Weekend with Ramesh season 5: ಈ ಶನಿವಾರ ಸಾಧಕರ ಸೀಟ್ನಲ್ಲಿ ಕೂರುವ ವ್ಯಕ್ತಿ ಯಾರು?
ಈಗಾಗಲೇ ವೀಕೆಂಡ್ ವಿತ್ ರಮೇಶ್ ಶೋನಲ್ಲಿ 90ಕ್ಕೂ ಅಧಿಕ ಸಾಧಕರ ಸ್ಪೂರ್ತಿದಾಯಕ ಜೀವನ ಚರಿತ್ರೆಯನ್ನು ಅನಾವರಣ ಮಾಡಲಾಗಿದೆ. ಸಿನಿಮಾ ಮಾತ್ರವಲ್ಲದೇ ಇತರೆ ಕ್ಷೇತ್ರಗಳ ಸಾಧಕರು ಕೂಡ ಸಾಧಕರ ಸೀಟ್ನಲ್ಲಿ ಕೂತಿದ್ದಾರೆ. ನಕ್ಕಿದ್ದಾರೆ, ನಗಿಸಿದ್ದಾರೆ, ಅತ್ತಿದ್ದಾರೆ, ಜೀವನ ಪಾಠ ಹೇಳಿದ್ದಾರೆ, ಸ್ಫೂರ್ತಿ ತುಂಬಿದ್ದಾರೆ. ಹಳೆಯದನ್ನು ನೆನೆದು ಮಂತ್ರಮುಗ್ಧರಾಗಿದ್ದಾರೆ. ಈ ವಾರ ಮತ್ತೊಬ್ಬ ಅತಿಥಿಯ ಆಗಮನವಾಗುತ್ತಿದೆ.
ಹಾಡುಗಳಿಲ್ಲದೇ ಭಾರತೀಯ ಸಿನಿಮಾಗಳನ್ನು ಊಹಿಸಿಕೊಳ್ಳೋದು ಕಷ್ಟ. ಕನ್ನಡ ಚಿತ್ರರಂಗ ಕೂಡ ಇದಕ್ಕೆ ಹೊರತಲ್ಲ. ಆಗೊಮ್ಮೆ ಈಗೊಮ್ಮೆ ಹಾಡುಗಳಿಲ್ಲದ ಸಿನಿಮಾಗಳು ಬರುತ್ತವೆ. ಆದರೆ ಬಹುತೇಕ ಸಿನಿಮಾಗಳಲ್ಲಿ ಮೂರ್ನಾಲ್ಕು ಹಾಡುಗಳು ಇದ್ದೇ ಇರುತ್ತವೆ. ಈ ಹಾಡುಗಳಿಗೆ ಸಂಗೀತ ಎಷ್ಟು ಮುಖ್ಯವೋ, ಸಾಹಿತ್ಯವೂ ಅಷ್ಟೇ ಮುಖ್ಯ. ಸನ್ನಿವೇಶಕ್ಕೆ ತಕ್ಕಂತೆ, ತಾಳಕ್ಕೆ ಸರಿಯಾಗಿ ಪ್ರಾಸ ಸೇರಿದಿ ಹಾಡುಗಳನ್ನು ಬರೆಯುವುದು ಸವಾಲಿನ ಕೆಲಸ. ಈ ಸವಾಲಿನಲ್ಲಿ ಗೆಲ್ಲುತ್ತಾ ಬರುತ್ತಿರುವ ಸಾಧಕರೊಬ್ಬರು ಈ ವಾರ ವೀಕೆಂಡ್ ಶೋಗೆ ಬರ್ತಿದ್ದಾರೆ.

