Don't Miss!
- Sports IPL 2024: ಐಪಿಎಲ್ನಲ್ಲಿ ವಿಶಿಷ್ಟ ದಾಖಲೆ ಬರೆದ ಜಯದೇವ್ ಉನಾದ್ಕಟ್; ಈ ಸಾಧನೆ ಮಾಡಿದ ಮೊದಲ ಭಾರತೀಯ
- Technology iPhones: ಬೇಕಿತ್ತಾ ಇದೆಲ್ಲ? ನಕಲಿ ಐಫೋನ್ ಮೂಲಕ ಆಪಲ್ಗೆ ಪಂಗನಾಮ ಹಾಕಿದವನಿಗೆ ಜೈಲೂಟ
- News Priyank Kharge Life Threat: ಎನ್ಕೌಂಟರ್ ಮಾಡುವುದಾಗಿ ಪ್ರಿಯಾಂಕ್ ಖರ್ಗೆಗೆ ಜೀವ ಬೆದರಿಕೆ!
- Lifestyle ಮದ್ಯದ ಅಮಲಲ್ಲಿ ತೇಲಾಡುತ್ತಿದ್ದ ಶಿಕ್ಷಕನಿಗೆ ಮಕ್ಕಳಿಂದಲೇ ಚಪ್ಪಲಿ ಏಟು..!
- Finance 2.3 ಲಕ್ಷ ರೂಪಾಯಿಗೆ 9 ನಿಂಬೆಹಣ್ಣು ಹರಾಜು, ಏನಿದರ ವಿಶೇಷತೆ ತಿಳಿಯಿರಿ
- Automobiles ಬುಕ್ ಮಾಡಿದ ರೈಲಿನ ಸೀಟಿನಲ್ಲಿ ಬೇರೆಯವರು ಕೂತಿದ್ರೆ ಏನ್ ಮಾಡಬೇಕು ಗೊತ್ತಾ? ಸಿಂಪಲ್ ಪರಿಹಾರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
TRP ಎಂಬ ಮಾಯಾಲೋಕದೊಳಗೆ ವಾಹಿನಿಗಳ 'ದತ್ತುಪುತ್ರ' ಹನುಮಂತ
Recommended Video
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ 'ಸರಿಗಮಪ ಕಾರ್ಯಕ್ರಮ'ದ ಮೂಲಕ ಬೆಳಕಿಗೆ ಬಂದ ಗಾಯಕ ಹನುಮಂತ. ಈಗ ಕರ್ನಾಟಕದ ಮನೆ ಮನೆಯ ಮಾತು, ಕೆಲವು ಸುದ್ದಿ ಮಾಧ್ಯಮಗಳ ಪಾಲಿಗೆ ನಿತ್ಯ ಕನವರಿಕೆ. ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಚಿಲ್ಲೂರ-ಬಡ್ನಿ ಗ್ರಾಮದ ಈ ಹಳ್ಳಿ ಪ್ರತಿಭೆ ಸಿಗುತ್ತಿರುವಷ್ಟು ಪ್ರಚಾರ ಬಹುಶಃ ಇತ್ತೀಚಿನ ದಿನಗಳಲ್ಲಿ ಯಾವೊಬ್ಬ ರಾಜಕಾರಣಿ ಅಥವಾ ಸಿನಿಮಾ ಸ್ಟಾರ್ ನಟರಿಗೂ ಹೀಗೆ ಸಿಕ್ಕಿರುವ ಸಾಧ್ಯತೆಗಳಿಲ್ಲ. ಅಷ್ಟರ ಮಟ್ಟಿಗೆ ಇದು ಹನುಮಂತ ಮಾಧ್ಯಮಲೋಕದೊಳಗೆ ಸೃಷ್ಟಿಸಿರುವ ಅಲೆ ಎದ್ದು ಕಾಣಿಸುತ್ತಿದೆ.
ಮನರಂಜನೆ ವಾಹಿನಿಯ ರಿಯಾಲಿಟಿ ಶೋ ಒಂದರಲ್ಲಿ ಗಾಯಕನಾಗಿದ್ದ ಹನುಮಂತನಿಗೆ ಇಷ್ಟೊಂದು ಬೇಡಿಕೆ ಯಾಕೆ ಬಂತು? ಅದೇ ರಿಯಾಲಿಟಿ ಶೋನಲ್ಲಿ ವಿನ್ನರ್ಗೂ ಸಿಗದಷ್ಟು ಪ್ರಚಾರ ಈ ಕುರಿಗಾಹಿಗೆ ಹೇಗೆ ಯಾಕೆ? ಹನುಮಂತನಿಗೆ ಡಿಮ್ಯಾಂಡ್ ಇದೆ ಎಂದರೆ ಮಾರುಕಟ್ಟೆಯೊಂದು ಸೃಷ್ಟಿಯಾಗಿ ಅಂತ ಅರ್ಥ ಅಲ್ಲವಾ? ಹೀಗೊಂದಿಷ್ಟು ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಹೊರಟರೆ ಉತ್ತರ ಮತ್ತದೇ ಕುಖ್ಯಾತಿಗೆ ಒಳಗಾಗಿರುವ ಟಿ ಆರ್ ಪಿ ಅಥವಾ ಟೆಲಿವಿಜನ್ ರೇಟಿಂಗ್ ಪಾಯಿಂಟ್ಗೆ ಬಂದು ನಿಲ್ಲುತ್ತದೆ.
