ಮಲಗುವುದೇನು ಬೇಡ, ಬರೀ ಅಪ್ಪಿಕೊಂಡರೆ ಸಾಕು ; ಕಹಿ ಅನುಭವ ಹಂಚಿಕೊಂಡ ನಟಿ
ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಅನ್ನುವ ಮಾತು ಇದೆ. ಈ ಮಾತು ಚಿತ್ರರಂಗಕ್ಕೆ ಹೆಚ್ಚು ಸೂಕ್ತವಾಗುತ್ತೆ. ಯಾಕೆಂದರೆ.. ಹೊರಗಡೆಯಿಂದ ತುಂಬಾನೇ ಕಲರ್ ಫುಲ್ ಆಗಿ ಕಾಣುವ ಈ ಬಣ್ಣದ ಲೋಕದಲ್ಲಿ ನಾನಾ ಬಗೆಯ ವೇಷಭೂಷಣ ಹಾಕಿಕೊಂಡ ಹಲವಾರು ಜನ ಇದ್ದಾರೆ. ಅದರಲ್ಲಿಯೂ ನಾಯಕಿಯಾಗಿ ನೆಲೆಯೂರಬೇಕೆಂದು ಕನಸೊತ್ತು ಬರುವ ಹಲವರ ಪಾಲಿಗೆ ಚಿತ್ರರಂಗ ಕಲ್ಲು ಮುಳ್ಳಿನ ಹಾದಿಯೇ.
ಅಡಿಗಡಿಗೂ ಈ ಚಿತ್ರರಂಗದಲ್ಲಿ ಸವಾಲುಗಳಿಗೆ ಎದೆಯೊಡ್ಡಬೇಕಾಗುತ್ತದೆ. ಪಾತ್ರಕ್ಕೆ ಪಲ್ಲಂಗವೇರಬೇಕು ಎಂಬ ಷರತ್ತನ್ನು ಒಪ್ಪಿಕೊಂಡರೆ ಮಾತ್ರ ಇಲ್ಲಿ ಅವಕಾಶ ಎಂದು ದುಷ್ಟ ವ್ಯವಸ್ಥೆಯೊಂದು ಇವರಿಗೆ ಮಾನಸಿಕ ಕಿರಿಕಿರಿ ನೀಡುತ್ತದೆ. ಒಟ್ನಲ್ಲಿ ಚಿತ್ರರಂಗದಲ್ಲಿ ಇಂದು ಹೆಸರು ಮಾಡಿರುವವರು.. ಹೆಸರು ಮಾಡಲಾಗದೇ ಮನೆ ಸೇರಿದವರು.. ಒಂದಿಲ್ಲೊಂದು ದಿನ.. ಒಂದಿಲ್ಲೊಂದು ರೀತಿಯಲ್ಲಿ.. ಈ ಝಗಮಗ ಲೋಕದಲ್ಲಿನ ವಿಕೃತ ಲೋಕವನ್ನು ಕಂಡು ಬೆಚ್ಚಿ ಬಿದ್ದಿಯೇ ಬಿದ್ದಿರುತ್ತಾರೆ. ಉದಾಹರಣೆಗೆ ''ಪ್ರಿಯಾ ಠಾಕೂರ್''.

ಹೌದು, ಪ್ರಿಯಾ ಠಾಕೂರ್.. ಹಿಮಾಚಲದ ಚೆಲುವೆ. ಪೋಷಕರ ಆಸೆಗೆ ವಿರುದ್ದವಾಗಿ ಕನಸೆಂಬ ಕುದುರೆಯನ್ನೇರಿ ಬಣ್ಣದ ಪ್ರಪಂಚಕ್ಕೆ ಬಂದ ಪ್ರಿಯಾ ಠಾಕೂರ್ ''ಸಾಂಝಾ ಸುಫ್ನಾ'' ಎಂಬ ಪಂಜಾಬಿ ಧಾರಾವಾಹಿ ಮೂಲಕ ತಮ್ಮ ವೃತ್ತಿ ಬದುಕು ಶುರು ಮಾಡಿದರು. ಹಿಂದಿಯಲ್ಲಿ ''ಪರ್ಚಂಡ್ ಅಶೋಕ್'' ಮತ್ತು ''ಮೊಹ್ರಾ'' ಅಂತರ ಧಾರಾವಾಹಿಗಳಲ್ಲಿ ಚಿಕ್ಕ ಪುಟ್ಟ ಪಾತ್ರ ಮಾಡಿದರು.