ಹೌದು ಈ ವಾರ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಕನ್ನಡ ಚಿತ್ರರಂಗದ ಜನಪ್ರಿಯ ಚಿತ್ರ ಸಾಹಿತಿ ವಿ. ನಾಗೇಂದ್ರ ಪ್ರಸಾದ್ ಬರ್ತಿದ್ದಾರೆ. ನೂರಾರು ಹಾಡುಗಳನ್ನು ಬರೆದು ಗೆದ್ದಿರುವ ನಾಗಿ ಬೆರಳೆಣಿಯ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ತಮ್ಮ ವೃತ್ತಿ ಜೀವನದ ಏಳುಬೀಳಿನ ಕತೆಯನ್ನು ಕೇಳಿ ಅವರು ಭಾವುಕರಾಗಿದ್ದಾರೆ. ಈಗಾಗಲೇ ಕಾರ್ಯಕ್ರಮದ ಪ್ರೋಮೊ ಕೂಡ ರಿಲೀಸ್ ಆಗಿ ವೈರಲ್ ಆಗ್ತಿದೆ. ಶನಿವಾರ ರಾತ್ರಿ 9 ಗಂಟೆಗೆ ರಮೇಶ್, ವಿ. ನಾಗೇಂದ್ರ ಪ್ರಸಾದ್ ಜೊತೆ ವೀಕೆಂಡ್ನಲ್ಲಿ ಸಿಗಲಿದ್ದಾರೆ.

"ಸಾವಿರಾರು ಕವಿತೆಗಳನ್ನು, ಚಲನಚಿತ್ರ ಹಾಡುಗಳನ್ನು ಬರೆದ ಕನ್ನಡ ನಾಡಿನ ಹೆಮ್ಮೆಯ ಸಾಹಿತಿ ಡಾ. ನಾಗೇಂದ್ರ ಪ್ರಸಾದ್ರವರು ಈ ವಾರದ ನಮ್ಮ ವೀಕೆಂಡ್ ಅತಿಥಿ" ಎಂದು ಬರೆದು ಜೀ ವಾಹಿನಿ ಪ್ರೋಮೊ ಶೇರ್ ಮಾಡಿದೆ. ಸಂಗೀತ ನಿರ್ದೇಶಕರಾದ ವಿ. ಹರಿಕೃಷ್ಣ, ಅನೂಪ್ ಸಿಳೀನ್ ಸೇರಿದಂತೆ ಹಲವರು ಕಾರ್ಯಕ್ರಮಕ್ಕೆ ಆಗಮಿಸಿ ವಿ. ನಾಗೇಂದ್ರ ಪ್ರಸಾದ್ ಅವರ ಬಗ್ಗೆ ಮಾತನಾಡಿದ್ದಾರೆ. ಸಂತೋಷ್ ವೆಂಕಿ, ವಾಣಿ ಹರಿಕೃಷ್ಣ ಸೇರಿದಂತೆ ಗಾಯಕರು ಬಂದು ಹಾಡಿನ ಗೌರವ ಸಲ್ಲಿಸಿದ್ದಾರೆ.
ನಾದಬ್ರಹ್ಮ ಹಂಸಲೇಖ ವಿಡಿಯೋ ಬೈಟ್ ಕಳುಹಿಸಿಕೊಟ್ಟಿದ್ದಾರೆ. "ನಾನು ಕೂರಬೇಕಾದ ಸೀಟಲ್ಲಿ ನಾಗೇಂದ್ರ ಪ್ರಸಾದ್ ಕೂತ್ಕೊಳ್ಬೇಕು, ಅನ್ನೋದು ನನ್ನ ಆಸೆ" ಎಂದು ಅವರು ಹೇಳಿದ್ದಾರೆ. ಈ ಮಾತನ್ನು ಕೇಳಿ ವಿ. ನಾಗೇಂದ್ರ ಪ್ರಸಾದ್ ಭಾವುಕರಾಗಿದ್ದಾರೆ. ಇನ್ನು ಅವರ ಸಾಧನೆ ಬಗ್ಗೆ ಹೇಳುವುದಾದರೆ 1000ಕ್ಕೂ ಅಧಿಕ ಸಿನಿಮಾಗಳಿಗೆ 3000 ಕ್ಕೂ ಅಧಿಕ ಗೀತೆಗಳನ್ನು ಬರೆದಿದ್ದಾರೆ. ಇದರಲ್ಲಿ ಭಕ್ತಿ ಗೀತೆಗಳು, ದೇಶಭಕ್ತಿ ಗೀತೆಗಳು, ಧಾರಾವಾಹಿ ಟೈಟಲ್ ಗೀತೆಗಳು ಸೇರಿವೆ. ಖ್ಯಾತ ಸಂಗೀತ ನಿರ್ದೇಶಕರ ಟ್ಯೂನ್ಗಳಿಗೆ ಸಾಹಿತ್ಯ ಪೋಣಿಸಿದ್ದಾರೆ.
