twitter
    For Quick Alerts
    ALLOW NOTIFICATIONS  
    For Daily Alerts

    ಈ ಅವಕಾಶ ನನಗೆ ಕೊಟ್ಟು ನೋಡಿ, ಬಿಗ್ ಬಾಸ್!

    By Prasad
    |

    ಎಂಟರ್ಟೇನ್ಮೆಂಟ್ ಟಿಆರ್‌ಪಿಯಲ್ಲಿ ಎಲ್ಲ ಚಾನಲ್ಲುಗಳನ್ನು ಸದೆಬಡಿದಿರುವ ಜನಪ್ರಿಯ ಕನ್ನಡ ರಿಯಾಲಿಟಿ ಶೋ 'ಬಿಗ್ ಬಾಸ್' ಎರಡನೇ ಆವೃತ್ತಿಗೆ 'ಕಿಚ್ಚ' ಸುದೀಪ್ ಇರುವುದಿಲ್ಲ ಎಂಬ ಸುದ್ದಿ ಸ್ಫೋಟಗೊಂಡಂತೆ ಅವರ ಸ್ಥಾನ ತುಂಬುವವರು ಯಾರು ಎಂಬ ಬಗ್ಗೆ ಇಂಟರ್ನೆಟ್ಟಿನಲ್ಲಿ ಭರ್ಜರಿ ಚರ್ಚೆ ನಡೆಯುತ್ತಿದೆ.

    'ಸುದೀಪ್ ಅವರಿಗೆ ಸುದೀಪ್ ಅವರೇ ಸಾಟಿ, ಅವರ ಸ್ಥಾನ ಯಾರೂ ತುಂಬಲು ಸಾಧ್ಯವಿಲ್ಲ' ಅಂತ ಒಬ್ಬರು ಹೇಳಿದರೆ, 'ಉಪ್ಪಿಗೆ ಒಂದು ಚಾನ್ಸು ಕೊಟ್ಟು ನೋಡಿ ಆವಾಗ ಗೊತ್ತಾಗತ್ತೆ ಯಾರು ಬೆಸ್ಟ್ ಅಂತ' ಅಂತ ಉಪೇಂದ್ರ ಅವರ ಕಟ್ಟಾ ಅಭಿಮಾನಿಯೊಬ್ಬರು ಮೀಸೆ ತಿರುವಿದ್ದಾರೆ. ಸುದೀಪ್ ಒಬ್ರೇ ಯಾಕೆ, ಇವ್ರಿಲ್ವಾ ಅಂತ, ಈಗಾಗಲೆ ರಿಯಾಲಿಟಿ ಶೋ ನಡೆಸಿಕೊಟ್ಟವರ, ಕೊಡದವರ ಹೆಸರುಗಳು ಅಂತರ್ಜಾಲದಲ್ಲಿ ತೇಲಾಡುತ್ತ ಬರುತ್ತಿವೆ.

    ಅಷ್ಟರಲ್ಲಿ ಇಲ್ಲೊಬ್ಬರು ಡೈಲಾಗ್ ಹೊಡೆದೇ ಬಿಟ್ಟರಲ್ಲ! 'ಆ ಸ್ಟಾರ್ ಈ ಸ್ಟಾರ್ ಯಾಕೆ, ನನಗೊಂದು ಚಾನ್ಸ್ ಕೊಟ್ಟು ನೋಡಿ, ಹಂಡ್ರೆಡ್ ಪರ್ಸೆಂಟ್ ಸಕ್ಸಸ್ ಮಾಡೇ ತೀರ್ತೀನಿ' ಅಂತ ವಿಜಯ್ ಮಂಚೇಗೌಡ ಎಂಬ ಓದುಗ ಮಹಾಶಯರೊಬ್ಬರು ರೆಡಿಯಾಗಿ ನಿಂತಿದ್ದಾರೆ. ಯಸ್ ಹೌದಲ್ವಾ? ಬರೀ ಸೆಲೆಬ್ರಿಟಿಗಳಿಗೆ ಯಾಕೆ ಚಾನ್ಸ್ ಕೊಡಬೇಕು? ಸಾರ್ವಜನಿಕರನ್ನೂ ಕರೆದು ಸ್ಕ್ರೀನ್ ಮಾಡಿ ಒಂದು ಚಾನ್ಸ್ ಕೊಟ್ಟು, ಹೊಸ ಟ್ರೆಂಡ್ ಶುರುಮಾಡಬಹುದಲ್ವಾ ಬಿಗ್ ಬಾಸ್ ಆಯೋಜಕರು?