ಸದ್ಯ ''ವಸುಧಾ'' ಎಂಬ ಧಾರಾವಾಹಿಯಲ್ಲಿ ಇವರು ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಇವರೇ ಈ ಕಥೆಯ ಕೇಂದ್ರಬಿಂದು. ಹಿಂದಿ ಕಿರುತೆರೆಯ ನಂಬರ್ 1 ಧಾರಾವಾಹಿ ಇದು.
ಇಂಥಾ ಪ್ರಿಯಾ ಠಾಕೂರ್ ಇದುವರೆಗೆ ಸಿನಿಮಾ ಮಾಡಿಲ್ಲ. ಅದಕ್ಕೆ ಕಾರಣಗಳು ಹಲವು ಇರಬಹುದಾದರೂ ಆ ಪೈಕಿ ಪಾತ್ರಕ್ಕಾಗಿ ಪಲ್ಲಂಗದ ಸಂಸ್ಕ್ರತಿ ಕೂಡ ಒಂದು. ಖುದ್ದು ಪ್ರಿಯಾ ತಮಗಾದ ಅನುಭವ ಹಂಚಿಕೊಂಡಿದ್ದಾರೆ.
''ಗಲಾಟಾ ಇಂಡಿಯಾ''ಗೆ ನೀಡಿರುವ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಪ್ರಿಯಾ ಠಾಕೂರ್, ನನ್ನ ವೃತ್ತಿ ಬದುಕಿನ ಆರಂಭದ ದಿನಗಳಲ್ಲಿ ಕೆಲ ಕಹಿ ನೆನಪುಗಳಿವೆ, ಕಹಿ ಅನುಭವಗಳಾಗಿವೆ ಎಂದಿದ್ದಾರೆ. ನನಗೊಂದು ಅವಕಾಶ ಬಂದಿತ್ತು. ಆಫ್ರಿಕಾ ಮತ್ತು ಅಮೆರಿಕಾದಂತಹ ದೇಶಗಳಲ್ಲಿ ಚಿತ್ರೀಕರಣಗೊಳ್ಳಬೇಕಿದ್ದ ಚಿತ್ರ ಅದು ಎಂದಿರುವ ಪ್ರಿಯಾ, ಅವರು ಆಡಿಷನ್ಗೆ ನನ್ನನ್ನು ಅವರ ಕಚೇರಿಗೆ ಬರಲು ಹೇಳಲಿಲ್ಲ. ಬದಲಿಗೆ ಕಾಫಿ ಶಾಪ್ಗೆ ಬರಲು ಹೇಳಿದರು ಎಂದಿದ್ದಾರೆ.

ನನಗೆ ಅವರ ಈ ಮಾತು ಅನುಮಾನ ಮೂಡಿಸಿತು ಎಂದು ಹೇಳಿರುವ ಪ್ರಿಯಾ, ದೊಡ್ಡ ಬಜೆಟ್ನ ಸಿನಿಮಾ ನಿರ್ಮಾಣ ಮಾಡ್ತಿದ್ದಾರೆ, ಅವರದ್ದೇ ಆದ ಒಂದು ಆಫೀಸ್ ಇಲ್ವಾ..? ಎಂದು ನಾನು ಪ್ರಶ್ನೆ ಮಾಡಿದೆ ಎಂದಿದ್ಧಾರೆ.
