ಕೋಟ್ಯಧಿಪತಿಯಲ್ಲಿ 25 ಲಕ್ಷ ಗೆಲ್ಲುವ ಅವಕಾಶ ಕಳೆದುಕೊಂಡ ವೈಭವ್
ಕನ್ನಡದ ಕೋಟ್ಯಧಿಪತಿಯ ನಾಲ್ಕನೇ ಆವೃತ್ತಿಯಲ್ಲಿ ಯಾರಾದರೂ ಕೋಟಿ ಗೆಲ್ಲುತ್ತಾರಾ ಎಂಬ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಾಲ್ಕು ವಾರಗಳ ಆಟ ಮುಗಿದಿದ್ದು ಇದುವರೆಗೂ ಯಾರೂ ಕೂಡ 25 ಲಕ್ಷ ದಾಟಿಲ್ಲ.
ಒಂದು ಕೋಟಿ ಗೆಲ್ಲುವ ಭರವಸೆ ಹುಟ್ಟಿಸಿದ ಸ್ಪರ್ಧಿಗಳು ಆತುರದ ನಿರ್ಧಾರ, ಅತಿಯಾದ ಆತ್ಮಿವಿಶ್ವಾಸದಿಂದ ಕೋಟಿ ಗೆಲ್ಲುವ ಅವಕಾಶ ಕಳೆದುಕೊಂಡಿದ್ದಾರೆ. ಇದೀಗ, ನಾಲ್ಕನೇ ವಾರ ವೈಭವ್ ಎಂಬ ಯುವಕ ಕೋಟ್ಯಧಿಪತಿಯಲ್ಲಿ ಭಾಗವಹಿಸಿ ಒಳ್ಳೆಯ ಮೊತ್ತ ಗೆದ್ದುಕೊಂಡು ಹೋದರು.
ಫಾಸ್ಟೆಸ್ಟ್ ಫಿಂಗರ್ ಫಸ್ಟ್ ಸುತ್ತಿನಲ್ಲಿ ಅತಿ ವೇಗವಾಗಿ ಉತ್ತರ ನೀಡಿದ ವೈಭವ್ ಹನ್ನೆರಡು ಪ್ರಶ್ನೆಗಳಿಗೆ ಸರಿ ಉತ್ತರ ನೀಡಿ ಭರವಸೆ ಮೂಡಿಸಿದ್ದರು. ಆದ್ರೆ, ರಾಜಕೀಯ ಕುರಿತು ಕೇಳಿದ ಒಂದು ಪ್ರಶ್ನೆ ವೈಭವ್ ಪಾಲಿಗೆ ವಿಲನ್ ಆಯ್ತು. ಅಷ್ಟಕ್ಕೂ ಯಾವುದು ಆ ಪ್ರಶ್ನೆ? ಮುಂದೆ ಓದಿ....

ಫಾಸ್ಟೆಸ್ಟ್ ಫಿಂಗರ್ ಪ್ರಶ್ನೆ
ಅತ್ಯಂತ ಎತ್ತರದಿಂದ ಪ್ರಾರಂಭಿಸಿ, ಈ ಪ್ರಾಣಿಗಳನ್ನು ಅವುಗಳ ಗರಿಷ್ಠ ಎತ್ತರಕ್ಕೆ ಅನುಗುಣವಾಗಿ ಇಳಿಕೆ ಕ್ರಮದಲ್ಲಿ ಜೋಡಿಸಿ?
A ಆನೆ
B ಬೆಕ್ಕು
C ಇಲಿ
D ಜಿರಾಫೆ
ಸರಿಯಾದ ಉತ್ತರ: D ಜಿರಾಫೆ, A ಆನೆ, B ಬೆಕ್ಕು, C ಇಲಿ
ಸರಿ ಉತ್ತರ ಕೊಟ್ಟಿದ್ದು ಮೂರು ಜನ. ವೇಗವಾಗಿ ಕೊಟ್ಟಿದ್ದು ವೈಭವ್.

