ರುಕ್ಮಿಣಿಯಾಗಿರುವ ವಿಕ್ಷಿತಾ, ಆದಿ ಮನಸ್ಸು ಗೆಲ್ಲುತ್ತಾಳಾ? ಅಷ್ಟಕ್ಕೂ ಯಾರೀಕೆ..?
'ವಧು' ಧಾರಾವಾಹಿಯಲ್ಲಿ ವಿಕ್ಷಿತಾ ಪಾತ್ರಕ್ಕೆ ನಟಿ ಭುವನಾ ಮುರಳಿ ಅವರು ಜೀವ ತುಂಬಿದ್ದಾರೆ. ಧಾರಾವಾಹಿಯಲ್ಲಿ ಭುವನಾ ಅವರ ನಟನೆ ಚೆನ್ನಾಗಿದೆ. ಯಾಕೆಂದರೆ, ವಿಕ್ಷಿತಾ ಆದಿಯನ್ನು ಪ್ರೀತಿಸುತ್ತಿದ್ದು, ಆದರೆ, ನೇರವಾಗಿ ಹೇಳಲಾಗದೇ ಬೇರೊಂದು ನಂಬರ್ನಿಂದ ಆದಿಗೆ ಮೆಸೇಜ್ ಮಾಡುತ್ತಿರುತ್ತಾಳೆ. ರುಕ್ಮಿಣಿ ಹೆಸರಿನಲ್ಲಿ ಆದಿ ಮನಸ್ಸನ್ನು ಕದ್ದಿದ್ದಾಳೆ. ಆದಿ ಕೂಡ ಎದುರಿಗೆ ವಿಕ್ಷಿ ಬಂದರೆ ಕೊಂಚ ನೆಗಲೆಕ್ಟ್ ಮಾಡುತ್ತಾನೆ.
ಅದೇ ಫೋನ್ನಲ್ಲಿ ಬೆಳದಿಂಗಳ ಬಾಲೆಯಂತೆ ಆದಿಯನ್ನು ವಿಕ್ಷಿ ಆಟವಾಡಿಸುತ್ತಿದ್ದು, ಆದಿ ಕೂಡ ರುಕ್ಮಿಣಿಯ ಜೊತೆಗೆ ಮಾತನಾಡಲು, ಮೆಸೇಜ್ ಮಾಡಲು ಕಾಯುತ್ತಿರುತ್ತಾನೆ. ಆದಿ ಮತ್ತು ರುಕ್ಮಿಣಿ ಪ್ರೀತಿಯ ಲೋಕದಲ್ಲಿ ತೇಲಾಡುತ್ತಿದ್ದಾರೆ. ವಿಕ್ಷಿಗೆ ಆದಿ ಬಳಿ ಸತ್ಯ ಯಾವಾಗ ಹೇಗೆ ಹೇಳುವುದು ಎಂಬುದು ಗೊತ್ತಾಗುತ್ತಿಲ್ಲ.

ರುಕ್ಮಿಣಿಯಾಗಿ ಆದಿ ಮನ ಗೆದ್ದ ವೀಕ್ಷಿ
ಸದ್ಯ ರುಕ್ಮಿಣಿಯಾಗಿಯೇ ಆದಿ ಜೊತೆಗೆ ಸಂಪರ್ಕ ಹೊಂದಲು ಇಚ್ಛಿಸಿದ್ದಾಳೆ. ಆದಿ ರುಕ್ಮಿಣಿಯನ್ನು ಒಂದು ಬಾರಿ ನೋಡಬೇಕು ಎಂದು ಬಯಸುತ್ತಿದ್ದು, ವಿಕ್ಷಿ ದಿನ ದೂಡುತ್ತಿದ್ದಾಳೆ. ಇನ್ನು ವಿಕ್ಷಿತಾಳಿಗೆ ಆದಿ ತಾಯಿ ಕಾಮಾಕ್ಷಿ ಜೊತೆಗೆ ಪದೇ ಪದೇ ಕಿರಿಕಿರಿ ಆಗುತ್ತಿರುತ್ತದೆ. ಆದರೆ ವಿಕ್ಷಿತಾ ಆದಿ ಹೆಂಡತಿಯಾಗುವ ಕನಸು ಕಾಣುತ್ತಿದ್ದು, ಮಗನ ಭವಿಷ್ಯ ತಿಳಿಯದೆಯೇ ಕಾಮಾಕ್ಷಿ ಸದಾ ವಿಕ್ಷಿಯನ್ನು ದ್ವೇಷಿಸುತ್ತಿರುತ್ತಾಳೆ. ಮುಂದೆ ವಿಕ್ಷಿ ಆದಿಯ ಬಳಿ ತನ್ನ ಪ್ರೀತಿಯನ್ನು ಒಪ್ಪಿಸುವುದಲ್ಲದೇ, ಅವರ ತಾಯಿಯನ್ನೂ ಸಂಬಾಳಿಸಬೇಕಿದೆ. ಇನ್ನು ವಿಕ್ಷಿ ಪಾತ್ರ ವಧು ಧಾರಾವಾಹಿಯಲ್ಲಿ ಬಹಳ ಮುದ್ದಾಗಿ ಮೂಡಿ ಬಂದಿದೆ.
