Seetha Rama ; ಡಾ.ಮೇಘಶ್ಯಾಮ್ ನಟನೆಯ ಪಯಣ : ಅರ್ಜುನ್ ಬಗ್ಗೆ ನಿಮಗೆಷ್ಟು ಗೊತ್ತು..?
ಸೀತಾರಾಮ ಧಾರಾವಾಹಿಯಲ್ಲಿ ಮೇಘಶ್ಯಾಮ್ ಪಾತ್ರ ಎಲ್ಲರಿಗೂ ಚಿರಪರಿಚಿತವೇ. ಡಾ. ಮೇಘಶ್ಯಾಮ್ ಮಕ್ಕಳ ವೈದ್ಯನಾಗಿದ್ದು, ತನಗೇ ಮಕ್ಕಳಿರುವುದಿಲ್ಲ. ಇದಕ್ಕೆ ಕಾರಣ ಮೇಘಶ್ಯಾಮ್ ಹೆಂಡತಿ. ಶಾಲಿನಿಗೆ ಮಕ್ಕಳು ಎಂದರೆ ಇಷ್ಟವಿರುವುದಿಲ್ಲ. ಜೊತೆಗೆ ತಾನು ತಾಯಿ ಆದರೆ, ಎಲ್ಲಿ ತನ್ನ ಸೌಂದರ್ಯ ಹಾಳಾಗುತ್ತದೆಯೋ ಎಂಬ ಭಾವನೆಯೂ ಇದೆ. ಹಾಗಾಗಿ ಮೇಘಶ್ಯಾಮ್ ಮತ್ತು ಶಾಲಿನಿ ಬಾಡಿಗೆ ತಾಯಿ ಮೂಲಕ ಮಕ್ಕಳನ್ನು ಮಾಡಿಕೊಳ್ಳಲು ಮುಂದಾಗಿರುತ್ತಾರೆ. ಆದರೆ, ತಮ್ಮ ಮಗು ಸತ್ತಿದೆ ಎಂದು ಭಾವಿಸಿರುತ್ತಾರೆ.
ಮಗುವಿಗಾಗಿ ಮೇಘಶ್ಯಾಮ್ ಪರದಾಟ
ಶಾಲಿನಿ ಆ ಮಗುವನ್ನು ನೋಡಿಕೊಳ್ಳುವುದು ಹೇಗೆ ಎಂದು ಹೆದರಿ, ಮಗು ಸತ್ತಿದೆ ಎಂದು ಮೇಘಶ್ಯಾಮ್ ಗೆ ಹೇಳಿರುತ್ತಾಳೆ. ಮಗು ಜನಿಸಿದಾಗ ವೈದ್ಯರು ಎಷ್ಟೇ ಫೋನ್ ಮಾಡಿದರೂ ಕೂಡ ರಿಸೀವ್ ಮಾಡಿರುವುದಿಲ್ಲ. ಹೀಗಾಗಿ ಮಗು ತಮ್ಮ ಕೈ ತಪ್ಪಿ ಹೋಗಿರುತ್ತದೆ. ಆದರೆ, ಈಗ ಮಗು ಬದುಕಿದೆ ಎಂಬ ವಿಚಾರ ತಿಳಿದು ಶ್ಯಾಮ್ ಮಗುವಿಗಾಗಿ ಹುಡುಕಾಟ ನಡೆಸುತ್ತಿದ್ದಾನೆ. ಪತ್ನಿ ಶಾಲಿನಿ ಹೇಳಿದ ಒಂದು ಸುಳ್ಳಿನಿಂದ ತಾನು ಮಗುವಿನಿಂದ ದೂರ ಉಳಿಯ ಬೇಕಾಯ್ತು ಎಂದು ಬೇಸರ ಮಾಡಿಕೊಳ್ಳುತ್ತಾನೆ. ವೈದ್ಯರು ಕೂಡ ಶ್ಯಾಮ್ ಗೆ ಮಗು ಬಗ್ಗೆ ಮಾಹಿತಿ ನೀಡಲು ನಿರಾಕರಿಸುತ್ತಾರೆ. ಅಂದು ಅಷ್ಟು ಫೋನ್ ಮಾಡಿದರೂ ಬರಲಿಲ್ಲ. ಅಲ್ಲದೇ, ಮಗುವನ್ನು ಬಾಡಿಗೆ ತಾಯಿಯೇ ಸಾಕುತ್ತಿದ್ದು, ಈಗ ಆಕೆಯಿಂದ ಮಗುವನ್ನು ದೂರ ಮಾಡುವುದು ತಪ್ಪಾಗುತ್ತದೆ ಎಂಬುದು ವೈದ್ಯರ ಆಲೋಚನೆಯಾಗಿದೆ.

