'ಅಪಾಯವಿದೆ ಎಚ್ಚರಿಕೆ' ಎಂದಿದ್ದ ಈ ನಟ 'ಅಣ್ಣಯ್ಯ' ಧಾರಾವಾಹಿ ಒಪ್ಪಿಕೊಂಡಿದ್ದೇಕೆ? ಏನಂತಾರೆ ನಟ?
ನಟನೆ ಎಂದರೆ ಹಾಗೇ! ಅದು ಅನೇಕರನ್ನು ತನ್ನತ್ತ ಆಕರ್ಷಿಸಿದೆ. ಆದರೆ, ಕೆಲವರನ್ನಷ್ಟೇ ಅದು ಆಯ್ಕೆ ಮಾಡುತ್ತದೆ. ಹಾಗೇ ಆಯ್ಕೆಯಾದವರು ಶ್ರದ್ಧೆ, ಭಕ್ತಿಯಿಂದ ಕಲಾಮಾತೆಯನ್ನು ಆರಾಧನೆ ಮಾಡಬೇಕು. ಅಂತಹವರಿಗೆ ಅದು ಒಲಿಯುತ್ತದೆ ಎಂಬುದು ಮಾತು. ಈ ಮಾತು ನಟ ವಿಕಾಶ್ ಉತ್ತಯ್ಯ ಅವರ ಪಾಲಿಗೆ ಅಕ್ಷರಶಃ ನಿಜವೇನೂ ಎಂದು ಅನಿಸಿಬಿಡುತ್ತದೆ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಅಣ್ಣಯ್ಯ' ಧಾರಾವಾಹಿಯಲ್ಲಿ ನಾಯಕ ಶಿವಣ್ಣ ಆಗಿ ನಟಿಸುತ್ತಿರುವ ಹ್ಯಾಂಡ್ ಸಮ್ ಹುಡುಗನ ಹೆಸರು ವಿಕಾಸ್ ಉತ್ತಯ್ಯ. ಮಂಜಿನ ನಗರಿ ಮಡಿಕೇರಿ ಮೂಲಕ ವಿಕಾಶ್ ಉತ್ತಯ್ಯ ಇದೀಗ ಶಿವಣ್ಣನಾಗಿ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದ್ದಾರೆ.

ಬಿ.ಎ, ಎಲ್.ಎಲ್. ಬಿ, ಎಲ್.ಎಲ್.ಎಂ ಪದವೀಧರರಾಗಿರುವ ವಿಕಾಶ್ ಅವರು ಭಾರತೀಯ ಸಂವಿಧಾನದಲ್ಲಿ ಮಾಸ್ಟರ್ಸ್ ಪದವಿಯನ್ನು ಪಡೆದಿದ್ದಾರೆ. ಅಂದ ಹಾಗೇ ಸಣ್ಣ ವಯಸ್ಸಿನಿಂದಲೂ ನಟನಾಗಬೇಕು, ಬಣ್ಣದ ಲೋಕದಲ್ಲಿ ಗುರುತಿಸಿಕೊಳ್ಳಬೇಕೆಂಬ ಕನಸು ವಿಕಾಶ್ ಅವರಿಗಿತ್ತು. ಅಂತೆಯೇ ನಟನೆಯ ನಂಟು ಬೆಳೆಸಿಕೊಂಡಿರುವ ಇವರು ಬಾಲ್ಯದ ಕನಸನ್ನು ನನಸು ಮಾಡಿಕೊಂಡ ಖುಷಿಯಲ್ಲಿದ್ದಾರೆ.
'ಕನಸಿನ ಮಳೆಯಾದಳು' ಕಿರುಚಿತ್ರದ ಮೂಲಕ ನಟನೆಯ ನಂಟು ಬೆಳೆಸಿಕೊಂಡ ಕೊಡಗಿನ ಕುವರ ತಮ್ಮ ಸಹಜ ನಟನೆಯ ಮೂಲಕ ಮೋಡಿ ಮಾಡಿದ ಹುಡುಗ. ಮುಂದೆ 'ಆನ' ಸಿನಿಮಾದಲ್ಲಿ ನಟಿಸುವ ಮೂಲಕ ಸ್ಯಾಂಡಲ್ವುಡ್ಗೆ ಕಾಲಿಟ್ಟ ವಿಕಾಶ್ ಅಲ್ಲೂ ನಮ್ಮ ನಟನೆಯ ಮೂಲಕ ಗುರುತಿಸಿಕೊಂಡರು. ಮುಂದೆ 'ಮೇರಿ' ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರಕ್ಕೆ ಜೀವ ತುಂಬಿದ ವಿಕಾಶ್ ಉತ್ತಯ್ಯ 'ಅಪಾಯವಿದೆ ಎಚ್ಚರಿಕೆ' ಸಿನಿಮಾದಲ್ಲಿಯೂ ಬಣ್ಣ ಹಚ್ಚಿದ್ದಾರೆ.