ಆದಿಗಾಗಿ ಕಾಯುತ್ತಿರುವ ವೀಕ್ಷಿತಾ
ವಿಕ್ಷಿತಾ ಪಾತ್ರಕ್ಕೆ ನಟಿ ಭುವನಾ ಮುರಳಿ ಅವರು ಜೀವ ತುಂಬಿದ್ದು, ಪುಟ್ಟ ಹುಡುಗಿಯಾಗಿ ಮುದ್ದಾಗಿ ನಟಿಸಿದ್ದಾರೆ. ಭುವನಾ ಮುರಳಿಯವರ ನಟನೆ ನಿಜವಾಗಿಯೂ ಚೆನ್ನಾಗಿದ್ದು, ಆದಿ ಮತ್ತು ವಿಕ್ಷಿತಾ ಪಾತ್ರ ಅಭಿಮಾನಿಗಳಿಗೂ ಇಷ್ಟವಾಗಿದೆ. ಇಷ್ಟರಲ್ಲೇ ಅಭಿಮಾನಿಗಳು ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಆವಿ ಎಂದು ಫ್ಯಾನ್ ಪೇಜ್ ತೆರೆದರೂ ಆಶ್ಚರ್ಯವಿಲ್ಲ. ಇನ್ನು ನಟಿ ಭುವನಾ ಮುರಳಿ ಅವರಿಗೆ ಇದೇ ಮೊದಲ ಧಾರಾವಾಹಿ ಏನಲ್ಲ. ಈ ಹಿಂದೆ ನಾಲ್ಕಾರು ಸೀರಿಯಲ್ ಗಳಿಗೆ ಬಣ್ಣ ಹಚ್ಚಿದ್ದಾರೆ.
ಹಲವು ಧಾರಾವಾಹಿಗಳಲ್ಲಿ ಭುವನಾ
'ದೊರೆಸಾನಿ' ಧಾರಾವಾಹಿಯಲ್ಲಿ ಸಪ್ತಮಿ ಆಗಿ ನಟಿಸಿದ್ದು, 'ಪುಣ್ಯವತಿ' ಸೀರಿಯಲ್ನಲ್ಲಿ ಪೂರ್ವಿ ಆಗಿ ಕಾಣಿಸಿಕೊಂಡಿದ್ದಾರೆ. ಬಳಿಕ ಉದಯ ಟಿವಿಯಲ್ಲಿ ಮೂಡಿ ಬಂದ 'ಮೈನಾ' ಸೀರಿಯಲ್ನಲ್ಲಿ ಕೃಷ್ಣವೇನಿ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಇದಲ್ಲದೇ, 'ಅಪರಂಜಿ', 'ವರಲಕ್ಷ್ಮೀ ಸ್ಟೋರ್ಸ್' ಸೀರಿಯಲ್ಗಳಲ್ಲೂ ಅಭಿನಯಿಸಿದ್ದರು. ಇನ್ನು ನಟಿ ಭುವನಾ ಮುರಳಿ ಅವರು ನಟಿಯಾಗುವ ಕನಸು ಕಂಡು ಹಲವಾರು ಆಡಿಷನ್ಗಳನ್ನು ನೀಡಿ, ಇತ್ತೀಚೆಗೆ ಒಳ್ಳೊಳ್ಳೆಯ ಧಾರಾವಾಹಿಗಳಲ್ಲಿ ಅವಕಾಶ ಸಿಗುತ್ತಿದೆ. ಇದೆಲ್ಲದರ ಹಿಂದೆ ಬಹಳ ಶ್ರಮವಿದೆ ಎಂದು ಹೇಳುತ್ತಾರೆ. ಇದಲ್ಲದೇ ನಟಿ ಭುವನಾ ಅವರು ಭರತನಾಟ್ಯ ಡ್ಯಾನ್ಸ್ ಕಲಿತಿದ್ದು, ಉದಯ ಟಿವಿಯಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಅಲ್ಲದೇ, ಇಂಚರ ಟಿವಿಯಲ್ಲಿ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದಾರೆ. ಸಿ ಬೆಂಗಳೂರು ವಾಹಿನಿಯಲ್ಲಿ 'ಸಿ ಬಜಾರ್' ಎಂಬ ಕಾರ್ಯಕ್ರಮವನ್ನು ಹೋಸ್ಟ್ ಮಾಡಿದ್ದಾರೆ.
ಸೀರೆಯಲ್ಲಿ ನಟಿ ಮೋಡಿ
ಇನ್ನು ನಟಿ ಭುವನಾ ಮುರಳಿ ಅವರು ಬಟ್ಟೆ ಕೂಡ ಹೊಲಿಗೆ ಹಾಕುತ್ತಾರೆ. ಈಗಾಗಲೇ ತಮ್ಮ ತಾಯಿಯ ಕೆಲ ಸೀರೆಗಳಿಗೆ ಕತ್ತರಿ ಹಾಕಿದ್ದಾರೆ. ತಮ್ಮಿಷ್ಟದ ಬಟ್ಟೆಗಳನ್ನು ಕಟ್ ಮಾಡಿ ತಮಗೆ ಬೇಕಾದಂತೆ ಸ್ಟಿಚ್ ಮಾಡಿಕೊಂಡಿದ್ದಾರೆ. ಪಿಂಕ್ ಚೆಕ್ಸ್ ಮತ್ತು ಹಳದಿ ಬಣ್ಣದ ಎರಡು ಸೀರೆಗಳಲ್ಲಿ ತಮಗೆ ಬೇಕಾದಂತೆ ಡ್ರೆಸ್ ಅನ್ನು ಸ್ಟಿಚ್ ಮಾಡಿಕೊಂಡಿದ್ದಾರೆ. ಉತ್ತಮ ಟ್ಯಾಲೆಂಟ್ ಹೊಂದಿರುವ ನಟಿ ಭುವನಾ ಮುರಳಿ ಅವರಿಗೆ ವೀಕ್ಷಿತಾ ಪಾತ್ರ ಒಳ್ಳೆಯ ಬ್ರೇಕ್ ಕೊಡುವುದು ಪಕ್ಕಾ ಆಗಿದೆ.


Click it and Unblock the Notifications











