Vallabh Suri: ಸಿದ್ಧಲಿಂಗೇಶ್ವರ ಪಾತ್ರಕ್ಕಾಗಿ ಹತ್ತಾರು ಧಾರಾವಾಹಿಗಳನ್ನು ಕೈಬಿಟ್ಟ ನಟ!
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಭಕ್ತಿ ಪ್ರಧಾನ ಧಾರಾವಾಹಿ 'ಯಡಿಯೂರು ಶ್ರೀ ಸಿದ್ಧಲಿಂಗೇಶ್ವರ' ಅದ್ಭುತವಾಗಿ ಮೂಡಿ ಬರುತ್ತಿದ್ದು, ಕಿರುತೆರೆ ಪ್ರಿಯರು ಇದನ್ನು ಬಹಳ ಭಕ್ತಿಯಿಂದ ಮನಮೆಚ್ಚಿ ವೀಕ್ಷಿಸುತ್ತಿದ್ದಾರೆ. ದಿನೇ ದಿನೇ ಹೆಚ್ಚುತ್ತಿರುವ ಈ ಧಾರಾವಾಹಿ ಖ್ಯಾತಿಯೇ ಇದಕ್ಕೆ ಸಾಕ್ಷಿ. ಧಾರಾವಾಹಿಯಲ್ಲಿ ನಾಯಕ ಸಿದ್ಧಲಿಂಗ ಸ್ವಾಮಿಗಳಾಗಿ ಅಭಿನಯಿಸುತ್ತಿರುವ ವಲ್ಲಭ ಸೂರಿ ಅವರು ಧಾರಾವಾಹಿಯಲ್ಲಿನ ತಮ್ಮ ಪಾತ್ರ ಸಿದ್ದಲಿಂಗೇಶ್ವರ ಬಗ್ಗೆ ಬಹಳ ಸಂತಸ ಹಾಗೂ ಸಂತೃಪ್ತಿಯನ್ನು ವ್ಯಕ್ತಪಡಿಸಿದ್ದಾರೆ.
'ರಾಮಾಯಣ' ಹಾಗೂ 'ಮಹಾಭಾರತ'ದಂತಹ ಪೌರಾಣಿಕ ಧಾರಾವಾಹಿಗಳಲ್ಲಿ ವಲ್ಲಭ ಸೂರಿ ನಟಿಸಿದ್ದರಿಂದ ಮತ್ತೊಮ್ಮೆ ಪೌರಾಣಿಕ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲು ವಲ್ಲಭ ಸೂರಿ ಅವರಿಗೆ ಸ್ವಲ್ಪವೂ ಇಷ್ಟವಿರಲಿಲ್ಲ. ಲಾಕ್ಡೌನ್ ನಂತರ ಸಿನಿಮಾಗಳಿಗೆ ಹೆಚ್ಚು ಒತ್ತು ಕೊಡಬೇಕೆಂದುಕೊಳ್ಳುತ್ತಿರುವಾಗಲೇ ಯಡಿಯೂರು ಶ್ರೀ ಸಿದ್ಧಲಿಂಗೇಶ್ವರ ಧಾರಾವಾಹಿ ಆಫರ್ ಅವರಿಗೆ ಬಂತು. ನವೀನ್ ಕೃಷ್ಣ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಧಾರಾವಾಹಿ ಎಂದು ತಿಳಿದಾಕ್ಷಣ ಒಪ್ಪಿಕೊಂಡುಬಿಟ್ಟರು. ಅಂತಹ ಖ್ಯಾತ ನಿರ್ದೇಶಕರ ಮಾರ್ಗದರ್ಶನದಲ್ಲಿ ಕೆಲಸ ಮಾಡುವುದಕ್ಕೂ ಒಂದು ಪುಣ್ಯ ಬೇಕು ಎಂಬುದು ವಲ್ಲಭ ಸೂರಿ ಅವರ ನಂಬಿಕೆ.
