Weekend with Ramesh 5: ಸುಧಾ ಬರಗೂರು ಪತಿಯ ಜೀವ ಉಳಿಸಿದ್ದೇ ಡಾ.ಮಂಜುನಾಥ್.. ಏನದು ಘಟನೆ?
ಜಯದೇವ ಹೃದ್ರೋಗ ಆಸ್ಪತ್ರೆಯ ಡಾ.ಮಂಜುನಾಥ್ ಅದೆಷ್ಟೋ ಜೀವಗಳಿಗೆ ಮರುಜೀವ ಕೊಟ್ಟವರು. ಈಗಲೂ ಅದೆಷ್ಟೋ ಮನೆಯಲ್ಲಿ ಇವರಿಗೆ ದೇವರ ಸ್ಥಾನ ನೀಡಿದ್ದಾರೆ. ಮನುಷ್ಯ ಎಲ್ಲರಿಗೂ ಆ ಸ್ಥಾನ ನೀಡುವುದಿಲ್ಲ. ಹಾಗೇ ಆ ಸ್ಥಾನ ಪಡೆಯುವವರ ಸಂಖ್ಯೆ ಕೂಡ ತೀರಾ ಕಡಿಮೆ. ಡಾ.ಮಂಜುನಾಥ್ ಸಾವಿರಾರು ಮಂದಿಯ ಪ್ರಾಣಗಳನ್ನು ಉಳಿಸಿ, ಇಂದು ಹಲವರ ಪಾಲಿಗೆ ದೇವರಾಗಿದ್ದಾರೆ.
ಡಾ. ಮಂಜುನಾಥ್ ಅವರ ಈ ನಿಸ್ವಾರ್ಥ ಸೇವೆಯ ಬಗ್ಗೆ ಈಗಾಗಲೇ ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಅದು ಅಲ್ಪಸ್ವಲ್ಪವಷ್ಟೇ ಗೊತ್ತಿತ್ತು. ಈಗ ವೀಕೆಂಡ್ ವಿತ್ ರಮೇಶ್ ಎಪಿಸೋಡಿನಲ್ಲಿ ಎಲ್ಲವೂ ತಿಳಿಯುವಂತೆ ಆಗಿದೆ. ಇಡೀ ಕರ್ನಾಟಕದ ಮಂದಿ ಡಾ.ಮಂಜುನಾಥ್ ಅವರ ಎಪಿಸೋಡಿಗೆ ಫಿದಾ ಆಗಿದ್ದಾರೆ.