12.50 ಲಕ್ಷ ಗೆದ್ದ ಎರಡನೇ ಸ್ಪರ್ಧಿ
ಬಹಳ ಕಾನ್ಫಿಡೆಂಟ್ ಆಗಿ ಆಟ ಆಡಿದ ವೈಭವ್ ಮೂರು ಲೈಫ್ ಲೈನ್ ಬಳಸಿಕೊಂಡು ಎರಡೂ ಸೇಫ್ ಝೋನ್ ಗಳನ್ನ ದಾಟಿದರು. 3.20 ಲಕ್ಷ ಹಣವನ್ನ ಸೇಫ್ ಆಗಿ ತಮ್ಮ ಖಾತೆಯಲ್ಲಿ ಉಳಿಸಿಕೊಂಡರು. ನಂತರ ಹನ್ನೊಂದನೇ ಪ್ರಶ್ನೆ ಹಾಗೂ ಹನ್ನೆರಡನೇ ಪ್ರಶ್ನೆಗೆ ಸರಿಯಾಗಿ ಉತ್ತರ ನೀಡಿ 12.50 ಲಕ್ಷ ಗೆದ್ದುಕೊಂಡರು. ಆದರೆ, ಹದಿಮೂರನೇ ಪ್ರಶ್ನೆಗೆ ಗೊಂದಲಕ್ಕೆ ಸಿಲುಕಿದರು.

ವೈಭವ್ ಪಾಲಿಗೆ ವಿಲನ್ ಆದ ಪ್ರಶ್ನೆ
ಡಿವಿ ಸದಾನಂದ ಗೌಡರನ್ನು ಹೊರತುಪಡಿಸಿ ಕರ್ನಾಟಕ ಮುಖ್ಯಮಂತ್ರಿ ಮತ್ತು ಕೇಂದ್ರ ರೈಲ್ವೆ ಸಚಿವ ಎರಡೂ ಸ್ಥಾನಗಳಲ್ಲಿ ಕಾರ್ಯನಿರ್ವಹಿಸಿದವರು ಯಾರು?
A ಡಿ ದೇವರಾಜ್ ಅರಸ್
B ಕೆಂಗಲ್ ಹನುಮಂತಯ್ಯ
C ಆರ್ ಗುಂಡುರಾವ್
D ಎಸ್ ನಿಜಲಿಂಗಪ್ಪ

ವೈಭವ್ ಧೈರ್ಯ ತೋರಲಿಲ್ಲ
ಆಗಾಗಲೇ 12.50 ಲಕ್ಷ ಗೆದ್ದಿದ್ದ ವೈಭವ್ ಹದಿಮೂರನೇ ಪ್ರಶ್ನೆಗೆ ಉತ್ತರ ಕೊಡಲು ಧೈರ್ಯ ಮಾಡಲಿಲ್ಲ. ಯಾಕಂದ್ರೆ, ಅವರಿಗೆ ಉತ್ತರದ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಒಂದು ವೇಳೆ ಊಹೆ ಮಾಡಿ ತಪ್ಪು ಉತ್ತರ ಕೊಟ್ಟರೇ 12.5 ಲಕ್ಷದಿಂದ 3.20 ಲಕ್ಷಕ್ಕೆ ಕುಸಿಯುತ್ತಿದ್ದರು. ಸೋ, ಆತುರ ಪಡುವುದು ಬೇಡ ಎಂದು ನಿರ್ಧರಿಸಿ ವೈಭವ್, ಆಟವನ್ನ ಕ್ವಿಟ್ ಮಾಡಿದರು. ಡಬಲ್ ಡಿಪ್ ಲೈಫ್ ಲೈನ್ ಇತ್ತು. ಅದನ್ನ ಬಳಸಿದರೆ ಆಟವನ್ನ ಕ್ವಿಟ್ ಮಾಡುವಂತಿರಲಿಲ್ಲ. ಹಾಗಾಗಿ, ಆ ಲೈಫ್ ಲೈನ್ ಬಳಸಿಲ್ಲ.

ಸರಿ ಉತ್ತರ ಯಾವುದು ಗೊತ್ತಾ?
ಅಂದ್ಹಾಗೆ, ಈ ಪ್ರಶ್ನೆಗೆ ಉತ್ತರ ಯಾವುದು ಎಂಬುದು ಸಹಜವಾಗಿ ಪ್ರೇಕ್ಷಕರಿಗೆ ಕಾಡಿತ್ತು. ಆಟ ಕ್ವಿಟ್ ಮಾಡಿದ ಮೇಲೆ ಊಹೆ ಮಾಡಿದ ವೈಭವ್ D ಎಸ್ ನಿಜಲಿಂಗಪ್ಪ ಎಂದರು. ಆದರೆ, ಅದು ತಪ್ಪು ಉತ್ತರ ಆಗಿತ್ತು. ಸರಿಯಾದ ಉತ್ತರ B ಕೆಂಗಲ್ ಹನುಮಂತಯ್ಯ. ಅಲ್ಲಿಗೆ ವೈಭವ್ ಅವರ ನಿರ್ಧಾರ ಸರಿಯಾಗಿತ್ತು.


Click it and Unblock the Notifications