ಎಲ್ಲದಕ್ಕೂ ಕಾರಣ ಟಿ.ಆರ್.ಪಿ
ಮನರಂಜನೆ ವಾಹಿನಿ ಮೂಲಕ ಕರ್ನಾಟಕಕ್ಕೆ ಪರಿಚಯವಾದವನು ಹನುಮಂತ. ಹಾಗಂತ ಆತ ಮನರಂಜನೆ ಚೌಕಟ್ಟಿಗೆ ಮಾತ್ರವೇ ಸೀಮಿತವಾಗಿ ಉಳಿಯಲು ಕರ್ನಾಟಕದ ಸುದ್ದಿ ವಾಹಿನಿಗಳೂ ಬಿಡಲಿಲ್ಲ. ಎಷ್ಟರ ಮಟ್ಟಿಗೆ ಎಂದರೆ ಕೆಲವು ಸುದ್ದಿ ವಾಹಿನಿಗಳಲ್ಲಿ ಅರ್ಧ ಗಂಟೆಯ ಎಪಿಸೋಡು ಪ್ಲಾನ್ ಮಾಡುವಾಗ ಪ್ರತಿ ದಿನ ಹನುಮಂತನದೊಂದು ಕಾರ್ಯಕ್ರಮ ಇರಬೇಕು ಎಂಬ ಸಂಪ್ರದಾಯವೊಂದು ಬೆಳೆದು ನಿಂತಿದೆ. ಸುದ್ದಿ ವಾಹಿನಿಗಳ ಪಾಲಿಗೆ ಈತ ಇವತ್ತು ಜನರ ರೇಟಿಂಗ್ ತಂದುಕೊಡುವ 'ದತ್ತು ಪುತ್ರ'.
ರೇಟಿಂಗ್ ಲಾಸ್ ಆಗಲ್ಲ
"ಇತ್ತೀಚಿನ ದಿನಗಳಲ್ಲಿ ಇಷ್ಟರ ಮಟ್ಟಿಗೆ ಕಂಟಿನ್ಯುಟಿ ಉಳಿಸಿಕೊಂಡು ಮತ್ತೊಂದು ಮುಖ ನಮಗೆ ಸಿಗುವುದಿಲ್ಲ. ಹನುಮಂತನ ಕುರಿತು ಯಾವುದೇ ಎಪಿಸೋಡು ಮಾಡಿದರೂ ರೇಟಿಂಗ್ ಲಾಸ್ ಇಲ್ಲ. ಹಾಗಾಗಿ ವಾರಕ್ಕೆ ಕನಿಷ್ಟ ಐದು ಕಾರ್ಯಕ್ರಮಗಳನ್ನಾದರೂ ರೂಪಿಸುವ ಯೋಜನೆ ಜಾರಿಯಲ್ಲಿದೆ,'' ಎನ್ನುತ್ತಾರೆ ಸುದ್ದಿ ವಾಹಿನಿಯೊಂದರ ಪ್ರೋಗ್ರಾಂ ಪ್ರೊಡ್ಯೂಸರ್. ಸಾಮಾನ್ಯವಾಗಿ ಸುದ್ದಿ ವಾಹಿನಿಗಳು ಮನರಂಜನೆ ವಾಹಿನಿಗಳ ಪೈಪೋಟಿಯಲ್ಲಿ ಹಿಂದುಳಿಯುವ ಕಾರಣಕ್ಕೆ ಪ್ರಾದೇಶಿಕ ಭಾಷೆಯಲ್ಲಿ ಸುದ್ದಿ ಮತ್ತು ಮನರಂಜನೆ ಎಂಬ ಕಲಸುಮೇಲೊಗರವನ್ನು ಜನರಿಗೆ ಉಣಬಡಿಸಿಕೊಂಡು ಬಂದಿವೆ. ಇದೀಗ ಹನುಮಂತ ಎಂಬ ಕಾಮದೇನು ಅವರ ನಿರೀಕ್ಷೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ದಂತೆ ಕಾಣಿಸುತ್ತಿದೆ.
