ಬಿಗ್ ಬಾಸ್ ಮನೆಗೆ ವಾಣಿ ಗೌಡ ? ಕಾಮಿಡಿ ಕಿಲಾಡಿಯ ಉತ್ತರ ಇಲ್ಲಿದೆ..!
ಇನ್ನೇನು ಈ ಭಾನುವಾರ (ಸೆಪ್ಟೆಂಬರ್ 28) ಕನ್ನಡದಲ್ಲಿ ''ಬಿಗ್ ಬಾಸ್'' ಕಾರ್ಯಕ್ರಮ ಆರಂಭ ಆಗಲಿದೆ. ಕಳೆದ ಹನ್ನೊಂದು ವರ್ಷದಿಂದ ಕಾಯಾ ವಾಚಾ ಮನಸಾದಿಂದ ಕಾರ್ಯಕ್ರಮ ಮುನ್ನಡೆಸಿಕೊಂಡು ಬಂದ ಸುದೀಪ್ ಈ ಬಾರಿ ಕೂಡ ಮನೆಯ ಜವಾಬ್ಧಾರಿ ವಹಿಸಿಕೊಂಡಿದ್ದಾರೆ. ಇನ್ನೂ.. ಪ್ರತಿ ವರ್ಷ ''ಬಿಗ್ ಬಾಸ್'' ಅಂದರೆ ಎಲ್ಲರ ಕಣ್ಣು ಅರಳುತ್ತೆ .. ಕುತೂಹಲ ಹೆಚ್ಚಾಗುತ್ತೆ.
ಆ ಭಾಷೆ.. ಈ ಭಾಷೆ ಅಂತಲ್ಲ. ಎಲ್ಲಾ ಭಾಷೆಯಲ್ಲಿ ಈ ವರ್ಷ ತಮ್ಮ ಇಷ್ಟದ ತಾರೆಯರು ''ಬಿಗ್ ಬಾಸ್'' ಮನೆಗೆ ಬರಬಹುದಾ ಎನ್ನುವ ಪ್ರಶ್ನೆ ಕಾಡಲು ಶುರುವಾಗುತ್ತೆ. ಇದಕ್ಕೆ ಪೂರಕವಾಗಿ ''ಬಿಗ್ ಬಾಸ್'' ಆರಂಭವಾಗುವ ಒಂದೆರಡು ತಿಂಗಳ ಮುಂಚೆಯೇ ಕೆಲವರ ಹೆಸರುಗಳು ಚಿತ್ರಸಂತೆಯಲ್ಲಿ ಕೇಳಿ ಬರಲು ಶುರುವಾಗುತ್ತವೆ.

ಇನ್ನು ''ಬಿಗ್ ಬಾಸ್'' ಕೇವಲ ಕಾರ್ಯಕ್ರಮ ಅಲ್ಲ. ಆಯೋಜಕರ ಪಾಲಿಗೆ ಮತ್ತು ವಾಹಿನಿಯ ಪಾಲಿಗೆ ಅದು ನಂಬರ್ ಗೇಮ್. ಒಂದೊಂದು ಎಪಿಸೋಡ್ ಜೊತೆ ಕೋಟ್ಯಂತರ ರೂಪಾಯಿಯ ವ್ಯವಹಾರ ನಡೆಯುತ್ತೆ. ಹೀಗಾಗಿಯೇ ''ಬಿಗ್ ಬಾಸ್'' ಆಯೋಜಕರು ಕೂಡ ಚಿತ್ರ-ವಿಚಿತ್ರ ಆಸಾಮಿಗಳನ್ನೇ ಮೊದಲು ಟಾರ್ಗೆಟ್ ಮಾಡುತ್ತಾರೆ. ವಿವಾದಾತ್ಮಕ ವ್ಯಕ್ತಿಗಳನ್ನು ಮನೆಯೊಳಗೆ ಕರೆತರಲು ಕಸರತ್ತು ಮಾಡುತ್ತಾರೆ.
ಈ ಕಾರಣಕ್ಕೆ ''ಬಿಗ್ ಬಾಸ್'' ಕಡೆಯಿಂದ ಕರೆ ಬಂದಿದ್ದೇ ತಡ ಹಲವು ತಾರೆಯರು ತಮ್ಮ ಕೆಲಸವನ್ನೆಲ್ಲಾ ಮರೆತು ''ಬಿಗ್ ಬಾಸ್'' ಅಡ್ರೆಸ್ ಹುಡುಕಿಕೊಂಡು ಹೋಗುತ್ತಾರೆ.ಈ ಸಾಲಿನಲ್ಲಿ ವಾಣಿ ಗೌಡ ಕೂಡ ಸೇರಿಕೊಳ್ಳುತ್ತಾರಾ ಎನ್ನುವ ಪ್ರಶ್ನೆ ಹಲವರಲ್ಲಿದೆ. ಇದಕ್ಕೆ ಪೂರಕವಾಗಿ ಈ ಬಾರಿ ಬಿಗ್ ಬಾಸ್ ಮನೆಗೆ ವಾಣಿ ಗೌಡ ಹೋಗ್ತಾರೆ ಎನ್ನುವ ಮಾತು ಬಲವಾಗಿ ಕೇಳಿ ಬರುತ್ತಿದೆ. ಹೀಗಾಗಿ ಇದೀಗ ಖುದ್ದು ವಾಣಿ ಗೌಡ ಉತ್ತರವನ್ನು ನೀಡಿದ್ಧಾರೆ.