    ಅವರು ಏನೇ ಮಾಡಿಕೊಳ್ಳಲಿ, ಹೆಚ್ಚಿನ ಓದುಗರು ಮಾತ್ರ ಸುದೀಪ್ ಅವರೇ ಬೆಸ್ಟ್ ಅಂತ ಈಗಾಗಲೆ ಹೇಳಿಬಿಟ್ಟಿದ್ದಾರೆ. 'ಬೇರೆಯವರನ್ನು ಆ ಸ್ಥಾನದಲ್ಲಿ ಊಹಿಸಿಕೊಳ್ಳುವುದೂ ಅಸಾಧ್ಯ. ದಯವಿಟ್ಟು ಅವರನ್ನು ಚೇಂಜ್ ಮಾಡಬೇಡಿ' ಅಂತ ಹೇಮಂತ್ ಎನ್ನುವವರು ವಿನಂತಿಸಿಕೊಂಡಿದ್ದಾರೆ. ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಸುದೀಪ್ ತಮ್ಮ ನಿರ್ಧಾರವನ್ನು ಮರುಪರಿಶೀಲಿಸಲೂಬಹುದು. ಅವರನ್ನು ಹೊರತುಪಡಿಸಿ ಮತ್ಯಾರ್ಯಾರ ಹೆಸರನ್ನು ಓದುಗರು ಆಯ್ಕೆ ಮಾಡಿದ್ದಾರೆ? ಅವರು ಆ ಸ್ಥಾನಕ್ಕೆ ಸೂಟ್ ಆಗ್ತಾರಾ? ನೋಡೋಣ ಬನ್ನಿ.

    ಎಲ್ಲರ ಒಲವು ಸುದೀಪ್ ಮೇಲೆ

    ಎಲ್ಲರ ಒಲವು ಸುದೀಪ್ ಮೇಲೆ

    ಸುದೀಪ್ ಅವರು ತಾವಾಗಿಯೇ ಹಿಂದೆ ಸರಿಯುವುದಾಗಿ ಹೇಳಿದ್ದರೂ ಬಹುಸಂಖ್ಯಾತರು ಸುದೀಪ್ ಅವರು 2ನೇ ಆವೃತ್ತಿಗೂ ಇರಲಿ ಎಂದಿದ್ದಾರೆ. ಓರಿಜಿನಾಲಿಟಿ ಇರೋದು ಸುದೀಪ್ ಅವರಿಗೆ ಮಾತ್ರ. ಅವರನ್ನು ಮೀರಿಸೋಕೆ, ಅವರ ರೀತಿ ಟಿಆರ್ಪಿ ಏರಿಸೋಕೆ ಯಾರಿಂದಲೂ ಸಾಧ್ಯವಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಜೊತೆಗೆ ದುರಂಕಾರಿ ಸುದೀಪ್ ಬೇಡವೇ ಬೇಡ ಎನ್ನುವವರೂ ಅನೇಕರಿದ್ದಾರೆ. ವಾಟ್ ಈಸ್ ಯುವರ್ ಡಿಸೀಜನ್ ಸುದೀಪ್? [ಸುದೀಪ್ ಹೆಸರು ಪ್ರಸ್ತಾಪಿಸಿರುವವರು : ಶಾಮ ಸುಂದರ, ರೇಖಾ, ಹೇಮಂತ್ ಅರುಣ್, ಹೇಮಂತ್ ಎಸ್ಎನ್, ಸೌಮ್ಯ ಎಸ್ ಕೆ, ಶ್ರೀ ಎಸ್, ರಾಮಮೂರ್ತಿ, ರಮೇಶ್ ಕೆ., ಫಜಿಲ್, ಪಂಪಾಪತಿ]

