Sharade ; ಕಿರುತೆರೆಯಲ್ಲಿ ಪುಟಾಣಿ ಮಕ್ಕಳಿಗೆ ಫುಲ್ ಡಿಮ್ಯಾಂಡ್,ಶಾರದೆಯಲ್ಲಿ ಮಿಂಚಲು ರೆಡಿಯಾದ ಸ್ಫೂರ್ತಿ..!
ಈಗ ಕಿರುತೆರೆಯಲ್ಲಿ ಮಕ್ಕಳ ಆಧಾರಿತ ಕಥೆಯುಳ್ಳ ಸೀರಿಯಲ್ ಗಳ ಪರ್ವ ಶುರುವಾದಂತಿದೆ. ಈಗಾಗಲೇ ಸೀತಾ ರಾಮ ಧಾರಾವಾಹಿಯ ಪ್ರಮುಖ ಪಾತ್ರಧಾರಿಯಾಗಿ ಏಳು ವರ್ಷದ ಸಿಹಿ ಮಿಂಚುತ್ತಿದ್ದಾರೆ. ಇನ್ನು ಇತ್ತೀಚೆಗಷ್ಟೇ ನಾ ನಿನ್ನ ಬಿಡಲಾರೆ ಎಂಬ ಮತ್ತೊಂದು ಹೊಸ ಧಾರಾವಾಹಿ ಶುರುವಾಗಿದ್ದು, ಇದರಲ್ಲೂ ಹೆಚ್ಚು ಗಮನ ಸೆಳೆಯುವ ಪ್ರಮುಖಾ ಪಾತ್ರವೇ ಹಿತಾ. ಇದೇ ರೀತಿಯಲ್ಲಿ ನಿನಗಾಗಿ, ಲಕ್ಷ್ಮೀ ನಿವಾಸ ಸೇರಿದಂತೆಯೇ ಕೆಲ ಸೀರಿಯಲ್ ಗಳಲ್ಲೂ ಮಕ್ಕಳಿದ್ದು, ಪ್ರಮುಖ ಪಾತ್ರಗಳಲ್ಲಿ ಪುಟಾಣಿಗಳು ಕಾಣಿಸಿಕೊಂಡಿದ್ದಾರೆ.
ಹೊಸ ಧಾರಾವಾಹಿಯ ಪ್ರೊಮೋ ರಿಲೀಸ್
ಇದೊಂದು ರೀತಿಯಲ್ಲಿ ಮಕ್ಕಳ ಸೀರಿಯಲ್ ಎಂದರೂ ತಪ್ಪಾಗುವುದಿಲ್ಲ. ಹಾಗಿರುವಾಗ ಇದೀಗ ಮತ್ತೊಂದು ಹೊಸ ಧಾರಾವಾಹಿ ಕಿರುತೆರೆಗೆ ಲಗ್ಗೆ ಇಡಲು ಸಿದ್ದವಾಗಿದೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಹೊಸ ಧಾರಾವಾಹಿಯೊಂದು ಶೀಘ್ರವೇ ಶುರುವಾಗಲಿದೆ. ಈ ಧಾರಾವಾಹಿಯೂ ಕೂಡ ಬಾಲಕಿಯೊಬ್ಬಳ ಕಥೆಯಾಗಿದೆ. ತಾಯಿ ಮತ್ತು ಮಗಳ ಬಾಂಧವ್ಯದ ಬಗ್ಗೆ ಈ ಕಥೆಯನ್ನು ಹೆಣೆಯಲಾಗಿದೆ. ಇದರ ಪ್ರೊಮೋವನ್ನು ಸದ್ಯ ಸ್ಟಾರ್ ಸುವರ್ಣ ವಾಹಿನಿಯು ಪ್ರಸಾರ ಮಾಡಿದೆ. ಪ್ರೋಮೋ ನೋಡಿದ ಕೆಲವರು ಬೇಸರ ವ್ಯಕ್ತಪಡಿಸಿದ್ದರೆ, ಮತ್ತಷ್ಟು ಮಂದಿ ಖುಷಿ ಪಟ್ಟಿದ್ದಾರೆ. ಹೊಸ ಧಾರಾವಾಹಿಯ ಹೆಸರು ಶಾರದೆ.