ಇಳಯರಾಜಾ, ಹಂಸಲೇಖ, ರಾಜನ್ ನಾಗೇಂದ್ರ, ಉಪೇಂದ್ರ ಕುಮಾರ್, ಸಾಧು ಕೋಕಿಲ, ಗುರುಕಿರಣ್, ವಿ. ಹರಿಕೃಷ್ಣ, ಅರ್ಜುನ್ ಜನ್ಯಾ ಸೇರಿದಂತೆ ಕನ್ನಡ ಬಹುತೇಕ ಎಲ್ಲಾ ಸಂಗೀತ ನಿರ್ದೇಶಕರ ಜೊತೆಗೂ ಕೆಲಸ ಮಾಡಿದ್ದಾರೆ. ಕೇವಲ ನಾಲ್ಕೈದು ನಿಮಿಷಗಳಲ್ಲಿ ಹಾಡುಗಳನ್ನು ಬರೆದ ಉದಾಹರಣೆ ಕೂಡ ಇದೆ. ಸಿನಿಮಾಗಳಲ್ಲಿ ಹೀರೊ ಇಂಟ್ರೊಡಕ್ಷನ್, ಮಾಸ್ ಸಾಂಗ್ಸ್ ಬರೆಯುವುದರಲ್ಲಿ ಎತ್ತಿದ ಕೈ. ಅದೇ ರೀತಿ ರೊಮ್ಯಾಂಟಿಕ್ ಸಾಂಗ್ಗಳನ್ನು ಬರೆದು ಸಕ್ಸಸ್ ಕಂಡಿದ್ದಾರೆ.
'ಮೆಜೆಸ್ಟಿಕ್', 'ಎಕ್ಸ್ಕ್ಯೂಸ್ಮಿ', 'ಸ್ವಾತಿಮುತ್ತು', 'ರಂಗ ಎಸ್ಎಸ್ಎಲ್ಸಿ', 'ಜೊತೆ ಜೊತೆಯಲಿ', 'ನವಗ್ರಹ', 'ಸಾರಥಿ', 'ಕುರುಕ್ಷೇತ್ರ' ಸೇರಿದಂತೆ ಹಲವು ಸಿನಿಮಾಗಳಿಗೆ ಎಲ್ಲಾ ಹಾಡುಗಳನ್ನು ತಾವೊಬ್ಬರೇ ಬರೆದಿದ್ದಾರೆ. ಇನ್ನು ಕೆಲ ಸಿನಿಮಾಗಳಿಗೆ ಸಂಗೀತ, ಸಂಭಾಷಣೆ ಕೂಡ ಒದಗಿಸಿದ್ದಾರೆ. ರಾಜ್ಯಪ್ರಶಸ್ತಿ, ಫಿಲ್ಮ್ ಫೇರ್ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಅವರ ಸಾಧನೆಗೆ ಲಭಿಸಿದೆ. ಈ ವೀಕೆಂಡ್ನಲ್ಲಿ ಅವರ ಜೀವನದ ಕುರಿತ ಮತ್ತಷ್ಟು ಸಂಗತಿಗಳು ಅನಾವರಣವಾಗಲಿದೆ.


Click it and Unblock the Notifications