ಸಿಂಚನಾ ಜೊತೆಗೆ ಮದುವೆಯಾಗಿರುವ ನಟ
ಡಾ.ಮೇಘಶ್ಯಾಮ್ ಪಾತ್ರವನ್ನು ವೀಕ್ಷಕರು ಮೆಚ್ಚಿಕೊಂಡಿದ್ದು. ಈ ಪಾತ್ರವನ್ನು ನಿರ್ವಹಿಸುತ್ತಿರುವ ವ್ಯಕ್ತಿಯ ಹೆಸರು ಅರ್ಜುನ್. ಮೊದಲು ನಾಗಾರ್ಜುನ ಎಂದು ಹೆಸರಿಟ್ಟುಕೊಂಡಿದ್ದವರು, ತದ ನಂತರ ಅರ್ಜುನ ಎಂದು ಬದಲಾಯಿಸಿಕೊಂಡಿದ್ದಾರೆ. ಇನ್ನು ಇತ್ತೀಚೆಗಷ್ಟೇ ಕಿರುತೆರೆಯಲ್ಲಿ ಪರಿಚಿತರಾಗಿರುವ ನಟ ಅರ್ಜುನ ಅವರು ಈಗಾಗಲೇ ಸಾಕಷ್ಟು ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅರ್ಜುನ್ ಅವರ ಪಾತ್ರನ್ನು ಮೆಚ್ಚಿಕೊಂಡ ಅದೆಷ್ಟೋ ಹುಡುಗಿಯರಿಗೆ ಶಾಕಿಂಗ್ ವಿಚಾರವೂ ಒಂದಿದೆ. ಅದೇನೆಂದರೆ, ಅರ್ಜುನ್ ಅವರಿಗೆ ಈಗಾಗಲೇ ಮದುವೆಯಾಗಿರುವುದು. ಹೌದು ನಟ ಅರ್ಜುನ್ ಅವರು ಕಳೆದ ಆರು ವರ್ಷಗಳ ಹಿಂದೆಯೇ ಮದುವೆಯಾಗಿದ್ದು, ಅವರಿಗೆ ಮಗು ಕೂಡ ಇದೆ. ಹೆಂಡತಿಯ ಹೆಸರು ಸಿಂಚನಾ.
ಕಿರುತೆರೆಯಲ್ಲಿ ಸಾಲು ಸಾಲು ಪಾತ್ರಗಳು
ಇನ್ನು ಅರ್ಜುನ್ ಅವರು ಮಗಳು ಜಾನಕಿ ಧಾರಾವಾಹಿ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ್ದಾರೆ. ಮಗಳು ಜಾನಕಿಯಲ್ಲಿ ಆನಂದ್ ಬೆಳಗೂರು ಪಾತ್ರದಲ್ಲಿ ಮಿಂಚಿದ್ದರು. ಬಳಿಕ ಸುಬ್ಬಲಕ್ಷ್ಮೀ ಸಂಸಾರ ಧಾರಾವಾಹಿಯಲ್ಲಿ ಅರುಣ್ ಪ್ರಸಾದ್ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ತದ ನಂತರ ಮತ್ತೆ ಮಾಯಾಮೃಗ ಧಾರಾವಾಹಿಯಲ್ಲಿ ಡಾ. ಶಂಕರ್ ದತ್ತ ಆಗಿ ನಟಿಸಿದ್ದರು. ಇದೀಗ ಸೀತಾರಾಮ ಧಾರಾವಾಹಿಯಲ್ಲೂ ವೈದ್ಯನಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಅರ್ಜುನ್ ಅವರು ಮೊದಲು ಬಣ್ಣ ಹಚ್ಚಿದ್ದು ಕಾಳಜ್ಞಾನಿ ಕನಕ ಪಾತ್ರಕ್ಕೆ. ತದ ನಂತರ ಕಿರುತೆರೆ ಹಾಗೂ ಸ್ಯಾಂಡಲ್ ವುಡ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಯಶ್, ಡಾಲಿ, ಸುದೀಪ್ ಜೊತೆಗೆ ನಟನೆ
ಹೌದು ನಟ ಅರ್ಜುನ್ ಅವರು ಕೆಜಿಎಫ್, ಶುದ್ಧಿ, ಅಮರಾವತಿ, ಹೋಯ್ಸಳ, ಮ್ಯಾಕ್ಸ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವನ್ನು ಹೊರತು ಪಡಿಸಿ ಆಲ್ಬಂ ಸಾಂಗ್ ನಲ್ಲೂ ಕಾಣಿಸಿಕೊಂಡಿದ್ದಾರೆ. ಮ್ಯಾಕ್ಸ್ ಸಿನಿಮಾದಲ್ಲಿ ಸುದೀಪ್ ಜೊತೆ ನಟಿಸಿದ್ದು, ಪ್ರಮುಖ ಪೊಲೀಸ್ ಆಫೀಸರ್ ಪಾತ್ರದಲ್ಲಿ ನಟಿಸಿದ್ದಾರೆ. ಕೆಜಿಎಫ್-2ನಲ್ಲಿ ಸಿಬಿಐ ಆಫೀಸರ್ ಆಗಿ ನಟಿಸಿದ್ದರು. ಉಳಿದ ಸಿನಿಮಾಗಳಲ್ಲೂ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ


Click it and Unblock the Notifications











