BBK11: ವಂಚನೆ ಪ್ರಕರಣದಲ್ಲಿ ಸುದ್ದಿಯಾಗಿದ್ದ ಚೈತ್ರಾ ಕುಂದಾಪುರ ಬಿಗ್ಬಾಸ್ ಮನೆಗೆ
ಕರಾವಳಿ ಭಾಗದಲ್ಲಿ ತಮ್ಮ ಆವೇಶಭರಿತ ಭಾಷಣಗಳಿಂದ ಸದ್ದು ಮಾಡಿದವರು ಚೈತ್ರಾ ಕುಂದಾಪುರ. ಕೋಟ್ಯಂತರ ರೂಪಾಯಿ ವಂಚನೆ ಆರೋಪದಲ್ಲಿ ಹಿಂದೆ ಈಕೆ ಜೈಲು ಸೇರಿದ್ದರು. ಬಳಿಕ ಬಿಡುಗಡೆ ಆಗಿದ್ದರು. ಇದೀಗ ಬಿಗ್ಬಾಸ್ ಕನ್ನಡ ಸೀಸನ್ 11ರಲ್ಲಿ 14ನೇ ಸ್ಪರ್ಧಿಯಾಗಿ ದೊಡ್ಮನೆಗೆ ಹೋಗಿದ್ದಾರೆ.
ವಕೀಲರಾದ ಜಗದೀಶ್ ಬಳಿಕ ಅವರಂತೆಯೇ ಬಹಳ ಜೋರಾಗಿ ಮಾತನಾಡುವ ಚೈತ್ರಾ ಬಿಗ್ಬಾಸ್ ಮನೆಗೆ ಹೋಗುತ್ತಿರುವುದು ಕುತೂಹಲ ಮೂಡಿಸಿದೆ. ಒಂದ್ಕಾಲದಲ್ಲಿ ತಮ್ಮ ಖಡಕ್ ಭಾಷಣದಿಂದ ಮೋಡಿ ಮಾಡಿದ ಚೈತ್ರಾ ಬಳಿಕ ವಿವಾದದಲ್ಲಿ ಸಿಲುಕಿ ವಂಚನೆ ಪ್ರಕರಣದಲ್ಲಿ ಜೈಲು ಸೇರಿ ಸೈಲೆಂಟ್ ಆಗಿದ್ದರು. ಇದೀಗ ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟು ಮತ್ತೆ ಸುದ್ದಿ ಆಗುತ್ತಿದ್ದಾರೆ.

ಚೈತ್ರಾ ಉಡುಪಿ ಜಿಲ್ಲೆಯ ಕುಂದಾಪುರದವರು. ತೆಕ್ಕಟ್ಟೆಯಲ್ಲಿ ಪಿಯುಸಿ ವ್ಯಾಸಂಗ ಮುಗಿಸಿದ ಬಳಿಕ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿದ್ದರು. ಕೆಲ ಸುದ್ದಿ ವಾಹಿನಿಗಳಲ್ಲಿ ಕೆಲಸ ಮಾಡಿದ್ದರು ಎಂದು ಹೇಳಲಾಗುತ್ತದೆ. ಇನ್ನು ಕಾಲೇಜು ದಿನಗಳಲ್ಲೇ ಆಕೆ ಎಬಿವಿಪಿ ಸಂಘಟನೆಯಲ್ಲಿ ಗುರ್ತಿಸಿಕೊಂಡಿದ್ದರು. ಹಾಲು ಮಾರುವವರ ಮನೆಯಿಂದ ಬಂದವಳು ನಾನು ಎಂದು ಚೈತ್ರಾ ಹಿಂದೆ ಹೇಳಿಕೊಂಡಿದ್ದರು.
ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯೆ ಆಗಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿಯೂ ಚೈತ್ರಾ ಕೆಲಸ ಮಾಡಿದ್ದರು. ಲೇಖಕಿಯಾಗಿ ಪ್ರೇಮಪಾಶ ಎಂಬ ಕೃತಿಯನ್ನು ಬರೆದಿದ್ದಾರೆ. ತಮ್ಮ ದ್ವೇಷ ಭಾಷಣಗಳಿಂದಲೂ ಈಕೆ ಸದ್ದು ಮಾಡಿದ್ದರು. ಆದರೆ ಇದ್ದಕ್ಕಿದ್ದಂತೆ ವಂಚನೆ ಆರೋಪ ಪ್ರಕರಣದಲ್ಲಿ ಜೈಲು ಸೇರುವಂತಾಗಿತ್ತು. ಜಾಮೀನು ಪಡೆದು ಹೊರ ಬಂದಿದ್ದಾರೆ.
ಬೈಂದೂರಿನ ಉದ್ಯಮಿ ಗೋವಿಂದ ಬಾಬು ಪೂಜಾರಿ ಎಂಬುವವರಿಗೆ ಚೈತ್ರಾ ಕುಂದಾಪುರ ಹಾಗೂ ಸಂಗಡಿಗರು ವಂಚನೆ ಮಾಡಿರುವ ಆರೋಪ ಇದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ 7 ಕೋಟಿ ರೂ. ಪಡೆದ ಗುರುತರ ಆರೋಪ ಕೇಳಿಬಂದಿತ್ತು. ಸಿಸಿಬಿ ಪೊಲೀಸರು ಆಕೆಯನ್ನು ಬಂಧಿಸಿದ್ದರು. 8 ಮಂದಿ ವಿರುದ್ಧ ದೂರ ದಾಖಲಾಗಿತ್ತು.
ಉಡುಪಿ ಕೃಷ್ಣಮಠದ ಬಳಿ ಆಕೆಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಕೂಡ ಆಕೆ ಭಾರೀ ಸದ್ದು ಮಾಡಿದ್ದರು. ಆವೇಶಭರಿತ ಮಾತುಗಳಿಂದ ಎಲ್ಲರ ಗಮನ ಸೆಳೆಯುತ್ತಿದ್ದರು. ಕೆಲ ವರ್ಷಗಳ ಹಿಂದೆ ಕುಕ್ಕೆ ದೇವಸ್ಥಾನದಲ್ಲಿ ಭಕ್ತರು ಹಾಗೂ ಚೈತ್ರಾ ನಡುವೆ ತಿಕ್ಕಾಟ ನಡೆದಿತ್ತು. ಲವ್ ಜಿಹಾದ್ ಹಾಗೂ ಮತಾಂತರದ ಬಗ್ಗೆಯೂ ಮಾತನಾಡಿ ವಿವಾದ ಸೃಷ್ಟಿಸಿದ್ದರು.
ನಮಗೆ ಆರ್ಎಸ್ಎಸ್ ಹಾಗೂ ಬಿಜೆಪಿ ನಾಯಕರ ಸಂಪರ್ಕ ಇದೆ ಎಂದು ಹೇಳಿಕೊಂಡು ಜನಪ್ರಿಯತೆ ಸಾಧಿಸುತ್ತಿದ್ದರು. ಉಡುಪಿಯಲ್ಲಿ ಹಿಜಾಬ್ ವಿವಾದದ ಬಗ್ಗೆಯೂ ತಮ್ಮ ಭಾಷಣಗಳಲ್ಲಿ ಮಾತನಾಡಿ ಸದ್ದು ಮಾಡಿದ್ದರು.


Click it and Unblock the Notifications