ಇದರ ನಡುವೆ ಅಣ್ಣಯ್ಯ ಧಾರಾವಾಹಿಯ ಶಿವಣ್ಣನಾಗಿ ಕಿರುತೆರೆಯಲ್ಲಿ ಕಾಣಿಸಿಕೊಂಡಿರುವ ವಿಕಾಶ್ "ನನಗೆ ಮುಂಚೆಯಿಂದಲೂ ಕಿರುತೆರೆಯಿಂದ ಅವಕಾಶಗಳು ಬರ್ತಿತ್ತು. ಆದರೆ, ಯಾವುದೇ ಪಾತ್ರ ಅಥವಾ ಕಥೆ ನನ್ನನ್ನು ಅಷ್ಟು ಎಕ್ಸೈಟ್ ಮಾಡಿರಲಿಲ್ಲ. ಜೊತೆಗೆ ನಾನು ಸಿನಿಮಾದಲ್ಲಿಯೂ ನಟಿಸ್ತಾ ಇದ್ದಿದ್ದರಿಂದ ನನಗೆ ಸೀರಿಯಲ್ನಲ್ಲಿ ಬಣ್ಣ ಹಚ್ಚಲು ಟೈಮ್ ಕೂಡ ಇರಲಿಲ್ಲ" ಎಂದು ಫಿಲ್ಮಿಬೀಟ್ ಕನ್ನಡ ಜೊತೆ ಮಾತನಾಡುತ್ತಾ ವಿಕಾಶ್ ಉತ್ತಯ್ಯ ಹೇಳಿಕೊಂಡಿದ್ದಾರೆ.
"ಇತ್ತೀಚಿನ ದಿನಗಳಲ್ಲಿ ಪುರುಷ ಪ್ರಧಾನವಾಗಿರುವ ಧಾರಾವಾಹಿ ಪ್ರಸಾರವಾಗುತ್ತಿರುವುದು ತುಂಬಾ ಕಡಿಮೆ. ಇದೀಗ ಅಣ್ಣಯ್ಯ ಧಾರಾವಾಹಿಯು ಆ ಕಾನ್ಸೆಪ್ಟ್ನಲ್ಲಿ ಪ್ರಸಾರವಾಗುತ್ತಿದೆ. 'ಅಣ್ಣಯ್ಯ' ಧಾರಾವಾಹಿಯ ಕಥೆ ಮತ್ತು ಪಾತ್ರದ ಬಗ್ಗೆ ಕೇಳಿದ ನಂತರ ಅದು ಕಾಡುವುದಕ್ಕೆ ಶುರುವಾಯ್ತು. ನಾನು ನಟಿಸಬೇಕು ಎಂದು ನಿರ್ಧಾರ ಮಾಡಿದೆ. ಯಾಕೆಂದರೆ, ಆ ಪಾತ್ರದಲ್ಲಿ ಅಭಿನಯಕ್ಕೆ ಅವಕಾಶ ಜಾಸ್ತಿ ಇದೆ. ಎಮೋಷನ್ಸ್ ಇದೆ. ಮತ್ತೆ ಕಥೆ ಎಲ್ಲರ ಮನಸ್ಸು, ಮನೆ ಮುಟ್ಬೇಕು. ಅಂತಹ ಒಳ್ಳೆಯ ಕಥೆ ಈ ಧಾರಾವಾಹಿಯಲ್ಲಿದೆ" ಎಂದು ಅಣ್ಣಯ್ಯ ಧಾರಾವಾಹಿಯ ಬಗ್ಗೆ ವಿಕಾಶ್ ಉತ್ತಯ್ಯ ಹೇಳಿಕೊಂಡಿದ್ದಾರೆ.
"ಕಥೆ, ಪಾತ್ರದ ಹೊರತಾಗಿ ನಾನು ಅಣ್ಣಯ್ಯ ಧಾರಾವಾಹಿಯನ್ನು ಒಪ್ಪಿಕೊಳ್ಳಲು ಕಾರಣ ಪ್ರೊಡಕ್ಷನ್ ಹೌಸ್. ಪ್ರಮೋದ್ ಶೆಟ್ಟಿ, ಸುಪ್ರೀತಾ ಪ್ರಮೋದ್ ಶೆಟ್ಟಿ ಅವರು ಈ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದ್ದಾರೆ. ಎಲ್ಲವನ್ನು ಅವರು ತುಂಬಾ ಅಚ್ಚುಕಟ್ಟಾಗಿ ಮಾಡ್ತಾರೆ. ನಾನು ಅವರ ಕೆಲಸಗಳನ್ನು ಈ ಮುಂಚೆ ನೋಡಿದ್ದೆ. ಅವರ ಮೊದಲನೇ ಪ್ರೊಡಕ್ಷನ್ ಈ ಧಾರಾವಾಹಿ. ಸೋ ಇಷ್ಟು ಒಳ್ಳೆಯ ತಂಡದೊಂದಿಗೆ ಸೇರಿ ಕೆಲಸ ಮಾಡುವುದು ಒಂದು ಒಳ್ಳೆಯ ಅವಕಾಶ ಎಂದು ನನಗೆ ಅನ್ನಿಸಿತ್ತು. ಆ ಕಾರಣದಿಂದಲೂ ನಾನು ಶಿವಣ್ಣನ ಪಾತ್ರವನ್ನು ಒಪ್ಪಿಕೊಂಡೆ" ಎಂದು ಫಿಲ್ಮಿಬೀಟ್ ಕನ್ನಡ ಜೊತೆ ಮಾತಾಡಿದ್ದಾರೆ.
