ಅಮಿತಾಬ್ ಬಚ್ಚನ್ 'ಕೌನ್ ಬನೇಗಾ ಕರೋಡ್ ಪತಿ'ಶೋನಲ್ಲಿ ಉಡುಪಿಯ ಸಮಾಜ ಸೇವಕ ರವಿ ಕಟಪಾಡಿ
ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ನಡೆಸಿಕೊಡುವ ಹಿಂದಿಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಕೌನ್ ಬನೇಗಾ ಕರೋಡ್ ಪತಿ ಸೀಸನ್ 12 ಪ್ರಸಾರವಾಗುತ್ತಿದೆ. ಈ ಪ್ರಸಿದ್ಧ ಶೋಗೆ ಈಗ ಉಡುಪಿಯ ಸಮಾಜ ಸೇವಕ ರವಿ ಕಟಪಾಡಿ ಆಯ್ಕೆಯಾಗಿದ್ದಾರೆ.
ಹೌದು, ರವಿ ಅವರ ಮಾನವೀಯ ಕೆಲಸ ಗುರುತಿಸಿ ವಾಹಿನಿ ಈ ಅವಕಾಶ ನೀಡಿದೆ. ರವಿ ಕಟಪಾಡಿ ಅವರ ಎಪಿಸೋಡ್ ಜನವರಿ 13ರಂದು ಅಂದರೆ ಇಂದು ಮುಂಬೈನಲ್ಲಿ ಶೂಟಿಂಗ್ ನಡೆಯಲಿದೆ. ಜನವರಿ 15ರಂದು ಈ ಕಾರ್ಯಕ್ರಮ ಪ್ರಸಾರವಾಗುವ ಸಾಧ್ಯತೆ ಇದೆ.
ಈ ಬಗ್ಗೆ ರವಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. 'ಕೌನ್ ಬನೇಗಾ ಕರೋಡ್ ಪತಿ ಆಯೋಜಕರಿಂದ ಕರೆ ಬಂದಾಗ ಮೊದಲು ತಿರಸ್ಕರಿಸಿದ್ದೆ. ಆದರೆ ಮತ್ತೊಮ್ಮೆ ಕರೆ ಮಾಡಿ ಕೇಳಿಕೊಂಡಾಗ ಒಪ್ಪಿಗೆ ನೀಡಿದೆ' ಎಂದಿದ್ದಾರೆ. ಜೊತೆಗೆ ಎಲ್ಲರೂ ಬೆಂಬಲ ನೀಡುವಂತೆ ಕೇಳಿಕೊಂಡಿದ್ದಾರೆ.

ಒಪ್ಪಿಗೆ ನೀಡಿದ ಬಳಿಕ ರವಿ ಕಟಪಾಡಿ ಮನೆಗೆ ಕರೋಡ್ ಪತಿ ಟೀಂ ಆಗಮಿಸಿ ಪ್ರೋಮೋ ಶೂಟ್ ಮಾಡಿದ್ದಾರೆ. ಜೊತೆಗೆ ಅವರ ಸಾಮಾಜಿಕ ಕಾರ್ಯಗಳನ್ನು ದಾಖಲಿಸಿಕೊಂಡಿದ್ದಾರೆ. ಈಗಾಗಲೇ ರವಿ ಮುಂಬೈಗೆ ತೆರಳಿದ್ದು ಇಂದು ಅಮಿತಾಬ್ ಮುಂದೆ ಹಾಟ್ ಸೀಟಿನಲ್ಲಿ ಕೂರಲಿದ್ದಾರೆ. ಇದು ಶುಕ್ರವಾರ ಪ್ರಸಾರವಾಗುವ ಕೌನ್ ಬನೇಗಾ ಕರೋಡ್ ಪತಿ ಕರ್ಮವೀರ್ ವಿಶೇಷ ಎಪಿಸೋಡ್ ನಲ್ಲಿ ಪ್ರಸಾರ ಆಗುವ ನಿರೀಕ್ಷೆ ಇದೆ. ರವಿ ಎಷ್ಟು ಹಣ ಗೆದ್ದು ಬರುತ್ತಾರೆ ಎನ್ನುವ ಕುತೂಹಲ ಊರಿನ ಜನರಿಗೆ ಮನೆ ಮಾಡಿದೆ.
ಅಂದಹಾಗೆ ರವಿ ಕಟಪಾಡಿ ವಿಭಿನ್ನವಾದ ವೇಷ ಹಾಕಿಕೊಂಡು ಜನರನ್ನು ರಂಜಿಸಿ ಹಣ ಸಂಗ್ರಹಿಸುತ್ತಾರೆ. ಸಂಗ್ರಹಿಸಿದ ಹಣವನ್ನು ಮಾನವೀಯ ಕೆಲಗಳಿಗೆ ಬಳಸುತ್ತಾರೆ. ಬಡ ಮಕ್ಕಳ ಶಿಕ್ಷಣ, ಬಡವರ ಆರೋಗ್ಯ ಸೇರಿದಂತೆ ಸಾಕಷ್ಟು ಸಾಮಾಜಿಕ ಕೆಲಸಗಳಿಗೆ ಹಣವನ್ನು ನೀಡುತ್ತಾರೆ.
ಕಳೆದ ಆರು ವರ್ಷಗಳಿಂದ ರವಿ ಅವರು ಸುಮಾರು 52.50 ಲಕ್ಷ ರೂ. ಸಂಗ್ರಹಿಸಿದ್ದಾರೆ. ಈ ಹಣವನ್ನು 28 ಬಡ ಮಕ್ಕಳ ಚಿಕಿತ್ಸೆ ನೀಡಿದ್ದಾರೆ. ಕಳೆದ ವರ್ಷ ಕೋವಿಡ್-19 ಕಾರಣ ಹಣ ಸಂಗ್ರಹಿಸುವ ಬದಲು ವಿಶೇಷ ವೇಷ ಧರಿಸಿ ಕೊರೊನಾ ಬಗ್ಗೆ ಜಾಗೃತೆ ಮೂಡಿಸುವ ಕೆಲಸ ಮಾಡಿದ್ದಾರೆ.


Click it and Unblock the Notifications