ಈ ಪ್ರಶ್ನೆಗೆ ಇಲ್ಲ ಸರ್ ನಿಮ್ಮನ್ನು ಹೊರಗಡೆಯೇ ಭೇಟಿ ಮಾಡಬೇಕೆಂದು ಬಯಸಿದ್ದಾರೆ, ನಿಮ್ಮ ಬಗ್ಗೆ ತಿಳಿದುಕೊಳ್ಳುವುದು ಇದೆ ಎಂದು ಆ ವ್ಯಕ್ತಿ ಹೇಳಿದ ಎಂದಿರುವ ಪ್ರಿಯಾ, ಕಾಫಿ ಶಾಪ್ನಲ್ಲಿ ನನ್ನ ಬಗ್ಗೆ ತಿಳಿದುಕೊಳ್ಳಬೇಕಾಗಿರುವುದು ಏನಿದೆ? ಎಂದು ನಾನು ನೇರವಾಗಿ ಪ್ರಶ್ನೆ ಮಾಡಿದೆ ಎಂದಿದ್ದಾರೆ. ನಾನು ನೋಡಲು ಮುಗ್ದಳಾಗಿರಬಹುದು, ಆದರೆ ಮೂರ್ಖಳಲ್ಲ ಎಂದು ಹೇಳಿದೆ ಎಂದಿದ್ಧಾರೆ. ನನ್ನ ಈ ಪ್ರಶ್ನೆಗಳಿಂದ ಬೇಸತ್ತ ಆ ವ್ಯಕ್ತಿ ನಿಮಗೆ ಆಕ್ಷೇಪವಿದ್ದರೆ, ನಾವು ಬೇರೆ ನಟಿಯನ್ನು ಸಂಪರ್ಕಿಸುತ್ತೇವೆ ಎಂದು ಹೇಳಿ ಫೋನ್ ಕಟ್ ಮಾಡಿದ ಎಂದು ನೆನಪಿಸಿಕೊಂಡಿದ್ದಾರೆ.
ಮತ್ತೊಂದು ಅನುಭವವನ್ನು ಕೂಡ ಹಂಚಿಕೊಂಡಿರುವ ಪ್ರಿಯಾ ಠಾಕೂರ್, ಮತ್ತೊಂದು ದಿನ ಯಾವುದೇ ರಾಜಿ ಪದ್ದತಿ ಇರದ ಚಿತ್ರವೊಂದಕ್ಕೆ ನಾಯಕಿಯರ ಅವಶ್ಯಕತೆ ಇದೆ ಎನ್ನುವ ಮೆಸೇಜ್ ನನಗೆ ಬಂತು. ನಾನು ಫೋನ್ ಮಾಡಿದೆ, ಆಗ ಆ ವ್ಯಕ್ತಿ ಈ ಚಿತ್ರಕ್ಕಾಗಿ ನೀವು ಹೆಚ್ಚೇನು ಶ್ರಮ ಪಡಬೇಕಾಗಿಲ್ಲ. ಹೊಂದಾಣಿಕೆಯೂ ಮಾಡಿಕೊಳ್ಳಬೇಕಿಲ್ಲ. ಆದರೆ ನೀವು ನಿರ್ಮಾಪಕರನ್ನು ಅಪ್ಪಿಕೊಳ್ಳಬೇಕು ಎಂದು ಹೇಳಿದ ಎಂದಿದ್ದಾರೆ.
ಈ ವಿಚಿತ್ರ ಬೇಡಿಕೆಯನ್ನು ಕೇಳಿ ನಾನು ಹೌಹಾರಿದೆ, ಅದಕ್ಕೆ ಕಾರಣವನ್ನು ಕೂಡ ಕೇಳಿದೆ ಆದರೆ ಆತ ಹೇಳಿದ ಮಾತನ್ನೇ ಹೇಳಿದ, ಅಪ್ಪಿಕೊಳ್ಳಲು ತಯಾರಿದ್ದರೆ ಅವಕಾಶ ಎಂದ ಕೊನೆಗೆ ನಾನು ಅವನಿಗೆ ಬಾಯಿಗೆ ಬಂದಂತೆ ಬೈದು ಫೋನ್ ಇಟ್ಟೆ ಎಂದು ಹೇಳಿದ್ದಾರೆ ಪ್ರಿಯಾ ಠಾಕೂರ್.


Click it and Unblock the Notifications