ಬಿಗ್ ಬಾಸ್ನಲ್ಲಿ ಗೆದ್ದ 50 ಲಕ್ಷ ಹಣದಲ್ಲಿ ಹನುಮಂತ ಮಾಡುವ ಕೆಲಸಗಳೇನು ?
ಹನುಮಂತ ಅಂದರೆ ಆಕರ್ಷಣೆ. ಚಿಲ್ಲೂರ ಬಡ್ನಿ ತಾಂಡಾದ ಈ ವ್ಯಕ್ತಿಯ ಬಗ್ಗೆ ಅನೇಕರಿಗೆ ಆಸಕ್ತಿ. ಕುರಿ ಕಾಯುತ್ತಿದ್ದ ಹುಡುಗನೊಬ್ಬ ಇಷ್ಟೊಂದು ಹೆಸರು ಮಾಡುತ್ತಿದ್ದಾನಲ್ಲ ? ಎನ್ನುವ ಕುತೂಹಲ. ಇದೆಲ್ಲದಕ್ಕೆ ಕೈಗನ್ನಡಿಯೇ ಬಿಗ್ ಬಾಸ್ ಕಾರ್ಯಕ್ರಮ.
ಕಳೆಗುಂದಿದ್ದ ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮದ ಕಳೆ ಹೆಚ್ಚಿಸಿದ ಹನುಮಂತ, ದಾಖಲೆ ಮತಗಳನ್ನು ಪಡೆಯುವ ಮೂಲಕ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದ್ದಾರೆ. 50 ಲಕ್ಷ ಹಣ ಗೆದ್ದು ನಕ್ಕಿದ್ದಾರೆ. ಹಾಗಂಥ ಹನುಮಂತುನ ಇಲ್ಲಿಯವರೆಗಿನ ಪ್ರಯಾಣ ಸುಲಭದ್ದಲ್ಲ. ಅವರದ್ದೇ ಆದ ಕಷ್ಟದ ಹಾದಿಯನ್ನು ಸವೆಸಿ ಹನುಮಂತ ಇಲ್ಲಿಯವರೆಗೆ ಬಂದಿದ್ದಾರೆ.

ಚಿಲ್ಲೂರು ಬಡ್ನಿಯಿಂದ ಬಿಗ್ ಬಾಸ್ ಮನೆಯವರೆಗೆ..!
ಹೌದು, ಹನುಮಂತ ಚಿಲ್ಲೂರು ಬಡ್ನಿ ಚೆಲುವ. ಸವಣೂರಿನಿಂದ ಆರು ಕೀಲೋ ಮೀಟರ್ ದೂರದಲ್ಲಿರುವ ಚಿಲ್ಲೂರು ಬಡ್ನಿ ಗ್ರಾಮದಲ್ಲಿ ಹನುಮಂತನ ಕುಟುಂಬ ನೆಲೆಸಿದೆ. ಹನುಮಂತ ಅವರ ತಂದೆ ಮೇಘಪ್ಪ, ತಾಯಿ ಶೀಲವ್ವ. ಕುರಿ ಕಾಯುತ್ತಾ ತಮ್ಮ ಮಗನನ್ನು ಸಾಕಿದ್ದಾರೆ ಇವರು ಇಬ್ಬರು.
ಇಂಥಾ ಹನುಮಂತ ಇಲ್ಲಿಯವರೆಗೆ ಬರಲು ತುಂಬಾ ಕಷ್ಟ ಪಟ್ಟಿದ್ದಾರೆ. ಇನ್ನು ಮನೆಯಲ್ಲಿ ಕೇವಲ ಹನುಮಂತ ಮಾತ್ರ ಅಲ್ಲ ಅಣ್ಣ ತಂಗಿ ಹಾಗೂ ಮೂವರು ಅಕ್ಕಂದಿರಿದ್ದಾರೆ. ಇನ್ನು ಹನುಮಂತ ಓದಿದ್ದು ಕೇವಲ ಐದನೇ ತರಗತಿಯವರೆಗೆ ಮಾತ್ರ. ಬಾಲ್ಯದಲ್ಲಿಯೇ ಭಜನಾ ಪದ ಕೇಳುತ್ತಿದ್ದ ಹನುಮಂತ ಆ ನಂತರ ಭಜನಾ ಮಂಡಳಿ ಸದಸ್ಯರ ಜೊತೆ ಹಾಡು ಹಾಡಲಾರಂಭಿಸಿದರು. ಹೀಗೆ ದಿನಗಳು ಉರುಳಿದಂತೆ ಹಾಡು ಹಾಡುವುದನ್ನೇ ರೂಢಿ ಮಾಡಿಕೊಂಡ ಹನುಮಂತ ಕುರಿ ಕಾಯುಲು ಹೋಗುತ್ತಿದ್ದರು. ಇದರ ನಡುವೆ ಸವಣೂರು, ಶಿಗ್ಗಾಂವಿ ಮತ್ತು ಸುತ್ತಮುತ್ತಲಿನ ತಾಲ್ಲೂಕಿನ ಗ್ರಾಮಗಳಲ್ಲಿ ಭಜನಾ ಪದಗಳನ್ನು ಹಾಡುತ್ತಾ ಪ್ರಸಿದ್ಧಿಯನ್ನು ಪಡೆದರು.
