ಉಡುಪಿಯ ಹಿರಿಯ ನಟಿ ವಿನಯಾ ಪ್ರಸಾದ್ ಲೈಫ್ ಸ್ಟೋರಿ
ಕಿರುತೆರೆಯಲ್ಲಿ ಪ್ರೀತಿಯ ಅಖಿಲಾಂಡೇಶ್ವರಿ ಆಗಿರುವ ವಿನಯಾ ಪ್ರಸಾದ್ ವೀಕ್ಷಕರ ನೆಚ್ಚಿನ ನಟಿ. ಸಿನಿಮಾ ರಂಗದಲ್ಲಿ ಎರಡು ದಶಕಗಳ ಕಾಲ ನಟಿಸಿ ಸೈ ಎನಿಸಿಕೊಂಡ ವಿನಯಾ ಪ್ರಸಾದ್ ಈಗ ಕಿರುತೆರೆಯಲ್ಲೂ ಮಿಂಚುತ್ತಿದ್ದಾರೆ. ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ತಮ್ಮ ಅಭಿನಯದಿಂದ ಮನಗೆದ್ದಿದ್ದಾರೆ.
ವಿನಯಾ ಪ್ರಸಾದ್ ದಕ್ಷಿಣ ಭಾರತ ಚಿತ್ರರಂಗದ ಪ್ರತಿಭಾನ್ವಿತ ನಟಿ. ಧಾರಾವಾಹಿಗಳಲ್ಲೂ ಅಭಿನಯಿಸುವ ಮೂಲಕ ಪರಭಾಷೆಯಲ್ಲೂ ವಿನಯಾ ಪ್ರಸಾದ್ ತಮ್ಮ ನಟನಾ ಕಂಪನ್ನು ಪಸರಿಸಿದ್ದಾರೆ. ನಟನೆ ಜೊತೆಗೆ ಕಾರ್ಯಕ್ರಮಗಳ ನಿರೂಪಣೆಯನ್ನು ಕೂಡಾ ಮಾಡಿದ್ದಾರೆ. ಅಷ್ಟೇ ಅಲ್ಲದೇ, ಹಾಡನ್ನೂ ಹಾಡುತ್ತಾರೆ.
ಜಿ ವಿ ಅಯ್ಯರ್ ನಿರ್ದೇಶನದ 'ಮಧ್ವಾಚಾರ್ಯ' ಸಿನಿಮಾ ಮೂಲಕ ನಟಿ ವಿನಯಾ ಪ್ರಸಾದ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಬೆಳ್ಳಿತೆರೆಗೆ ಕಾಲಿಟ್ಟ ವಿನಯಾ ಪ್ರಸಾದ್ ಕನ್ನಡದ ಖ್ಯಾತ ಹಿರಿಯ ನಟಿಯರಲ್ಲಿ ಒಬ್ಬರು. ಸದ್ಯ ಜೀ ಕನ್ನಡದಲ್ಲಿ ಮೂಡಿ ಬರುತ್ತಿರುವ 'ಪಾರು' ಧಾರಾವಾಹಿಯಲ್ಲಿ ಅಖಿಲಾಂಡೇಶ್ವರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಉಡುಪಿಯಲ್ಲಿ ಕೃಷ್ಣ ಭಟ್ ಹಾಗೂ ವತ್ಸಲ ದಂಪತಿಯ ಪುತ್ರಿಯಾಗಿ ವಿನಯಾ ಪ್ರಸಾದ್ ಜನಿಸಿದರು. ಅಲ್ಲೇ ಓದು ಮುಗಿಸಿದ ವಿನಯಾ ಪ್ರಸಾದ್ ಅವರು ಜಿ ವಿ ಅಯ್ಯರ್ ಅವರ ಸಿನಿಮಾ 'ಮಧ್ವಾಚಾರ್ಯ'ದಲ್ಲಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ನೀಡಿದ್ದಾರೆ. ಮತ್ತೆ ಹಿಂತಿರುಗಿ ನೋಡದ ವಿನಯಾ ಪ್ರಸಾದ್ ಒಂದಾದ ಮೇಲೆ ಒಂದು ಸಿನಿಮಾಗಳಲ್ಲಿ ನಟಿಸಿದರು. 'ನೀನು ನಕ್ಕರೆ ಹಾಲು ಸಕ್ಕರೆ', 'ಕಾಲೇಜ್ ಹೀರೊ', 'ಗಣೇಶನ ಮದುವೆ', 'ಪೊಲೀಸನ ಹೆಂಡ್ತಿ', 'ಗೌರಿ ಗಣೇಶ', 'ಯಾರಿಗೂ ಹೇಳ್ಬೇಡಿ', 'ಮೈಸೂರು ಜಾಣ', 'ಸೂರ್ಯೋದಯ', 'ಮುತ್ತಿನಂಥ ಹೆಂಡತಿ', 'ಕಲ್ಯಾಣೋತ್ಸವ', 'ಮಹಾ ಎಡಬಿಡಂಗಿ' ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದರು.
