ಬಿಗ್ ಬಾಸ್ ರಿಯಾಲಿಟಿ ಶೋನಿಂದ ಯಾರಿಗೇನು ಪ್ರಯೋಜನ?
ಅರೇ ಒಳ್ಳೆ ಕತೆ ಆಯ್ತಲ್ಲ, ''ಬಿಗ್ ಬಾಸ್ ರಿಯಾಲಿಟಿ ಶೋನಿಂದ ಯಾರಿಗೇನು ಪ್ರಯೋಜನ?'' ಅಂಥಾ ಪ್ರಶ್ನೆ ಹಾಕಿದ್ರೆ ಮನರಂಜನೆವೊಂದೇ ಮುಖ್ಯ ಉದ್ದೇಶವಾಗಿರುವ ಇಂಥ ಶೋಗಳಿಂದ ಹೊಸ ಸ್ಟಾರ್ ಗಳನ್ನು ಹುಟ್ಟುಹಾಕುತ್ತೇವೆ ಎಂದು ಆಯೋಜಕರೇನು ಕರಾರು ಮಾಡಿಕೊಟ್ಟದ್ದಾರಾ? ಎಂದು ಮರುಪ್ರಶ್ನೆ ಹಾಕಬೇಡಿ.. ಬಿಗ್ ಬ್ರದರ್ ರೂಪಾಂತರಗೊಂಡು ಭಾರತಕ್ಕೆ ಬಂದು ಬಿಗ್ ಬಾಸ್ ಆಗಿ ಅನೇಕರಿಗೆ ಬದುಕು ಕಟ್ಟಿಕೊಟ್ಟಿದೆ. ಸದ್ಯ ದಕ್ಷಿಣದಲ್ಲಿ ತೆಲುಗು, ತಮಿಳು ಆವೃತ್ತಿ ಮುಗಿದಿದ್ದು, ಕನ್ನಡ ಹಾಗೂ ಮಲಯಾಳಂ ಆರಂಭವಾಗಲಿದೆ.
ಇಲ್ಲಿ ಹೇಳಲು ಹೊರಟಿರುವುದು, ತೆಲುಗು ಬಿಗ್ ಬಾಸ್ ಶೋ ಬಗ್ಗೆ, ಅಕ್ಕಿನೇನಿ ನಾಗಾರ್ಜುನ ನಿರೂಪಣೆಯಲ್ಲಿ ಮೂಡಿಬಂದ ತೆಲುಗು ಬಿಗ್ ಬಾಸ್ 4 ಆವೃತ್ತಿಯಲ್ಲಿ ಗೆಲುವು ಸಾಧಿಸಿದ ಲೈಫ್ ಇಸ್ ಬ್ಯೂಟಿಫುಲ್ ಖ್ಯಾತಿಯ ಅಭಿಜಿತ್ ಗೆ ಯಾವುದೇ ದೊಡ್ಡ ಆಫರ್ ಹುಡುಕಿಕೊಂಡು ಬಂದಿಲ್ಲ.
ಅಭಿಜಿತ್ ಅವರ ಹೊಸ ಸಿನಿಮಾ ಜನವರಿಯಲ್ಲಿ ಘೋಷಣೆ ಆಗಲಿದೆ ಎನ್ನಲಾಗುತ್ತಿದ್ದು, ಅಕ್ಕಿನೇನಿ ನಾಗಾರ್ಜುನ ಅವರ ಪ್ರೊಡಕ್ಷನ್ ಹೌಸ್ನಿಂದಲೇ ಈ ಸಿನಿಮಾ ನಿರ್ಮಾಣವಾಗಲಿದೆ ಎಂಬ ಸುದ್ದಿ ಹಬ್ಬಿತ್ತಾದರೂ ಖಚಿತವಾಗಿಲ್ಲ. ಕಳೆದ ಎಲ್ಲಾ ಸೀಸನ್ ಕಥೆಯೂ ಅಷ್ಟೇ ಆಗಿದೆ.

