'ವಧು' ಧಾರಾವಾಹಿಯ ನಟಿ ದುರ್ಗಾಶ್ರೀಯನ್ನು ಪರಿಚಯಿಸಿದ್ದು ಪುನೀತ್ ರಾಜಕುಮಾರ್; ಯಾವುದು ಆ ಸೀರಿಯಲ್?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ವಧು' ಧಾರಾವಾಹಿಗೆ ಬಹುದೊಡ್ಡ ಪ್ರೇಕ್ಷಕ ವರ್ಗ ಸೃಷ್ಠಿಯಾಗುತ್ತಿದೆ. ವಿಭಿನ್ನ ಕಥಾಹಂದರವನ್ನು ಹೊಂದಿರುವ ಈ ಧಾರಾವಾಹಿಯಲ್ಲಿ ನಟಿ ದುರ್ಗಾಶ್ರೀ ನಾಯಕ ನಟಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 'ವಧು' ಎಂಬ ಹೆಸರಿನ ಪಾತ್ರ ಇವರದ್ದಾಗಿದ್ದು, ಧಾರಾವಾಹಿ ಕಥೆಯಲ್ಲಿ ವಧು ಡೈವೋರ್ಸ್ ಲಾಯರ್.
ಮದುವೆಯಲ್ಲಿ ಒಡೆದ ಎರಡು ಮನಸ್ಸುಗಳಿಗೆ ಕಾನೂನಿನ ಮೂಲಕ ಬಿಡುಗಡೆ ಕೊಡಿಸುವುದೇ ಡೈವೋರ್ಸ್ ಲಾಯರ್ ವೃತ್ತಿ ಧರ್ಮವಾದರೂ ಮೃದು ಮನಸ್ಸಿನ ಮಮಕಾರದ ವಧು ಮಾತ್ರ ತನ್ನ ಬಳಿ ಬಂದ ತಕ್ಷಿದಾರರಿಗೆಲ್ಲ ಡೈವೋರ್ಸ್ ಕೊಡಿಸುವ ಬದಲು ಒಂದಾಗುವಂತೆ ಸಲಹೆ ನೀಡುತ್ತಾಳೆ. ಈ ಕಾರಣದಿಂದಲೇ ವಧುವಿನ ವೃತ್ತಿಜೀವನ ಸ್ವಲ್ಪ ಹಿನ್ನೆಲೆಗೆ ಬಂದಿದೆ.

ಹೀಗಿರುವಾಗಲೇ, ತನ್ನ ದಾಂಪತ್ಯದಲ್ಲಿ ಸೋತು ಪತ್ನಿ ಪ್ರಿಯಾಂಕಾಳಿಂದ ವಿಚ್ಛೇದನ ಪಡೆಯಬೇಕೆಂದು ಹಪಹಪಿಸುತ್ತಿರುವ ಸಾರ್ಥಕ್ , ವಧು ಬಳಿ ಬಂದಿದ್ದಾನೆ. ಇದೀಗ ಸಾರ್ಥಕ್ ಗೆ ತನ್ನ ಪತ್ನಿಯಿಂದ ಡೈವೋರ್ಸ್ ಸಿಗುತ್ತದೆಯೋ ಅಥವಾ ಬದಲಿಗೆ ವಧು ಮೇಲೆಯೇ ಪ್ರೀತಿ ಅಂಕುರವಾಗುತ್ತದೆಯೋ ಎಂಬುದೇ ಧಾರಾವಾಹಿಯ ಮುಖ್ಯ ಕಥಾಹಂದರ.
ಅಂದ ಹಾಗೆ ವಧು ಧಾರಾವಾಹಿಯಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಳ್ಳುತ್ತಿರುವ ದುರ್ಗಾಶ್ರೀ ಅವರು ಕಿರುತೆರೆಗೆ ಹೊಸಬರೇನಲ್ಲ. ಹೌದು 'ವಧು' ಧಾರಾವಾಹಿಗೂ ಮೊದಲು ನಟಿ ದುರ್ಗಾಶ್ರೀ ಅವರು 'ನೇತ್ರಾವತಿ' ಎಂಬ ಧಾರಾವಾಹಿಯಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದರು.
ದುರ್ಗಾಶ್ರೀ ಅವರು ಇಂದು ಕನ್ನಡದ ಜೊತೆಗೆ ಪರಭಾಷೆಯ ಕಿರುತೆರೆಯಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ ಎಂದರೆ ಅದಕ್ಕೆ ಅವರ ಅಮ್ಮನೇ ಮುಖ್ಯ ಕಾರಣ. ದುರ್ಗಾಶ್ರೀ ಅವರ ಅಮ್ಮನಿಗೆ ಮಗಳನ್ನು ನಟಿಯಾಗಿ ನೋಡಬೇಕೆಂಬ ಬಯಕೆಯಿತ್ತು. ಅಮ್ಮನ ಬಯಕೆಯನ್ನು ಈಡೇರಿಸುವ ಸಲುವಾಗಿ ಈಕೆ ಆಡಿಶನ್ಗಳನ್ನು ನೀಡಲಾರಂಭಿಸಿದರು. 'ನೇತ್ರಾವತಿ'ಯ ಧಾರಾವಾಹಿಯಲ್ಲಿ ತಂಗಿಯ ಪಾತ್ರದ ಆಡಿಶನ್ಗೆ ಹೋದ ದುರ್ಗಾಶ್ರೀ ಆಯ್ಕೆಯಾಗಿದ್ದು ಮಾತ್ರ ಅಕ್ಕನ ಪಾತ್ರಕ್ಕೆ.