    ಎರಡನೇ ಆಯ್ಕೆ ರಮೇಶ್ ಅರವಿಂದ್

    ಎರಡನೇ ಆಯ್ಕೆ ರಮೇಶ್ ಅರವಿಂದ್

    ಪ್ರೀತಿಯಿಂದ ರಮೇಶ್, ರಾಜಾ ರಾಣಿ ರಮೇಶ್ ಮುಂತಾದ ರಿಯಾಲಿಟಿ ಶೋ ನಡೆಸಿಕೊಟ್ಟಿರುವ ರಮೇಶ್ ಅರವಿಂದ್ ಅವರಿಗೆ ಸುದೀಪ್ ಅವರಲ್ಲಿದ್ದ ಚಾರ್ಮ್ ಖಂಡಿತ ಇದೆ. ಮಾತುಗಾರಿಕೆಯಲ್ಲಿ ತೋರುವ ಜಾಣ್ಮೆ, ಹಾಸ್ಯಪ್ರಜ್ಞೆ ಬಹುಶಃ ರಮೇಶ್ ಅವರನ್ನು ಸುದೀಪ್‌ಗೆ ಸಾಟಿಯಾಗುವಂತಿದೆ. ಯಾರನ್ನು ಕರೆಸುವನೋ ಬಿಗ್ ಬಾಸ್? [ರಮೇಶ್ ಹೆಸರು ಪ್ರಸ್ತಾಪಿಸಿದವರು : ರಶ್ಮಿ ವೆಂಕಟ್, ವಾಣಿ ಶೇಖರ್, ಮಹೇಶ್ ಗೌಡ, ಬಾಬು, ಎನ್ಎಸ್ ಕುಮಾರಸ್ವಾಮಿ, ಆಶಾ ಸೂರ್ಯನಾರಾಯಣನ್]

    ಪವರ್ ಸ್ಟಾರ್ ಪುನೀತ್ ರಾಜಕುಮಾರ್

    ಪವರ್ ಸ್ಟಾರ್ ಪುನೀತ್ ರಾಜಕುಮಾರ್

    ಸುವರ್ಣ ಚಾನಲ್ಲಿನಲ್ಲಿ 'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮವನ್ನು ತಮ್ಮ ಸ್ಟೈಲಿನಲ್ಲಿಯೇ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ಪುನೀತ್ ರಾಜಕುಮಾರ್ ಅವರು ಸುದೀಪ್ ಬಿಟ್ಟ ಸ್ಥಾನ ತುಂಬಲು ಒಪ್ಪುತ್ತಾರಾ? ಕೋಟ್ಯಾಧಿಪತಿಯಿಂದ ಸಹಸ್ರಾರು ಅಭಿಮಾನಿಗಳನ್ನು ಗಳಿಸಿರುವ ಪುನೀತ್ ಅವರು ಈ ಚಾಲೇಂಜನ್ನು ಒಪ್ಪುವುದು ಕಷ್ಟ. ಆದರೂ ಅವರ ಹೆಸರು ಸೂಚಿಸಿದವರು ರಮೇಶ್ ಗೌಡ.

    ಒನ್ ಅಂಡ್ ಓನ್ಲಿ ಉಪ್ಪಿ!

    ಒನ್ ಅಂಡ್ ಓನ್ಲಿ ಉಪ್ಪಿ!

    ಅವರಿವರ್ಯಾಕೆ ನಮ್ಮ ಒನ್ ಅಂಡ್ ಓನ್ಲಿ ಉಪ್ಪಿಗೆ ಒಂದು ಚಾನ್ಸು ಕೊಟ್ಟು ನೋಡಿ ಅಂತ ಹೂಂಕರಿಸಿದವರು ಅವರ ಅಭಿಮಾನಿ ರಘು. ಸ್ಕ್ರಿಪ್ಟು, ನಟನೆ, ನಿರ್ದೇಶನ ಅಂತ ತಮ್ಮ ಲೋಕದಲ್ಲೇ ಮುಳುಗಿರುವ ಉಪೇಂದ್ರ ಅವರು ಬಿಗ್ ಬಾಸ್ ನಡೆಸಿಕೊಡಲು ಮುಂದೆ ಬರ್ತಾರಾ? ಅಥವಾ ಐ ಡೋಂಟ್ ಲೈಕ್ ಐ ಡೋಂಟ್ ಲೈಕ್ ಇಟ್ ಅಂತ ಹೇಳ್ತಾರಾ?