ಸುಧಾ ಬರಗೂರ್ ಪತಿಯ ಪ್ರಾಣ ಉಳಿಸಿದ್ದು ಡಾ.ಮಂಜುನಾಥ್
ಸುಧಾ ಬರಗೂರು ಎಲ್ಲರಿಗೂ ಪರಿಚಿತವಿರುವವರು. ಮಾತಿನ ಕಟ್ಟೆಯಲ್ಲಿ ಕೂತರೆ ಅವರ ಹಾಸ್ಯದಿಂದಾನೇ ಅದೆಷ್ಟೋ ಮನಸ್ಸುಗಳು ನಕ್ಕು ನಕ್ಕು ತಣ್ಣಗಾಗುತ್ತವೆ. ಆದರೆ, ಸದಾ ನಗಿಸುವ ಸುಧಾ ಬರಗೂರು ಜೀವನದಲ್ಲೂ ಅಳುವ ಸನ್ನಿವೇಶಗಳು ಬಂದಿದ್ದವು. ಸುಧಾ ಬರಗೂರು ಅವರ ಪತಿ ಜಯಪ್ರಕಾಶ್ ಬರಗೂರು ಅವರ ಹಾರ್ಟ್ನಲ್ಲಿ ಸಮಸ್ಯೆ ಇದ್ದಂತಹ ದಿನ. ಆ ವೇಳೆ ಸುಧಾ ಬರಗೂರು ಅವರ ಪತಿಗೆ ಯಾವುದೇ ತೊಂದರೆಯಾಗದಂತೆ ಕಾಪಾಡಿದ್ದು ಇದೇ ಡಾ. ಮಂಜುನಾಥ್.
'ವೀಕೆಂಡ್ ವಿತ್ ರಮೇಶ್' ಸೀಸನ್ 5ರಲ್ಲಿ ಶನಿವಾರದ ಅತಿಥಿಯಾಗಿ ಡಾ.ಮಂಜುನಾಥ್ ಬಂದಿದ್ದರು. ಈ ವೇಳೆ ಸುಧಾ ಬರಗೂರು ಅವರನ್ನು ಕರೆಸಲಾಗಿತ್ತು. ಅಲ್ಲಿ ನಡೆದ ಸತ್ಯವನ್ನೆಲ್ಲಾ ತಿಳಿಸಿದ್ದಾರೆ. "ನಾನು ಇವತ್ತೇನಾದರೂ ಚೆನ್ನಾಗಿದ್ದರೆ ಅದರ ಮೊದಲ ಕ್ರೆಡಿಟ್ ಡಾಕ್ಟರ್ಗೆ ಎರಡನೇ ಕ್ರೆಡಿಟ್ ನನ್ನ ಗಂಡನಿಗೆ. ನಾನು ನಗಿಸೋದನ್ನ ಕರ್ನಾಟಕ ಜನತೆ ನೋಡಿದ್ದಾರೆ. ಆದರೆ ಅಳುವ ಸುಧಾರನ್ನ ನೋಡಿ, ಕಣ್ಣೀರು ಒರೆಸುವ ಕೆಲಸ ಮಾಡಿದ್ದರೆ ಅದು ಇವರೇ" ಎಂದು ಡಾ.ಮಂಜುನಾಥ್ ಬಗ್ಗೆ ಗೌರವ ಪೂರ್ವಕವಾಗಿ ಮಾತನಾಡಿದ್ದಾರೆ.
"ಇವರು ಧರ್ಮಸ್ಥಳ ಮಂಜುನಾಥಸ್ವಾಮಿ"
"ಡಾ.ಮಂಜುನಾಥ್ ಅಭಿಮಾನಿ ಸಂಘದ ಅಜೀವ ಸದಸ್ಯೆ ನಾನು. ನನ್ನ ಗಂಡನಿಗೆ ಹಾರ್ಟ್ ಪ್ರಾಬ್ಲಮ್. ಹೌದು, ನನ್ನಂತಹ ಬಾಯಾಳಿನ ಮದುವೆ ಆದ್ಮೇಲೆ ಹಾರ್ಟ್ ಪ್ರಾಬ್ಲಮ್ ಬರಲೇಬೇಕು.15-16 ವರ್ಷದ ಹಿಂದೆ. ನಂಜನಗೂಡು ದೇವಸ್ಥಾನದಲ್ಲಿ ಇವರು ಬಿದ್ದು ಹೋದ್ರು. ತಕ್ಷಣ ಮಂಜುನಾಥ್ ಸರ್ಗೆ ಕರೆ ಮಾಡಿ, ಯಜಮಾನ್ರು ಹೀಗೆ ಬಿದ್ದು ಹೋದ್ರು ಅಂದೆ. ಕರೆದುಕೊಂಡು ಬನ್ನಿ ಅಂದ್ರು. ಕೇವಲ ಹದಿನೈದು ನಿಮಿಷದಲ್ಲಿಯೇ ಐಸಿಯೂ ವಾರ್ಡ್ನಲ್ಲಿ ಎಲ್ಲಾ ರೆಡಿಯಾಗಿತ್ತು. ನಾನು ಕಲಾವಿದೆ ಅಂತಲ್ಲ, ಮಂಜುನಾಥ್ ಸರ್ ಹೇಳಿದ್ರು ಅನ್ನೋ ಕಾರಣಕ್ಕೆ."

"ಡಾಕ್ಟರ್ಗೂ ದೇವರಿಗೂ ಕೋಪ ಬರಿಸಬಾರದು. ಯಾಕಂದ್ರೆ, ದೇವರಿಗೆ ಕೋಪ ಬಂದ್ರೆ ಡಾಕ್ಟರ್ ಬಳಿ ಕಳಿಸ್ತಾನೆ. ಡಾಕ್ಟರ್ಗೆ ಕೋಪ ಬಂದ್ರೆ ದೇವರ ಬಳಿಯೇ ಕಳುಹಿಸಿ ಬಿಡ್ತಾರೆ. ಶ್ರೀಕ್ಷೇತ್ರ ಧರ್ಮಸ್ಥಳ ದೂರ ಅಲ್ವಾ. ಅದಕ್ಕೆ ಆಗಾಗ ಇಲ್ಲೆ ಇರುವ ಮಂಜುನಾಥ ಸ್ವಾಮಿ ದರ್ಶನ ಮಾಡಿಕೊಂಡು ಬಂದರೆ ನಮ್ಮಮನೆ ಸ್ವಾಮಿ ಖುಷಿಯಾಗಿ ಇರುತ್ತಾರೆ. ಇದು ನನ್ನ ವೈಯಕ್ತಿಕ ಅನುಭವ" ಎಂದು ಡಾ.ಮಂಜುನಾಥ್ ಬಗ್ಗೆ ಸುಧಾ ಬರಗೂರು ಹೇಳಿದ್ದಾರೆ.


Click it and Unblock the Notifications











