Vijay Surya: ಸಂಗೀತಗಾರನಾಗಿ ಕಿರುತೆರೆಗೆ ಮರಳಿದ ಗುಳಿಕೆನ್ನೆಯ ಹುಡುಗ
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ನಾಯಕ ಸಿದ್ಧಾರ್ಥ್ ಆಗಿ ಅಭಿನಯಿಸಿ ಎಂಟು ವರ್ಷಗಳ ಕಾಲ ಕಿರುತೆರೆ ವೀಕ್ಷಕರನ್ನು ರಂಜಿಸಿದ ಗುಳಿಗೆನ್ನೆಯ ನಟ ವಿಜಯ್ ಸೂರ್ಯ ಇದೀಗ ಮತ್ತೆ ಕಿರುತೆರೆಗೆ ವಾಪಸ್ ಆಗಿದ್ದಾರೆ.
ಒಂದು ಹೊಚ್ಚ ಹೊಸ ಧಾರಾವಾಹಿಯಲ್ಲಿ ನಾಯಕ ನಟನಾಗಿ ಮಿಂಚಲಿದ್ದಾರೆ. ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗಲಿರುವ 'ಲಚ್ಚಿ' ಎಂಬ ಹೊಸ ಧಾರವಾಹಿಯಲ್ಲಿ ವಿಜಯ್ ಸೂರ್ಯ ಸಂಗೀತಗಾರನಾಗಿ ಕಾಣಿಸಿಕೊಳ್ಳಲಿದ್ದು, ಅವರ ಜೊತೆಗೆ ನಾಯಕಿಯಾಗಿ ನೇಹ ಗೌಡ ಅವರು ಪಾತ್ರ ನಿರ್ವಹಿಸಲಿದ್ದಾರೆ.

'ಜೊತೆಜೊತೆಯಲಿ' ಅಂತಾನೇ ಅತಿಥಿಯಾದ ಸೂರ್ಯ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ವಿಜಯ್ ಸೂರ್ಯ ತದ ನಂತರ ನಟನೆಯಿಂದ ಒಂದು ಸಣ್ಣ ಬ್ರೇಕ್ ತೆಗೆದುಕೊಂಡಿದ್ದರು. ಯಾವುದೇ ಸಿನಿಮಾ ಅಥವಾ ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳದೆ ತಮ್ಮದೇ ವೈಯಕ್ತಿಕ ಜೀವನದಲ್ಲಿ ತೊಡಗಿಕೊಂಡಿದ್ದರು. ಇದೀಗ ಮತ್ತೆ ವಾಪಸ್ ಆಗಿದ್ದು ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಮೊದಲ ಬಾರಿಗೆ ಗಾಯಕ
ಧಾರಾವಾಹಿಯ ಕಥೆಯ ಬಗ್ಗೆ ಮಾತನಾಡಿದ ಇವರು 'ಇದು ಸಂಗಮ್ ಸಾತನೂರು ಎಂಬ ಹುಡುಗನ ಕಥೆ. ಹಳ್ಳಿಯಿಂದ ಬಹಳ ದೊಡ್ಡ ಕನಸುಗಳನ್ನು ಹೊತ್ತು ಪೇಟೆಗೆ ಬರುವ ಈ ಸಂಗೀತಗಾರ ಅದೇನೆಲ್ಲ ತೊಂದರೆಗಳನ್ನು ಅನುಭವಿಸಿ ಕೊನೆಗೂ ಅದ್ಹೇಗೆ ಯಶಸ್ವಿಯಾಗುತ್ತಾನೆ ಎಂಬುದು ಈ ಕಥೆಯ ಹಂದರವಾಗಿದೆ. ಇದರ ಜೊತೆಗೆ ತಂದೆ ಮಗಳ ಬಾಂಧವ್ಯದ ಕಥೆಯು ಈ ಧಾರಾವಾಹಿಯಲ್ಲಿದೆ. ಅಂದಹಾಗೇ ನನ್ನ ವೃತ್ತಿ ಜೀವನದಲ್ಲಿ ನಾನು ಇದೇ ಮೊದಲ ಬಾರಿಗೆ ಗಾಯಕನಾಗಿ ಕಾಣಿಸಿಕೊಳ್ಳಲಿದ್ದೇನೆ" ಎಂದು ಹೇಳಿದರು ವಿಜಯ್ ಸೂರ್ಯ.

ಬ್ಯುಸಿ ಜೀವನದಿಂದ ತುಸುಕಾಲ ಬ್ರೇಕ್
"ಧಾರಾವಾಹಿ ಅಥವಾ ಸಿನಿಮಾಗಳು ಎಂದಾಗ ನಾವು ಯಾವುದೇ ಸಮಯದ ಮಿತಿ ಇಲ್ಲದೆ ಹಗಲು ರಾತ್ರಿ ದುಡಿಯುತ್ತೇವೆ. ನನಗೆ ಈ ರೀತಿಯ ಜೀವನದಿಂದ ತುಸುಕಾಲ ಬ್ರೇಕ್ ಬೇಕಿತ್ತು. ಇದೀಗ ಬ್ರೇಕ್ ತೆಗೆದುಕೊಂಡ ನಂತರ ನಿಜಕ್ಕೂ ನನಗೆ ಜೀವನದ ಹೊಸ ಹೊಸ ಆಯಾಮಗಳ ಬಗ್ಗೆ ಅರಿವಾಗಿದೆ. ಹಾಗಾಗಿ ಇದೀಗ ಜೀವನವನ್ನು ಜೊತೆಗೆ ನನ್ನ ನಟನೆಯ ಕೆರಿಯರನ್ನು ಹೊಸ ರೀತಿಯಲ್ಲಿ ನೋಡುವ ಉತ್ಸಾಹದಲ್ಲಿದ್ದೇನೆ" ಎಂದರು.

ಜೀವನ ಬಂದ ಹಾಗೇ ಸ್ವೀಕರಿಸುತ್ತೇನೆ
"ನಾನು ಕೋವಿಡ್ ನಂತರ ಯಾವುದನ್ನು ಹೆಚ್ಚಾಗಿ ಪ್ಲಾನ್ ಮಾಡುವುದಿಲ್ಲ. ಬದಲಿಗೆ ಜೀವನ ಹೇಗೆ ತೆಗೆದುಕೊಂಡು ಹೋಗುತ್ತದೆ ಹಾಗೆ ಅದನ್ನು ಸ್ವೀಕರಿಸಲು ಸಿದ್ಧನಾಗಿದ್ದೇನೆ' ಎಂದು ಹೇಳಿದ ವಿಜಯ್ ಸೂರ್ಯ ಕಿರುತೆರೆ ಜೊತೆಗೆ ಹಿರಿತೆರೆಯಲ್ಲಿ ಬ್ಯುಸಿಯಾಗಿದ್ದಾರೆ. 2023ರಲ್ಲಿ ಎರಡು ಚಿತ್ರಗಳು ಬಿಡುಗಡೆಯಾಗಲಿದ್ದು, ಹಿರಿತೆರೆಯಲ್ಲಿಯೂ ಈ ವರ್ಷ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ ವಿಜಯ್ ಸೂರ್ಯ.


Click it and Unblock the Notifications