BBK12: ಬಿಗ್ಬಾಸ್ ಸೆಕೆಂಡ್ ರನ್ನರ್ ಅಪ್ಗೆ ₹10 ಲಕ್ಷ ಕೊಡ್ತೀನಿ, ಆದ್ರೆ ಒಂದು ಷರತ್ತು- ವರ್ತೂರ್ ಸಂತೋಷ್
ಬಿಗ್ಬಾಸ್ ಸೀಸನ್ 10ರ ಸ್ಪರ್ಧಿ ವರ್ತೂರ್ ಸಂತೋಷ್ ಸದಾ ಒಂದಿಲ್ಲೊಂದು ಸುದ್ದಿಯಲ್ಲಿ ಇರ್ತಾರೆ. ಹಳ್ಳಿಕಾರ್ ರೇಸ್ ಆಯೋಜಿಸುವ ಮೂಲಕ ಕೂಡ ಗಮನ ಸೆಳೆಯುತ್ತಾರೆ. ಹಳ್ಳಿಕಾರ್ ಒಡೆಯ ಅಂತ್ಲೇ ಜನಪ್ರಿಯತೆ ಸಾಧಿಸಿದ್ದಾರೆ. ಬಿಗ್ಬಾಸ್ ಸೀಸನ್ 12ರ ರನ್ನರ್ ಅಪ್ಗೆ 10 ಲಕ್ಷ ರೂ. ಕೊಡ್ತೀನಿ ಎಂದು ಸಂತೋಷ್ ಪುನರುಚ್ಚರಿಸಿದ್ದಾರೆ.
ಸೀಸನ್ 10ರಲ್ಲಿ ವರ್ತೂರ್ ಸಂತೋಷ್ ಫಿನಾಲೆವರೆಗೂ ಹೋಗಿದ್ದರು. 4ನೇ ರನ್ನರ್ ಅಪ್ ಆಗಿದ್ದರು. ಸದ್ಯ ಸೀಸನ್ 12 ಅನ್ನು ಕೂಡ ಫಾಲೋ ಮಾಡುತ್ತಿರುವುದಾಗಿ ಅವರು ಹೇಳಿದ್ದಾರೆ. ಯಶಸ್ ಟಾಕೀಸ್ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಸಂತೋಷ್ ಮಾತನಾಡಿದ್ದಾರೆ. ಈ ಬಾರಿ ಮನೆಯಲ್ಲಿ ಕೆಲವರು ಇನ್ನು ಮುಖವಾಡ ಧರಿಸಿ ಆಟ ಆಡುತ್ತಿದ್ದಾರೆ ಎಂದು ಹೇಳಿದ್ದಾರೆ.

"ಈ ಬಾರಿ ಬಿಗ್ಬಾಸ್ ಶೋ ಬಗ್ಗೆ ಮಾತನಾಡಿದ್ರೆ, ಒಂದೊಂದು ಒಂದು ಆಗಿಬಿಡುತ್ತೆ. ಈ ಸಲ ಆಟ ಇನ್ನು ವೇಗ ಪಡೆದುಕೊಂಡಿಲ್ಲ. ಹಾಗಂತ ಸ್ಲೋ ಆಗಿ ಕೂಡ ಇಲ್ಲ. ಮೀಡಿಯಂ ಆಗಿದೆ. ಇನ್ನು ಏರಿಳಿತ ಮುಂದುವರೆದಿದೆ. ಕೆಲವರಿಗೆ ಇನ್ನು ಆಟ ಗೊತ್ತಾಗಿಲ್ಲ. ವ್ಯಕ್ತಿತ್ವದ ಆಟ ಎನ್ನುವುದನ್ನು ಮರೆತುಬಿಟ್ಟಿದ್ದಾರೆ. ಇನ್ನು ಗೊತ್ತಾಗಬೇಕು" ಎಂದು ವರ್ತೂರ್ ಸಂತೋಷ್ ಹೇಳಿದ್ದಾರೆ.
ಇನ್ನು ಸೆಕೆಂಡ್ ರನ್ನರ್ ಅಪ್ಗೆ 10 ಲಕ್ಷ ರೂ. ಕೊಡುವ ಬಗ್ಗೆ ಮಾತನಾಡಿರುವ ವರ್ತೂರ್ ಸಂತೋಷ್ "ಸ್ಪಷ್ಟನೆ ಕೊಡ್ತೀನಿ. ಸೆಕೆಂಡ್ ರನ್ನರ್ ಅಪ್ಗೆ 10 ಲಕ್ಷ ರೂ. ಕೊಡ್ತೀನಿ ಎನ್ನುವ ಮಾತಿಗೆ ಈಗ ಕೂಡ ಬದ್ಧ. ಆದರೆ ಒಂದು ಷರತ್ತು. ಹಳ್ಳಿಕಾರ್ ಹೋರಿಯನ್ನು ಬಿಗ್ಬಾಸ್ ಸ್ಟೇಜ್ ಬಳಿ ಕರೆಸಬೇಕು. ಸ್ಟೇಜ್ ಒಳಗಡೆ ಕರೆಸೋಕೆ ಸಾಧ್ಯವಿಲ್ಲ, ಬಿಗ್ಬಾಸ್ ಮನೆ ಒಳಗೆ ಕರೆಸಿ. ಅದನು ನನ್ನ ಮನವಿ. ಈಗಾಗಲೇ ಅರ್ಧ ಸೀಸನ್ ಮುಗಿದಿದೆ. ನಾನು ಬೇಗ ಹೋಗಿ ಈ ಬಗ್ಗೆ ಮಾತನಾಡಿ ಖಚಿತಪಡಿಸಿಕೊಳ್ಳಬೇಕು" ಎಂದಿದ್ದಾರೆ.
