ಇದೇ ಭಾನುವಾರ 'ಸರೆಗಮಪ' ಗ್ರಾಂಡ್ ಫಿನಾಲೆ ನೇರ ಪ್ರಸಾರ
ಜೀ ಕನ್ನಡದ ಜನಪ್ರಿಯ ಕಾರ್ಯಕ್ರಮವಾದ 'ಸರೆಗಮಪ ಸೀಸನ್ 13' ಈಗ ಕೊನೆಯ ಹಂತ ತಲುಪಿದೆ. ಸತತ 21 ವಾರಗಳಿಂದ ಜನಮನ್ನಣೆಗೆ ಪಾತ್ರವಾಗಿರುವ 'ಸರೆಗಮಪ'ದ ವಿಜೇತರು ಯಾರಾಗುತ್ತಾರೆಂದು ತಿಳಿಯಲು ಕ್ಷಣಗಣನೆ ಶುರುವಾಗಿದೆ.
ಇದೇ ಭಾನುವಾರ ಸಂಜೆ 6 ಗಂಟೆಯಿಂದ ಆರಂಭವಾಗುವ ಗ್ರ್ಯಾಂಡ್ ಫಿನಾಲೆಯಲ್ಲಿ, 6 ಗಾಯಕರ ಪೈಕಿ ಒಬ್ಬರನ್ನು ವೀಕ್ಷಕರ ವೋಟುಗಳ ಆಧಾರದ ಮೇಲೆ ವಿಜೇತರನ್ನಾಗಿ ಆಯ್ಕೆ ಮಾಡಲಾಗುತ್ತದೆ.

ಮೆಗಾ ಆಡಿಷನ್ ನಲ್ಲಿ ಆಯ್ಕೆಯಾದ 30 ಗಾಯಕರಲ್ಲಿ ಅಂತಿಮವಾಗಿ 17 ಗಾಯಕರನ್ನು ಸೆಲೆಕ್ಟ್ ಮಾಡಲಾಗಿತ್ತು. ಅವರಲ್ಲಿ ವಾರದಿಂದ ವಾರಕ್ಕೆ ಸ್ಪರ್ಧಿಗಳ ಎಲಿಮಿನೇಷನ್ ನಡೆಸಿ, ಸೆಮಿ ಫಿನಾಲೆ ಹಂತದಲ್ಲಿ 10 ಗಾಯಕರು ಉಳಿದುಕೊಂಡರು.
ಗಾಯಕರ ಅಪ್ರತಿಮ ಪ್ರತಿಭಾ ಪ್ರದರ್ಶನ ನೋಡಿದ ತೀರ್ಪುಗಾರರಾದ ವಿಜಯ್ ಪ್ರಕಾಶ್, ಅರ್ಜುನ್ ಜನ್ಯ ಹಾಗೂ ರಾಜೇಶ್ ಕೃಷ್ಣನ್ ರವರಿಗೆ ಫಿನಾಲೆಗೆ ಯಾವ 6 ಗಾಯಕರನ್ನು ಆಯ್ಕೆ ಮಾಡಬೇಕೆಂಬ ಗೊಂದಲಕ್ಕೀಡಾದರು.
ಕೊನೆಗೆ, ಇಷ್ಟೂ ವಾರಗಳ ಪ್ರದರ್ಶನವನ್ನು ಮನಗಂಡು, 6 ಫೈನಲಿಸ್ಟುಗಳನ್ನು ಆಯ್ಕೆ ಮಾಡಿದರು. ಧನುಷ್, ಸುನಿಲ್, ಶ್ರೀಹರ್ಷ, ದೀಕ್ಷಾ, ಮೆಹಬೂಬ್ ಸಾಬ್ ಹಾಗೂ ಅರವಿಂದ್ ಇದೇ ಭಾನುವಾರ ಲಕ್ಷಾಂತರ ವೀಕ್ಷಕರ ಸಮ್ಮುಖದಲ್ಲಿ ಹಾಡಲಿದ್ದಾರೆ. ಅವರಲ್ಲಿ ಒಬ್ಬ ವಿಜೇತರನ್ನು ಜನರ ಸಮ್ಮುಖದಲ್ಲೇ ಆಯ್ಕೆ ಮಾಡಲಾಗುವುದು. ಪ್ರೇಕ್ಷಕರು ಮನೆಯಲ್ಲೇ ಕುಳಿತು ಲೈವ್ ಆಗಿ ಕಾರ್ಯಕ್ರಮವನ್ನು ವೀಕ್ಷಿಸಬಹುದು.