ವಿನಯಾ ಪ್ರಸಾದ್ 1988 ರಲ್ಲಿ ಖ್ಯಾತ ನಿರ್ದೇಶಕರಾದ ವಿ.ಆರ್. ಕೃಷ್ಣ ಪ್ರಸಾದ್ ಅವರನ್ನು ಇಷ್ಟಪಟ್ಟು ಮದುವೆಯಾದರು. ಇವರಿಗೆ ಪ್ರಥಮಾ ಎಂಬ ಮುದ್ದಾದ ಹೆಣ್ಣು ಮಗು ಕೂಡ ಇದೆ. ಆದರೆ 1995 ರಲ್ಲಿ ಪ್ರಸಾದ್ ಆಕಸ್ಮಿಕವಾಗಿ ಆಕಾಲ ಮರಣಕ್ಕೆ ತುತ್ತಾದರು. ಆಗ ಬದುಕಲ್ಲಿ ಕಷ್ಟಪಡಬೇಕಾಯಿತು. ಮಗಳನ್ನು ನೋಡಿಕೊಳ್ಳುತ್ತಾ ಏಳು ವರ್ಷಗಳ ಕಾಲ ಒಂಟಿಯಾಗಿದ್ದರು. ನಂತರ 2002 ರಲ್ಲಿ ಜ್ಯೋತಿ ಪ್ರಕಾಶ್ ಎಂಬುವವರನ್ನು ವಿನಯಾ ಪ್ರಸಾದ್ ಮದುವೆಯಾದರು. ಇನ್ನು ವಿನಯಾ ಪ್ರಸಾದ್ ಅವರ ಮಗಳು ಪ್ರಥಮ ಪ್ರಸಾದ್ ಕೂಡ ನಟಿಯಾಗಿದ್ದಾರೆ. ಡ್ಯಾನ್ಸರ್ ಆಗಿರುವ ಪ್ರಥಮ ಪ್ರಸಾದ್ ಅವರು ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ಬೆಳ್ಳಿತೆರೆಯ ಜೊತೆಗೆ ವಿನಯಾ ಪ್ರಸಾದ್ ಅವರು ಕಿರುತೆರೆಯಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. 'ಸಾವಿತ್ರಿ' ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟ ವಿನಯಾ ಪ್ರಸಾದ್ ಅವರು ಮುಂದೆ 'ಶಕ್ತಿ', 'ಅನುಪಮಾ', 'ಬಂಗಾರ', 'ಸ್ತ್ರೀ', 'ನಂದ ಗೋಕುಲ', 'ನಿತ್ಯೋತ್ಸವ', 'ಸುಂದರಿ' ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕನ್ನಡ ಮಾತ್ರವಲ್ಲದೆ ಮಲಯಾಳಂನಲ್ಲೂ ಸೀರಿಯಲ್ಗಳಲ್ಲಿ ಅಭಿನಯಿಸಿದ್ದಾರೆ. ಸದ್ಯ 'ಪಾರು' ಧಾರಾವಾಹಿಯಲ್ಲಿ ಅಖಿಲಾಂಡೇಶ್ವರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಇನ್ನು ವಿನಯಾ ಪ್ರಸಾದ್ ಅವರು ಅತ್ತ್ಯುತ್ತಮ ನಟಿ ಹಾಗೂ ಅತ್ತ್ಯುತ್ತಮ ಪೋಷಕ ನಟಿ ವಿಭಾಗದಲ್ಲಿ ಕರ್ನಾಟಕ ಚಲನಚಿತ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. 'ಆತಂಕ' ಹಾಗೂ 'ಬಣ್ಣದ ಹೆಜ್ಜೆಗಳು' ಚಿತ್ರದಲ್ಲಿನ ನಟನೆಗಾಗಿ ಉತ್ತಮ ನಟಿ ಪ್ರಶಸ್ತಿಯನ್ನು ಪಡೆದಿದ್ದಾರೆ.


Click it and Unblock the Notifications











