Karna ; ಅಯ್ಯೋ ದೇವರೇ, ಕರ್ಣನಿಗೆ ಇನ್ನೂ ನಾಯಕಿಯೇ ಸಿಕ್ಕಿಲ್ವಾ ?
ಕನ್ನಡ ಕಿರುತೆರೆಯಲ್ಲಿ ಇದ್ದಕ್ಕಿದ್ದ ಹಾಗೆಯೇ ಹೊಸ ಧಾರಾವಾಹಿಗಳ ಪರ್ವ ಶುರುವಾಗುತ್ತದೆ. ಎಲ್ಲಾ ಕನ್ನಡ ವಾಹಿನಿಗಳಲ್ಲೂ ಸಾಲಾಗಿ ಹೊಸ ಧಾರಾವಾಹಿಗಳು ಪ್ರಸಾರವಾಗುತ್ತಿವೆ. ಈಗ ಕೂಡ ಹೊಸ ಧಾರಾವಾಹಿಗಳ ಪರ್ವ ಆರಂಭವಾಗಿದ್ದು, ಕೆಲ ಧಾರಾವಾಹಿಗಳು ಶುರುವಾಗಿದ್ದರೆ, ಮತ್ತೆ ಕೆಲವು ಸ್ಲಾಟ್ ಗಾಗಿ ಕಾಯುತ್ತಿವೆ. ಇನ್ನೂ ಕೆಲ ಧಾರಾವಾಹಿಗಳು ಶೂಟಿಂಗ್ ಶುರುವಾಗುವ ಹಂತದಲ್ಲೇ ಇವೆ.
ಈಗಾಗಲೇ ಜೀ ಕನ್ನಡ ವಾಹಿನಿಯಲ್ಲಿ ಶ್ರೀರಸ್ತು ಶುಭಮಸ್ತು, ಪುಟ್ಟಕ್ಕನ ಮಕ್ಕಳು ಧಾರಾವಾಹಿಗಳು ಮುಗಿಯುವ ಲಕ್ಷಣಗಳು ಕಾಣಿಸುತ್ತಿವೆ. ಈ ಜಾಗಕ್ಕೆ ಬರಲು ಹೊಸ ಧಾರಾವಾಹಿಗಳು ಕೂಡ ತಯಾರಿ ನಡೆಸಿವೆ.

ಕರ್ಣನಿಗಾಗಿ ಕಾದು ಕುಳಿತ ವೀಕ್ಷಕರು
ಕಳೆದ ವಾರವಷ್ಟೇ ಜೀ ಕನ್ನಡ ವಾಹಿನಿಯಲ್ಲಿ ಹೊಸ ಧಾರಾವಾಹಿಯ ಪ್ರೊಮೋ ಒಂದನ್ನು ರಿಲೀಸ್ ಮಾಡಲಾಗಿತ್ತು. ಪ್ರೋಮೋ ನೋಡಿದ ವೀಕ್ಷಕರಲ್ಲಿ ಹರ್ಷೋದ್ಘಾರ ಉಕ್ಕಿ ಹರಿಯುತ್ತಿದೆ. ಯಾಕೆಂದರೆ ಈ ಹೊಸ ಧಾರಾವಾಹಿಯ ನಟನ ಕ್ರೇಜ್. ಹೌದು ನಟ ಕಿರಣ್ ರಾಜ್ ಹಲವು ಸಿನಿಮಾ ಪ್ರಾಜೆಕ್ಟ್ ಗಳ ನಡುವೆಯೂ ಸೀರಿಯಲ್ ನಲ್ಲಿ ನಟಿಸಲು ಮುಂದಾಗಿದ್ದಾರೆ. ನಿರ್ಮಾಪಕಿ ಶ್ರುತಿ ನಾಯ್ಡು ನಿರ್ಮಾಣ ಮಾಡುತ್ತಿರುವ ಕರ್ಣ ಧಾರಾವಾಹಿಯ ಪ್ರೊಮೋದ ತುಣುಕಗಳೇ ಎಲ್ಲೆಲ್ಲೂ ಹರಿದಾಡುತ್ತಿವೆ. ಕಲರ್ಸ್ ಕನ್ನಡದಲ್ಲಿ ಮೂಡಿ ಬಂದ ಕನ್ನಡತಿ ಸೀರಿಯಲ್ ಸೂಪರ್ ಹಿಟ್ ಆಗಿತ್ತು. ಇಂದಿಗೂ ಈ ಧಾರಾವಾಹಿಯ ಭಾಗ-2 ಮೂಡಿಬರಲಿ ಎಂದೇ ವೀಕ್ಷಕರು ಬಯಸುತ್ತಿದ್ದಾರೆ.
