ಬಿಗ್ಬಾಸ್ ಕನ್ನಡ ದಿಢೀರ್ ಸುದ್ದಿಗೋಷ್ಠಿ; ಹೊಸ ನಿರೂಪಕನ ಬಗ್ಗೆ ಬಿಗ್ ಸರ್ಪ್ರೈಸ್
ಕನ್ನಡ ಕಿರುತೆರೆಯಲ್ಲಿ ಬಿಗ್ಬಾಸ್ ಶೋ 11 ಸೀಸನ್ಗಳಲ್ಲಿ ವೀಕ್ಷಕರನ್ನು ರಂಜಿಸಿದೆ. ಶೀಘ್ರದಲ್ಲೇ ಹೊಸ ಸೀಸನ್ ಶುರುವಾಗಲಿದೆ. ಆದರೆ ಈ ಬಾರಿ ಯಾರು ಶೋ ನಿರೂಪಣೆ ಮಾಡುತ್ತಾರೆ ಎನ್ನುವ ಕುತೂಹಲ ವೀಕ್ಷಕರಲ್ಲಿದೆ. ಹಿಂದಿನ ಎಲ್ಲಾ ಸೀಸನ್ಗಳ ಸಾರಥ್ಯವನ್ನು ಸುದೀಪ್ ವಹಿಸಿಕೊಂಡಿದ್ದರು. ಈ ಬಾರಿ ಬದಲಾವಣೆ ಕಾದಿದ್ಯಾ?
ನಟ ಸುದೀಪ್ "ನಾನು ಬಿಗ್ಬಾಸ್ ಶೋನಿಂದ ಹೊರಬರ್ತಿದ್ದೀನಿ. ಮುಂದಿನ ಸೀಸನ್ ನಿರೂಪಣೆ ಮಾಡಲ್ಲ" ಎಂದಿದ್ದಾರೆ. ಈ ಬಗ್ಗೆ ಬಹಳ ಹಿಂದೆಯೇ ಟ್ವೀಟ್ ಮಾಡಿದ್ದರು. ಶೋ ಆಯೋಜಕರ ಜೊತೆಗಿನ ಭಿನ್ನಾಭಿಪ್ರಾಯಗಳಿಂದ ಕಿಚ್ಚ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿತ್ತು. ಅವರ ನಿರ್ಧಾರ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಕೆಲವರು ಮಾತ್ರ ಅದನ್ನು ಸ್ವಾಗತಿಸಿದ್ದಾರೆ. ಇದೆಲ್ಲದರ ನಡುವೆ ಮುಂದಿನ ಸೀಸನ್ ಕಥೆ ಏನು? ಎನ್ನುವ ಕುತೂಹಲ ಮೂಡಿದೆ.

ಸದ್ಯ ಕಲರ್ಸ್ ಕನ್ನಡ ವಾಹಿನಿ ಬಿಗ್ಬಾಸ್ ಶೋ ಸಂಬಂಧ ಸುದ್ದಿಗೋಷ್ಠಿ ಕರೆದಿದೆ. ಇಂದು (ಜೂನ್ 30) ಸಂಜೆ ಎಂಜಿ ರಸ್ತೆಯ ತಾಜ್ ಹೋಟೆಲ್ನಲ್ಲಿ ಮಾಧ್ಯಮ ಮಿತ್ರರನ್ನು ಪತ್ರಿಕಾಗೋಷ್ಠಿಗೆ ಆಹ್ವಾನಿಸಲಾಗಿದೆ. ಇದು ಸಹಜವಾಗಿಯೇ ಕುತೂಹಲ ಹೆಚ್ಚಿಸಿದೆ. ಸೀಸನ್ 12ರ ನಿರೂಪಕನ ಬಗ್ಗೆ ಬಿಗ್ ಅಪ್ಡೇಟ್ ಕಾದಿದೆ. ನಾನು ಶೋ ನಿರೂಪಣೆ ಮಾಡಲ್ಲ ಎಂದು ಸುದೀಪ್ ಹೇಳಿದ್ದಾರೆ. ಹಾಗಿದ್ದರೆ ಮತ್ಯಾರು ಮುಂದಿನ ನಿರೂಪಕ ಎನ್ನುವ ಚರ್ಚೆ ಕೂಡ ನಡೀತಿದೆ.
ರಿಷಬ್ ಶೆಟ್ಟಿ ಅಥವಾ ಗಣೇಶ್ ಬಿಗ್ಬಾಸ್ ಕನ್ನಡ ಸೀಸನ್ 12 ಅನ್ನು ನಿರೂಪಣೆ ಮಾಡುತ್ತಾರೆ ಎನ್ನುವ ಊಹಾಪೋಹ ಕೂಡ ಇದೆ. ಮತ್ತೊಂದು ಕಡೆ ಬಿಗ್ಬಾಸ್ ಆಯೋಜಕರ ಜೊತೆಗಿನ ಸುದೀಪ್ ಭಿನ್ನಾಭಿಪ್ರಾಯ ಶಮನವಾಗಿದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಇತ್ತೀಚೆಗೆ ಮಾಧ್ಯಮಗಳಲ್ಲಿ ಈ ಬಗ್ಗೆ ಸುದ್ದಿ ಪ್ರಕಟವಾಗಿತ್ತು. ಸಂದರ್ಶನವೊಂದರಲ್ಲಿ ಸ್ವತಃ ಸುದೀಪ್ ಅವರಿಗೆ ಈ ಪ್ರಶ್ನೆ ಎದುರಾಗಿತ್ತು. ಆಗ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಸುದೀಪ್ ಉತ್ತರಿಸಿದ್ದರು.
