ಛೇ.. 5 ಸೀಸನ್ ಮುಗಿದರೂ ವೀಕೆಂಡ್ ಶೋಗೆ ಆ ಸಾಧಕ ಮಾತ್ರ ಬರಲೇಯಿಲ್ಲ.. ಇದೆಂಥ ವಿಪರ್ಯಾಸ?
ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ ವೀಕೆಂಡ್ ವಿತ್ ರಮೇಶ್ - 5ನೇ ಸೀಸನ್ ಕೂಡ ಈ ವಾರ ಮುಕ್ತಾಯವಾಗ್ತಿದೆ. ಉಪಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ಈ ಸೀಸನ್ನ ಗ್ರ್ಯಾಂಡ್ ಫಿನಾಲೆ ಎಪಿಸೋಡ್ ಅತಿಥಿಯಾಗಿ ಭಾಗಿ ಆಗಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿದಿದ್ದು ಪ್ರೋಮೊಗಳು ರಿಲೀಸ್ ಆಗಿ ಸದ್ದು ಮಾಡ್ತಿದೆ. ಈ ವಾರಾಂತ್ಯದಲ್ಲಿ ಕಾರ್ಯಕ್ರಮ ಪ್ರಸಾರವಾಗಲಿದೆ.
ಮಾರ್ಚ್ 25ರಂದು ಈ ಸೀಸನ್ನ ಮೊದಲ ಎಪಿಸೋಡ್ ಆರಂಭವಾಗಿತ್ತು. ಇದೀಗ ಸೀಸನ್ ಅಂತಿಮ ಹಂತ ತಲುಪಿದೆ. 19 ಸಂಚಿಕೆಗಳಲ್ಲಿ 15 ಸಾಧಕರ ಸಾಧನೆಯ ಕಥೆಯನ್ನು ನಟ ರಮೇಶ್ ಅರವಿಂದ್ ಅನಾವರಣ ಮಾಡಿದ್ದಾರೆ. ರಮ್ಯಾ, ಧನಂಜಯ್ ಸೇರಿದಂತೆ ಖ್ಯಾತನಾಮರು ತಮ್ಮ ಜೀವನವನ್ನು ಒಮ್ಮೆ ರಿವೈಂಡ್ ಮಾಡಿ ನೋಡಿದ್ದಾರೆ. ಈ ಸೀಸನ್ನ 16ನೇ ಸಾಧಕರಾಗಿ ಸಾಧಕರ ಸೀಟ್ನಲ್ಲಿ ಡಿಸಿಎಂ ಡಿಕೆಶಿ ಕೂತಿದ್ದಾರೆ.

2014ರಲ್ಲಿ ಜೀ ಕನ್ನಡ ವಾಹಿನಿ ಈ ಶೋ ಆರಂಭಿಸಿತ್ತು. ಮೊದಲ ಅತಿಥಿಯಾಗಿ ಪುನೀತ್ ರಾಜ್ಕುಮಾರ್ ವೀಕೆಂಡ್ ಶೋನಲ್ಲಿ ಭಾಗಿ ಆಗಿದ್ದರು. ಅಲ್ಲಿಂದ ಇಲ್ಲಿಯವರೆಗೆ ಈ ವರ್ಷಗಳಲ್ಲಿ 5 ಸೀಸನ್ಗಳಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಕರೆಸಲಾಗಿತ್ತು. ಅವರ ಪ್ರೇರಣದಾಯಕ ಬದುಕಿನ ಪುಟಗಳನ್ನು ಮತ್ತೊಮ್ಮೆ ತಿರುವು ಹಾಕಲಾಗಿತ್ತು. ಕಾರ್ಯಕ್ರಮಕ್ಕೆ ದೊಡ್ಡ ಅಭಿಮಾನಿ ಬಳಗ ಕೂಡ ಇದೆ.