ಈ ಧಾರಾವಾಹಿ ವಲ್ಲಭ ಪಾಲಿಗೆ ಸ್ಪೆಷಲ್
ಈ ಪಾತ್ರದಲ್ಲಿ ಅಭಿನಯಿಸುವ ಮೊದಲು ವಲ್ಲಭ ಅವರಿಗೆ ಶ್ರೀ ಸಿದ್ದಲಿಂಗೇಶ್ವರರ ಬಗ್ಗೆ ಏನೇನು ತಿಳಿದಿರಲಿಲ್ಲ. ನಿರ್ದೇಶಕರು ಅವರಿಗೆ ಸ್ವಲ್ಪ ದಪ್ಪ ಆಗುವಂತೆ ಹೇಳಿದ್ದರು. ಪಾತ್ರಕ್ಕೆ ಸರಿಯಾಗಿ ಮುಖ ಚಹರೆ ಹಾಗೂ ಮೈಯನ್ನು ಶೇಪ್ ಮಾಡಿಕೊಂಡಿದ್ದು ಬಿಟ್ಟರೆ ಬೇರೇನು ಪೂರ್ವ ತಯಾರಿಗಳು ಇರಲಿಲ್ಲ.

ವಲ್ಲಭ ಸೂರಿ ಅವರು ಅದ್ಯಾವಾಗ ಅವಕಾಶಗಳನ್ನು ಹುಡುಕಿಕೊಂಡು ಹೋಗಿದ್ದರೋ ಆ ಸಮಯದಲ್ಲಿ ಯಾವೊಂದು ಅವಕಾಶಗಳು ಅವರಿಗೆ ಸಿಕ್ಕೇ ಇರಲಿಲ್ಲ. ಆದರೆ, ಅವರು ಯಾವುದನ್ನು ಬೇಡ ಎಂದುಕೊಂಡಿರುತ್ತಾರೋ ಆಗಲೇ ಹೆಚ್ಚೆಚ್ಚು ಅವಕಾಶಗಳು ಅವರ ಪಾಲಿಗೆ ಬಂದವು. ಕೊನೆಯ ಪಕ್ಷ ಆ ಮಟ್ಟಿಗಾದರೂ ಅವರು ಪುಣ್ಯವಂತ. ಪರ್ಸನಲ್ ಆದ ಒಂದಷ್ಟು ಸಮಸ್ಯೆಗಳು, ಹಣಕಾಸಿನ ಸಣ್ಣ ಪುಟ್ಟ ಸಮಸ್ಯೆಗಳು ಇದ್ದುದು ಎಲ್ಲವೂ ಈ ಪಾತ್ರ ಮಾಡಲು ಶುರು ಮಾಡಿದಾಗಿನಿಂದಲೂ ಎಲ್ಲವೂ ಪರಿಹಾರಗೊಳ್ಳುತ್ತಾ ಬಂದಿದೆ ಎಂಬುದು ವಲ್ಲಭ ಸೂರಿ ಅಭಿಪ್ರಾಯ.
ಭಾವನಾತ್ಮಕವಾಗಿ ಕನೆಕ್ಟ್ ಆದ ಪಾತ್ರ
ಶ್ರೀ ಸಿದ್ದಲಿಂಗೇಶ್ವರರನ್ನು ಮನಸಾರೆ ನಂಬಿರುವ ವಲ್ಲಭ ಸೂರಿ ಅವರು ಪ್ರತಿದಿನ ಸಾಲಿಗ್ರಾಮಕ್ಕೆ ಪೂಜೆಯನ್ನು ಮಾಡಿಕೊಂಡು ಬರುತ್ತಿದ್ದಾರೆ. ಇನ್ನು ಈ ಧಾರಾವಾಹಿಯಲ್ಲಿ ಅವಕಾಶ ಸಿಕ್ಕ ನಂತರ ಬೇರೆ ಬೇರೆ ಹತ್ತಾರು ಅವಕಾಶಗಳು ಅವರನ್ನರಸಿ ಬಂದವು. ಆದರೂ ಅವರು ಸಿದ್ಧಲಿಂಗೇಶ್ವರ ಅವರ ಪಾತ್ರಕ್ಕೆ ಭಾವನಾತ್ಮಕವಾಗಿ ಕನೆಕ್ಟ್ ಆಗಿರುವುದರಿಂದ ಇದರಿಂದ ಹೊರಬರಲು ಸದ್ಯಕ್ಕಂತೂ ಮನಸ್ಸಿಲ್ಲ.