ಜೀ ಕನ್ನಡದ 'ದತ್ತು ಪುತ್ರ'
ಸರಿಗಮಪ ಶೋನಲ್ಲಿ ಹನುಮಂತನ ಕುರಿಗಾಹಿ ವೇಷ, ಆತನ ಮುಗ್ದತೆ, ಭಾಷೆ, ಹಾಡು ಎಲ್ಲವೂ ಕ್ಲಿಕ್ ಆಗಿತ್ತು. ಅದನ್ನೇ ಅಸ್ತ್ರವಾಗಿ ಬಳಸಿಕೊಂಡ ವಾಹಿನಿ, ಜನರನ್ನು ಆಕರ್ಷಿಸುವಂತೆ ಹನುಮಂತನ ಕುರಿತು ಕಂಟೆಂಟ್ ಹುಟ್ಟುಹಾಕಿತು. ಆ ಶೋ ಮುಗಿದಮೇಲೂ ಆತನನ್ನು ಬಿಡದ ತಂಡ, ಈಗ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಗೆ ಕರೆತಂದು ಕುಣಿಸುತ್ತಿದ್ದಾರೆ. ಪ್ರೋಫೆಷನಲ್ ಡ್ಯಾನ್ಸರ್ ಗಳಿಗಿಂತ ಹನುಮಂತನ ನೃತ್ಯಕ್ಕೆ ಹೆಚ್ಚು ಮನ್ನಣೆ ನೀಡಲಾಗುತ್ತಿದೆ. ಇದು ಮನರಂಜನೆ ದೃಷ್ಟಿಯಿಂದ ಖುಷಿಕೊಟ್ಟರೂ, ಸ್ಪರ್ಧೆಯ ದೃಷ್ಟಿಯಿಂದ ಇದು ಸರಿ ಕಾಣುವುದಿಲ್ಲ ಎನ್ನುವುದು ಕೆಲವು ವೀಕ್ಷಕರ ವೈಯಕ್ತಿಕ ಅಭಿಪ್ರಾಯ.
ಮತ್ತೊಂದು ರಿಯಾಲಿಟಿ ಶೋಗೆ ಎಂಟ್ರಿಯಾದ 'ಸರಿಗಮಪ' ಹನುಮಂತ
ವಾಹಿನಿಗಳ ಬಳಿ ಇದೆ 'ಹನುಮ ಅಸ್ತ್ರ'
ಜೀ ಕನ್ನಡ ವಾಹಿನಿಗೆ ಮಾತ್ರವಲ್ಲ, ಕೆಲವು ಸುದ್ದಿ ವಾಹಿನಿಗಳು ಹನುಮಂತ ಊಟಕ್ಕೆ ಉಪ್ಪಿನಕಾಯಿ ಇದ್ದಂತೆ. ಡ್ಯಾನ್ಸ್ ಶೋ, ಸಿಂಗಿಂಗ್ ಶೋ ವೇದಿಕೆ ಮೇಲೆ ಹನುಮ ಏನೇ ಮಾಡಿದ್ರು, ಮರುದಿನ ಸುದ್ದಿ ವಾಹಿನಿಯಲ್ಲಿ ಅರ್ಧಗಂಟೆ ಸ್ಪೆಷಲ್ ಕಾರ್ಯಕ್ರಮ ಪಕ್ಕಾ. ಕುರಿಗಾಹಿ, ಹನುಮ, ಚಿಲ್ಲೂರು ಬಡ್ನಿ, ಕುರಿಮ್ಯಾನ್, ಪೀಪಲ್ ಸ್ಟಾರ್ ಎಂದೆಲ್ಲ ಬಿಲ್ಡಪ್ ಕೊಟ್ಟು ಇಡೀ ಸಂಚಿಕೆ ತುಂಬ ವೈಭವಿಕರಿಸಲಾಗುತ್ತಿದೆ. ಹನುಮ ಮದ್ವೆ ಆಗುವ ಹುಡುಗಿ, ಹನುಮನಿಗೆ ಲವ್ ಆಗಿದೆ, ಅಕ್ಕನ ರಕ್ಷಣೆಗೆ ನಿಂತ ಹನುಮ, ಹನುಮ ಅಲ್ಲಿಗೆ ಹೋದ, ಅವರನ್ನ ಭೇಟಿ ಮಾಡಿದ ಹೀಗೆ ಸ್ವತಃ ಹನುಮನೇ ಅಚ್ಚರಿ ಪಡುವಂತೆ ಕೆಲವು ಕಾರ್ಯಕ್ರಮಗಳು ಬಂದಿರುವುದನ್ನ ಇಲ್ಲಿ ಗಮನಿಸಬಹುದು.
