'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮಕ್ಕೆ ಸಿಕ್ಕ ಹೊಸ ಸಾರಥಿ ಇವರು!
Recommended Video

ಕನ್ನಡದ ಕಿರುತೆರೆಯ ಜನಪ್ರಿಯ ಕಾರ್ಯಕ್ರಮಗಳಲ್ಲಿ 'ಕನ್ನಡದ ಕೋಟ್ಯಾಧಿಪತಿ' ಕೂಡ ಒಂದು. ಈ ಕಾರ್ಯಕ್ರಮ ಬರೀ ಕನ್ನಡಕ್ಕೆ ಮಾತ್ರ ಸೀಮಿತವಾಗಿರದೆ ಹಿಂದಿಯಲ್ಲಿ ಸಹ ಬಂದಿದೆ. ಅಲ್ಲಿ ಅಮಿತಾಬ್ ಬಚ್ಚನ್ ತಮ್ಮ ಖಡಕ್ ಧ್ವನಿಯ ಮೂಲಕ ಕಾರ್ಯಕ್ರಮದ ನಿರೂಪಣೆ ಮಾಡುತ್ತಿದ್ದರು. ಕನ್ನಡದಲ್ಲಿ ನಟ ಪುನೀತ್ ರಾಜ್ ಕುಮಾರ್ ಈ ಕಾರ್ಯಕ್ರಮ ನೇತೃತ್ವ ವಹಿಸಿದ್ದರು.
'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮದ ಎರಡು ಸೀಸನ್ ಗಳು ಮುಗಿದಿದೆ. ಮೂರನೇ ಸೀಸನ್ ಶುರು ಮಾಡಬೇಕು ಎನ್ನುವುದು ಅನೇಕ ವೀಕ್ಷಕರ ಆಸೆ ಆಗಿದೆ. ಅದೇ ರೀತಿ ಸುವರ್ಣ ವಾಹಿನಿ ಕೂಡ ಈಗ ಮತ್ತೆ ತನ್ನ ಸೂಪರ್ ಹಿಟ್ ಕಾರ್ಯಕ್ರಮದ ಮೂಲಕ ಕಮ್ ಬ್ಯಾಕ್ ಮಾಡಲು ಸಜ್ಜಾಗಿದೆ. ಹೊಸದಾಗಿ ಬರುತ್ತಿರುವ ಈ ಕಾರ್ಯಕ್ರಮದಲ್ಲಿ ಪುನೀತ್ ರಾಜ್ ಕುಮಾರ್ ಬದಲು ನಟ ಯಶ್ ಇರುತ್ತಾರೆ ಎನ್ನುವ ಸುದ್ದಿ ಇತ್ತು.
ಆದರೆ ಈ ಕಾರ್ಯಕ್ರಮಕ್ಕೆ ಈಗ ಪುನೀತ್, ಯಶ್ ಬದಲು ಕನ್ನಡದ ಮತ್ತೊಬ್ಬ ನಟ ಸೇರಿಕೊಂಡಿದ್ದಾರೆ. ಮುಂದೆ ಓದಿ..

ರಮೇಶ್ ಅರವಿಂದ್
ಹಿರಿತೆರೆಯ ಸಿನಿಮಾಗಳು ಮಾತ್ರವಲ್ಲದೆ ಕಿರುತೆರೆಯಲ್ಲಿ ದೊಡ್ಡ ದೊಡ್ಡ ಜನಪ್ರಿಯ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿರುವ ಖ್ಯಾತಿ ಹೊಂದಿರುವ ನಟ ರಮೇಶ್ ಅರವಿಂದ್ ಈಗ 'ಕನ್ನಡ ಕೋಟ್ಯಾಧಿಪತಿ' ಕಾರ್ಯಕ್ರಮದ ಹೊಣೆ ಹೊತ್ತುಕೊಳ್ಳಲಿದ್ದಾರೆ ಎನ್ನುವ ಸುದ್ದಿ ಇದೆ. ಪುನೀತ್ ರಾಜ್ ಕುಮಾರ್ ನಂತರ ಈ ಕಾರ್ಯಕ್ರಮವನ್ನು ರಮೇಶ್ ನಿರ್ವಹಿಸುವ ಸಾಧ್ಯತೆ ಹೆಚ್ಚಾಗಿದೆ.

ಅಗ್ರಿಮೆಂಟ್ ಗಳಿಗೆ ಸಹಿ ಹಾಕುವುದು ಬಾಕಿ ಇದೆ
'ಕನ್ನಡ ಕೋಟ್ಯಾಧಿಪತಿ' ಕಾರ್ಯಕ್ರಮಕ್ಕೆ ರಮೇಶ್ ಅರವಿಂದ್ ಬರುವ ಬಗ್ಗೆ ಅಂತಿಮ ಹಂತದ ಮಾತುಕತೆ ನಡೆಯುತ್ತಿದೆ. ರಮೇಶ್ ಕಾರ್ಯಕ್ರಮದ ಅಗ್ರಿಮೆಂಟ್ ಗಳಿಗೆ ಸಹಿ ಹಾಕುವುದು ಬಾಕಿ ಇದೆ. ಅವುಗಳ ನಂತರ ರಮೇಶ್ ಕಾರ್ಯಕ್ರಮದ ನಿರೂಪಣೆ ಮಾಡುವುದು ಅಧಿಕೃತವಾಗಿ ಪಕ್ಕಾ ಆಗಲಿದೆ.

