ಬಂಗಾರಪೇಟೆ ಬಂಗಾರದ ಮನುಷ್ಯ ಅಫ್ಸರ್ ಪಾಷಾ
ಈ ಸಲದ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮ ಕೆಲವು ಅಪರೂಪದ ಸಾಧಕರನ್ನು ಪರಿಚಯಿಸಿತು. ತ್ಯಾಗ ಬಲಿದಾನದ ಪ್ರತೀಕವಾದ ಬಕ್ರೀದ್ ನೆನಪಲ್ಲಿ ಮುಸ್ಲಿಂ ಬಾಂಧವ ಸಾಧಕರ ಕಥೆಯನ್ನು ಜೀ ಕನ್ನಡ ವಾಹಿನಿ ತೆರೆದಿಟ್ಟಿತು.
ಹುಟ್ಟ್ಟಿದ್ದು ಕಿತ್ತು ತಿನ್ನುವ ಬಡತನದಲ್ಲಾದರೂ ಮುಂದೆ ಅವರು ಬಡಬಗ್ಗರಿಗೆ ಊಟ ಹಾಕುವ ಧರ್ಮರಾಯ ಆಗುತ್ತಾರೆ. ಓದಿದ್ದು ಬರಿ ಒಂಬತ್ತನೇ ಕ್ಲಾಸು. ಆದರೆ ಬಡ ವಿದ್ಯಾರ್ಥಿಗಳಿಗೆ ಸ್ಕೂಲ್ ಕಟ್ಟಿಸುತ್ತಾರೆ. ಚಿಕ್ಕಂದಿನಲ್ಲಿ ಅಮ್ಮನನ್ನು ಕಳೆದುಕೊಂಡ ಇವರು ಮುಂದೆ ಅದೆಷ್ಟೋ ಮಂದಿ ಅನಾಥರಿಗೆ ತಾಯಿ ಪ್ರೀತಿ ತೋರಿಸುತ್ತಾರೆ.
ಬಡವರಿಗಾಗಿ ಛತ್ರ ಕಟ್ತಾರೆ, ತಾವೇ ಮುಂದೆ ನಿಂತು ಮದುವೆ ಮಾಡಿಸುತ್ತಾರೆ. ಚಳಿಯಲ್ಲಿ ಮಲಗಿದವರಿಗೆ ಕಂಬಳಿ ಕೊಡ್ತಾರೆ. ಆದರೆ ತಾವು ಮಾಡಿದ ಸಹಾಯವನ್ನು ಮಾತ್ರ ಇವರು ಸದ್ದಿಲ್ಲದಂತೆ ಮಾಡಿ ಮುಗಿಸುತ್ತಾರೆ. ಇವರ ಹೆಸರು ಮಿಸ್ಟರ್ ಸಯ್ಯದ್ ಅಫ್ಸರ್ ಪಾಷಾ.

ಸಿಂಪಲ್ ಮನುಷ್ಯ ಮಿಸ್ಟರ್ ಸಯ್ಯದ್ ಅಫ್ಸರ್ ಪಾಷಾ
ಬಲಗೈಲಿ ಮಾಡಿದ್ದು ಎಡಗೈಗೆ ಗೊತ್ತಾಗಬಾರದು ಎಂಬುದು ಇವರ ಕೆಲಸ. ಸಿಂಪಲ್ ಮನುಷ್ಯ. ಕೋಲಾರ ಜಿಲ್ಲೆಯ ಬಂಗಾರಪೇಟೆಯವರು. ಓದಿದ್ದು ಬೆಳೆದದ್ದು ಎಲ್ಲಾ ಬಂಗಾರಪೇಟೆಯಲ್ಲೇ. ಇವರು ಒಂಥರಾ ಕೋಲಾರದ ಬಂಗಾರದ ಮನುಷ್ಯ.

ಚಿಕ್ಕಂದಿನಲ್ಲೇ ತಾಯಿ ಕಳೆದುಕೊಂಡ ನತದೃಷ್ಟ
ಜೀವನದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ಕಾರ್ಯಕ್ರಮಕ್ಕೆ ಬಂದವರು. ಐದು ವರ್ಷದಲ್ಲೇ ಇರಬೇಕಾದರೆ ತಾಯಿಯನ್ನು ಕಳೆದುಕೊಂಡೆ. ನಮ್ಮ ತಂದೆ ಮಟನ್ ವ್ಯಾಪಾರ ಮಾಡ್ತಿದ್ದರು ಎಂದು ಇವರು ಹೇಳುತ್ತಾ ತಮ್ಮ ಕಥೆಯನ್ನು ಬಿಚ್ಚಿಟ್ಟರು.

