'ಮನೆದೇವ್ರು', 'ಪಾರು' ಖ್ಯಾತಿ ವರ್ಷಿತಾ ಮತ್ತೆ ಕಿರುತೆರೆಗೆ ಮರಳಲು ರೆಡಿ!
ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕಸ್ತೂರಿ ನಿವಾಸ' ಧಾರಾವಾಹಿಯಲ್ಲಿ ನಾಯಕ ರಾಘವನ ಅತ್ತಿಗೆ ನಾಗವೇಣಿಯಾಗಿ ಅಭಿನಯಿಸಿದ್ದ ವರ್ಷಿತಾ ಕೊರೊನಾ ಕಾರಣದಿಂದ ನಟನೆಯಿಂದ ಬ್ರೇಕ್ ಪಡೆದುಕೊಂಡಿದ್ದರು. ಕಸ್ತೂರಿ ನಿವಾಸ ಧಾರಾವಾಹಿಯ ನಂತರ ಕಿರುತೆರೆಯಿಂದ ದೂರವಿದ್ದ ವರ್ಷಿತಾ ಈಗ ಮತ್ತೆ ಬಣ್ಣ ಹಚ್ಚುವ ಬಯಕೆಯಲ್ಲಿದ್ದಾರೆ. ಉತ್ತಮ ಅವಕಾಶ ಸಿಕ್ಕರೆ ಮತ್ತೆ ನಟಿಸಲು ಸಿದ್ದ ಎನ್ನುತ್ತಾರೆ ವರ್ಷಿತಾ.
ಸಣ್ಣ ವಯಸ್ಸಿನಿಂದಲೂ ನಟನೆಯತ್ತ ವಿಶೇಷ ಒಲವು ಹೊಂದಿದ್ದ ವರ್ಷಿತಾಗೆ ನಟಿಯಾಗಬೇಕು, ಬಣ್ಣದ ಲೋಕದಲ್ಲಿ ಬದುಕು ರೂಪಿಸಿಕೊಳ್ಳುವ ಕನಸು ಕಂಡವರು.
ಕಾಲೇಜು ದಿನಗಳಿಂದಲೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮುಂದಿದ್ದ ವರ್ಷಿತಾ ಅವರನ್ನು ನಟನೆಯಲ್ಲಿ ಮತ್ತಷ್ಟು ಪಳಗುವಂತೆ ಮಾಡಿದ್ದು ರಂಗಭೂಮಿ.

'ಮನೆದೇವ್ರು' ಧಾರಾವಾಹಿಯಲ್ಲೂ ನಟನೆ
ನಾಟಕ ತಂಡ ರಂಗಸೌರಭ ಸೇರಿದ ವರ್ಷಿತಾ ನಟನೆಯ ಕುರಿತ ಸಾಕಷ್ಟು ವಿಚಾರಗಳನ್ನು ತಿಳಿದುಕೊಂಡರು. ನಟನೆಯ ಬಗ್ಗೆ ಎಲ್ಲಾ ವಿಚಾರಗಳನ್ನು ತಿಳಿದುಕೊಂಡ ವರ್ಷಿತಾ ಮುಂದೆ ಮುಖ ಮಾಡಿದ್ದು ಕಿರುತೆರೆಯತ್ತ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ "ಮನೆದೇವ್ರು" ಧಾರಾವಾಹಿಯಲ್ಲಿ ನಾಯಕಿ ಜಾನಕಿಯ ಚಿಕ್ಕಮ್ಮನ ಮಗಳು ಅನು ಆಗಿ ಅಭಿನಯಿಸುವ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ವರ್ಷಿತಾ ಬೆರಳೆಣಿಕೆಯಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದರೂ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದರು.

'ಪಾರು' ಧಾರಾವಾಹಿಯಲ್ಲಿ ತಿಂಡಿಪೋತಿ
ಮುಂದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ "ಪಾರು" ಧಾರಾವಾಹಿಯಲ್ಲಿ ದಾಮಿನಿ ಅಣ್ಣನ ಮಗಳು ತಿಂಡಿಪೋತಿ ಉಮಾ ಆಗಿ ನಟಿಸಿದ್ದ ವರ್ಷಿತಾ ಮೊದಲ ಬಾರಿಗೆ ಕಾಮಿಡಿ ಜಾನರ್ ಇರುವ ಪಾತ್ರಕ್ಕೆ ಜೀವ ತುಂಬಿದ್ದರು.

ಮತ್ತೆ ಹಣ್ಬ ಹಚ್ಚಲು ರೆಡಿ
"ಬಣ್ಣದ ಲೋಕದಲ್ಲಿ ನಾನು ಗುರುತಿಸಿಕೊಂಡಿದ್ದೇನೆ ಎಂದರೆ ಅದಕ್ಕೆ ಕಾರಣವೇ ರಂಗಭೂಮಿ. ಮಾತ್ರವಲ್ಲ ನಟನೆಯ ಆಗು ಹೋಗುಗಳನ್ನು ಹಂತಹಂತವಾಗಿ ತಿಳಿದುಕೊಳ್ಳಲು ಸಾಧ್ಯವಾಯಿತು. ಕಿರುತೆರೆ ಮತ್ತು ಹಿರಿತೆರೆಗೂ ಸಾಕಷ್ಟು ವ್ಯತ್ಯಾಸವಿರುವುದಂತೂ ನಿಜ.ಕಿರುತೆರೆ ಆದರೆ ಅಲ್ಲಿ ಎಷ್ಟು ತಪ್ಪುಗಳಾದರೂ ಕೂಡಾ ಚಿಂತೆಯಿಲ್ಲ. ಯಾಕೆಂದರೆ ಅದನ್ನು ಸರಿಪಡಿಸಹಬಹುದು. ಆದರೆ ರಂಗಭೂಮಿಯಲ್ಲಿ ಅಂತಹ ಅವಕಾಶಗಳಿರುವುದಿಲ್ಲ" ಎಂದು ನಗುತ್ತಾ ಹೇಳುತ್ತಾರೆ ವರ್ಷಿತಾ. ಒಟ್ಟಿನಲ್ಲಿ ಒಂದೂವರೆ ವರ್ಷಗಳ ಕಾಲ ನಟನೆಯಿಂದ ಬ್ರೇಕ್ ಪಡೆದುಕೊಂಡಿದ್ದ ವರ್ಷಿತಾ ಮತ್ತೊಮ್ಮೆ ಬಣ್ಣ ಹಚ್ಚಲು, ನಟನಾ ಲೋಕಕ್ಕೆ ಕಾಲಿಡಲು ಒಂದು ಒಳ್ಳೆಯ ಅವಕಾಶಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.


Click it and Unblock the Notifications