ಹೌದು, ವಾಣಿ ಗೌಡ..''ಕಾಮಿಡಿ ಕಿಲಾಡಿಗಳು'' ಎರಡನೇ ಸೀಸನ್ನಲ್ಲಿ ತಮ್ಮ ಅಭಿನಯದಿಂದ ಅಸಂಖ್ಯಾತ ಕನ್ನಡಿಗರ ಹೃದಯ ಗೆದ್ದ ಚೆನ್ನರಾಯಪಟ್ಟಣದ ಚೆಲುವೆ. ''ಕಾಮಿಡಿ ಕಿಲಾಡಿಗಳು ಸೀಸನ್ 2''ರಲ್ಲಿ ಫೈನಲಿಸ್ಟ್ 7 ಜನರ ಪೈಕಿ ವಾಣಿ ಕೂಡ ಒಬ್ಬರಾಗಿದ್ದರು. ಇದಲ್ಲದೇ ''ಕ್ವಾಟ್ಲೆ ಕಿಚನ್''ನಲ್ಲಿ ಕೂಡ ಮಿಂಚಿದರು. ಇನ್ನೇನು ''ಕ್ವಾಟ್ಲೆ ಕಿಚನ್'' ಫಿನಾಲೆ ಹಂತಕ್ಕೆ ತಲುಪಿದೆ. ಇದೇ ಸಮಯದಲ್ಲಿ ವಾಣಿ ಗೌಡ ಹೆಸರು ''ಬಿಗ್ ಬಾಸ್'' ಮನೆಯ ಸುತ್ತ ಮುತ್ತ ಕೇಳಿ ಬರುತ್ತಿದೆ. ಈ ಹಿನ್ನೆಲೆ ನಿಮ್ಮ ''ಫಿಲ್ಮಿಬೀಟ್ ಕನ್ನಡ'' ಜೊತೆ ಮಾತನಾಡಿರುವ ವಾಣಿ ಗೌಡ ಹರಡಿರುವ ಸುದ್ದಿಯ ಕುರಿತು ಸ್ಪಷ್ಟನೆ ನೀಡಿದ್ಧಾರೆ.
ಈ ಕುರಿತು ''ಫಿಲ್ಮಿಬೀಟ್ ಕನ್ನಡ'' ಜೊತೆ ಮಾತನಾಡಿರುವ ವಾಣಿ ಗೌಡ, ''ಸಾಮಾಜಿಕ ಜಾಲತಾಣದಲ್ಲಿ ಈ ಬಾರಿ ನಾನು ''ಬಿಗ್ ಬಾಸ್'' ಮನೆಗೆ ಹೋಗ್ತಿರುವ ಕುರಿತು ವ್ಯಾಪಕವಾದ ಸುದ್ದಿ ಹಬ್ಬಿದೆ. ಚರ್ಚೆ ನಡೆಯುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ನನ್ನ ಹೆಸರು ಹರಿದಾಡುತ್ತಿರುವ ಹಿನ್ನೆಲೆ ಅನೇಕರು ನಾನು ಹೋಗಬಹುದು ಎಂದುಕೊಂಡಿದ್ದಾರೆ. ಆದರೆ ವಾಸ್ತವದಲ್ಲಿ ನನಗೆ ''ಬಿಗ್ ಬಾಸ್'' ಕಡೆಯಿಂದ ಇನ್ನೂ ಯಾವ ಕಾಲ್ ಕೂಡ ಬಂದಿಲ್ಲ. ಆದರೆ ಆಕಸ್ಮಾತ್ ಅಲ್ಲಿಂದ ನನಗೆ ಕರೆ ಬಂದರೆ ನೋಡೋಣ.. ಹೋಗೋಣ''.. ಎಂದು ಹೇಳಿದ್ದಾರೆ. ಈ ಮೂಲಕ ಅಂತೆ-ಕಂತೆಗಳಿಗೆ ಬ್ರೇಕ್ ಹಾಕುವ ಪ್ರಯತ್ನವನ್ನು ವಾಣಿ ಗೌಡ ಮಾಡಿದ್ದಾರೆ.

ಇನ್ನುಳಿದಂತೆ ಗೀತಾ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದ ಧನುಷ್, ಉತ್ತರ ಕರ್ನಾಟಕದ ಪ್ರತಿಭೆ ಪ್ರಿಯಾ ಸವದಿ, ಕಾಮಿಡಿ ಕಿಲಾಡಿ ಸೂರಜ್, ಶ್ವೇತಾ ಪ್ರಸಾದ್, ಅನನ್ಯಾ ಅಮರ್ ಹೀಗೆ ಹಲವರು ಈ ಬಾರಿ ''ಬಿಗ್ ಬಾಸ್''ನಲ್ಲಿ ಭಾಗವಹಿಸಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಲಿಸ್ಟ್ ಕೂಡ ವೈರಲ್ ಆಗಿದೆ. ಈ ಪೈಕಿ ಯಾರೆಲ್ಲಾ ಈ ಬಾರಿ ಒಳಗೆ ಹೋಗುತ್ತಾರೆ ಎನ್ನುವುದಕ್ಕೆ ಅಧಿಕೃತ ಉತ್ತರ ಈ ಭಾನುವಾರ (ಸೆಪ್ಟೆಂಬರ್ 28) ಸಂಜೆಯೇ ಸಿಗಲಿದೆ.


Click it and Unblock the Notifications