ಎಲ್ಲಾ ಜಾತಿ ಧರ್ಮಗಳನ್ನು ಮೀರಿದ ನಿಸ್ವಾರ್ಥ ಸೇವೆ
ಬಂಗಾರಪೇಟೆಯಲ್ಲಿ ಮುಬಾರಕ್ ಹೋಟೆಲ್ ನಡೆಸುತ್ತಿದ್ದಾರೆ. ಹಬ್ಬ ಎಂದರೆ ಯಾರಾದರೂ ಆಗಲಿ ಹಿಂದೂ ಮುಸ್ಲಿಂ ಎಂಬ ಭೇದಭಾವ ಇಲ್ಲ. ಎಲ್ಲಾ ಜಾತಿ, ಧರ್ಮಗಳನ್ನು ಮೀರಿದ್ದ ನಿಸ್ವಾರ್ಥ ಸೇವೆ ಇವರದು. ಎಲ್ಲರಿಗೂ ಇವರ ಕೊಡುಗೆ ಇದ್ದದ್ದೇ.

ಜೀವನ ಇರುವುದೇ ಬೇರೊಬ್ಬರಿಗಾಗಿ
"ನಮ್ಮ ಜೊತೆಗೆ ಕೆಲಸ ಮಾಡುವವರನ್ನು ಮಕ್ಕಳಂತೆ ಅಲ್ಲದಿದ್ದರೂ ಸ್ನೇಹಿತರಂತೆ ಕಾಣುತ್ತೇನೆ" ಎನ್ನುತ್ತಾರೆ ಅಪ್ಸರ್ ಪಾಷಾ. ಅವರಿಗೆ ಕನ್ನಡ ಅಷ್ಟು ಸ್ಪಷ್ಟವಾಗಿ ಬಾರದಿದ್ದರೂ ಅವರ ಒಡಲನುಡಿ ಮಾತ್ರ ತಮ್ಮ ಜೀವನ ಇರುವುದು ಬೇರೊಬ್ಬರಿಗೆ ಸಹಾಯ ಮಾಡಲು ಎನ್ನುತ್ತದೆ.

ಗಳಿಸುವ ಅರ್ಧದಷ್ಟು ಹಣವನ್ನು ದಾನ
ಇದುವರೆಗೂ ಏಳು ನೂರು ಎಂಟನೂರು ಮದುವೆಗಳನ್ನು ಮಾಡಿಸಿದ್ದಾರೆ. ಎಲ್ಲವೂ ಉಚಿತವಾಗಿ ಮಾಡಿರುವುದು ವಿಶೇಷ. ಇವರು ಮೊಬೈಲ್ ಫೋನ್ ಬಳಸಲ್ಲ. ತಾನು ಗಳಿಸುವ ಅರ್ಧದಷ್ಟು ಹಣವನ್ನು ದಾನ ಮಾಡುತ್ತಾ ಬಂದಿದ್ದಾರೆ. ಅದೆಷ್ಟೋ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಊಟ ಹಾಕುತ್ತಾರೆ.

ಅಣ್ಣಾವ್ರ ಹಾಡು ಇವರಿಗೆ ಸ್ಫೂರ್ತಿ
ಓದಲು ಕಾಸಿಲ್ಲ ಎಂದು ಇವರ ಬಳಿ ಬಂದವರಿಗೆ ಜೇಬಲ್ಲಿ ಎಷ್ಟಿರುತ್ತದೋ ಅಷ್ಟೂ ಎತ್ತಿ ಕೊಡುವಷ್ಟು ದೊಡ್ಡ ಮನಸ್ಸು. ಅಣ್ಣಾವ್ರ "ಹೋಗುವಾಗ ಬೆತ್ತಲೆ ಬರುವಾಗ ಬೆತ್ತಲೆ ನಡುವೆ ಕತ್ತಲೆ...ಮಾನವ ಮೂಳೆ ಮಾಂಸದ ತಡಿಕೆ..." ಹಾಡು ಅವರಿಗೆ ತುಂಬಾ ಇಷ್ಟವಾದ ಹಾಡುಗಳಲ್ಲಿ ಒಂದು.

ಸುದ್ದಿಗಾಗಿ ಸೇವೆ ಮಾಡದ ಅಫ್ಸರ್
ಸುದ್ದಿಗಾಗಿ ಸೇವೆ ಮಾಡಬೇಡ, ಸೇವೆ ಮಾಡಿ ಸದ್ದು ಮಾಡಬೇಡ, ಸದ್ದಿಲ್ಲದೆ ಸೇವೆ ಮಾಡು ಎಂಬ ಮದರ್ ತೆರೆಸಾ ಅವರ ಮಾತುಗಳಿಗೆ ಇವರು ಜೀವಂತ ಸಾಕ್ಷಿ ಎನ್ನಬಹುದು. ಈ ಬಾರಿ ಅವರು "ಬ್ರೂ ವಾಲ್ ಆಫ್ ಫ್ರೇಮ್" ಸೇರಿದರು. ಸದಾ ಸೆಲೆಬ್ರಿಟಿಗಳನ್ನೇ ಹಾಟ್ ಸೀಟಿನಲ್ಲಿ ಕೂರಿಸುತ್ತಿದ್ದ ಜೀ ಕನ್ನಡ ವಾಹಿನಿ ಈ ಬಾರಿ ಎಲೆಮರೆಯಕಾಯಿಗಳಂತಿರುವ ಸಾಮಾನ್ಯರನ್ನು ತಂದು ಕೂರಿಸಿದ್ದು ವಿಶೇಷ.


Click it and Unblock the Notifications