ಸಿನಿಮಾಗಳಲ್ಲಿ ಬಿಜಿ ಇರುವ ಪುನೀತ್
ಪುನೀತ್ ರಾಜ್ ಕುಮಾರ್ ಇತ್ತೀಚಿಗಷ್ಟೆ ತಮ್ಮ 'ಫ್ಯಾಮಿಲಿ ಪವರ್' ಕಾರ್ಯಕ್ರಮವನ್ನು ಮುಗಿಸಿದ್ದಾರೆ. ಇದರ ನಂತರ 'ನಟ ಸಾರ್ವಭೌಮ' ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಬಳಿಕ ಸಂತೋಷ್ ಆನಂದ್ ರಾಮ್ ನಿರ್ದೇಶಕದ ಸಿನಿಮಾದಲ್ಲಿ ಪುನೀತ್ ನಟಿಸಬೇಕಿದೆ. ಸಿನಿಮಾಗಳ ಕೆಲಸ ಇರುವ ಕಾರಣ ಅಪ್ಪು ಈ ಕಾರ್ಯಕ್ರಮದಿಂದ ಹಿಂದೆ ಸರಿದಿದ್ದಾರೆ.

ಯಶ್ ನೀಡಿದ ಸ್ಪಷ್ಟನೆ
ನಿನ್ನೆ ಸಂಜೆ ಫೇಸ್ ಬುಕ್ ಲೈವ್ ಬಂದ ಸಂದರ್ಭದಲ್ಲಿ ನಟ ಯಶ್ 'ಕನ್ನಡ ಕೋಟ್ಯಾಧಿಪತಿ' ಕಾರ್ಯಕ್ರಮದ ಬಗ್ಗೆ ಸಹ ಮಾತನಾಡಿದ್ದಾರೆ. ''ನನಗೆ ಈಗ 'ಕನ್ನಡದ ಕೋಟ್ಯಾದಿಪತಿ' ಕಾರ್ಯಕ್ರಮ ನಿರೂಪಣೆ ಮಾಡುವುದು ಕಷ್ಟ ಆಗುತ್ತದೆ. ಈಗ ಸಿನಿಮಾಗಳ ಕೆಲಸ ಇದೆ. ಮೂರ್ನಾಕು ಸ್ಕ್ರಿಪ್ಟ್ ಗಳನ್ನು ರೆಡಿ ಮಾಡುತ್ತಾ ಇದ್ದೇವೆ. ಒಂದುವರೆ ವರ್ಷ ತಡ ಆಗಿದೆ. ಇನ್ನೂ ತಡ ಆಗಬಾರದು ಅಂತ ಆಂಕರಿಂಗ್ ಕಡೆ ಅಷ್ಟು ಗಮನ ನೀಡುತ್ತಿಲ್ಲ. ಅದಕ್ಕೆ 'ಕನ್ನಡದ ಕೋಟ್ಯಾಧಿಪತಿ'ಗೆ ಇಲ್ಲ ಅಂತ ಹೇಳಿದ್ದೇನೆ.'' ಎಂದು ಯಶ್ ಸ್ಷಷ್ಟನೆ ನೀಡಿದ್ದಾರೆ.

'ವೀಕೆಂಡ್ ವಿತ್ ರಮೇಶ್' ಬಳಿಕ 'ಕನ್ನಡ ಕೋಟ್ಯಾಧಿಪತಿ'
ಜೀ ಕನ್ನಡ ವಾಹಿನಿಯ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮ ದೊಡ್ಡ ಮಟ್ಟದ ಜನಪ್ರಿತೆಯನ್ನು ಗಳಿಸಿತು. ಈ ಕಾರ್ಯಕ್ರಮ ರಮೇಶ್ ಅವರಿಗೆ ಸಹ ಒಳ್ಳೆಯ ಹೆಸರು ತಂದು ಕೊಟ್ಟಿತ್ತು. ಈ ಕಾರ್ಯಕ್ರಮದ ನಂತರ ರಮೇಶ್ ಆಗಮನಕ್ಕಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. 'ಕನ್ನಡ ಕೋಟ್ಯಾಧಿಪತಿ' ಮೂಲಕ ಮತ್ತೆ ರಮೇಶ್ ಟಿವಿಯಲ್ಲಿ ಬರಲಿದ್ದಾರೆ.

ಒಳ್ಳೆಯ ಆಯ್ಕೆ
'ಕನ್ನಡ ಕೋಟ್ಯಾಧಿಪತಿ' ಕಾರ್ಯಕ್ರಮಕ್ಕೆ ನಟ ರಮೇಶ್ ಅರವಿಂದ್ ಒಳ್ಳೆಯ ಆಯ್ಕೆ ಎನ್ನಬಹುದು. ಯಾಕೆಂದರೆ, ಕಿರುತೆರೆ ಕಾರ್ಯಕ್ರಮವನ್ನು ರಮೇಶ್ ತುಂಬ ಚೆನ್ನಾಗಿ ನಿಭಾಯಿಸುತ್ತಾರೆ. ಅವರ ಮಾತುಗಳನ್ನು ಕೇಳುವುದೇ ಒಂದು ಚಂದವಾಗಿರುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ಕನ್ನಡದ ವೀಕ್ಷಕರನ್ನು ಟಿವಿ ಮುಂದೆ ಕೂರಿಸುವ ಶಕ್ತಿ ಆ ನಟನಿಗೆ ಇದೆ.


Click it and Unblock the Notifications