ಹಂಸಲೇಖ ಬರಲೇಯಿಲ್ಲ
ಚಿತ್ರರಂಗದ ಬಹುತೇಕ ಸಾಧಕರನ್ನು ಸಾಧಕರ ಸೀಟ್ನಲ್ಲಿ ವೀಕ್ಷಕರು ನೋಡುವ ಅವಕಾಶ ಸಿಕ್ಕಿದೆ. ಕೆಲವರನ್ನು ಯಾಕೆ ಕರೆಸಿಲ್ಲಾ? ಕೆಲವರನ್ನು ಕರೆಸಿದ್ದು ಯಾಕೆ? ಎನ್ನುವ ಚರ್ಚೆ ನಡೆಸಿದ್ದು ಸುಳ್ಳಲ್ಲ. ಅದೆಲ್ಲವನ್ನು ಮೀರಿ ಕಾರ್ಯಕ್ರಮ ಯಶಸ್ವಿಯಾಗಿದೆ. ಆದರೆ ಸಾಧಕರ ಕೆಂಪು ಸೀಟ್ನಲ್ಲಿ ಕನ್ನಡ ಚಿತ್ರರಂಗ ನಾದಬ್ರಹ್ಮ ಹಂಸಲೇಖ ಮಾತ್ರ ಕಾಣಿಸಿಕೊಳ್ಳಲೇಯಿಲ್ಲ. 5 ಸೀಸನ್ಗಳಲ್ಲಿ ಪ್ರಯತ್ನ ನಡೆಸಿದರೂ ಪ್ರಯೋಜನವಾಗಲಿಲ್ಲ.
ನಾದಬ್ರಹ್ಮ ಯಾಕೆ ಬರ್ಲಿಲ್ಲ?
ನಿಜಕ್ಕೂ ಸಾಕಷ್ಟು ವೀಕ್ಷಕರಿಗೆ ಹೀಗೊಂದು ಪ್ರಶ್ನೆ ಇದೆ. ಏಳೆಂಟು ಸಿನಿಮಾಗಳಲ್ಲಿ ನಟಿಸಿರುವವರು ಕಾರ್ಯಕ್ರಮಕ್ಕೆ ಅತಿಥಿಯಾಗಿ ಕರೆಸಿದ್ದರು. ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿರುವ ಹಂಸಲೇಖ ಅವರನ್ನು ಇಷ್ಟು ಸೀಸನ್ಗಳಲ್ಲಿ ಯಾಕೆ ಕರೆಸಲಿಲ್ಲ ಎನ್ನುವ ಅನುಮಾನ ಕೆಲವರನ್ನು ಕಾಡುತ್ತಿದೆ. ಸರಿಗಮಪ ಶೋ ಮಹಾಗುರುವಾಗಿ ಹಂಸಲೇಖ ಜೀ ಕುಟುಂಬದ ಸದಸ್ಯರೇ ಆಗಿಬಿಟ್ಟಿದ್ದಾರೆ. ಆದಾಗ್ಯೂ ಅವರನ್ನು ವಾಹಿನಿ ಯಾಕೆ ಸಾಧಕರ ಸೀಟ್ನಲ್ಲಿ ಕೂರಿಸೋಕೆ ಸಾಧ್ಯವಾಗಲಿಲ್ಲ ಎಂದು ಕೇಳುತ್ತಿದ್ದಾರೆ.
100 ಅತಿಥಿ ಆಗಲಿಲ್ಲ!
3 ವಾರಗಳ ಹಿಂದೆ ಗೀತ ಸಾಹಿತಿ ವಿ. ನಾಗೇಂದ್ರ ಪ್ರಸಾದ್ ಅತಿಥಿಯಾಗಿ ಸಾಧಕರ ಸೀಟ್ನಲ್ಲಿ ಕೂತಿದ್ದರು. ಆಗ ಫೋನ್ ಮಾಡಿ ಹಂಸಲೇಖ ಮಾತನಾಡಿದ್ದರು. ಈ ವೇಳೆ ನೀವು ಶೋಗೆ ಬರಬೇಕು ಸರ್ ಎಂದು ರಮೇಶ್ ಅರವಿಂದ್ ಕೇಳಿದ್ದರು. ಬಹಳ ದಿನಗಳಿಂದ ಕರೆಯುತ್ತಿದ್ದೇವೆ. ನೀವು ಬರುತ್ತಿಲ್ಲ ಎಂದಿದ್ದರು. ಖಂಡಿತ ಬರ್ತೀನಿ ಎಂದು ನಾದಬ್ರಹ್ಮ ಹೇಳಿದ್ದರು. 100 ಅತಿಥಿಯಾಗಿ ಹಂಸಲೇಖ ಬರುವ ನಿರೀಕ್ಷೆಇತ್ತು. ಆದರೆ ಈ ವಾರವೇ ಸೀಸನ್ ಮುಕ್ತಾಯವಾಗ್ತಿದೆ.
ಹಂಸಲೇಖ ಬಗ್ಗೆ ಸ್ಪೆಷಲ್ ಶೋ
ಸಂಗೀತ ಕ್ಷೇತ್ರಕ್ಕೆ ಹಂಸಲೇಖ ಕೊಡುಗೆ ಅಪಾರ. ಅದರಲ್ಲೂ ಕನ್ನಡ ಸಿನಿಮಾಗಳಲ್ಲಿ ಸಂಗೀತ, ಸಾಹಿತ್ಯಕ್ಕೆ ಹೊಸ ಸ್ಪರ್ಶ ನೀಡಿದ ನಾದಬ್ರಹ್ಮನನ್ನು ಕೊಂಡಾಡವರಿಲ್ಲ. ಜೀ ವಾಹಿನಿ ಬಹಳ ದಿನಗಳಿಂದ ಹಂಸಲೇಖ ಅವರನ್ನು ಕೇಂದ್ರವಾಗಿಟ್ಟುಕೊಂಡು ಒಂದು ಕಾರ್ಯಕ್ರಮ ಪ್ಲ್ಯಾನ್ ಮಾಡುತ್ತಿರುವುದಾಗಿ ಹೇಳಲಾಗ್ತಿದೆ. ಅದೇ ಕಾರಣಕ್ಕೆ ಅವರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಬರ್ತಿಲ್ಲ ಅನ್ನುವ ಊಹಾಪೋಹ ಕೂಡ ಇದೆ.


Click it and Unblock the Notifications