ಅಣಕು ಮಾಡಿದ್ದ ಹನುಮಂತ
ಇತ್ತೀಚಿಗಷ್ಟೆ ಜೀ ಕನ್ನಡದಲ್ಲಿ ಜೀ ಕುಟುಂಬ ಅವಾರ್ಡ್ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಅಂತ್ಯದಲ್ಲಿ ಹನುಮಂತನ ಕುರಿತು ಒಂದು ವಿಡಿಯೋ ಮಾಡಲಾಗಿತ್ತು. ಹನುಮಂತನನ್ನು ಸುದ್ದಿ ವಾಹಿನಿಗಳು ಹೇಗೆ ಆವರಿಸಿಕೊಂಡಿವೆ ಎಂದು ಅಣುಕು ಮಾಡಿ ತೋರಿಸಲಾಗಿತ್ತು. 'ಹನುಮಂತ ಟಾಯ್ಲೆಟ್ ಹೋದರೂ ಅದು ಬ್ರೇಕಿಂಗ್ ನ್ಯೂಸ್ ಆಗ್ತಿದೆ, ಯಾವುದಾದರೂ ಕಾರಿನ ಬಳಿ ನಿಂತರೆ ಅದು ಅವನದ್ದೇ ಕಾರು ಎನ್ನಲಾಗುತ್ತಿದೆ' ಎಂದೆಲ್ಲಾ ಬಿಂಬಿಸಿದ್ದರು. ಈ ವಿಡಿಯೋ ನೋಡಿದ್ಮೇಲೆ ಸ್ವತಃ ಹನುಮಂತನೇ ಅಚ್ಚರಿ ವ್ಯಕ್ತಪಡಿಸಿದ್ದರು. ನನ್ನ ಬಗ್ಗೆ ಇಷ್ಟೆಲ್ಲಾ ಆಗ್ತಿದ್ಯಾ ಎನ್ನುವುದು ನನ್ನ ಗಮನಕ್ಕೆ ಬರುತ್ತಿಲ್ಲ ಎನ್ನುವಂತೆ ವರ್ತಿಸಿದ್ದರು.
ಅತಿಯಾದ ಪ್ರಚಾರ 'ಆರೋಗ್ಯ ಹಾನಿಕರ'
ಸಾಮಾನ್ಯ ವ್ಯಕ್ತಿಗೆ ರಾತ್ರೋರಾತ್ರಿ ಸೆಲೆಬ್ರಿಟಿ ಪಟ್ಟ ಸಿಕ್ಕರೇ ಹೇಗಾಗಬೇಡ. ತನ್ನ ಪ್ರತಿಭೆ ಮೂಲಕ ಹನುಮಂತ ಒಂದು ಮಟ್ಟಕ್ಕೆ ಜನರ ಪ್ರೀತಿ ಗಳಿಸಿಕೊಂಡಿರುವುದು ನಿಜ. ಆದರೆ, ಆ ಖ್ಯಾತಿ ಅತಿಯಾದರೇ ಅದು ನಕರಾತ್ಮವಾಗಿಯೂ ಪರಿಣಾಮ ಬೀರಬಹುದು. ಹೀಗೆ ಟಿವಿ ಶೋಗಳ ಮೂಲಕ ಬೆಳಕಿಗೆ ಬಂದು, ಅತಿಯಾದ ಪ್ರಚಾರ ಪಡೆದು ದುರಂತ ಕಂಡಿರುವ ಉದಾಹರಣೆಗಳು ನಮ್ಮ ಕಣ್ಣ ಮುಂದಿದೆ. ಬುಡಕಟ್ಟು ಸಮುದಾಯದಿಂದ ಬಂದ ರಾಜೇಶ್ನನ್ನು ಇವತ್ತಿಗೆ ಸ್ಮರಿಸಿಕೊಳ್ಳದಿದ್ದರೆ ಆತ್ಮವಂಚನೆಯಾಗುತ್ತದೆ. ಮಾರುಕಟ್ಟೆಯ ಇಂತಹ ಅಪಸವ್ಯಗಳೇನೇ ಇರಲಿ, ಹನುಮಂತ ಇವೆಲ್ಲವನ್ನೂ ಅರ್ಥ ಮಾಡಿಕೊಂಡು ಒಂದೊಳ್ಳೆ ಬದುಕು ಕಟ್ಟಿಕೊಳ್ಳಲಿ ಎಂಬುದು ನಮ್ಮ ಹಾರೈಕೆ, ಅಷ್ಟೆ.