"ಶಿವಣ್ಣ ತುಂಬಾ ಮುಗ್ಧ ಹಳ್ಳಿ ಹುಡುಗ. ತಂಗಿಯರೇ ಅವನ ಸರ್ವಸ್ವ ಎಂದು ಅಂದುಕೊಂಡಿರುವಂತಹ ಒಂದು ಕತೆ. ಅವನ ಇಡೀ ಪ್ರಪಂಚ ಅವನ ತಂಗಿಯೇ ಆಗಿರ್ತಾರೆ. ತಂಗಿಯರಿಗೋಸ್ಕರ ಅವನು ಏನು ಬೇಕಾದರೂ ಮಾಡುವುದಕ್ಕೆ ಸಿದ್ದ ಇರುತ್ತಾನೆ. ಇಲ್ಲಿಯವರೆಗೆ ಸೀರಿಯಲ್ಗಳಲ್ಲಿ, ಸಿನಿಮಾಗಳಲ್ಲಿ ನಾರ್ಮಲ್ ಅಣ್ಣ ತಂಗಿಯ ಕಥೆ ಎಷ್ಟೋ ಬಂದಿರ್ಬಹುದು. ಆದರೆ, ಇದು ಅದಕ್ಕಿಂತ ಭಿನ್ನವಾದ ಧಾರಾವಾಹಿ. ಈ ಧಾರಾವಾಹಿಯಲ್ಲಿ ಎಮೋಷನಲ್ ಇದೆ, ಕಾಮಿಡಿ ಇದೆ, ಎಲ್ಲಾ ಜಾನರ್ಗಳು ಇದರಲ್ಲಿದೆ" ಎಂದು ತಮ್ಮ ಪಾತ್ರದ ಬಗ್ಗೆ ವಿಕಾಶ್ ಉತ್ತಯ್ಯ ಹೇಳಿಕೊಂಡಿದ್ದಾರೆ.
ಸೀರಿಯಲ್, ಸಿನಿಮಾ ಹೊರತಾಗಿ ವೆಬ್ ಸಿರೀಸ್ಗಳಲ್ಲಿ ಈ ಕೊಡಗಿನ ಕುವರ ಬಣ್ಣ ಹಚ್ಚಿದ್ದಾರೆ. ಇನ್ನು ನಟನೆಯ ಹೊರತಾಗಿ ಕಂಠದಾನ ಕಲಾವಿದನಾಗಿಯೂ ಇವರು ಗುರುತಿಸಿಕೊಂಡಿದ್ದಾರೆ. ವಾಯ್ಸ್ ಓವರ್ ಆರ್ಟಿಸ್ಟ್ ಆಗಿರುವ ಇವರು ಸೀರಿಯಲ್, ಸಿನಿಮಾದ ಹೊರತಾಗಿ ರಂಗಭೂಮಿಯ ನಂಟನ್ನು ಹೊಂದಿದ್ದಾರೆ. ಒಂದಷ್ಟು ನಾಟಕಗಳಲ್ಲಿ ಇವರು ಅಭಿನಯಿಸಿದ್ದಾರೆ. ಇದೀಗ ಶಿವಣ್ಣನಾಗಿ ಕಿರುತೆರೆಯಲ್ಲಿ ಮಿಂಚುತ್ತಿರುವ ವಿಕಾಶ್ ತಮ್ಮ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದಾರೆ. ಹೀಗಾಗಿಯೂ ಇವರು ಮುಂದೊಂದು ದಿನ ಮನೆ ಮೆಚ್ಚಿದ ಮಗ, ಮನ ಮೆಚ್ಚಿದ ಸಹೋದರನಾಗಿ ಹೊರಹೊಮ್ಮಿದರೆ ಆಶ್ಚರ್ಯವಿಲ್ಲ.


Click it and Unblock the Notifications











