ಕಿರುತೆರೆಯಲ್ಲಿ ಜೀವನದ ಮೌಲ್ಯಗಳನ್ನು ಸಾರಿದ ಧಾರಾವಾಹಿಗಳು ಇವೇ ನೋಡಿ
ಕಿರುತೆರೆ ಎಂದರೆ ಮನೆಯಲ್ಲಿ ಟಿವಿ ಮುಂದೆ ಕುಳಿತು ನೋಡುವ ಹಲವಾರು ಕಾರ್ಯಕ್ರಮಗಳ ಗುಚ್ಚ. ಇದರಲ್ಲೂ ಧಾರಾವಾಹಿಗಳಂತೂ ಸ್ತ್ರೀ ಪ್ರಧಾನ ಕತೆಯನ್ನು ಹೊತ್ತು ಪ್ರೇಕ್ಷಕರ ಮುಂದೆ ತರುತ್ತದೆ. ಅದೆಷ್ಟೋ ಧಾರವಾಹಿಗಳು ಮನೆಮನೆಗೂ ಒಳ್ಳೊಳ್ಳೆ ಸಾಮಾಜಿಕ ಹಾಗೂ ಜೀವನ ಮೌಲ್ಯವನ್ನು ಸಾರುತ್ತಿವೆ.
ಈಗಾಗಲೇ ಕಿರುತೆರೆಯಲ್ಲಿ ಪ್ರಸಾರವಾದ ಈ ಧಾರಾವಾಹಿಗಳು ವೀಕ್ಷಕರ ಪ್ರೀತಿಯನ್ನು ಗಳಿಸಿದ್ದವು. ವಿಭಿನ್ನ ಕತೆ, ಮೇಕಿಂಗ್, ಟ್ವಿಸ್ಟ್ಗಳನ್ನು ಕೊಟ್ಟು ವೀಕ್ಷಕರನ್ನು ಹಿಡಿದಿಟ್ಟಿದ್ದವು. ಅಷ್ಟೇ ಅಲ್ಲ ಮನೆ ಮಂದಿಯೇ ಕೂತು ನೋಡುತ್ತಿದ್ದ ಧಾರಾವಾಹಿಗಳು ಇವು.

'ಮಿಲನ' ಧಾರಾವಾಹಿ
ದಶಕದ ಹಿಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮಿಲನ' ಧಾರಾವಾಹಿ ವಿಭಿನ್ನ ಕಥಾಹಂದರದೊಂದಿಗೆ ಬಹಳಷ್ಟು ಸದ್ದು ಮಾಡಿತ್ತು. ಮುಗ್ಧ ಹಳ್ಳಿ ಹುಡುಗಿ ಪ್ರಾರ್ಥನ ಹಾಗೂ ಪೇಟೆಯಲ್ಲಿ ಬೆಳೆದ ಹುಡುಗ ಸಮರ್ಥ ನಡುವಿನ ಮಿಲನದ ಕಥೆ ಇದಾಗಿತ್ತು. ಇಡೀ ಕಥೆಯಲ್ಲಿ ಅನೈತಿಕ ಸಂಬಂಧದ ಬಗ್ಗೆ ಬಹಳಷ್ಟು ಜಾಗೃತಿ ಮೂಡಿಸಿದ್ದರು ಕಥೆಯ ನಿರ್ದೇಶಕರು. ಬಹಳ ನೈಜವಾದ ಕಥಾ ಹಂದರ ಹಾಗೂ ಅಭಿನಯದ ತಾರಾಗಣ ಹೊಂದಿದ್ದ ಈ ಧಾರಾವಾಹಿಯಲ್ಲಿ ಕಲಾವಿದರಾದ ಪ್ರಶಾಂತ್ ಭಾರದ್ವಾಜ್, ಬಾಬು ಹಿರಣ್ಣಯ್ಯ, ಮಲ್ನಾಡ್ ಜಗದೀಶ್ ಪಲ್ಲವಿ ಶೆಟ್ಟಿ ಮುಂತಾದವರು ಅಭಿನಯಿಸಿದ್ದರು.
