಾ ವಾಹಿನಿಯಲ್ಲಿ ಹೊಸ ಧಾರಾವಾಹಿ ಅನೌನ್ಸ್ ಆಗುತ್ತೆ. ಧಾರಾವಾಹಿ ವಿಚಾರದಲ್ಲಿ ಕಿರುತೆರೆಯಲ್ಲಿ ಕಾಂಪಿಟೇಷನ್ ಏನೂ ಕಮ್ಮಿಯಿಲ್ಲ. ಈ ಬಾರಿ ಉದಯ ಟಿವಿ ಹೊಚ್ಚ ಹೊಸ ಧಾರಾವಾಹಿಯನ್ನು ಪ್ರಸಾರ ಮಾಡುವುದಕ್ಕೆ ಸಜ್ಜಾಗಿ ನಿಂತಿದೆ.
ವಿಭಿನ್ನ ಕಥೆಯ ಸೀರಿಯಲ್ಗಳ ಮೂಲಕ ವೀಕ್ಷಕರ ಮನಗೆಲ್ಲುವಲ್ಲಿ ಉದಯ ಟಿವಿ ಹೆಸರು ವಾಸಿ. ದೇಸಿ ಸೊಗಡಿನ ಧಾರಾವಾಹಿಗಳನ್ನು ಉದಯ ಟಿವಿ ಪ್ರಸಾರ ಮಾಡುತ್ತಲೇ ಇದೆ. ಈಗ ಅಕ್ಕ ತಂಗಿಯರ ಅಪೂರ್ವ ಬಾಂಧವ್ಯದ ಕಥೆ ಹೇಳುವ ʻಗಂಗೆ ಗೌರಿʼ ಅನ್ನೋ ಹೊಸ ಧಾರಾವಾಹಿಯ ಮೂಲಕ ಜನರನ್ನು ರಂಜಿಸಲು ಸಜ್ಜಾಗಿದೆ.

ಉದಯ ಟಿವಿಯಲ್ಲಿ ಈಗಾಗಲೇ 'ಕನ್ಯಾದಾನ', 'ಆನಂದರಾಗ', 'ಅಣ್ಣ ತಂಗಿ', 'ಸೇವಂತಿ', 'ಜನನಿ', 'ರಾಧಿಕಾ', 'ಜನನಿ', 'ನಯನತಾರಾ', 'ಗೌರಿಪುರದ ಗಯ್ಯಾಳಿಗಳು' ಸೇರಿದಂತೆ ಹಲವು ಕೌಟುಂಬಿಕ ಧಾರಾವಾಹಿಗಳು ಪ್ರಸಾರ ಆಗುತ್ತಿದ್ದು, ಅವು ವೀಕ್ಷಕರ ಮನ ಗೆದ್ದಿವೆ. ಈಗ ಹೊಚ್ಚ ಹೊಸ ಧಾರಾವಾಹಿ ʻಗಂಗೆ ಗೌರಿʼ ವಿಶೇಷ ನಿರೂಪಣಾ ಶೈಲಿಯೊಂದಿಗೆ ಕಿರುತೆರೆಗೆ ಲಗ್ಗೆ ಇಡುತ್ತಿದೆ.
ಈ ಹೊಸ ಧಾರಾವಾಹಿಯ ಕಥೆ ಎಳೆ ಹೀಗಿದೆ. ಮಲೆನಾಡಿನ ಪುಟ್ಟ ಹಳ್ಳಿಯಲ್ಲಿ ಗಂಗೆ ಗೌರಿ ಎನ್ನುವ ಅಕ್ಕತಂಗಿಯರು. ಖಡಕ್ ಹುಡುಗಿ ಗಂಗೆ ತಂಗಿಯಾದರೆ, ಮೃದು ಮಾತಲ್ಲೇ ಎಲ್ಲರ ಮನ ಗೆಲ್ಲುವ ಗೌರಿ ಇಲ್ಲಿ ಅಕ್ಕ. ಸ್ವಭಾವ ಬೇರೆಯಾದರೂ ಒಬ್ಬರನ್ನೊಬ್ಬರು ಅಗಲಿ ಇರಲಾರದಷ್ಟು ಅನ್ಯೋನ್ಯತೆ. ಇವರ ನಡುವೆ ಹುಡುಗನೊಬ್ಬ ಬಂದರೆ ಏನಾಗಬಹುದು? ಅವರ ಜೀವನದಲ್ಲಿ ಯಾವ ಥರಹದ ಬದಲಾವಣೆಗಳು ಆಗುತ್ತವೆ? ತಂಗಿಗೋಸ್ಕರ ಅಕ್ಕ ಗೌರಿ ಪ್ರೀತಿಯನ್ನು ತ್ಯಾಗ ಮಾಡುತ್ತಾಳಾ? ಇಲ್ಲಾ ಅಕ್ಕ ಮತ್ತು ಪ್ರೀತಿಯ ನಡುವೆ ಗಂಗೆಯ ಆಯ್ಕೆ ಏನು? ಇವೆಲ್ಲ ಮೀರಿ ದೈವೇಚ್ಛೆ ಏನು? ಎನ್ನುವುದರ ಸುತ್ತ ಕುತೂಹಲ ಟ್ವಿಸ್ಟ್ಗಳನ್ನಿಟ್ಟು ಕಥೆ ಹೆಣೆಯಲಾಗಿದೆ.
ಚಿಕ್ಕಮಗಳೂರಿನ ಕಳಸದ ಹಸಿರಿನಲ್ಲಿ ಮಲೆನಾಡ ಸುಂದರ ಹಳ್ಳಿ ಬದುಕಿನ ಹಿನ್ನೆಲೆಯನ್ನಿಟ್ಟುಕೊಂಡು ಈ ಧಾರಾವಾಹಿಯನ್ನು ಶೂಟ್ ಮಾಡಲಾಗಿದೆ. ಇದು ನೋಡುಗರ ಮನಗೆಲ್ಲುವುದರಲ್ಲಿ ಸಂದೇಹವೇ ಇಲ್ಲ. ಈಗಾಗಲೇ ಅನೇಕ ಕನ್ನಡ ಅದ್ಭುತ ಸೀರಿಯಲ್ಗಳನ್ನು ನಿರ್ಮಾಣ ಮಾಡಿರೋ ವೃದ್ಧಿ ಕ್ರಿಯೇಶನ್ ಈ ಧಾರಾವಾಹಿಯ ನಿರ್ಮಾಣದ ಹೊಣೆ ಹೊತ್ತಿದೆ. ಅನುಭವಿ ನಿರ್ದೇಶಕ ವಿನೋದ್ ದೋಂಡಾಳೆ 'ಗಂಗೆ ಗೌರಿ'ಗೆ ಆಕ್ಷನ್ ಕಟ್ ಹೇಳಿದ್ದಾರೆ.

