Seetha Rama ; ಭಾರ್ಗವಿಗೆ ಆಘಾತ ತಂದ ವಿಲ್ : ಆಸ್ತಿಗಾಗಿ ಹಠ ಬಿಡದ ದೇಸಾಯಿ ಸೊಸೆ..!
ಸೀತಾರಾಮ ಧಾರಾವಾಹಿಯಲ್ಲಿ ಸಿಹಿ ಹಠ ಮಾಡಿ ಪ್ರಿಯಾ ಮನೆಯಲ್ಲೇ ಉಳಿದುಕೊಂಡಿದ್ದಾಳೆ. ಅಂಜಲಿ ಜೊತೆ ಇರುವುದಾಗಿ ಹೇಳಿದ್ದಾಳೆ. ಆದರೆ, ಸೀತಾಳಿಗೆ ಮನಸ್ಸಿಲ್ಲ. ಯಾವತ್ತೂ ಸಿಹಿಯನ್ನು ಎಲ್ಲೂ ಬಿಟ್ಟಿರದ ಸೀತಾಳಿಗೆ, ಇಡೀ ರಾತ್ರಿ ಅವಳಿಲ್ಲದೇ ಇರುವುದು ಹೇಗೆ ಎಂಬುದೇ ಗೊತ್ತಾಗುತ್ತಿಲ್ಲ. ಸಿಹಿ ಜೊತೆಗೆ ಈಗ ಸೀತಾಳಿಗೆ ರಾಮ ಕೂಡ ಅಷ್ಟೇ ಮುಖ್ಯ.ತಾತನಿಗೆ ಹುಷಾರಿಲ್ಲದ ಕಾರಣ ಆದಷ್ಟು ಬೇಗನೇ ಮದುವೆಯಾಗಬೇಕು ಎಂದು ರಾಮ ತೀರ್ಮಾಸಿದ್ದಾನೆ. ಆದರೆ, ಭಾರ್ಗವಿ ಪ್ಲಾನ್ ಪ್ರಕಾರ ಸೀತಾಳಿಗೆ ಮಗಳಿರುವುದು ತಿಳಿದರೆ, ಸೂರಿ ಏನು ಮಾಡುತ್ತಾರೋ ಗೊತ್ತಿಲ್ಲ.
ಭಾರ್ಗವಿ ಬಗ್ಗೆ ಹೇಳಿಕೊಂಡ ಅಶೋಕ್
ಇನ್ನು ಮೊದಲ ರಾತ್ರಿಯಲ್ಲಿ ಅಶೋಕನಿಗೆ ಪ್ರಿಯಾ ಕಂಡೀಷನ್ ಹಾಕಿದ್ದಾಳೆ. ತನ್ನನ್ನು ಬಹುವಚನದಲ್ಲಿ ಮಾತನಾಡಿಸಬಾರದು. ಏಕವಚನದಲ್ಲಿ ಮಾತನಾಡಿಸಬೇಕು ಎಂದು ಹೇಳಿದ್ದಾಳೆ. ಮದುವೆ ಅದ್ಧೂರಿಯಾಗಿ ನಡೆದಿದ್ದಕ್ಕೆ ಇಬ್ಬರಿಗೂ ಖುಷಿ ಇದೆ. ಆದರೆ, ಆದಷ್ಟು ಬೇಗ ಸೀತಾರಾಮನ ಮದುವೆಯನ್ನು ಮಾಡುವ ಕಾತುರತೆಯಲ್ಲಿದ್ದಾರೆ. ಸೀತಾಳನ್ನು ಭಾರ್ಗವಿ ಒಪ್ಪಿಕೊಂಡಿರುವುದಕ್ಕೆ ಅಶೋಕ್ಗೆ ಈಗಲೂ ಶಾಕ್ ಆಗಿದೆ. ಭಾರ್ಗವಿ ನಿಜವಾದ ಬಣ್ಣವೇ ಬೇರೆ ಎಂಬ ಸತ್ಯವನ್ನು ಪತ್ನಿ ಪ್ರಿಯಾ ಬಳಿ ಹಂಚಿಕೊಂಡಿದ್ದಾನೆ. ಭಾರ್ಗವಿ ಮುಖವಾಡ ಕಳಚುವುದಕ್ಕಿಂತಲೂ ಹೆಚ್ಚಾಗಿ ಆಕೆಯಿಂದ ರಾಮ ಬದುಕಿಗೆ ಯಾವುದೇ ತೊಂದರೆ ಆಗಬಾರದು ಎಂಬುದು ಅಶೋಕ್ ಆಲೋಚನೆ.

