ಕ್ರಿಸ್ಮಸ್ ಹಬ್ಬದಂದು ಉದಯ ಟಿವಿಯಲ್ಲಿ 'ರಂಗಿತರಂಗ'
ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿದ ಹಾಗೂ ವಿಶಿಷ್ಟ ಚಿತ್ರಕಥೆ, ನಿರೂಪಣೆ ಶೈಲಿಯ ಮೂಲಕ ಅನೇಕ ಪ್ರಶಸ್ತಿಗಳಿಗೆ ಭಾಜನವಾದ ಸೂಪರ್ ಹಿಟ್ ಚಲನಚಿತ್ರ 'ರಂಗಿತರಂಗ'.
ಅನೂಪ್ ಭಂಡಾರಿ ನಿರ್ದೇಶಿಸಿರುವ, ನಿರೂಪ್ ಭಂಡಾರಿ ಅಭಿನಯಿಸಿರುವ 'ರಂಗಿತರಂಗ' ಕ್ರಿಸ್ಮಸ್ ಹಬ್ಬದಂದು (ಡಿಸೆಂಬರ್ 25) ಸಂಜೆ 7 ಗಂಟೆಗೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.
ನಿರ್ದೇಶಕ ಅನೂಪ್ ಭಂಡಾರಿ ನಿರ್ದೇಶಿಸಿ 2015ರಲ್ಲಿ ಬಿಡುಗಡೆಯಾದ 'ರಂಗಿತರಂಗ' ಚಲನಚಿತ್ರ ಸ್ಯಾಂಡಲ್ ವುಡ್ ಪಾಲಿಗೆ ಒಂದು ಟ್ರೆಂಡ್ ಸೆಟ್ ಮಾಡಿದ ಚಿತ್ರ. ಸಂಪೂರ್ಣ ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನ ಕರಾವಳಿ ಭಾಗದ ಸಂಸ್ಕೃತಿ ಹಾಗೂ ಅಲ್ಲಿನ ವಿಶಿಷ್ಟ ಆಚರಣೆಗಳ ಜತೆಗೆ ಅಲ್ಲಿನ ನೇಟಿವಿಟಿಗೆ ತಕ್ಕಂತೆ ಚಿತ್ರಕಥೆ ರಚಿಸಿ ನಿರೂಪಿಸಿರುವ ನಿರ್ದೇಶಕರ ಜಾಣ್ಮೆ ಈ ಚಿತ್ರದಲ್ಲಿ ಕಾಣುತ್ತದೆ.

ಚಿತ್ರದಲ್ಲಿ ನಾಯಕ ನಿರೂಪ್ ಭಂಡಾರಿ ಒಂದು ಅಪಘಾತದಿಂದಾಗಿ ತನ್ನ ನೆನಪಿನ ಶಕ್ತಿಯನ್ನು ಕಳೆದುಕೊಂಡಿರುತ್ತಾನೆ. ಅದೇ ಅಪಘಾತದಲ್ಲಿ ತನ್ನ ಗೆಳತಿಯನ್ನು ಕಳೆದುಕೊಳ್ಳುವ ನಾಯಕಿ ರಾಧಿಕಾ ಚೇತನ್, ನಾಯಕನಿಗೆ ತಾನೆ ಆತನ ಹೆಂಡತಿ ಎಂದು ನಂಬಿಸಿರುತ್ತಾರೆ. ಈ ನಡುವೆ ಅವರು ಒಂದು ಪೂಜೆಯ ನಿಮಿತ್ತ ಕರಾವಳಿಗೆ ಮತ್ತೆ ಆಗಮಿಸುತ್ತಾರೆ. ಈ ಸಂದರ್ಭದಲ್ಲಿ ಗರ್ಭಿಣಿಯಾಗಿರುವ ನಾಯಕಿಯ ಅಪಹರಣವಾಗುತ್ತದೆ. ಈ ಹಿಂದೆಯೂ ಅಂತಹ ಅನೇಕ ಗರ್ಭಿಣಿಯರ ಅಪಹರಣವಾಗಿರುತ್ತದೆ. ಆದರೆ ಇದು ಭೂತದ ಕೆಲಸ ಎಂದು ಎಲ್ಲರೂ ನಂಬಿರುತ್ತಾರೆ. ಆದರೆ ನಾಯಕ ಕೊನೆಗೆ ಹೇಗೆ ನಾಯಕಿಯನ್ನು ಕಾಪಾಡಿಕೊಳ್ಳುತ್ತಾನೆ ಎಂಬುದು ಚಿತ್ರದ ಕಥೆ.
ಚಿತ್ರಕಥೆ ಹಾಗೂ ನಿರೂಪಣಾ ಶೈಲಿಯಲ್ಲಿ ನಿರ್ದೇಶಕ ಅನೂಪ್ ಭಂಡಾರಿ ಮೋಡಿ ಮಾಡಿದ್ದಾರೆ. ಇನ್ನೂ ಮೊದಲ ಚಿತ್ರದಲ್ಲಿ ನಟಿಸಿರುವ ನಾಯಕ ಅನೂಪ್ ಭಂಡಾರಿ, ನಾಯಕಿ ರಾಧಿಕಾ ಚೇತನ್ ಹಾಗೂ ಮತ್ತೊಬ್ಬ ನಾಯಕಿ ಅವಂತಿಕಾ ಶೆಟ್ಟಿ ತಮಗೆ ನೀಡಿದ ಪಾತ್ರವನ್ನು ಜವಾಬ್ದಾರಿಯಿಂದ ನಿಭಾಯಿಸಿದ್ದಾರೆ. ಕ್ಲೈಮಾಕ್ಸ್ ನಲ್ಲಿ ಹಿರಿಯ ನಟ ಸಾಯಿ ಕುಮಾರ್ ನಟನೆ ಅಮೋಘ. ಇನ್ನೂ ಅನೂಪ್ ಭಂಡಾರಿಯವರೆ ಎಲ್ಲಾ ಹಾಡುಗಳಿಗೆ ಸಂಗೀತ ನಿರ್ದೇಶನ ಮಾಡಿದ್ದು ತಮ್ಮ ಕೈಚಳಕ ತೋರಿಸಿದ್ದಾರೆ.
ಒಟ್ನಲ್ಲಿ 2015ರಲ್ಲಿ ಬಿಡುಗಡೆಯಾಗಿ ಇಡೀ ಕನ್ನಡ ಚಿತ್ರೋದ್ಯಮ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗದ ಗಮನ ಸೆಳೆದು ಸೂಪರ್ ಹಿಟ್ ಆದ 'ರಂಗಿತರಂಗ' ಇದೇ ಡಿಸೆಂಬರ್ 25ರಂದು (ಸೋಮವಾರ) ಸಂಜೆ 7ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.


Click it and Unblock the Notifications











