'ಯಜಮಾನ' ಧಾರಾವಾಹಿಯ ಝಾನ್ಸಿ ಉರ್ಫ್ ಮಧುಶ್ರೀ ಎಲ್ಲಿವರೆಗೂ ಓದಿದ್ದಾರೆ? ಹಿನ್ನೆಲೆಯೇನು?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ 'ಯಜಮಾನ'ವೂ ಒಂದು. ಕಳೆದ ವರ್ಷ ಶುರುವಾಗಿರುವ ಈ ಧಾರಾವಾಹಿಯು ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ವಿಭಿನ್ನ ರೀತಿಯ ಕಥಾಹಂದರವಿರುವ 'ಯಜಮಾನ' ಧಾರಾವಾಹಿಯಲ್ಲಿ ನಾಯಕಿ ಝಾನ್ಸಿಯಾಗಿ ಮಧುಶ್ರೀ ಭೈರಪ್ಪ ಕಾಣಿಸಿಕೊಂಡಿದ್ದಾರೆ.
'ಯಜಮಾನ' ಧಾರಾವಾಹಿಯ ನಾಯಕಿ ಝಾನ್ಸಿ ಗಂಡಸರನ್ನು ದ್ವೇಷಿಸುತ್ತಾಳೆ. ಕೋಟ್ಯಾಂತರ ಆಸ್ತಿಯ ಒಡತಿ ಆಗಿರುವ ಝಾನ್ಸಿಗೆ ಆ ಆಸ್ತಿ ದೊರಕಬೇಕಾದರೆ ಆಕೆ ಮದುವೆಯಾಗಬೇಕಿತ್ತು. ಇದು ಆಕೆಯ ತಾತ ಮಾಡಿದ್ದ ಕಂಡಿಷನ್. ಜೊತೆಗೆ ತಮ್ಮ ವಿಲ್ನಲ್ಲೂ ಅವರು ಹಾಗೇ ಬರೆದಿದ್ದರು. ಗಂಡಸರನ್ನು ಕಂಡರೆ ಆಗದ, ಸಿಡುಕುವ ಝಾನ್ಸಿಗೆ ಅಜ್ಜನ ನಿರ್ಧಾರವನ್ನು ಬದಲಾಯಿಸಲು ಸುತರಾಂ ಸಾಧ್ಯವಿಲ್ಲ. ಸಾವಿರ ಕೋಟಿ ರೂಪಾಯಿ ಆಸ್ತಿಯನ್ನು ಪಡೆಯುವುದಕ್ಕಾಗಿ ಆಕೆ ಕಾಂಟ್ರಾಕ್ಟ್ ಮದುವೆಯಾಗುವ ನಿರ್ಧಾರ ಮಾಡುತ್ತಾಳೆ.

ಅದರಂತೆ ತನ್ನ ಆಫೀಸಿಗೆ ಕೆಲಸ ಕೇಳಲು ಬಂದಿರುವ ನಾಯಕ ರಾಘವೇಂದ್ರನನ್ನು ಕಾಂಟ್ರಾಕ್ಟ್ ಮದುವೆಯಾಗುವ ನಿರ್ಧಾರ ಮಾಡುತ್ತಾಳೆ ಝಾನ್ಸಿ. ಕಾಂಟ್ರಾಕ್ಟ್ ಮದುವೆಯ ಬಗ್ಗೆ ತಿಳಿಸಿ, ಅಗ್ರಿಮೆಂಟ್ ಕೂಡಾ ಕೊಟ್ಟು ಸಹಿ ಹಾಕುವಂತೆ ಹೇಳುತ್ತಾಳೆ. ಆರಂಭದಲ್ಲಿ ನಾಯಕ ರಾಘವೇಂದ್ರ ಇದನ್ನು ತಿರಸ್ಕರಿಸಿದರೂ ನಂತರ ತನಗೆ ಹಣದ ಅವಶ್ಯತೆ ಇರುವುದರಿಂದ ಆಕೆಯನ್ನು ಮದುವೆಯಾಗುತ್ತಾನೆ. ಮೂವತ್ತು ದಿನವಾಗುವುದಕ್ಕೆ ನಾಯಕ ರಾಘವೇಂದ್ರ ಕಾಯುತ್ತಿರುತ್ತಾನೆ. ಮೂವತ್ತು ದಿನದ ಬಳಿಕ ಏನಾಗುತ್ತೆ? ಕಾಂಟ್ರಾಕ್ಟ್ ಮದುವೆ ಬಗ್ಗೆ ತಾತನಿಗೆ ಗೊತ್ತಾಗುತ್ತಾ? ಝಾನ್ಸಿ ಮತ್ತೆ ರಾಘವೇಂದ್ರರ ನಡುವೆ ಪ್ರೀತಿ ಮೂಡುತ್ತಾ ಎಂಬುದೆಲ್ಲಾ ಮುಂದಿನ ದಿನಗಳಲ್ಲಿ ತಿಳಿಯಬೇಕಿದೆ.
ಮೊದಲ ಧಾರಾವಾಹಿಯಲ್ಲಿಯೇ ನಾಯಕಿಯಾಗಿ ಅಭಿನಯಿಸಿ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಈಕೆಯ ಹೆಸರು ಮಧುಶ್ರೀ ಭೈರಪ್ಪ. ಮೂಲತಃ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಆಗಿರುವ ಮಧುಶ್ರೀ ಯೂಟ್ಯೂಬರ್ ಆಗಿಯೂ ಗುರುತಿಸಿಕೊಂಡಿರುವ ಚೆಲುವೆ. ಅದಕ್ಕೆ ಇನ್ಸ್ಟಾಗ್ರಾಂನಲ್ಲಿ ಆಕೆ ಹೊಂದಿರುವ 2.58 ಲಕ್ಷ ಫಾಲೋವರ್ಸ್ ಹಾಗೂ ಯೂಟ್ಯೂಬ್ನಲ್ಲಿ ಆಕೆ ಹೊಂದಿರುವ 2.42ಲಕ್ಷ ಸಬ್ ಸ್ಕೈಬ್ರರ್ ಸಾಕ್ಷಿ.

