30 ನಿಮಿಷದಲ್ಲಿ ಸಾಲ ತೀರಿಸು, ಇಲ್ಲಾಂದ್ರೆ ನಿನ್ನ ಅಶ್ಲೀಲ ಫೋಟೊ ವೈರಲ್ ಆಗುತ್ತೆ ; ಅಂತರಪಟ ನಟಿ ಶರ್ಮಿಳಾಗೆ ಬೆದರಿಕೆ !
ಹೇಗಾದರೂ ಸರಿ ಏಕಾಏಕಿ ದುಡ್ಡು ಮಾಡಿ ಬಿಡಬೇಕು... ಇಂಥಾ ಧಾವಂತದಿಂದ ಥರ ಥರದ ವೇಷ ತೊಟ್ಟ, ಹೆಜ್ಜೆ ಹೆಜ್ಜೆಗೂ ಮಾರಾಮೋಸ ಮಾಡುವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಮೋಸ ಮಾಡಲು ವಂಚಕರು ಸದಾ ಹೊಸ ದಾರಿಯನ್ನು ಹುಡುಕುತ್ತಲೇ ಇರುತ್ತಾರೆ. ವಿಪರ್ಯಾಸ ಅಂದರೆ ಈ ಮೋಸದ ಜಾಲಕ್ಕೆ ವಿದ್ಯಾವಂತರು ಕೂಡ ಸಿಲುಕಿಕೊಳ್ಳುತ್ತಿದ್ದಾರೆ. ಚಿತ್ರರಂಗದವರು ಕೂಡ ಬಲಿಯಾಗುತ್ತಿದ್ದಾರೆ.
ಇನ್ನು, 5Gಯ ಈ ಯುಗದಲ್ಲಿ ಆನ್ ಲೈನ್ನಲ್ಲಿ ಸಾಲ ಕೊಡುವ ಆಪ್ಗಳು ಅಣಬೆಯಂತೆ ಹುಟ್ಟಿಕೊಂಡಿವೆ. ಕಡಿಮೆ ದರದಲ್ಲಿ ಸಾಲ ಕೊಡುವುದಾಗಿ ಹೇಳಿ ನಂಬಿಸುವ ಈ ಆನ್ ಲೈನ್ ಆಪ್ಗಳಿಂದ ನರಳಿದವರು, ನೇಣಿಗೆ ಶರಣಾದವರು ಅನೇಕರಿದ್ದಾರೆ.

ಆದರೂ ಕೂಡ ಆನ್ಲೈನ್ ಆಪ್ಗಳನ್ನು ಅನೇಕರು ನಂಬಿಕೊಂಡು ಹೋಗುತ್ತಾರೆ. ತಮ್ಮ ಮೊಬೈಲ್ನಲ್ಲಿರುವ ಸಂಪೂರ್ಣ ಮಾಹಿತಿ ಅದೆಲ್ಲೋ ಕುಳಿತ ವ್ಯಕ್ತಿಗೆ ನೀಡಿ ಬಿಡುತ್ತಾರೆ. ಅನಾಹುತದ ಸುಳಿವು ಸಿಕ್ಕ ನಂತರ ಚಡಪಡಿಸುತ್ತಾರೆ. ಅಂತರಪಟದ ನಾಯಕಿ ಶರ್ಮಿಳಾ ಚಂದ್ರಶೇಖರ್ ಇದಕ್ಕೆ ಸದ್ಯದ ಉದಾಹರಣೆ.
ಹೌದು, 'ಸೀತೆ', 'ಪತ್ತೇದಾರಿ', 'ಪ್ರತಿಭಾ', 'ಪರಿಣಯ', ʼಪಲ್ಲವಿ ಅನುಪಲ್ಲವಿʼ, 'ಅಂತರಪಟ' ಧಾರಾವಾಹಿಗಳ ಮೂಲಕ ಜನ ಮನ ಗೆದ್ದ ಶರ್ಮಿಳಾ ಚಂದ್ರಶೇಖರ್ ಸದ್ಯ ಆನ್ ಲೈನ್ ಬಡ್ಡಿಕೋರರ ಕಪಿಮುಷ್ಠಿಯಲ್ಲಿ ಸಿಲುಕಿದ್ದಾರೆ. ಕಿರುಕುಳ ಸಹಿಸಲಾಗದೇ ವಿಡಿಯೋ ಮೂಲಕ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಈ ಕುರಿತು ಮಾತನಾಡಿರುವ ಶರ್ಮಿಳಾ ಚಂದ್ರಶೇಖರ್ ಇತ್ತೀಚೆಗೆ ಆನ್ಲೈನ್ ಮೋಸ ಜಾಸ್ತಿ ಆಗಿದೆ, ವೇವ್ ಕ್ಯಾಶ್ ಲೋನ್ ಆಪ್ನಿಂದ ನಿಮಗೆ ಸಾಲ ಮಂಜೂರು ಆಗಿದೆ, ನೀವು ಸಾಲ ತೀರಿಸಿಲ್ಲ ಅಂದರೆ ನಿಮ್ಮ ಫೋಟೊಗಳನ್ನು ಬಳಸಿಕೊಂಡು, ಅಶ್ಲೀಲವಾಗಿ ಎಡಿಟ್ ಮಾಡುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ಹೇಳಿದ್ದಾರೆ. ನನ್ನೆಲ್ಲ ವಾಟ್ಸಾಫ್ ಬಳಕೆದಾರರಿಗೆ ನನ್ನ ಎಡಿಟೆಡ್ ಫೋಟೊವನ್ನು ಕಳುಹಿಸುವುದಾಗಿ ಹೇಳುವುದಲ್ಲದೇ ನನ್ನ ಫೋನ್ನಲ್ಲಿರುವ ನಂಬರ್ಗಳಿಗೆ ಕರೆ ಮಾಡುವುದಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಮುಂದುವರೆದು ನನ್ನ ಅಶ್ಲೀಲ ಫೋಟೊಗಳು ನಿಮಗೆ ಆನ್ಲೈನ್ನಲ್ಲಿ ಕಂಡರೆ ಅದು ನನ್ನ ನಿಜವಾದ ಫೋಟೊ ಆಗಿರುವುದಿಲ್ಲ ಎಂದು ಹೇಳಿರುವ ಶರ್ಮಿಳಾ ಚಂದ್ರಶೇಖರ್ ಒಂದು ವೇಳೆ ನಿಮಗೆ ಅನೌನ್ ನಂಬರ್ದಿಂದ ಮೆಸೆಜ್ ಬಂದರೆ ನನ್ನ ಫೋಟೊ ಬಂದರೆ ಆ ನಂಬರ್ಗೆ ರಿಪ್ಲೈ ಮಾಡಬೇಡಿ ಅವರು ನಿಮ್ಮ ಫೋನ್ಲ್ಲಿರುವ ನಂಬರಗಳನ್ನು ಕೂಡ ಕದಿಯಬಹುದು ಎಂದು ಎಚ್ಚರಿಕೆಯನ್ನು ಕೂಡ ನೀಡಿದ್ದಾರೆ. ಬೆಂಗಳೂರು ಸಿಟಿ ಪೊಲೀಸ್ ಮತ್ತು ಸೈಬರ್ ಕ್ರೈಮ್ಗೆ ಕೂಡ ತಮ್ಮ ವಿಡಿಯೋವನ್ನು ಟ್ಯಾಗ್ ಮಾಡಿದ್ದಾರೆ.
ಇನ್ನು, ಶರ್ಮಿಳಾ ಚಂದ್ರಶೇಖರ್ ಸಾಲ ಮಂಜೂರಾಗಿದೆ ಎಂದು ಹೇಳಿದ್ದಾರೆ. ಆದರೆ ಕಳುಹಿಸಲಾದ ಮೆಸೆಜ್ನಲ್ಲಿ 30 ನಿಮಿಷದಲ್ಲಿ ಸಾಲ ಮರಳಿ ನೀಡುವಂತೆ ಬೆದರಿಕೆಯನ್ನು ಹಾಕಲಾಗಿದೆ. ಹೀಗಾಗಿ ಶರ್ಮಿಳಾ ಚಂದ್ರಶೇಖರ್ ಈ ವೇವ್ ಕ್ಯಾಶ್ ತೋಡಿದ್ದ ಖೆಡ್ಡಾಗೆ ಬಿದ್ದಿದ್ದಾರಾ ? ಅವರಿಂದ ಹಣ ಪಡೆದಿದ್ದಾರಾ ? ಎನ್ನುವ ಪ್ರಶ್ನೆ ಈಗ ಅನೇಕರನ್ನು ಕಾಡುತ್ತಿದೆ.
ಇನ್ನು ಸಾಮಾನ್ಯವಾಗಿ ಮೊಬೈಲ್ನಲ್ಲಿರುವ ಮಾಹಿತಿ ಬೇರೆಯವರು ಪಡೆಯಬೇಕು ಅಂದರೆ ಅನುಮತಿಯನ್ನು ಬಳಕೆದಾರರೇ ನೀಡಬೇಕು. ಶರ್ಮಿಳಾ ಗೊತ್ತಿದ್ದೋ ಗೊತ್ತಿಲ್ಲದೆಯೋ ಎಲ್ಲ ಆಪ್ಗಳನ್ನು ಬಳಸಲು ಅನುಮತಿಯನ್ನು ನೀಡಿದ್ರಾ ಗೊತ್ತಿಲ್ಲ. ಆದರೆ ಇವರ ಮೊಬೈಲ್ನಲ್ಲಿರುವ ವಿವರ ವೇವ್ ಕ್ಯಾಶ್ನವರಿಗೆ ಸಿಕ್ಕಿದ್ದು ಹೇಗೆ ಎನ್ನುವುದನ್ನು ಕೂಡ ಶರ್ಮಿಳಾ ಚಂದ್ರಶೇಖರ್ ತಮ್ಮ ಈ ವಿಡಿಯೋದಲ್ಲಿ ಹೇಳಿಲ್ಲ.
ಇನ್ನುಳಿದಂತೆ ಸದ್ಯ ಶರ್ಮಿಳಾ ಚಂದ್ರಶೇಖರ್ ವಿಡಿಯೋ ಮೂಲಕ ಎಲ್ಲರಲ್ಲಿ ಮನವಿಯನ್ನು ಮಾಡಿಕೊಂಡಿದ್ಧಾರೆ. ಸೈಬರ್ ಕ್ರೈಂಗೆ ಕೂಡ ತಮ್ಮ ವಿಡಿಯೋವನ್ನು ಟ್ಯಾಗ್ ಮಾಡಿದ್ದಾರೆ. ಈ ಆನ್ಲೈನ್ ವಂಚಕರ ಹೆಡೆಮುರಿಯನ್ನು ಪೊಲೀಸರು ಕಟ್ಟುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