ಜನಪ್ರಿಯತೆ ಹೆಚ್ಚಿಸಿಕೊಳ್ಳಲು ವೇದಿಕೆ
ಸ್ಪರ್ಧಿಗಳ ಆಯ್ಕೆ ವಿಚಾರ, ವಿಜೇತರ ಆಯ್ಕೆ ವಿಚಾರದಲ್ಲಿ ನಾಗಾರ್ಜುನ ಅವರನ್ನಂತೂ ಸಾಮಾಜಿಕ ಜಾಲ ತಾಣದಲ್ಲಿ ಟ್ರಾಲ್ ಮಾಡದೆ ಇರುವ ಸೀಸನ್ ಇಲ್ಲ, ಎಪಿಸೋಡಿಲ್ಲ ಎನ್ನಬಹುದು. ಈ ಬಾರಿ ಕೂಡಾ ಸೊಹೆಲ್ ಫಿನಾಲೆಯಲ್ಲಿ ತೆಗೆದುಕೊಂಡ ನಿರ್ಧಾರ, ಅಖಿಲ್ ಗೆಲ್ಲಬಹುದು ಎಂದುಕೊಂಡರೆ ಅಭಿಜಿತ್ ಗೆದ್ದಿದ್ದು ಆಯ್ತು. ಎರಡು ಮೂರು ತಿಂಗಳು ಟಿವಿ ವೀಕ್ಷಕರ ಮನಗೆಲ್ಲುವ ಸಾಹಸದಲ್ಲಿ ಅನೇಕರು ಯಶ ಗಳಿಸಿದ್ದಾರೆ ನಿಜ. ಶೋ ಮುಗಿದ ಮೇಲೂ ಕೆಲವರು ಸಾರ್ವಜನಿಕರ ಮನದಲ್ಲಿ ಉಳಿದುಕೊಂಡಿದ್ದಾರೆ. ಆದರೆ, ವೃತ್ತಿ ವಿಷಯದಲ್ಲಿ ಬಿಗ್ ಬಾಸ್ ದೊಡ್ಡ ಲಾಂಚ್ ಪ್ಯಾಡ್ ಆಗಿಲ್ಲ ಎನ್ನಬಹುದು.

ದೊಡ್ಡ ಅವಕಾಶ ಯಾರಿಗೂ ಸಿಕ್ಕ ಉದಾಹರಣೆಯಿಲ್ಲ
ಕಳೆದ ಬಾರಿ ವಿನ್ನರ್ ಗಾಯಕ ರಾಹುಲ್ ಸಿಪ್ಲಿಗಂಜ್ ಅವಕಾಶಗಳನ್ನು ಪಡೆಯುತ್ತಿದ್ದರೂ ದೊಡ್ಡ ಸಕ್ಸಸ್ ಸಿಕ್ಕಿಲ್ಲ, ಈ ಬಾರಿಯ ಪ್ರಮುಖ ಸ್ಪರ್ಧಿಗಳಾದ ಅಭಿಜಿತ್, ಅಖಿಲ್, ಸೋಹೆಲ್, ಅರಿಯಾನಾ ಗ್ಲೋರಿ, ಹಾರಿಕಾ ಸಿನಿಮಾರಂಗದಲ್ಲಿ ಸೆಲೆಬ್ರಿಟಿಗಳಾಗಲು ಬಯಸಿದವರು. ಆದರೆ, ಜನಪ್ರಿಯತೆ ಸಾಮಾಜಿಕ ಜಾಲ ತಾಣಕ್ಕೆ ಸೀಮಿತವಾದಂತೆ ತೋರುತ್ತದೆ. ಅದರಲ್ಲೂ ಅಖಿಲ್ ಗೆ ಹೆಚ್ಚು ಸಂಭಾವನೆಯೂ ಸಿಗಲಿಲ್ಲ, ಸಿನಿಮಾ ಆಫರ್ ಕೂಡಾ ಸಿಗಲಿಲ್ಲ, ಫಿನಾಲೆಯಲ್ಲಿ ಚಿರಂಜೀವಿ ಕಡೆಯಿಂದ ಮೆಹಬೂಬ್, ಸೊಹೆಲ್ ಹಾಗೂ ದಿವಿಗೆ ಆಫರ್ ಸಿಕ್ಕಿದ್ದು ದೊಡ್ಡ ಮಟ್ಟದ ಅವಕಾಶ ಎನ್ನಬಹುದು.