ರಾಜ್ಯದ ವಿವಿದೆಡೆಯಿಂದ ಬಂದ ಪ್ರತಿಭೆಗಳು ತಮ್ಮ ಕಲೆಯಿಂದಷ್ಟೇ ಅಲ್ಲದೆ, ತಮ್ಮ ಮುಗ್ಧತೆಯಿಂದ, ವಾಕ್ಚಾತುರ್ಯದಿಂದ, ನೃತ್ಯದಿಂದ, ಸ್ಟಾರ್ ಪಟ್ಟವನ್ನು ತಮ್ಮದಾಗಿಸಿಕೊಂಡರು. ಫಿನಾಲೆಗೆ ಆಯ್ಕೆಯಾಗದ ಸುಹಾನ ಸೈಯ್ಯದ್, ಲಹರಿ, ಇಂಪನ ಹಾಗೂ ಇತರ ಗಾಯಕರೂ ಸಹ ಯಾವುದರಲ್ಲೂ ಕಮ್ಮಿಯಿಲ್ಲ ಅಂತ ತೋರಿಸಿಕೊಟ್ಟಿದ್ದಾರೆ.
ಇದೇ ಮೊದಲಬಾರಿಗೆ 'ಸರೆಗಮಪ' ಫಿನಾಲೆ ಕಾರ್ಯಕ್ರಮ ಲೈವ್ ಆಗಿ ಪ್ರಸಾರವಾಗಲಿದ್ದು, ಪ್ರೇಕ್ಷಕರಲ್ಲಿ ಹೊಸ ಕುತೂಹಲ ಮೂಡಿಸಿದೆ. ಈಗಾಗಲೇ ವೋಟಿಂಗ್ ಲೈನ್ಸ್ ಕೂಡ ತೆರೆದಿದ್ದು, ಕೊನೆಯ ಹಂತದವರೆಗೆ ವೋಟ್ ಮಾಡುವ ಅವಕಾಶವಿರುತ್ತದೆ. ಫಿನಾಲೆಯಲ್ಲಿ ಎಂದಿನಂತೆ ಎರಡು ಸುತ್ತುಗಳಿರುತ್ತದೆ. ಮೊದಲನೇ ಸುತ್ತಿನ ನಂತರ ಮೂರು ಜನ ಮಾತ್ರ ಮುಂದಿನ ಸುತ್ತಿಗೆ ಆಯ್ಕೆಯಾಗುತ್ತಾರೆ.
ಗ್ರಾಂಡ್ ಫಿನಾಲೆಗೆ ನಾದಬ್ರಹ್ಮ ಹಂಸಲೇಖ ವಿಶೇಷ ತೀರ್ಪುಗಾರರಾಗಿ ಆಗಮಿಸಲಿದ್ದಾರೆ. ಅವರ ಜೊತೆ ವಿಜಯಪ್ರಕಾಶ್, ಅರ್ಜುನ್ ಜನ್ಯ ಹಾಗೂ ರಾಜೇಶ್ ಕೃಷ್ಣನ್ ಕೂಡ ಉಪಸ್ಥಿತರಿರುತ್ತಾರೆ. ಜನರ ವೋಟಿಂಗ್ ಪರಿಗಣಿಸಿ, ಒಬ್ಬ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ.


Click it and Unblock the Notifications