    ನಮಸ್ಕಾರ ನಮಸ್ಕಾರ ನಮಸ್ಕಾರ ಗಣೇಶ್

    ನಮಸ್ಕಾರ ನಮಸ್ಕಾರ ನಮಸ್ಕಾರ ಗಣೇಶ್

    ನಮಸ್ಕಾರ ನಮಸ್ಕಾರ ನಮಸ್ಕಾರ ಅಂತ ಹೇಳುತ್ತಲೇ 'ಕಾಮಿಡಿ ಟೈಮ್' ಗೋಲ್ಡನ್ ಸ್ಟಾರ್ ಗಣೇಶ ಸ್ಟಾರ್ ಗಿರಿಗೇರಿದ್ದು ಅವರು ಮರೆತಿಲ್ಲ ಅಂತ ಅಂದುಕೊಳ್ಳೋಣ. ಸುದೀಪ್ ಅಂಥ ಸ್ಟಾರ್ ರಿಯಾಲಿಟಿ ಶೋ ನಡೆಸಿಕೊಟ್ಟಿರುವಾಗ ಗಣೇಶ್ ಅವರು ಯಾಕೆ ಮತ್ತೊಂದು ಕೈ ನೋಡಬಾರದು? ಅಂತಾರೆ ಅನಿಲ್ ಯಾದವ್.

    ವೈ ನಾಟ್ ಚಾಲೇಂಜಿಂಗ್ ಸ್ಟಾರ್ ದರ್ಶನ್?

    ವೈ ನಾಟ್ ಚಾಲೇಂಜಿಂಗ್ ಸ್ಟಾರ್ ದರ್ಶನ್?

    ದರ್ಶನ್ ಅವರು ಕೂಡ ಕಿರುತೆರೆಯಲ್ಲಿ ಒಂದು ಕೈ ನೋಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಅದು ಯಾವಾಗ ಸಾಕಾರವಾಗುವುದೋ? ಆದರೆ, ಅಮಿತ್ ಗುಪ್ತಾ, ಚೇತನ್ ಕುಮಾರ್, ಅನಿಲ್ ಕುಮಾರ್ ಮುಂತಾದವರು ದರ್ಶನ್ ಅವರು ಹೆಸರನ್ನು ಸೂಚಿಸಿ ತಮ್ಮ 'ಅಬಿಮಾನ'ವನ್ನು ಮೆರೆದಿದ್ದಾರೆ. ದರ್ಶನ್ ಅವರು ನಂ.1 ಎಂದು ಸುದೀಪ್ ಅವರಿಂದಲೇ ಹೊಗಳಿಸಿಕೊಂಡಿರುವ ದರ್ಶನ್ ಈ ಚಾಲೇಂಜನ್ನು ಸ್ವೀಕರಿಸ್ತಾರಾ? ಡೌಟ್!

    ಅದ್ಭುತ ಮಾತುಗಾರಿಕೆಯ ರವಿ ಬೆಳಗೆರೆ

    ಅದ್ಭುತ ಮಾತುಗಾರಿಕೆಯ ರವಿ ಬೆಳಗೆರೆ

    ಬಿಗ್ ಬಾಸ್ ರಿಯಾಲಿಟಿ ಶೋ ನಡೆಸಿಕೊಡಲು ಫಿಲ್ಮ್ ಸ್ಟಾರ್ ಗಳೇ ಯಾಕಾಗಬೇಕು? ನಮ್ಮ ಜನಪ್ರಿಯ ಪತ್ರಕರ್ತ ರವಿ ಬೆಳಗೆರೆ ಅವರು ಯಾಕಾಗಬಾರದು ಎಂದು ಪ್ರಶ್ನೆ ಹಾಕಿದವರು ರಾಜೇಶ್ ಕೃಷ್ಣಪ್ಪ ಎಂಬುವವರು. ಕಿರುತೆರೆ ರವಿ ಬೆಳಗೆರೆ ಅವರಿಗೆ ಹೊಸದೇನೂ ಅಲ್ಲ. ಇನ್ನು ಮಾತಾಡುವುದನ್ನು ಅವರಿಗೆ ಹೇಳಿಕೊಡುವ ಅಗತ್ಯವೂ ಇಲ್ಲ. ರವಿ ಬೆಳಗೆರೆ ಒಂದು ಕೈ ನೋಡೇಬಿಡಲಿ, ಏನಂತೀರಿ?

