350ನೇ ಸಂಚಿಕೆ ಸಂಭ್ರಮ: ಹೊಸ ರೂಪದಲ್ಲಿ 'ಅವಳು'
ವಿಭಿನ್ನ ಕಥೆ ಮತ್ತು ನಿರೂಪಣೆಯ ಮೂಲಕ ಈಗಾಗಲೇ ಜನಮನ ಗೆದ್ದು 350ನೇ ಸಂಚಿಕೆಯತ್ತ ಮುನ್ನುಗ್ಗುತ್ತಿರುವ ಈ ಸುಸಂದರ್ಭದಲ್ಲಿ 'ಅವಳು ಕಥೆಯಾದವಳು' ಹೊಸದೊಂದು ತಿರುವನ್ನು ಹೊತ್ತು ತಂದಿದೆ.
ಇಲ್ಲಿಯವರೆಗೂ ಅಕ್ಕ-ತಂಗಿ ಹೇಗೆ ಅತ್ತೆ-ಸೊಸೆಯಾದರು? ಹಾಗೂ ಇವರಿಬ್ಬರ ಬಾಂಧವ್ಯದ ಮಧ್ಯೆ ಒಡಕು ಮೂಡಿಸಲು ಮಯೂರಿ ಮತ್ತು ಸೋನಿಯಾ ಮಾಡುವ ಪಿತೂರಿ ಕಂಡಿದ್ದೀರಿ.
ಮಾನಸಾ ಸದಾ ಪರರಿಗಾಗಿಯೇ ಬದುಕುತ್ತ ಕೊನೆಗೆ ಅವಳ ಒಳ್ಳೆಯ ಗುಣಕ್ಕೆ ಒಳ್ಳೆಯದೇ ಆಗಿದೆ ಎಂಬಂತೆ ಅಕ್ಕ-ತಂಗಿ, ಗಂಡ ಮೈದುನ ಎಲ್ಲರೂ ಒಂದಾಗುತ್ತಾರೆ. ಆದರೆ ಸೋನಿಯಾ ಕಳುಹಿಸಿರೋ ಭುವನೇಶ್ವರಿ ಎಲ್ಲರಿಗೂ ವಿಷ ಕೊಟ್ಟು ಅವರನ್ನು ಸಾಯಿಸಿದ್ದಲ್ಲದೇ ತನ್ನ ಸ್ವಾರ್ಥಕ್ಕಾಗಿ ಮಾನಸಾ ಆಸ್ತಿಯನ್ನ ತನ್ನದಾಗಿಸಿಕೊಳ್ಳುತ್ತಾಳೆ. ಆದರೆ ಕೊನೆಗೆ ನಾಗಪ್ಪನ ಬಳಿ ಇರೋ ಹಸುಗೂಸು ಮಾನಸಾಳ ಮಗು ಎಂಬ ಸತ್ಯ ಗೊತ್ತಾಗುತ್ತದೆ. ಕ್ರೂರಿ ಭುವನೇಶ್ವರಿಯಿಂದ ಈ ಮಗುವಿಗೆ ಆಪತ್ತು ಇದೆ ಎಂದು ತಿಳಿದು ದೂರದ ಹಳ್ಳಿಗೆ ಕರೆದುಕೊಂಡು ಬರುತ್ತಾನೆ ನಾಗಪ್ಪ.
ಈ ರೀತಿ ನಾಗಪ್ಪನಿಂದ ರಕ್ಷಣೆಗೊಳಗಾದ ಮಗುವೇ ಮಾನಸಾಳ ಮಗು ಪದ್ಮಾ. ಬೆಳೆದು ದೊಡ್ಡವಳಾಗಿ ಅವಳದೇ ರೂಪವನ್ನು ಹೊಂದಿರುವ ಪದ್ಮಾ ಅಮ್ಮನ ಗುಣದವಳು. ಕಷ್ಟಕ್ಕೆ ಸ್ಪಂದಿಸುವುದು, ಚುರುಕಿನ ವ್ಯವಹಾರ ಎಲ್ಲವೂ ಮಾನಸಾಳ ಹೋಲಿಕೆ. ಆದರೆ ತನ್ನ ನಿಜವಾದ ಅಪ್ಪ ಅಮ್ಮ ಯಾರೆಂಬ ಸತ್ಯವೇ ಗೊತ್ತಿಲ್ಲ.

ಇವಳಿಗೆ ಡಿ.ಜೆ ಎಂಬ ಸಿನಿಮಾ ಸ್ಟಾರ್ ಅಂದ್ರೆ ಪಂಚಪ್ರಾಣ. ಅವನ ಮೇಲಿನ ಅಭಿಮಾನಗೋಸ್ಕರ ಸಮಾಜ ಸೇವೆ ಕಾರ್ಯಗಳನ್ನ ಮಾಡುವಂತಹ ಹುಚ್ಚು ಮನಸ್ಸಿನ ಹುಡುಗಿ ಈಕೆ. ಇಂಥಹ ಬಡಹುಡುಗಿಗೆ ಅದೇ ಸೂಪರ್ ಸ್ಟಾರ್ ಡಿ.ಜೆ ಜೊತೆ ಮದ್ವೆಯಾದರೇ ತೆರೆಮೇಲೆ ಕಾಣುವ ನಾಯಕ ನಿಜಜೀವನದಲ್ಲೂ ನಾಯಕನಾಗಿ ಉಳಿಯಲು ಸಾಧ್ಯವೇ? ಇಂಥ ಕುತೂಹಲಗಳನ್ನ 'ಅವಳು' ಹೊಸರೂಪದಲ್ಲಿ ಕಾಣಬಹುದಾಗಿದೆ.
ಮೇಲುಕೋಟೆ ಮಂಡ್ಯ ಜಿಲ್ಲೆಯ ಸುತ್ತಮುತ್ತ ರಮಣೀಯ ಸ್ಥಳಗಳಲ್ಲಿ ಚಿತ್ರೀಕರಣ ಮಾಡಿ 'ಅವಳು' ಧಾರಾವಾಹಿಗೆ ಹೊಸ ಮೆರುಗು ತಂದಿದ್ದೇವೆ ಎನ್ನುತ್ತಿದ್ದಾರೆ ನಿರ್ದೇಶನ ಮತ್ತು ಛಾಯಾಗ್ರಹಣ ಜವಾಬ್ದಾರಿ ಹೊತ್ತಿರುವ ನಾಗರಾಜ್ ಉಪ್ಪಂದ.
350 ಸಂಚಿಕೆ ಕಂಡ 'ಅವಳು' ಉದಯ ಟಿವಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 6.00ಕ್ಕೆ ಪ್ರಸಾರವಾಗುತ್ತಿದೆ.


Click it and Unblock the Notifications