ಯೂಟ್ಯೂಬ್, ಇನ್ಸ್ಟಾದಲ್ಲಿ ಜನಪ್ರಿಯತೆ ಹೆಚ್ಚಳ
ಯೂಟ್ಯೂಬ್ ನಲ್ಲಿ ಡ್ಯಾನ್ಸ್, ಶಾರ್ಟ್ ಮೂವಿ, ಶೋ ಮೂಲಕ ಜನಪ್ರಿಯತೆ ಗಳಿಸಿದ್ದ ದೇತ್ತಡಿ ಹಾರಿಕಾ, ಮೆಹಬೂಬ್ ಅವರು ಬಿಗ್ ಬಾಸ್ ಮನೆಗೆ ಹೋಗಿ ಬಂದ ಬಳಿಕ ಜನಪ್ರಿಯತೆ ಖಂಡಿತವಾಗಿಯೂ ದುಪ್ಪಟ್ಟಾಗಿದೆ. ಅನೇಕ ರಿಯಾಲಿಟಿ ಶೋಗಳಿಗೆ ಸೆಲೆಬ್ರಿಟಿಗಳಾಗಿ ಹೋಗಿ ಕುಣಿದು ಬಂದಿದ್ದಾರೆ. ಇರೋದರಲ್ಲಿ ಮೋನಲ್ ಡ್ಯಾನ್ಸ್ ಪ್ಲಸ್ ರಿಯಾಲಿಟಿ ಶೋದಲ್ಲಿ ಜಡ್ಜ್ ಆಗಿದ್ದಾರೆ. ಹಳೆ ಬಿಗ್ ಬಾಸ್ ನಲ್ಲಿ ಸಕತ್ ಮಿಂಚಿದ್ದ ಬಾಬಾ ಭಾಸ್ಕರ್ ಮಾಸ್ಟರ್ ಕೂಡಾ ಇದೇ ಶೋನಲ್ಲಿ ಮತ್ತೊಬ್ಬ ಜಡ್ಜ್. ಇನ್ನು ಬಾಬಾ ಭಾಸ್ಕರ್ ಸಮಕ್ಕೆ ಜನರನ್ನು ರಂಜಿಸಿದ್ದ ಬಿಗ್ ಬಾಸ್ ಸ್ಪರ್ಧಿ ಶ್ರೀಮುಖಿ ಎಂದಿನಂತೆ ಇನ್ನಷ್ಟು ಶೋಗಳನ್ನು ನಡೆಸಿಕೊಡುತ್ತಿದ್ದಾರೆ. ಆದರೆ, ಇದೆಲ್ಲವೂ ಅವರು ಮಾಡಿಕೊಂಡು ಬಂದಿದ್ದ ಕಾಯಕ ಹಾಗೂ ಹೊಸ ಅವಕಾಶವೇನಲ್ಲ.

ಭರ್ಜರಿ ದುಡ್ಡು ಗಳಿಕೆ, ಜೀವನೋಪಾಯಕ್ಕೆ ಆಧಾರ
ಸೈಯದ್ ಸೊಹೆಲ್, ಮೆಹಬೂಬ್ ರಂಥ ಸ್ಪರ್ಧಿಗಳಿಗೆ ಶೋನಲ್ಲಿ ಕೊನೆ ತನಕ ಉಳಿದು ಹೆಚ್ಚು ದುಡ್ಡು ಗಳಿಸುವುದು ಮುಖ್ಯವಾಗಿತ್ತು. ಫಿನಾಲೆಗೂ ಮುನ್ನವೇ ಅಭಿಜಿತ್ 60 ಲಕ್ಷ ಜೇಬಿಗಿಳಿಸಿಕೊಂಡಿದ್ದರು. ಸೊಹೆಲ್ ಗೆ ಚಿರಂಜೀವಿ, ನಾಗಾರ್ಜುನ ನೀಡಿದ ಲಕ್ಷ ಲಕ್ಷ ರುಪಾಯಿ ಹಾಗೂ ಮನೆಗೆ ಬಂದ ಸೂಟ್ ಕೇಸ್ ನಲ್ಲಿ ಸಿಕ್ಕ ಮೊತ್ತ ಎಲ್ಲವೂ ಕನಸು ಈಡೇರುವಂತೆ ಮಾಡಿದೆ. ತಮಿಳಿನಲ್ಲೂ ಇದೇ ಕಥೆಯಾಗಿದ್ದು, ಗ್ಯಾಬ್ರಿಯಾಲಾ ಚಾರ್ಲ್ಟನ್ ಎಂಬ ಸ್ಪರ್ಧಿ ಫಿನಾಲೆ ಪ್ರವೇಶಕ್ಕೂ ಮುನ್ನವೇ ಹಣದ ಮಹತ್ವವನ್ನು ಅರಿತು ಸೂಟ್ ಕೇಸ್ ಪಡೆದು ಮನೆಯಿಂದ ಹೊರಬಂದಿದ್ದರು. ಹೀಗಾಗಿ, ಮನೆಯಲ್ಲಿಯಾಗಲಿ, ಹೊರ ಬಂದ ಮೇಲಾಗಲಿ, ಪ್ರತಿಭೆ ಇದ್ದವರಿಗೆ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವುದು ಹೇಗೆ ಎಂಬುದು ತಿಳಿದಿದ್ದರೆ ಸಾಕು, ಬಿಗ್ ಬಾಸ್ ಮನೆ ಬಿಗ್ ಆಫರ್ ಬದಲು ಬಿಗ್ ಅವಕಾಶಗಳನ್ನು ತೋರಿಸಬಹುದು.


Click it and Unblock the Notifications