ಇನ್ನು ಕುರಿ ಕಾಯುವ ಸಮಯದಲ್ಲಿ ತಮ್ಮ ಸಹೋದರನ ಮೊಬೈಲ್ನಲ್ಲಿ ತಾವು ಹಾಡುತ್ತಿರುವ ವಿಡಿಯೋವನ್ನು ಸೆರೆಹಿಡಿದು ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹನುಮಂತ ಅಪ್ ಲೋಡ್ ಮಾಡುತ್ತಿದ್ದರು. ಆ ನಂತರ ಸ್ನೇಹಿತರ ಒತ್ತಾಯಕ್ಕೆ ಮಣಿದು ಜೀ ಕನ್ನಡ ವಾಹಿನಿಯ ಸರಿಗಮಪ ಬಂದರು. ಆಡಿಷನ್ ನೀಡಿದರು. ತಮ್ಮ ಹಾಡುಗಾರಿಕೆಯಿಂದ ಕರುನಾಡಿನ ಹೃದಯವನ್ನು ಗೆದ್ದರು. ಹೀಗೆ ಹಂತ ಹಂತವಾಗಿ ಮೇಲೆ ಬಂದ ಹನುಮಂತ ಈಗ ಬಿಗ್ ಬಾಸ್ ಮನೆಯಲ್ಲಿ ಕೂಡ ಚರಿತ್ರೆಯನ್ನು ಸೃಷ್ಟಿಸಿದ್ದಾರೆ. ಬರೋಬ್ಬರಿ 5,23,89,313 ಮತಗಳನ್ನು ಪಡೆದಿದ್ದಾರೆ. ಟ್ರೋಫಿ ಮುಡಿಗೇರಿಸಿಕೊಂಡಿದ್ದಾರೆ. ಇದೇ ಸಮಯದಲ್ಲಿ ತಮ್ಮ ಮುಂದಿನ ಕನಸಿನ ಬಗ್ಗೆ ಮಾತನಾಡಿದ್ದಾರೆ. ಮನದ ಬಯಕೆಗಳನ್ನು ವ್ಯಕ್ತಪಡಿಸಿದ್ದಾರೆ.
ಬಿಗ್ ಬಾಸ್ ಪತ್ರಿಕಾಗೋಷ್ಠಿ
ಹೌದು, ಬಿಗ್ ಬಾಸ್ ಕಾರ್ಯಕ್ರಮದ ಮೂರು ಪ್ರಮುಖ ಮುತ್ತುಗಳಾದ ಹನುಮಂತ, ತ್ರಿವಿಕ್ರಮ್ ಮತ್ತು ರಜತ್ ಅವರನ್ನು ಕಲರ್ಸ್ ಕನ್ನಡ ವಾಹಿನಿ ಮಾಧ್ಯಮದ ಮುಂದೆ ಕರೆತಂದಿತ್ತು. ಈ ಸಮಯದಲ್ಲಿ ಹತ್ತು ಹಲವು ವಿಚಾರಗಳ ಕುರಿತು ಮೂರು ಜನರಿಗೆ ಪ್ರಶ್ನೆಯನ್ನು ಕೇಳಲಾಯ್ತು. ಈ ಸಮಯದಲ್ಲಿ ಮಾತನಾಡಿದ ಹನುಮಂತ ಬಂದ ಹಣದಲ್ಲಿ ಮುಂದೆ ಮಾಡುವ ಕೆಲಸದ ಕುರಿತು ಮಾತನಾಡಿದ್ದಾರೆ.
ಬಹುಮಾನದ ಹಣವನ್ನು ಏನ್ಮಾಡ್ತಾರೆ ಹನುಮಂತ ?