ಒಂದು ವೇಳೆ ಅದು ಸಾಧ್ಯವಾಗದಿದ್ದರೆ ನನ್ನ ಕಡೆಯಿಂದ ಸೆಕೆಂಡ್ ರನ್ನರ್ ಅಪ್ಗೆ ಏನಾದರೂ ಕೊಟ್ಟೇ ಕೊಡ್ತೀನಿ. ಆ ಹಣವನ್ನು ಹಳ್ಳಿಕಾರ್ ರೇಸ್ಗೆ ಬಳಸಿಕೊಳ್ತೀನಿ ಎಂದು ವರ್ತೂರ್ ಸಂತೋಷ್ ವಿವರಿಸಿದ್ದಾರೆ. ಬಿಗ್ಬಾಸ್ ಶೋನಲ್ಲಿ ವಿನ್ನರ್ ಹಾಗೂ ಫಸ್ಟ್ ರನ್ನರ್ ಅಪ್ಗೆ ಹಣ ಹಾಗೂ ಸಾಕಷ್ಟು ಉಡುಗೊರೆಗಳು ಸಿಗುತ್ತೆ. ಆದರೆ ಸೆಕೆಂಡ್ ರನ್ನರ್ ಅಪ್ಗೆ ಸಿಗುವುದು ಕಮ್ಮಿ. ಆದರೂ ಅವ್ರು ಕೂಡ ಫಿನಾಲೆ ಹಂತದವರೆಗೆ ಬಂದಿರ್ತಾರೆ. ನಗದು ಬಹುಮಾನ ಕೊಡುವುದರಿಂದ ಅವರಿಗೆ ಸಹಾಯವಾಗುತ್ತದೆ ಎಂದು ಹಿಂದೆ ಸಂದರ್ಶನವೊಂದರಲ್ಲಿ ಸಂತೋಷ್ ಹೇಳಿದ್ದರು.
ಈ ಬಾರಿ ಬಿಗ್ಬಾಸ್ ಮನೆಯಲ್ಲಿ ಮಲ್ಲಮ್ಮ ಅವರಿಗೆ ನನ್ನ ಬೆಂಬಲ ಎಂದು ಕೂಡ ವರ್ತೂರ್ ಸಂತೋಷ್ ಹೇಳಿದ್ದರು. ಮಲ್ಲಮ್ಮ ಅವರ ಸಂದರ್ಶನಗಳನ್ನು ನೋಡಿದ್ದೀನಿ, ಹಳ್ಳಿ ಪ್ರತಿಭೆ. ಮುಗ್ಧೆ ಮಲ್ಲಮ್ಮ ಅವರಿಗೆ ನನ್ನ ಬೆಂಬಲ ಎಂದಿದ್ದರು. 35 ದಿನಗಳ ಕಾಲ ಅವರು ಬಿಗ್ಬಾಸ್ ಮನೆಯಲ್ಲಿ ಇದ್ದರು. ಬಳಿಕ ಎಲಿಮಿನೇಟ್ ಆಗಿ ಮಲ್ಲಮ್ಮ ಹೊರಗಡೆ ಬಂದಿದ್ದರು.
ವರ್ತೂರ್ ಸಂತೋಷ್ ಬಿಗ್ಬಾಸ್ ಮನೆಯಲ್ಲಿ ಇದ್ದಾಗ ಹುಲಿ ಉಗುರು ಪ್ರಕರಣ ಭಾರೀ ಚರ್ಚೆ ಹುಟ್ಟಾಕ್ಕಿತ್ತು. ದೂರು ದಾಖಲಾಗಿ ಜೈಲು ಸೇರುವಂತಾಗಿತ್ತು. ಅರಣ್ಯ ಇಲಾಖೆ ಅಧಿಕಾರಿಗಳು ಬಿಗ್ಬಾಸ್ ಮನೆ ಒಳಗೆ ಹೋಗಿ ಅವರನ್ನು ವಶಕ್ಕೆ ಪಡೆದಿದ್ದರು. ಬಳಿಕ ಷರತ್ತುಬದ್ಧ ಜಾಮೀನು ಪಡೆದು ಅವರು ಬಿಡುಗಡೆ ಆಗಿದ್ದರು. ಮತ್ತೆ ಬಿಗ್ಬಾಸ್ ಮನೆ ಪ್ರವೇಶಿಸಿ ಫಿನಾಲೆವರೆಗೂ ಇದ್ದರು.
ವರ್ತೂರು ಸಂತೋಷ್ ಹುಲಿ ಉಗುರು ಪ್ರಕರಣದ ಬೆನ್ನಲ್ಲೇ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿತ್ತು. ಬಳಿಕ ಸಿನಿಮಾ ತಾರೆಯರು, ರಾಜಕೀಯ ನಾಯಕರು ಕೂಡ ಹುಲಿ ಉಗುರು ಧರಿಸಿರುವ ಫೋಟೊಗಳು ವೈರಲ್ ಆಗಿ ಅವರ ಮನೆಗಳ ಮೇಳೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸಿದ್ದರು.


Click it and Unblock the Notifications











