ತೆಲುಗಿನತ್ತ ಹೊರಟ ಶ್ರೀರಸ್ತು ಶುಭಮಸ್ತು ಪೂರ್ಣಿಮಾ,ಲಾವಣ್ಯ ಅಭಿನಯದ ತೆಲುಗು ಧಾರಾವಾಹಿ ಯಾವುದು..?
ಶ್ರೀರಸ್ತು ಶುಭಮಸ್ತು ಧಾರಾವಾಹಿಯ ಪೂರ್ಣಿಮಾ ಅಲಿಯಾಸ್ ನಟಿ ಲಾವಣ್ಯಾ ಅವರು ಒಂದು ಹೆಜ್ಜೆ ಮುಂದೇ ಹೋಗಿ ಹೊಸ ಪ್ರಾಜೆಕ್ಟ್ ಗೆ ಸಹಿ ಹಾಕಿದ್ದಾರೆ. ಇಷ್ಟು ದಿನ ಕೇವಲ ಕನ್ನಡ ಕಿರುತೆರೆಯಲ್ಲಿ ನಟಿಸಿ, ತಮ್ಮ ನಟನೆ ಹಾಗೂ ನಗುವಿನಿಂದಲೇ ವೀಕ್ಷಕರ ಮನವನ್ನು ಗೆದ್ದಿದ್ದರು. ಅಲ್ಲದೇ ತಮ್ಮ ಸಿಂಪಲ್ ಉಡುಗೆಯಿಂದ ಜನರ ಹೃದಯ ಗೆದ್ದಿದ್ದರು. ಶ್ರೀರಸ್ತು ಶುಭಮಸ್ತು ಧಾರಾವಾಹಿ ಮೂಲಕ ಫೇಮಸ್ ಆಗಿರುವ ನಟಿ ಲಾವಣ್ಯಾ ಅವರು ಈಗ ತೆಲುಗು ಅಂಗಳದಲ್ಲಿ ಕಮಾಲ್ ಮಾಡಲು ಮುಂದಾಗಿದ್ದಾರೆ.
ಹೊಸ ಹೆಜ್ಜೆ ಇಟ್ಟ ನಟಿ ಲಾವಣ್ಯಾ
ಹೌದು ತೆಲುಗಿನ ಹೊಸ ಧಾರಾವಾಹಿಯಲ್ಲಿ ನಟಿ ಲಾವಣ್ಯ ಅವರು ಕಾಣಿಸಿಕೊಂಡಿದ್ದಾರೆ. ಇದರ ಪ್ರಸಾರದ ಸಮಯವನ್ನು ಕೂಡ ತಿಳಿಸಿದ್ದಾರೆ. ತೆಲುಗಿನ ಸ್ಟಾರ್ ಮಾ ವಾಹಿನಿಯಲ್ಲಿ ಮುಂದಿನ ಸೋಮವಾರ ಸಂಜೆ 7.30 ಕ್ಕೆ ಇಲ್ಲು ಇಲ್ಲಾಲು ಪಿಲ್ಲಲು ಎಂಬ ಧಾರಾವಾಹಿ ಪ್ರಸಾರವಾಗಲಿದೆ. ಈ ಧಾರಾವಾಹಿಯಲ್ಲಿ ನಟಿ ಲಾವಣ್ಯಾ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿಯ ಕಥೆಯಲ್ಲಿ ಮನೆ ಮಗಳು ಎದುರಿನ ಮನೆಯ ಹುಡುಗನನ್ನು ಪ್ರೀತಿಸಿ ಮದುವೆಯಾಗಿರುತ್ತಾಳೆ. ಹೀಗಾಗಿ ಎರಡೂ ಕುಟುಂಬದಲ್ಲಿ ಬಿರುಕು ಮೂಡಿರುತ್ತದೆ. ಇನ್ನು ಎರಡೂ ಮನೆಯ ಕುಡಿಗಳು ಈಗ ಮದುವೆ ವಯಸ್ಸಿಗೆ ಬಂದಿದ್ದು, ಅವರಿಂದ ಕದನ ಮುರಿದು ಎರಡೂ ಕುಟುಂಬಗಳು ಒಂದಾಗುವ ಕಥೆ. ಇಷ್ಟು ದಿನ ಕನ್ನಡ ಧಾರಾವಾಹಿಯಲ್ಲಿ ಮಾತ್ರ ಕಾಣಿಸಿಕೊಂಡಿದ್ದ ನಟಿ ಲಾವಣ್ಯ ಅವರು ಇದೀಗ ಹೊಸ ಹೆಜ್ಜೆ ಇಟ್ಟಿದ್ದು, ತೆಲುಗಿನ ಅಭಿಮಾನಿಗಳ ಮನಸ್ಸು ಗೆಲ್ಲಲು ಮುಂದಾಗಿದ್ದಾರೆ.