'ಪುನರ್ ವಿವಾಹ'
ದಶಕದ ಹಿಂದೆ ಶ್ರುತಿ ನಾಯ್ಡು ಅವರ ನಿರ್ದೇಶನದಲ್ಲಿ ಪ್ರಸಾರವಾಗುತ್ತಿದ್ದ 'ಪುನರ್ ವಿವಾಹ' ಧಾರಾವಾಹಿ ಕೂಡ ಎರಡನೇ ಮದುವೆ ಕುರಿತು ಒಂದಷ್ಟು ಜಾಗೃತಿಯನ್ನು ಮೂಡಿಸಿತ್ತು. ಎರಡನೇ ಮದುವೆಯಲ್ಲಿಯೂ ಅನ್ಯೋನ್ಯ ದಾಂಪತ್ಯ ಸಾಧ್ಯ ಎಂಬುದನ್ನು ಕಥೆ ತೋರಿಸಿತ್ತು. ಜೊತೆಗೆ ಅನುಮಾನ ಸಂಸಾರ ಕೆಡಿಸಿತು ಎಂಬ ಮಾತಿನಂತೆ ಅನುಮಾನ ಹಾಗೂ ಪರಸ್ತ್ರೀ ಮೋಹದಿಂದ ಹೇಗೆ ಒಂದು ಸಂಸಾರ ಹಾಳಾಗುತ್ತದೆ ಎಂಬುದನ್ನು ಬಹಳ ವಿಷದವಾಗಿ ಪ್ರೇಕ್ಷಕರಿಗೆ ತೋರಿಸಿದ್ದು ಈ ಧಾರಾವಾಹಿ.
'ಪುಟ್ಟಗೌರಿ ಮದುವೆ'
ಬಹಳ ವಿಭಿನ್ನವಾದ ಕಥಾ ಹಂದರದ ಮೂಲಕ ಬಹಳಷ್ಟು ಸದ್ದು ಮಾಡಿದ ಧಾರಾವಾಹಿ 'ಪುಟ್ಟಗೌರಿ ಮದುವೆ'. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಈ ಧಾರಾವಾಹಿ ಬಾಲ್ಯ ವಿವಾಹದ ಕುರಿತು ಬಹಳಷ್ಟು ಜಾಗೃತಿಯನ್ನು ಮೂಡಿಸುವ ಪ್ರಯತ್ನ ಮಾಡಿದ್ದು. ಈ ಧಾರಾವಾಹಿಯಲ್ಲಿಯೂ ಅನೈತಿಕ ಸಂಬಂಧ ಹಾಗೂ ಅದು ಯಾವ ರೀತಿ ಮನೆ ಮನಸ್ಸನ್ನು ಹಾಳು ಮಾಡುತ್ತದೆ ಎಂಬುದರ ಕುರಿತು ಬಹಳಷ್ಟು ಬೆಳಕು ಚೆಲ್ಲಿತ್ತು. ಬಾಲ್ಯದಲ್ಲಿಯೇ ಮಹೇಶ ಹಾಗೂ ಪುಟ್ಟಗೌರಿಗೆ ಮದುವೆ ಮಾಡಿದ ಮನೆಯವರು, ಈ ಜೋಡಿ ದೊಡ್ಡವರಾದ ಮೇಲೆ ಸತಿಪತಿಯಾಗಿ ಸಹಬಾಳ್ವೆ ನಡೆಸಬೇಕೆಂದು ಬಯಸಿದರು. ಆದರೆ ಪೇಟೆ ಸೇರಿದ ಮಹೇಶ ಪೇಟೆಯಲ್ಲಿ ತಾನು ಓದುವಾಗ ಹಿಮಾ ಎಂಬ ಹುಡುಗಿಯನ್ನು ಪ್ರೀತಿಸಿ ಆಕೆಯೊಂದಿಗೆ ಮದುವೆಯಾಗುವ ಹುನ್ನಾರ ನಡೆಸುತ್ತಾನೆ. ಇತ್ತ ಮಹೇಶನನ್ನೆ ನಂಬಿಕೊಂಡಿರುವಾಗ ಗೌರಿಯ ಜೀವನ ಅತಂತ್ರವಾಗುತ್ತದೆ. ಇತ್ತ ಮದುವೆಯಾದ ಹೆಂಡತಿಯನ್ನು ಸರಿಯಾಗಿ ಬಾಳಿಸದೆ ಅತ ಹಿಮಾಳಿಗೂ ಮೋಸ ಮಾಡುವ ಮಹೇಶನ ಜೀವನದ ತೊಳಲಾಟ ಮತ್ತು ಹಿರಿಯರೆಲ್ಲರೂ ಸೇರಿ ಈ ಮೂರು ಪಾತ್ರಗಳ ಜೀವನದಲ್ಲಿ ತಂದಿಟ್ಟ ಎಡವಟ್ಟಿನ ಬಗ್ಗೆ ಬಹಳ ನೈಜವಾಗಿ ತೆರೆ ಮೇಲೆ ಪ್ರದರ್ಶಿಸಲಾಗಿತ್ತು.