ಉದಯ ಟಿವಿಯಲ್ಲಿ ಪ್ರಸಾರವಾದ ಈ ಧಾರಾವಾಹಿಯನ್ನು ನಟ ಪುನೀತ್ ರಾಜಕುಮಾರ್ ಅವರೇ ಲಾಂಚ್ ಮಾಡಿದ್ದರು. ಹಾಗಾಗಿ "ನಟ ಪುನೀತ್ ರಾಜಕುಮಾರ್ ಅವರು ಲಾಂಚ್ ಮಾಡಿದ ನಟಿ ನಾನು!" ಎಂದು ಬಹಳ ಖುಷಿಯಿಂದ ಹೇಳಿಕೊಳ್ಳುತ್ತಾರೆ ನಟಿ ದುರ್ಗಾಶ್ರೀ. ಕನ್ನಡವಷ್ಟೇ ಅಲ್ಲದೆ ತೆಲುಗು ಕಿರುತೆರೆಯಲ್ಲೂ ಮಿಂಚಿದ್ದಾರೆ ನಟಿ ದುರ್ಗಾಶ್ರೀ.
ಹೌದು, ತೆಲುಗಿನ "ವೈಷ್ಣವಿ" ಧಾರಾವಾಹಿಯ ಮೂಲಕ ಪರಭಾಷೆಯ ಕಿರುತೆರೆಗೆ ಕಾಲಿಟ್ಟರು ದುರ್ಗಾಶ್ರೀ. ಮುಂದೆ 'ಮಧುರ ನಗರಿಲೋ', 'ಅರ್ಧಾಂಗಿ' ಧಾರಾವಾಹಿಗಳಲ್ಲಿ ಈಕೆ ನಟಿಸಿದರು. ಪ್ರಸ್ತುತ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ವಧು" ಧಾರಾವಾಹಿಯನ್ನು ಪರಮೇಶ್ವರ್ ಗುಂಡ್ಕಲ್ ಅವರು ನಿರ್ದೇಶಿಸುತ್ತಿದ್ದು ದಿಲೀಪ್ ರಾಜ್ ದಂಪತಿ ನಿರ್ಮಾಣ ಮಾಡಿದ್ದಾರೆ.
'ವಧು' ಧಾರಾವಾಹಿಯಲ್ಲಿ ವಧುವಾಗಿ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿರುವ ದುರ್ಗಾಶ್ರೀ ಅವರಿಗೆ ಮೊದಲ ಬಾರಿ ಕ್ಯಾಮೆರಾ ಎದುರು ನಿಂತಾಗ ಭಯವಾಗಿತ್ತು. "ನೇತ್ರಾವತಿ" ಧಾರಾವಾಹಿಯ ನಿರ್ದೇಶಕ
ಸಂತೋಷ್ ಗೌಡ ಅವರು ನೀಡಿದ ಮಾರ್ಗದರ್ಶನದಿಂದ ಪರಿಪೂರ್ಣ ನಟಿಯಾಗಲು ಸಾಧ್ಯವಾಯಿತು.
ಕನ್ನಡದ ಜೊತೆಗೆ ಪರಭಾಷೆಯ ಕಿರುತೆರೆಯಲ್ಲಿಯೂ ನಟನಾ ಕಂಪನ್ನು ಪಸರಿಸುತ್ತಿರುವ ದುರ್ಗಾಶ್ರೀ ನಟಿ ಮಾತ್ರವಲ್ಲ, ಭರತನಾಟ್ಯ ಕಲಾವಿದೆಯೂ ಹೌದು. ಅನುರಾಧ ವೆಂಕಟರಮಣ ಅವರ ಬಳಿ ಶಾಸ್ತ್ರೋಕ್ತವಾಗಿ ನೃತ್ಯವನ್ನು ಕಲಿತಿರುವ ದುರ್ಗಾಶ್ರೀ ನೃತ್ಯದಲ್ಲಿಯೇ ಏನಾದರೂ ಸಾಧನೆ ಮಾಡಬೇಕು ಎಂದು ಬಯಸಿದ ಬೆಡಗಿ.
ಆಚಾನಕ್ ಆಗಿ ದೊರೆತ ಅವಕಾಶದಿಂದ ನಟಿಯಾಗಿ ಕಾಣಿಸಿಕೊಂಡ ದುರ್ಗಾಶ್ರೀ
ಮೊದಲ ಧಾರಾವಾಹಿಯಲ್ಲಿಯೇ ವೀಕ್ಷಕರ ಮನ ಸೆಳೆದಿದ್ದಾರೆ. ಕನ್ನಡದ ಹೊರತಾಗಿ ಪರಭಾಷೆಯ ಕಿರುತೆರೆಯಲ್ಲಿಯೂ ನಟನಾ ಛಾಪನ್ನು ಪಸರಿಸಿರುವ ಈಕೆ ಮುಂದೊಂದು ದಿನ ಸಿನಿಮಾದಲ್ಲಿ ನಟಿಸಿದರೆ ಆಶ್ಚರ್ಯವಿಲ್ಲ.


Click it and Unblock the Notifications