ಸಂಜೆ ನಡೆಯುವ ಬಿಗ್ಬಾಸ್ ಸುದ್ದಿಗೋಷ್ಠಿಯಲ್ಲಿ ನಟ ಸುದೀಪ್ ಕೂಡ ಭಾಗಿ ಆಗುತ್ತಾರೆ ಎನ್ನಲಾಗ್ತಿದೆ. ಎಲ್ಲಾ ಗೊಂದಲಗಳಿಗೆ ಸುದೀಪ್ ಬ್ರೇಕ್ ಹಾಕಲು ಮುಂದಾಗಿದ್ದಾರೆ. ಶೀಘ್ರದಲ್ಲೇ ಸೀಸನ್ 12ರ ಪ್ರೋಮೊ ಚಿತ್ರೀಕರಣಕ್ಕೆ ಸಿದ್ಧತೆ ನಡೀತಿದೆ. ಸುದೀಪ್ ಮತ್ತೊಮ್ಮೆ ಬಿಗ್ಬಾಸ್ ವೇದಿಕೆ ಏರುವುದು ಖಚಿತ ಎನ್ನುವ ಮಾತುಗಳು ಕೇಳಿಬರ್ತಿದೆ. ಈ ವಿಚಾರ ಸಹಜವಾಗಿಯೇ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ.
ಇತ್ತೀಚೆಗೆ ರಿಪಬ್ಲಿಕ್ ಕನ್ನಡ ಸಂದರ್ಶನದಲ್ಲಿ ಮತ್ತೆ ಶೋ ನಿರೂಪಣೆ ಬಗ್ಗೆ ಪ್ರತಿಕ್ರಿಯಿಸಿದ್ದರು. "ಈ ಬಗ್ಗೆ ಸಾಕಷ್ಟು ಪ್ರಶ್ನೆಗಳಿವೆ, ಚರ್ಚೆ ಇದೆ. ಊಹಾಪೋಹಗಳಿವೆ. ಯಾವ ವೇದಿಕೆಯಲ್ಲಿ ಉತ್ತರಗಳ ಸಮೇತ ನಾನು ಅದನ್ನು ಹೇಳ್ತಿನೋ, ಯಾಕೆ, ಏನೆಲ್ಲಾ ಆಯ್ತು ಎಂದು. ಆಗ ಅದಕ್ಕೆ ಸರಿಯಾದ ಆರಂಭ, ಅಂತ್ಯ ಸಿಗುತ್ತದೆ. ಇವತ್ತು ಏನೇ ಮಾತನಾಡಿದರೂ ಅದು ಅರ್ಧಬರ್ಧ ಟಾಪಿಕ್ ಆಗುತ್ತೆ. ಎಲ್ಲಾ ಕ್ಲಿಯರ್ ಆದಮೇಲೆ ಮಾತಾಡ್ತೀನಿ" ಎಂದಿದ್ದರು. ಇವತ್ತಿನ ಸುದ್ದಿಗೋಷ್ಠಿಯೇ ಅದಕ್ಕೆ ಆ ವೇದಿಕೆ ಆಗಲಿಲ್ಲ. ಎಲ್ಲಾ ಪ್ರಶ್ನೆಗಳಿಗೆ ಕಿಚ್ಚ ಉತ್ತರ ಕೊಡುವ ನಿರೀಕ್ಷೆಯಿದೆ.
ಇತ್ತೀಚೆಗೆ ತೆಲುಗು ಬಿಗ್ಬಾಸ್ ಸೀಸನ್ 9ರ ಪ್ರೋಮೊ ಸಹ ಬಂದಿದೆ. ನಾಗಾರ್ಜುನ ಮತ್ತೆ ಶೋ ನಿರೂಪಣೆ ಮಾಡುತ್ತಿದ್ದಾರೆ. ಈ ಬಾರಿ ಜನಸಾಮಾನ್ಯರಿಗೂ ಬಿಗ್ಬಾಸ್ ಮನೆ ಒಳಕ್ಕೆ ಸ್ಪರ್ಧಿಗಳಾಗಿ ಹೋಗುವ ಅವಕಾಶ ಸಿಗುತ್ತಿದೆ. ಕನ್ನಡದಲ್ಲಿ ಈ ಹಿಂದೆ ಇಂತಹ ಪ್ರಯತ್ನ ನಡೆದಿತ್ತು. ಸೀಸನ್ 12ರಲ್ಲಿ ಮತ್ತೆ ಅದನ್ನು ಮುಂದುವರೆಸುತ್ತಾರಾ ಕಾದು ನೋಡಬೇಕಿದೆ. ಇನ್ನು ಯಾರೆಲ್ಲಾ ದೊಡ್ಮನೆ ಒಳಗೆ ಹೋಗುತ್ತಾರೆ ಎನ್ನುವ ಕುತೂಹಲ ಮುಂದುವರೆದಿದೆ.


Click it and Unblock the Notifications