ಹನುಮಂತ ಕಾರ್ಯಕ್ರಮದಲ್ಲಿ 50 ಲಕ್ಷ ಹಣ ಗೆದ್ದಿದ್ದಾರೆ. ಆದರೆ ಈ ಎಲ್ಲ ಹಣ ಹನುಮಂತ ಖಜಾನೆ ಸೇರಲ್ಲ. ಅದರಲ್ಲಿ ಶೇಕಡಾ 30 % ತೆರಿಗೆ ಕಟ್ ಆಗುತ್ತೆ. ಹೀಗಾಗಿ ಹನುಮಂತ ಅವರ ಕೈಗೆ ಅಂದಾಜು 32 ರಿಂದ 34 ಲಕ್ಷ ಸಿಗಲಿದೆ. ಇನ್ನು ಈ ಹಣ ಈಗಲೇ ಸಿಗುವುದಿಲ್ಲ. ಕೊನೆ ಪಕ್ಷ ಎರಡು ತಿಂಗಳಾದರೂ ಬೇಕಾಗಬಹುದು. ಹೀಗಿರುವಾಗ ಹನುಮಂತ ಬಂದ ಹಣದಲ್ಲಿ ಏನು ಮಾಡಬೇಕು ಎನ್ನುವ ಆಲೋಚನೆ ಮಾಡಿದ್ದಾರೆ. ಈ ಕುರಿತು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಹನುಮಂತ ಬಂದ ಹಣದಲ್ಲಿ ಮನೆಗೆ ಸ್ಲ್ಯಾಬ್ ಹಾಕಿಸುವ ಯೋಚನೆ ಇದೆ ಎಂದು ಹೇಳಿದ್ದಾರೆ. ಉಳಿದ ಹಣದಲ್ಲಿ ಮದುವೆಗೆ ಚೂರು ಖರ್ಚು ಮಾಡುವುದಾಗಿ ಹೇಳಿದ್ದಾರೆ.
ಮದುವೆಯ ಬಗ್ಗೆ ಹನುಮಂತನ ಮಾತು ..!
ಬಿಗ್ ಬಾಸ್ ಮನೆಯಲ್ಲಿದ್ದಾಗ ಹನುಮಂತನ ಮದುವೆ ಕುರಿತು ಚರ್ಚೆಗಳಾಗುತ್ತಿತ್ತು. ಗ್ರ್ಯಾಂಡ್ ಫಿನಾಲೆಯಲ್ಲಿ ಕೂಡ ಹನುಮಂತ ಬಳಿ ಗೆದ್ದರೆ ಹುಡುಗಿ ಸಿಗುವುದು ಪಕ್ಕಾನಾ ಹನುಮಂತು ಎಂದು ಕೇಳಿದ್ದರು. ಇದಕ್ಕೆ ಹೂರಿ ಸರಾ ಎಂದು ಉತ್ತರವನ್ನು ಹನುಮಂತ ಹೇಳಿದ್ದರು. ಇನ್ನು ಬಿಗ್ ಬಾಸ್ ಮನೆಯಲ್ಲಿದ್ದಾಗ ಕೂಡ ನಾನು ಸೋತರು ಕೂಡ ನಮ್ಮ ಅತ್ತೆ ಮನೆ ಮುಂದೆ ಹೋಗಿ ನಿಲ್ಲುತ್ತೇನೆ ಹುಡುಗಿ ಯಾಕೆ ಕೊಡಲ್ಲ ಅಂತ ಕೇಳುತ್ತೇನೆ ಎಂದು ಹನುಮಂತ ಧನರಾಜ್ ಜೊತೆ ಚರ್ಚೆ ಮಾಡಿದ್ದರು. ಎಷ್ಟೇ ಆದರೂ ಹನುಮಂತ ಮಾತು ತಪ್ಪದ ಮಗ. ಹೀಗಾಗಿಯೇ ಈಗ ಬಿಗ್ ಬಾಸ್ ಮನೆಯಿಂದ ಹೊರ ಬಂದ ಹನುಮಂತ ಮದುವೆಯಾಗಲು ಮನಸು ಮಾಡಿದ್ದಾರೆ. ಮನೆಯ ಸ್ಲ್ಯಾಬ್ ಹಾಕಿಸಿ ಉಳಿದ ಹಣದಲ್ಲಿ ಮದುವೆಯಾಗುವುದಾಗಿ ಹೇಳಿದ್ದಾರೆ. ಆದರೆ, ಹುಡುಗಿ ಯಾರೆಂದು ಹೇಳದ ಹನುಮಂತ ಬಿಗ್ ಬಾಸ್ ಗೆದ್ದ ಬಳಿಕ ನನ್ನ ಹುಡುಗಿಗೆ ನಾನು ಫೋನ್ ಮಾಡಿ ಮಾತನಾಡಿದೆ ಅವಳು ಅಳುತ್ತಿದ್ದಳು, ನಾನು ಯಾಕ್ ಅಳ್ತೀಯಾ ಸುಮ್ನಿರು ಅಂತ ಸಮಾಧಾನ ಮಾಡಿದೆ ಎಂದು ಹೇಳಿದ್ದಾರೆ.


Click it and Unblock the Notifications