ಪೋಷಕರಾಗಲು ನಟಿಯ ಕಂಡೀಷನ್
ಇನ್ನು ನಟಿ ಲಾವಣ್ಯಾ ಮತ್ತು ನಟ ಶಶಿ ಹೆಗಡೆ ಮದುವೆಯಾಗಿ ಅದಾಗಲೇ ಎರಡು ವರ್ಷಗಳು ಕಳೆದಿವೆ. ಆದರೂ ಕೂಡ ಇಬ್ಬರೂ ಇನ್ನು ಪೋಷಕರಾಗಿ ಬಡ್ತಿ ಪಡೆದಿಲ್ಲ. ಯಾಕೆಂದರೆ, ಇನ್ನೂ ಲಾವಣ್ಯ ಮತ್ತು ಶಶಿ ಅವರು ಇನ್ನೂ ಹನಿಮೂನ್ ಗೆ ಹೋಗಿಲ್ವಂತೆ. ಎರಡು ಬಾರಿ ಹನಿಮೂನ್ ಗೆಂದು ಪ್ಲಾನ್ ಮಾಡಿದಾಗಲೂ ಸಂಬಂಧಿಕರು ತೀರಿಕೊಂಡರಂತೆ. ಹಾಗಾಗಿ ಇಬ್ಬರೂ ಹನಿಮೂನ್ ಗೆ ಹೋಗಲು ಸಾಧ್ಯವಾಗಲಿಲ್ಲ. ಹಾಗಾಗಿ ಮಗು ಬೇಕೆಂದರೆ ಎರಡು ಟ್ರಿಪ್ ಗೆ ಕರೆದುಕೊಂಡು ಹೋಗಬೇಕು ಎಂದು ಲಾವಣ್ಯ ಕಂಡೀಷನ್ ಹಾಕಿದ್ದರು. ಅದರಂತೆ ಜೂನ್ ತಿಂಗಳೀನಲ್ಲಿ ಇಬ್ಬರೂ ಮನಾಲಿಗೆ ಹೋಗಿ ಬಂದಿದ್ದರು. ಇನ್ನು ಎರಡನೇಯ ಕಂಡೀಷನ್ ವಿದೇಶಕ್ಕೆ ಹೋಗುವುದು. ಇದು ನೆರವೇರಿದ ಬಳಿಕವಷ್ಟೇ ಮಗು ಮಾಡಿಕೊಳ್ಳೋಣ ಎಂದು ಲಾವಣ್ಯಾ ಹೇಳಿದ್ದಾರೆ.
ಪಾತ್ರಗಳ ಮೂಲಕ ವೀಕ್ಷಕರ ಮನಗೆದ್ದ ನಟಿ
ನಟಿ ಲಾವಣ್ಯ ಬಾಲ್ಯದಿಂದಲೂ ನೃತ್ಯದ ಮೇಲೆ ಹೆಚ್ಚು ಒಲವು ಹೊಂದಿದ್ದು, ಅಕಸ್ಮಾತ್ ಆಗಿ ಕಿರುತೆರೆಗೆ ಬಂದರು. ಇಲ್ಲೇ ಬದುಕನ್ನು ಕಂಡುಕೊಂಡ ಲಾವಣ್ಯ ಜೀವನ ಸಂಗಾತಿಯನ್ನೂ ಇಲ್ಲೇ ಹುಡುಕಿಕೊಂಡಿದ್ದಾರೆ. ರಾಧಾ-ರಮಣ ಧಾರಾವಾಹಿಯಲ್ಲಿ ಮೊದಲ ಬಾರಿಗೆ ಲಾವಣ್ಯ ಅವರು ಬಣ್ಣ ಹಚ್ಚಿದರು. ಬಳಿಕ ರಾಜಾ ರಾಣಿ ಧಾರಾವಾಹಿಯಲ್ಲಿ ನಟಿಸಿ, ನಂತರ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾದ ಸಂಘರ್ಷ ಎಂಬ ಧಾರಾವಾಹಿಯಲ್ಲಿ ಕಾಣಿಸಿಕೊಂಡರು. ಹೀಗೆ ನಟನೆಯನ್ನು ಮುಂದುವರಿಸಿ, ದಾಸ ಪುರಂದರ ಧಾರಾವಾಹಿಯಲ್ಲಿ ಪದ್ಮಿನಿ ಪಾತ್ರಕ್ಕೆ ಜೀವ ತುಂಬಿದರು.
ಇಬ್ಬರೂ ನಟನೆಯಲ್ಲಿ ಬ್ಯುಸಿ
ಸದ್ಯ ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡ ಕಿರುತೆರೆಯ ನಟಿಯರಲ್ಲಿ ಪ್ರೀತಿಸಿ ಮದುವೆಯಾದ ನಟಿ ಲಾವಣ್ಯ ಭಾರದ್ವಾಜ್ ಹಾಗೂ ನಟ ಶಶಿ ಹೆಗಡೆ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಜೀ ಕನ್ನಡ ವಾಹಿನಿಯಲ್ಲಿ ಇಬ್ಬರೂ ಕೂಡ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಲಾವಣ್ಯ ಅವರು ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಪೂರ್ಣಿಮಾ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ನಟ ಶಶಿ ಹೆಗಡೆ ಅವರು ಅಮೃತಧಾರೆ ಸೀರಿಯಲ್ ನಲ್ಲಿ ಜೀವನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.


Click it and Unblock the Notifications