ಡೈಲಾಗ್ ಡೆಲಿವರಿ ಟೈಮ್ನಲ್ಲಿ ವಲ್ಲಭ ಅವರಿಗೆ ಬಹಳಷ್ಟು ಅಡೆತಡೆಗಳು ಆಗುತ್ತಾ ಇದ್ದವು. ಆದರೆ ಕ್ಯಾಮೆರಾ ಮುಂದೆ ನಿಂತಾಗ ಎಂತ ಕಷ್ಟ ಕ್ಲಿಷ್ಟ ಡೈಲಾಗಳಾದರೂ ಒಂದೇ ಬಾರಿಗೆ ಅದ್ಭುತವಾಗಿ ಹೇಳುವ ಶಕ್ತಿ ಸಾಮರ್ಥ್ಯ ಅವರಿಗೆ ಬಂದಿದೆ. ಇದು ಶ್ರೀ ಸಿದ್ಧಲಿಂಗೇಶ್ವರರ ಆಶೀರ್ವಾದ ಎಂದೇ ವಲ್ಲಭ ಅವರು ನಂಬಿದ್ದಾರೆ. ಈ ಪಾತ್ರ ಹಾಗೂ ಈ ಧಾರಾವಾಹಿ ವಲ್ಲಭ ಅವರಿಗೆ ಜೀವನವನ್ನು ಎದುರಿಸಲು ಆಧ್ಯಾತ್ಮಿಕ ಹಾಗೂ ಭಾವನಾತ್ಮಕ ಆತ್ಮವಿಶ್ವಾಸವನ್ನು ಕೊಟ್ಟಿದೆ.
ಪೌರಾಣಿಕ ಪಾತ್ರದ ಜನಪ್ರಿಯತೆ ಹೇಗಿದೆ?
ಇದೊಂದು ಪೌರಾಣಿಕ ಪಾತ್ರವಾದ್ದರಿಂದ ವಲ್ಲಭ ಅವರು ಹೊರಗೆ ಸಾಮಾನ್ಯನಾಗಿ ಓಡಾಡುವಾಗ ಜನರು ಅವರನ್ನು ಗುರುತಿಸುವುದೇ ಇಲ್ಲ. ಒಂದು ರೀತಿಯಲ್ಲಿ ಇದು ಅವರ ಪಾಲಿಗೆ ಪ್ಲಸ್ ಪಾಯಿಂಟ್. ಆದರೆ ಕೆಲವೊಮ್ಮೆ ಒಬ್ಬ ನಟನಾಗಿ ಅವರಿಗೂ ಕೂಡಾ ಒಂದಷ್ಟು ಫೇಮ್ ಬೇಕು ಎನಿಸಿದಾಗ ಅದು ಸಾಧ್ಯವಾಗದ್ದು ಬೇಸರದ ಸಂಗತಿ.

ನಟನಾರಂಗದಲ್ಲಿ ಕೆಲಸ ಮಾಡುವುದು, ಅಭಿನಯವನ್ನೇ ವೃತ್ತಿಯಾಗಿಸಿಕೊಳ್ಳುವುದು ಸುಲಭದ ಮಾತಲ್ಲ. ಅವಕಾಶಗಳು ಯಾವಾಗಲೂ ಒಂದೇ ರೀತಿ ಇರುವುದಿಲ್ಲ, ಹಾಗಾಗಿ ಇದರಲ್ಲಿ ಯಾವಾಗಲೂ ಹೆಚ್ಚು ಕಮ್ಮಿ ವೈಪರೀತ್ಯಗಳು ಇದ್ದೇ ಇರುತ್ತವೆ. ಇವೆಲ್ಲವನ್ನೂ ಒಂದೇ ರೀತಿ ಸ್ವೀಕರಿಸುವ ಮನಸ್ಥಿತಿ ನಮ್ಮದಾಗಿರಬೇಕು. ಈವರೆಗೂ 10 ಧಾರಾವಾಹಿಗಳಲ್ಲಿ ನಾಯಕನಾಗಿ ಇವರು ನಟಿಸಿದ್ದಾರೆ. ಆ ಮಟ್ಟಿಗೆ ಇವರು ತುಂಬಾ ಲಕ್ಕಿ. ಇನ್ನು ಮುಂದೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಬೇಕು ಎಂಬ ಹಂಬಲ ಇವರಿಗಿದೆ.


Click it and Unblock the Notifications