ದರ್ಶ್ ಚಂದ್ರಪ್ಪ, ಶ್ರೀವಿದ್ಯಾ ಶಾಸ್ತ್ರಿ, ದರ್ಶಿನಿ ಗೌಡ, ರೇಣುಕಾ ಬಾಲಿ, ಹೇಮಾ ಬೆಳ್ಳೂರು, ಅಪೂರ್ವ ಭಾರಧ್ವಾಜ್, ರೋಹಿತ್ ಶ್ರೀನಾಥ್, ಅಭಿಜಿತ್, ಲಕ್ಷ್ಮೀ ಸಿದ್ದಯ್ಯ ಅವರಂತಹ ಖ್ಯಾತ ಕಲಾವಿದರ ದಂಡೇ ಈ ಸೀರಿಯಲ್ನಲ್ಲಿದೆ.
ʻಗಂಗೆ ಗೌರಿʼನಮ್ಮ ಹೆಮ್ಮೆಯ ನಿರ್ಮಾಣ . ಇದು ಬೇರೆ ಸೀರಿಯಲ್ಗಳಿಗಿಂತ ವಿಭಿನ್ನವಾಗಿದೆ. ಮಲೆನಾಡಿನ ಸುಂದರ ತಾಣಗಳಿಗೆ ಹೋಗಿ ಶೂಟ್ ಮಾಡಿಕೊಂಡು ಬಂದಿದ್ದೇವೆ. ಸೀರಿಯಲ್ ನಡುವೆ ಕನ್ನಡ ಭಾವಗೀತೆಗಳನ್ನು ಬಳಸಿದ್ದೇವೆ. ಕನ್ನಡತನ ಇದರಲ್ಲಿ ಎದ್ದು ಕಾಣಿಸುತ್ತೆ. ಖಂಡಿತ ಇದು ನಮ್ಮ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ." - ವರ್ಧನ್ ಹರಿ, ನಿರ್ಮಾಪಕ ಹೇಳಿದ್ದಾರೆ. 'ಗಂಗೆ ಗೌರಿ' ಇದೇ ಡಿಸೆಂಬರ್ 11 ರಿಂದ ಸೋಮವಾರದಿಂದ ಶನಿವಾರ ಸಂಜೆ 6.30ಕ್ಕೆ ಉದಯ ಟಿವಿ ಯಲ್ಲಿ ಪ್ರಸಾರವಾಗಲಿದೆ.


Click it and Unblock the Notifications