ಮೊಮ್ಮಗನ ಆಸ್ತಿ ವಿಲ್ ಬಗ್ಗೆ ಚರ್ಚೆ
ಇತ್ತ ಸೂರಿ ತಾತನಿಗೆ ಸೀತಾಳನ್ನು ನೋಡಿ ಖುಷಿಯಾಗಿದೆ. ಮಗನ ಮದುವೆ ನಿಶ್ಚಯವಾಗಿರುವುದಕ್ಕೆ ಬಹಳ ಸಂತಸದಲ್ಲಿದ್ದಾರೆ. ಇದೇ ಖುಷಿಯಲ್ಲಿ ರಾತ್ರೋ ರಾತ್ರಿ ಲಾಯರ್ ನ ಮನೆಗೆ ಕರೆಸಿಕೊಂಡಿದ್ದಾರೆ. ಆಸ್ತಿಯ ವಿಲ್ ಬಗ್ಗೆ ಮಾತನಾಡಿದ್ದಾರೆ. ಮಗಳು ವಾಣಿ ತನ್ನ ಆಸ್ತಿಯನ್ನೆಲ್ಲಾ ಮಗ ರಾಮ ಹೆಸರಿಗೆ ಬರೆದಿದ್ದು, ಅದನ್ನು ಬೇರೆ ಯಾರಿಗೂ ಹಂಚದಂತೆ ವಿಲ್ ಮಾಡಿದ್ದಾಳೆ. ಹೀಗಾಗಿ ಈಗ ಸೂರಿ ತಾತ ಮತ್ತೆರಡು ಮಕ್ಕಳಿಗೆ ಮೋಸವಾಗಬಾರದು ಎಂದು ಅರ್ಧ ಆಸ್ತಿ ರಾಮ್ ಹೆಸರಿಗೂ, ಉಳಿದ ಅರ್ಧದಲ್ಲಿ ಸಮಪಾಲು ವಿಶ್ವ ಮತ್ತು ಸತ್ಯನಿಗೂ ನೀಡಲು ಮುಂದಾಗಿದ್ದಾರೆ.
ಭಾರ್ಗವಿಗೆ ನಿರಾಸೆ ಮೂಡಿಸಿದ ವಿಲ್
ಈ ವಿಲ್ ವಿಚಾರ ತಿಳಿದ ಭಾರ್ಗವಿಗೆ ಬಹಳ ಬೇಸರವಾಗಿದೆ. ಸೀತಾಳಿಗೆ ಮಗಳಿರುವುದು ತಿಳಿದ ಬಳಿಕ ಸೂರಿ ಈ ಮದುವೆಗೆ ಒಪ್ಪುವುದಿಲ್ಲ. ಆಗ ರಾಮ ಮತ್ತೆ ವೈರಾಗಿ ಆಗಿ ದೇಶ ಬಿಟ್ಟು ಹೋಗುತ್ತಾನೆ. ಆಗ ರಾಮ ಆಸ್ತಿಗೆಲ್ಲಾ ಭಾರ್ಗವಿಯೇ ಒಡತಿಯಾಗಲಿದ್ದು, ತಾನು ಮಹಾರಾಣಿಯಂತೆ ಮೆರೆಯಬಹುದು ಎಂದು ಲೆಕ್ಕಾಚಾರ ಹಾಕಿದ್ದಳು. ಆದರೆ, ದುರಾದೃಷ್ಟವೆಂದರೆ, ರಾಮ ಆಸ್ತಿಯನ್ನು ಯಾರಿಗೂ ಹಂಚಲು ಬರುವುದಿಲ್ಲ. ಯಾರು ಅನುಭವಿಸಲೂ ಸಾಧ್ಯವಿಲ್ಲ. ವಾಣಿ ಆ ರೀತಿ ವಿಲ್ ಬರೆದಿಟ್ಟು ಪ್ರಾಣ ಬಿಟ್ಟಿದ್ದಾಳೆ. ಇದು ಭಾರ್ಗವಿಯನ್ನು ನಿರಾಸೆ ಮೂಡುವಂತೆ ಮಾಡಿದೆ.

ಆಸ್ತಿಯನ್ನು ಪಡೆಯುವ ಹಠದಲ್ಲಿ ಭಾರ್ಗವಿ
ಆದರೂ ಭಾರ್ಗವಿ ತನ್ನ ಹಠ ಬಿಡಲು ತಯಾರಿಲ್ಲ. ದೇಸಾಯಿ ಕುಟುಂಬಕ್ಕೆ ಸೇರಿದ ಅಷ್ಟೂ ಆಸ್ತಿಯನ್ನು ತಾನೊಬ್ಬಳೇ ಅನುಭವಿಸಬೇಕು ಎಂಬ ದುರಾಸೆ ಇದೆ. ಹೀಗಾಗಿ ತಾನು ಏನು ಮಾಡಲೂ ಸಿದ್ಧವಿದ್ದಾಳೆ. ಹೇಗಾದರೂ ಮಾಡಿ ಅಷ್ಟೂ ಆಸ್ತಿಯನ್ನು ತನ್ನ ಸ್ವತ್ತಾಗುವಂತೆ ಮಾಡಿಕೊಳ್ಳಬೇಕು. ತಾನು ದೇಸಾಯಿ ಕುಟುಂಬದ ಒಡತಿಯಾಗಿ ಮೆರೆಯುವುದಾಗಿ ಪಣತೊಟ್ಟಿದ್ದಾಳೆ. ವಿಶ್ವನಿಗೂ ಹಣದ ಮೇಲೆ ಆಸೆ ಇದ್ದು, ಇದಕ್ಕೆ ತಾನೂ ಕೈ ಜೋಡಿಸುವುದಾಗಿ ಹೇಳಿದ್ದಾನೆ. ಆದರೆ, ಭಾರ್ಗವಿಗೆ ತಾನೊಬ್ಬಳೇ ಎಂಬ ಅಹಂ ತುಂಬಿ ತುಳುಕುತ್ತಿದೆ. ಭಾರ್ಗವಿ ಮಅತುಗಳನ್ನು ಕೇಳಿದರೆ, ರಾಮನ ಮದುವೆ ಈಗಲೇ ಸುಲಭವಾಗಿ ನಡೆಯುತ್ತೆ ಎಂಬುದು ಅನುಮಾನವೇ ಸರಿ.


Click it and Unblock the Notifications