    ಕಿರುತೆರೆ ಸೂಪರ್ ಸ್ಟಾರ್ ಅಕುಲ್ ಬಾಲಾಜಿ

    ಕಿರುತೆರೆ ಸೂಪರ್ ಸ್ಟಾರ್ ಅಕುಲ್ ಬಾಲಾಜಿ

    ಸತತವಾಗಿ ಸೂಪರ್ ಹಿಟ್ ರಿಯಾಲಿಟಿ ಶೋ ನಡೆಸಿಕೊಟ್ಟಿದ್ದರೂ ನಟ ಅಕುಲ್ ಬಾಲಾಜಿ ಅವರ ಹೆಸರು ಪ್ರಸ್ತಾಪಿದ್ದವರು ಕಡಿಮೆ ಎಂದೇ ಹೇಳಬೇಕು. ಯಾಕ್ಹೀಗೆ? ಪ್ಯಾಟೆ ಹುಡುಗಿ ಹಳ್ಳೀಗ್ ಬಂದ್ಳು ಕಾರ್ಯಕ್ರಮದಲ್ಲಿ ಸುದೀಪ್ ಜೊತೆ ಕೈಜೋಡಿಸಿದವರು ಅಕುಲ್ ಬಾಲಾಜಿ. ಆದರೆ, ಅವರಿಗೆ ಸುದೀಪ್ ಅವರನ್ನು ಸರಿಗಟ್ಟಲು ಸಾಧ್ಯವೆ?

    ರಮ್ಯಾ ಮತ್ತು ಪೂಜಾ ಗಾಂಧಿ

    ರಮ್ಯಾ ಮತ್ತು ಪೂಜಾ ಗಾಂಧಿ

    ಅಶ್ವಿನಿ ನಕ್ಷತ್ರ ಧಾರಾವಾಹಿ ಕಥೆ ಹೇಳಲು ಬಂದಿರುವ ಲಕ್ಕಿ ಸ್ಟಾರ್ ರಮ್ಯಾ ಮತ್ತು ರಾಜಕೀಯವಾಗಿ ಅನ್ ಲಕ್ಕಿ ಸ್ಟಾರ್ ಪೂಜಾ ಗಾಂಧಿ ಅವರ ಹೆಸರನ್ನೂ ಒಂದಿಬ್ಬರು ಹೇಳಿದ್ದಾರೆ. ಇವರಿಬ್ರು ಮೊದಲು ಚೆನ್ನಾಗಿ ಕನ್ನಡ ಮಾತಾಡೋದು ಕಲಿಯಲಿ ನಂತರ ರಿಯಾಲಿಟಿ ಶೋಗೆ ಬರಲಿ ಎಂದು ಒಬ್ಬರು ಕಿಚಾಯಿಸಿದ್ದಾರೆ.

    ಇನ್ನೂ ಹಲವಾರು ಹೆಸರುಗಳು

    ಇನ್ನೂ ಹಲವಾರು ಹೆಸರುಗಳು

    ಡೀಲ್ ಆರ್ ನೋ ಡೀಲ್ ನಡೆಸಿಕೊಟ್ಟ ಡೈಲಾಗ್ ಕಿಂಗ್ ಸಾಯಿ ಕುಮಾರ್, ಮಜಾ ವಿತ್ ಸೃಜಾ ನಡೆಸಿಕೊಟ್ಟ ಸೃಜನ್ ಲೋಕೇಶ್ ಎಂಬುವವರ ಹೆಸರುಗಳೂ ಪ್ರಸ್ತಾಪವಾಗಿವೆ. ಹಾಗೆಯೆ, ಕೋಮಲ್, ರವಿಚಂದ್ರನ್ ಮತ್ತು ರಂಗಾಯಣ ರಘು ಹೆಸರನ್ನೂ ಕೆಲವರು ಹೇಳಿದ್ದಾರೆ ಕಣ್ರೀ!

    English summary
    Who will replace actor Sudeep as anchor in 2nd edition of Kannada reality show Bigg Boss? Many are of the opinion that no one can replace Sudeep and his is the best. Many have suggested names of Ramesh Aravind, Upendra, Puneet, Ramya, Darshan etc. Can they replace Sudeep?
    Wednesday, June 19, 2013, 16:38
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X