ಮೇಲ್ ಓರಿಯಂಟೆಡ್ ಕಥೆ
ಆದರೆ, ಇದರ ಬದಲು ಈಗ ನಟ ಕಿರಣ್ ರಾಜ್ ಅವರು ಹೊಸ ಧಾರಾವಾಹಿಗೆ ನಾಯಕನಾಗಿ ಮಿಂಚಲು ಮುಂದಾಗಿದ್ದಾರೆ. ಎಲ್ಲಾ ಧಾರಾವಾಹಿಗಳಲ್ಲೂ ಹೆಣ್ಣು ಮಕ್ಕಳದ್ದೇ ಕಾರುಬಾರು. ಆದರೆ, ಕರ್ಣ ಧಾರಾವಾಹಿಯು ಮೇಲ್ ಓರಿಯೆಂಟೆಡ್ ಕಥೆಯಾಗಿದೆ. ಹೀಗಾಗಿ ಕಿರಣ್ ರಾಜ್ ಅವರು ಈ ಧಾರಾವಾಹಿಯನ್ನು ಒಪ್ಪಿಕೊಂಡಿದ್ದಾರೆ. ಈಗಾಗಲೇ ಈ ಧಾರಾವಾಹಿಯಲ್ಲಿ ದೊಡ್ಡ ತಾರಾ ಬಳಗವೇ ಇದೆ. ಪ್ರೋಮೋದಲ್ಲಿ ಸದ್ಯ ಡಾಕ್ಟರ್ ಪಾತ್ರದಲ್ಲಿರುವ ಕರ್ಣ ಅಲಿಯಾಸ್ ನಟ ಕಿರಣ್ ರಾಜ್ ಕುಟುಂಬವನ್ನಷ್ಟೇ ತೋರಿಸಲಾಗಿದೆ. ಆದರೆ, ನಾಯಕಿ ಯಾರು ಮತ್ತು ಧಾರಾವಾಹಿ ಯಾವಾಗಿನಿಂದ ಶುರುವಾಗುತ್ತದೆ ಎಂಬ ಬಗ್ಗೆ ಕ್ಲೂ ಕೊಟ್ಟಿಲ್ಲ.
ಕರ್ಣನಿಗೆ ಸಿಗದ ಜೋಡಿ
ಆದರೆ, ಅಭಿಮಾನಿಗಳು ಕರ್ಣ ಧಾರಾವಾಹಿಯ ನಾಯಕಿಯರು ಇವರೇ ಆಗಿರಲಿ ಎಂದು ಬಯಸಿದ್ದಾರೆ. ಕನ್ನಡತಿ ಧಾರಾವಾಹಿಯ ನಟಿ ರಂಜಿನಿ ರಾಘವನ್, ಪಾರು ಧಾರಾವಾಹಿಯ ಮೋಕ್ಷಿತಾ ಪೈ ಮತ್ತು ಗೀತಾ ಧಾರಾವಾಹಿಯ ಭವ್ಯ, ಕರ್ಣನ ಜೋಡಿಯಾಗಲಿ ಎಂದು ಆಸೆ ಪಟ್ಟಿದ್ದಾರೆ. ಆದರೆ, ನಿರ್ಮಾಪಕಿಯ ಲೆಕ್ಕಾಚಾರವೇ ಬೇರೆ ಇದೆ. ಸಾಮಾನ್ಯವಾಗಿ ಹೊಸ ಧಾರಾವಾಹಿ ಎಂದರೆ ಅಲ್ಲಿ ನಾಯಕ ಮತ್ತು ನಾಯಕಿ ಒಂದು ಹೊಸಬರಾಗಿರುತ್ತಾರೆ. ಇಲ್ಲವಾದಲ್ಲಿ ಬಹಳ ಹಿಂದೆ ಮಿಂಚಿದವರೂ ಇರುತ್ತಾರೆ. ಅದರಲ್ಲೂ ಹೆಚ್ಚು ಬೇಡಿಕೆ ಇರುವ ನಟ-ನಟಿಯರನ್ನೇ ನಾಯಕ ಮತ್ತು ನಾಯಕಿ ಪಾತ್ರಕ್ಕೆ ತರಲಾಗುತ್ತದೆ.
ಆಡಿಷನ್ ಮೇಲೆ ಆಡಿಷನ್
ಹೀಗಿರುವಾಗ ಕರ್ಣ ಧಾರಾವಾಹಿಯ ನಾಯಕನನ್ನು ಈಗಾಗಲೇ ಹಿಟ್ ಆಗಿರುವ ನಟ ಕಿರಣ್ ರಾಜ್ ಎಂದು ತೀರ್ಮಾನಿಸಿರುವ ನಿರ್ಮಾಪಕಿ ಶೃತಿ ನಾಯ್ಡು ಅವರು, ನಾಯಕಿಯನ್ನು ಇನ್ನೂ ಸೆಲೆಕ್ಟ್ ಮಾಡಿಲ್ಲವಂತೆ. ಕಾರಣ ನಾಯಕಿ ಪಾತ್ರಕ್ಕೆ ಹೊಸ ಮುಖ ಬೇಕು ಎಂದು ಆಡಿಷನ್ ಮೇಲೆ ಆಡಿಷನ್ ಅನ್ನು ನಡೆಸುತ್ತಿದ್ದಾರಂತೆ. ನಾಯಕಿಯೇ ಸಿಗದೇ ಕರ್ಣ ಧಾರಾವಾಹಿಯ ಪ್ರೊಮೋ ಪ್ರಸಾರವಾಗಿದ್ದು, ಎಲ್ಲರೂ ಇನ್ನೂ ಸೀರಿಯಲ್ ಶೂಟಿಂಗ್ ಕೂಡ ಶುರುವಾಗಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ, ನಿಜಕ್ಕೂ ನಾಯಕಿ ಇನ್ನೂ ಸಿಕ್ಕಿಲ್ವಾ..? ಶೂಟಿಂಗ್ ಶುರುವೇ ಆಗಿಲ್ವಾ ಎಂಬ ಪ್ರಶ್ನೆಗೆ ಧಾರಾವಾಹಿಯ ತಂಡವೇ ಉತ್ತರ ನೀಡಬೇಕಿದೆ.


Click it and Unblock the Notifications











