'ಸಿರಿಗನ್ನಡಂ ಗೆಲ್ಗೆ' ಘೋಷಣೆಯನ್ನು ರೂಪಿಸಿದವರು ಯಾರು?
ಕನ್ನಡ ನಾಡು-ನುಡಿ, ಭಾಷೆಯ ವಿಷಯ ಬಂದಾಗ ಅಲ್ಲಿ 'ಸಿರಿಗನ್ನಡಂ ಗೆಲ್ಗೆ' ಎಂಬ ಘೋಷಣೆ ಕೇಳುವುದು ಸಂಪ್ರದಾಯ ಮತ್ತು ಸಹಜ. ಆದರೆ, ಅನೇಕರಿಗೆ 'ಸಿರಿಗನ್ನಡಂ ಗೆಲ್ಗೆ' ಘೋಷಣೆಯನ್ನು ರೂಪಿಸಿದವರು ಯಾರು?' ಎಂದು ಗೊತ್ತೆ ಇಲ್ಲ.
ಈ ಪ್ರಶ್ನೆಯನ್ನ ಕಿರುತೆರೆಯ ಖ್ಯಾತ ಟಿವಿ ಶೋ ಕನ್ನಡದ ಕೋಟ್ಯಧಿಪತಿಯ ನಾಲ್ಕನೇ ಆವೃತ್ತಿಯಲ್ಲಿ ಕೇಳಲಾಯಿತು. ಹಾಟ್ ಸೀಟ್ ನಲ್ಲಿ ಕುಳಿತುಕೊಂಡಿದ್ದ ತನ್ಮಯ ಅವರು ಈ ಪ್ರಶ್ನೆಗೆ ಉತ್ತರಿಸಲು ಸಾಧ್ಯವಾಗಲಿಲ್ಲ.
ಹಾಗಾಗಿ, 3.20 ಲಕ್ಷದ ಪ್ರಶ್ನೆಯನ್ನ ಎದುರಿಸಿದ ತನ್ಮಯ, ಸ್ಪಷ್ಟ ಉತ್ತರ ಗೊತ್ತಾಗದೇ ಆಟವನ್ನು ಕ್ವಿಟ್ ಮಾಡಿದರು. ಅಂದ್ಹಾಗೆ, 'ಸಿರಿಗನ್ನಡಂ ಗೆಲ್ಗೆ' ಘೋಷಣೆಯನ್ನು ರೂಪಿಸಿದವರು ರಾಹು ದೇಶಪಾಂಡೆ.

ಉತ್ತರ ಕರ್ನಾಟಕದಲ್ಲಿ ಕನ್ನಡದ ಧ್ವನಿಯಾಗುವಂತಹ ಸಂಸ್ಥೆಯೊಂದನ್ನು ಕಟ್ಟಲು ಸತತ ಮೂರು ವರ್ಷಗಳವರೆಗೆ ಪರಿಶ್ರಮಪಟ್ಟ ರಾ.ಹ.ದೇಶಪಾಂಡೆಯವರು 1890ರಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘವನ್ನು ಸ್ಥಾಪಿಸಿ, ಅದರ ಪ್ರಥಮ ಕಾರ್ಯದರ್ಶಿಯಾದರು. ಮೊದಮೊದಲು ತಮ್ಮ ಪತ್ರವ್ಯವಹಾರಗಳಲ್ಲೆಲ್ಲ 'ಕನ್ನಡ ಬೆಳೆಯಲಿ' ಎನ್ನುವ ಶೀರ್ಷಿಕೆ ಘೋಷವಾಕ್ಯವನ್ನು ಬರೆಯುತ್ತಿದ್ದ ರಾ.ಹ.ದೇಶಪಾಂಡೆಯವರು 'ಸಿರಿಗನ್ನಡಂ ಗೆಲ್ಗೆ' ಎನ್ನುವ ಶೀರ್ಷಿಕೆಯ ಘೋಷವಾಕ್ಯವನ್ನು 1893ರಲ್ಲಿ ಬಳಸಲು ಪ್ರಾರಂಭಿಸಿದರೆಂದು ಹೇಳಲಾಗುತ್ತಿದೆ.

ಆದರೆ, 1893ರ ಅವರ ಪತ್ರಗಳು ದೊರೆತ್ತಿಲ್ಲ. ಅವರು ಬರೆದ 1895ರ ಒಂದು ಪತ್ರ ದೊರೆತಿದ್ದು ಅದರಲ್ಲಿ ಈ ಶೀರ್ಷಿಕೆ ಘೋಷವಾಕ್ಯ ಕಂಡು ಬಂದಿದೆ. ಆದುದರಿಂದ ರಾ.ಹ.ದೇಶಪಾಂಡೆಯವರನ್ನು "ಸಿರಿಗನ್ನಡಂ ಗೆಲ್ಗೆ" ಮಂತ್ರದ ದ್ರಷ್ಟಾರರೆನ್ನಬಹುದು. ಆ ನಂತರ ಈ ಘೋಷವಾಕ್ಯದಿಂದ ತುಂಬ ಪ್ರಭಾವಿತರಾದ ಬಿ.ಎಮ್.ಶ್ರೀಕಂಠಯ್ಯನವರು ಇದನ್ನು ತಾವೂ ಬಳಸಿ ಜನಪ್ರಿಯಗೊಳಿಸಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು ಕನ್ನಡ ನಾಡಿನಲ್ಲಿ ಮೊಟ್ಟ ಮೊದಲ ಬಾರಿಗೆ ಪುಸ್ತಕ ಪಾರಿತೋಷಕ ಯೋಜನೆಯನ್ನು ಪ್ರಾರಂಭಿಸಿತು. 1896ರಲ್ಲಿ ವಾಗ್ಭೂಷಣವೆನ್ನುವ ಸಾಹಿತ್ಯಕ ಹಾಗು ವಿಮರ್ಶಾತ್ಮಕ ಮಾಸಿಕವನ್ನು ಪ್ರಾರಂಭಿಸಿತು. 1907ರಲ್ಲಿ ಅಖಿಲ ಕರ್ನಾಟಕ ಗ್ರಂಥಕರ್ತರ ಸಮ್ಮೇಳನವನ್ನು ಮೊಟ್ಟ ಮೊದಲನೆಯದಾಗಿ ಸಂಘಟಿಸಿತು. ಈ ರೀತಿಯಾಗಿ ರಾ.ಹ.ದೇಶಪಾಂಡೆಯವರು ಕರ್ನಾಟಕ ವಿದ್ಯಾವರ್ಧಕ ಸಂಘದ ಮೂಲಕ ಉತ್ತರ ಕರ್ನಾಟಕದಲ್ಲಿ ಕನ್ನಡವನ್ನು ಪುನರುಜ್ಜೀವನಗೊಳಿಸಿದರು ಎಂದು ಹೇಳಬಹುದು.


Click it and Unblock the Notifications