ಡಬಲ್ ಡಿಗ್ರಿ ಪದವಿ ಪಡೆದಿರುವ ಮಧುಶ್ರೀ ಭೈರಪ್ಪ ಅವರಿಗೆ ನಟನೆಗಿಂತಲೂ ನೃತ್ಯದತ್ತ ವಿಶೇಷ ಒಲವಿತ್ತು. ಸಿನಿಮಾ ಕ್ಷೇತ್ರದಲ್ಲಿ ನಟಿಯಾಗಿ ಗುರುತಿಸಿಕೊಳ್ಳುವುದಕ್ಕಿಂತಲೂ ಡ್ಯಾನ್ಸರ್ ಆಗಿ ಗುರುತಿಸಿಕೊಳ್ಳುವ ಕನಸನ್ನು ಈಕೆ ಕಂಡಿದ್ದರು. ಯಾವುದೇ ತರಬೇತಿ ಇಲ್ಲದೇ ನೃತ್ಯ ಕಲಿತಿರುವ ಈಕೆ ನಟಿಯಾಗಿ ಕಾಣಿಸಿಕೊಳ್ಳಬೇಕು ಎಂದು ಯಾವತ್ತಿಗೂ ಬಯಸಿದರಲ್ಲ. ಆದರೆ ಅದು ಆಕಸ್ಮಿಕವಾಗಿ ದೊರೆತ ಅವಕಾಶ. ಆಚಾನಕ್ ಆಗಿ ಆಡಿಶನ್ಗೆ ಹೋಗಿ 'ಯಜಮಾನ' ಧಾರಾವಾಹಿಗೆ ಆಯ್ಕೆಯಾಗಿರುವ ಮಧುಶ್ರೀ ಇದೀಗ ಕಿರುತೆರೆ ವೀಕ್ಷಕರ ಪಾಲಿಗೆ ಪ್ರೀತಿಯ ಝಾನ್ಸಿ. ರಗಡ್ ಲುಕ್ ಮೂಲಕ ಈಕೆ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದರೂ ವೀಕ್ಷಕರು ಈಕೆಯನ್ನು, ಪಾತ್ರವನ್ನು ಈಗಾಗಲೇ ಮೆಚ್ಚಿಕೊಂಡಿದ್ದಾರೆ.
ಅಸಲಿ ವಿಷಯ ಏನೆಂದರೆ ಮಧುಶ್ರೀ ಅವರು 'ಯಜಮಾನ' ಧಾರಾವಾಹಿಗಿಂತಲೂ ಮೊದಲು ಬೇರೊಂದು ಧಾರಾವಾಹಿಯಲ್ಲಿ ನಟಿಸಬೇಕಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ನಂತರ ರಾಮ್ ಜೀ ಅವರ ನಿರ್ದೇಶನದ 'ಯಜಮಾನ' ಧಾರಾವಾಹಿಯಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುವ ಅವಕಾಶ ಈಕೆಗೆ ದೊರೆಯಿತು. ಝಾನ್ಸಿಯಾಗಿ ಬದಲಾದ ಮಧುಶ್ರೀ ಅವರು ಇದೀಗ ಪಡೆದುಕೊಂಡಿರುವ ಜನಪ್ರಿಯತೆ ಅಷ್ಟಿಷ್ಟಲ್ಲ.
ನಟನೆಯ ಹೊರತಾಗಿ ಇನ್ ಸ್ಟಾಗ್ರಾಂನಲ್ಲಿ ಸಕತ್ ಆ್ಯಕ್ಟೀವ್ ಆಗಿರುವ ಈಕೆ ಬಿಡುವು ಸಿಕ್ಕಾಗಲೆಲ್ಲಾ ರೀಲ್ಸ್ ಮಾಡಿ ಅಪ್ ಲೋಡ್ ಮಾಡುತ್ತಿರುತ್ತಾರೆ. ಈಕೆ ಅಪ್ ಲೋಡ್ ಮಾಡಿರುವ ಹೆಚ್ಚಿನ ವಿಡಿಯೋಗಳು ಮಿಲಿಯಗಟ್ಟಲೆ ವೀವ್ಸ್ ಪಡೆದುಕೊಂಡಿದೆ. ಇದರ ಜೊತೆಗೆ ಯೂಟ್ಯೂಬ್ ನಲ್ಲೂ ಇವರು ಹಾಕಿರುವ ವಿಡಿಯೋಗಳು ಕೂಡಾ ಲಕ್ಷಗಟ್ಟಲೇ ವೀವ್ಸ್ ಬಂದಿದೆ.
ನಟಿಯಾಗಬೇಕು ಎಂಬ ಕನಸಿಲ್ಲದೇ, ದೊರೆತ ಅವಕಾಶದಿಂದ ನಟನೆಗೆ ಕಾಲಿಟ್ಟು, ಮೊದಲ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಿ, ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಈಕೆ ಮುಂದೊಂದು ದಿನ ಬೆಳ್ಳಿತೆರೆಯಲ್ಲಿ ನಾಯಕಿಯಾಗಿ ನಟಿಸಿದರೆ ಆಶ್ಚರ್ಯವೇನಿಲ್ಲ.


Click it and Unblock the Notifications