'ಭಾಗ್ಯಲಕ್ಷ್ಮಿ'
ಪ್ರಸ್ತುತ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿತ್ತಿರುವ 'ಭಾಗ್ಯಲಕ್ಷ್ಮಿ' ಧಾರಾವಾಹಿ ಬಹಳಷ್ಟು ಟ್ವಿಸ್ಟ್ ಗಳೊಂದಿಗೆ ಜನ ಗಮನ ಸೆಳೆಯುತ್ತಿದೆ. ಕಲಾವಿದರಾದ ಸುಷ್ಮಾ ಕೆ ರಾವ್, ಪದ್ಮಜಾ ರಾವ್, ತನ್ವಿ ರಾವ್, ಶಶಿಧರ್ ಕೋಟೆ, ಸುದರ್ಶನ್ ರಂಗಪ್ರಸಾದ್ ಮುಂತಾದವರು ನಟಿಸುತ್ತಿದ್ದಾರೆ. ನೈತಿಕ ಸಂಬಂಧವನ್ನು ಹೊಂದಿರುವ ತಾಂಡವ ಸೂರ್ಯವಂಶಿ ವಿರುದ್ಧ ಇದೀಗ ಹೆಂಡತಿ ಭಾಗ್ಯ ಸಿಡಿದೆದ್ದಿದ್ದಾಳೆ. ಸೊಸೆ ಭಾಗ್ಯಳನ್ನು ಸಮರ್ಥಿಸಿಕೊಂಡು ಮನೆಯವರೆಲ್ಲರೂ ತಾಂಡವನ ಮನೆ ಬಿಟ್ಟು ಭಾಗಿಯಾದ ತವರು ಮನೆ ಸೇರಿದ್ದಾರೆ. ಎಲ್ಲವನ್ನು ಸರಿ ಮಾಡುವ ಪಣತೊಟ್ಟಿರುವ ಭಾಗ್ಯ, ಹೋಟೆಲ್ ಒಂದರಲ್ಲಿ ಅಡುಗೆ ಮಾಡಲು ಸೇರಿಕೊಂಡಿದ್ದಾಳೆ. ಎಷ್ಟೇ ಕಷ್ಟಗಳು ಎದುರಾದರೂ ಅವೆಲ್ಲವನ್ನು ಸಮರ್ಥವಾಗಿ ನಿಭಾಯಿಸುವ ಹಠ ಹತ್ತಿರುವ ಭಾಗ್ಯ ಸ್ತ್ರೀ ಸಬಲೀಕರಣದ ಪ್ರತಿನಿಧಿಯಾಗಿ ಕಿರುತೆರೆ ಪ್ರೇಕ್ಷಕರ ಮುಂದೆ ನಿಂತಿದ್ದಾಳೆ.
ಈ ರೀತಿಯಾಗಿ ಧಾರಾವಾಹಿಗಳ ಪ್ರಮುಖ ವೀಕ್ಷಕರಾಗಿರುವ ಸ್ತ್ರೀಯರನ್ನು ಗಮನದಲ್ಲಿಟ್ಟುಕೊಂಡು ಹಲವು ಧಾರಾವಾಹಿಗಳು ನಾನಾ ರೀತಿಯ ಸಾಮಾಜಿಕ ಕೌಟುಂಬಿಕ ಹಾಗೂ ಜೀವನ ಮೌಲ್ಯವನ್ನು ಸಾರುವ ಸಂದೇಶವನ್ನು ಕೊಟ್ಟಿದೆ.


Click it and Unblock the Notifications