ಪ್ರಮುಖ ಪಾತ್ರದಲ್ಲಿ ಬಾಲನಟಿ ಸ್ಪೂರ್ತಿ
ಈ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿ ಚೈತ್ರಾ ಸಕ್ಕರಿ, ರಾಧಿಕಾ ಅಚ್ಯುತ್ ರಾವ್, ನಟ ರಾಜೇಶ್ ಧ್ರುವ, ಬಾಲನಟಿ ಸ್ಪೂರ್ತಿ ಕಾಣಿಸಿಕೊಂಡಿದ್ದಾರೆ. ಶಾರದೆ ಧಾರಾವಾಹಿಯನ್ನು ಸುನಿಲ್ ಪುರಾಣಿಕ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಬಾಲನಟಿಯಾಗಿ ಸ್ಪೂರ್ತಿ ಬಣ್ಣ ಹಚ್ಚಿದ್ದಾರೆ. ಈಗಾಗಲೇ ಸ್ಪೂರ್ತಿ ಅವರು ಸಿರಿ ಕನ್ನಡ ವಾಹಿನಿಯಲ್ಲಿ ಮೂಡಿ ಬಂದ ಸಿರಿ ಸೂಪರ್ ಮಾಮ್ ನಲ್ಲಿ ಭಾಗವಹಿಸಿದ್ದರು. ಬಳಿಕ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಚುಕ್ಕಿತಾರೆ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದರು. ಇದೀಗ ತಾಯಿಯೇ ಜೀವ ಎಂದು ಹೇಳುವ ಮಗಳ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಅಮ್ಮನ ಪಾತ್ರದಲ್ಲಿ ನಟಿ ಚೈತ್ರಾ ಸಕ್ಕರಿ
ಇನ್ನು ಮೂರು ಪಾತ್ರಗಳು ಈ ಧಾರಾವಾಹಿಯಲ್ಲಿ ಪ್ರಮುಖವಾದವು. ನಾಯಕಿ ಪಾತ್ರ ಎಂದರೆ ಬಾಲನಟಿ ಸ್ಪೂರ್ತಿಯ ತಾಯಿ ಪಾತ್ರವನ್ನು ನಟಿ ಚೈತ್ರಾ ಸಕ್ಕರಿ ಅವರು ನಿಭಾಯಿಸುತ್ತಿದ್ದಾರೆ. ಚೈತ್ರಾ ಅವರು ಕನ್ನಡದ ನಟಿಯೇ, ಇದೀಗ ಶಾರದೆ ಧಾರಾವಾಹಿ ಮೂಲಕ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಈ ಹಿಂದೆ ನಯನತಾರ ಎಂಬ ಧಾರಾವಾಹಿಯಲ್ಲಿ ನಟಿಸಿದ್ದರು. ಬಳಿಕ ತೆಲುಗಿನ ದೇವತಾಲಾರ ದೀವಿಂಚಂಡಿ ಸೀರಿಯಲ್ ಗೆ ಬಣ್ಣ ಹಚ್ಚಿದರು. ತದನಂತರ ತಮಿಳು ಸೆಲ್ವಿ ಎಂಬ ತಮಿಳು ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಶಾರದೆ ಧಾರಾವಾಹಿ ಮೂಲಕ ಮತ್ತೆ ಕನ್ನಡ ಕಿರುತೆರೆಗೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ.
ನಾಯಕ ಯಾರು ಗೊತ್ತಾ..?
ಇನ್ನು ಎರಡನೇ ನಾಯಕಿ ಪಾತ್ರದಲ್ಲಿ ನಟಿ ರಾಧಿಕಾ ಅಚ್ಯುತ್ ರಾವ್ ಅವರು ಕಾಣಿಸಿಕೊಂಡಿದ್ದಾರೆ. ಇವರು ಈ ಹಿಂದೆ ಶ್ರೀ ಬಾಲಾಜಿ ಫೋಟೋ ಸ್ಟುಡಿಯೋಸ್ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. ಇನ್ನು ನಾಯಕನ ಪಾತ್ರದಲ್ಲಿ ನಟ ರಾಜೇಶ್ ಧ್ರುವ ನಟಿಸಿದ್ದು, ಈ ಹಿಂದೆ ಅಗ್ನಿಸಾಕ್ಷಿ, ನಾತಿಚರಾಮಿ, ಶ್ರೀಗೌರಿ, ಧಾರಾವಾಹಿಗಳಿಗೆ ಬಣ್ಣ ಹಚ್ಚಿದ್ದಾರೆ. ಅಲ್ಲದೇ, ಶ್ರೀ ಬಾಲಾಜಿ ಫೋಟೋ ಸ್ಟುಡಿಯೋಸ್, ಪೀಟರ್, ಲಾಸ್ಟ್ ಬೆಂಚರ್ಸ್, ಸೋಲ್ ಆಫ್ ಆದ್ಯಾ ಸಿನಿಮಾಗಳಲ್ಲೂ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದೀಗ ಶಾರದೆ ಧಾರಾವಾಹಿಯಲ್ಲಿ ಎರಡು ಮದುವೆಯಾಗಿದ್ದು, ಮೊದಲ ಹೆಂಡತಿ ಮತ್ತು ಮಗಳಿಗೆ ಮೋಸ ಮಾಡಿದ ಗಂಡನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪೊಮೋವನ್ನು ರಿಲೀಸ್ ಮಾಡಿರುವ ಸ್ಟಾರ್ ಸುವರ್ಣ ವಾಹಿನಿ, ಶಾರದೆ ಧಾರಾವಾಹಿ ಅತೀ ಶೀಘ್ರದಲ್ಲಿ ಪ್ರಸಾರವಾಗಲಿದೆ ಎಂದು ತಿಳಿಸಿದೆ.


Click it and Unblock the Notifications











