Yamuna Srinidhi: ಶಿಕ್ಷಕಿಯಾಗಿ ಕಿರುತೆರೆಗೆ ಮರಳಿದ ಯಮುನಾ ಶ್ರೀನಿಧಿ.. ಆ ಧಾರಾವಾಹಿ ಯಾವುದು ಗೊತ್ತಾ?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಭಾಗ್ಯಲಕ್ಷ್ಮಿ' ಧಾರಾವಾಹಿಯು ವಿಭಿನ್ನ ಕಥಾ ಹಂದರದ ಜೊತೆಗೆ ಪಾತ್ರವರ್ಗದ ಮೂಲಕವೂ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇಂತಿಪ್ಪ ಧಾರಾವಾಹಿಗೆ ಈಗ ಹೊಸ ಪಾತ್ರದ ಎಂಟ್ರಿಯಾಗಿದೆ. ಹೌದು, ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ಟೀಚರ್ ಆಗಿ ನಟಿಸುವ ಮೂಲಕ ಕಿರುತೆರೆಯಲ್ಲಿ ಮೋಡಿ ಮಾಡಲಿದ್ದಾರೆ ನಟಿ ಯಮುನಾ ಶ್ರೀನಿಧಿ.
ಧಾರಾವಾಹಿಯಲ್ಲಿ ಅತ್ತೆ ಕುಸುಮಾಳ ಮಾತಿಗೆ ಓಗೊಟ್ಟು ಸೊಸೆ ಭಾಗ್ಯ ಮತ್ತೆ ಶಾಲೆಗೆ ಹೋಗಬೇಕಾಗುತ್ತದೆ. ಏನೇ ಅಡೆತಡೆಗಳು ಬಂದರೂ ಸರಿಯೇ ಸೊಸೆಯನ್ನು ವಿದ್ಯಾವಂತಳನ್ನಾಗಿ ಮಾಡಿಯೇ ಮಾಡುತ್ತೇನೆ ಎಂದು ಪಣ ತೊಟ್ಟಾಗಿದೆ ಕುಸುಮ. ಅಂತೆಯೇ ಸೊಸೆಯನ್ನು ಶಾಲೆಗೆ ಸೇರಿಸಿದ್ದು ಆಕೆಯ ಶಿಕ್ಷಕಿಯ ಪಾತ್ರದಲ್ಲಿ ಯಮುನಾ ಶ್ರೀನಿಧಿ ಕಾಣಿಸಿಕೊಳ್ಳಲಿದ್ದಾರೆ.

ಸಂತಸ ಹಂಚಿಕೊಂಡ ಯಮುನಾ ಶ್ರೀನಿಧಿ
'ಕಮಲಿ' ಧಾರಾವಾಹಿಯ ನಂತರ ಕನ್ನಡ ಕಿರುತೆರೆಯಿಂದ ದೂರವಿದ್ದ ನಟಿ ಯಮುನಾ ಶ್ರೀನಿಧಿ ಇದೀಗ ಭಾಗ್ಯಲಕ್ಷ್ಮಿಯ ಮೂಲಕ ಕಿರುತೆರೆಗೆ ಮರಳುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ನಾಯಕಿ ಭಾಗ್ಯ ಜೊತೆಗಿರುವ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಯಮುನಾ ಶ್ರೀನಿಧಿ "ಇಂತಹ ವಿಶಿಷ್ಟ ಪಾತ್ರಗಳು ನಮಗೆ ಸಿಗುವುದು ಬಹಳ ಅಪರೂಪ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7 ಗಂಟೆಗೆ ಕಲರ್ಸ್ ಕನ್ನಡದಲ್ಲಿ.. ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ" ಎಂದು ಬರೆದುಕೊಂಡಿದ್ದಾರೆ.
ಖುಷಿಯಿಂದ ಒಪ್ಪಿಕೊಂಡ ಯಮುನಾ ಶ್ರೀನಿಧಿ
'ಭಾಗ್ಯಲಕ್ಷ್ಮಿ' ಧಾರಾವಾಹಿಯಲ್ಲಿನ ಟೀಚರ್ ಪಾತ್ರಕ್ಕಾಗಿ ನಿರ್ದೇಶಕರು ಯಮುನಾ ಶ್ರೀನಿಧಿ ಅವರನ್ನು ಸಂಪರ್ಕಿಸಿದಾಗ ಅವರು ಸಂತಸದಿಂದ ಒಪ್ಪಿಕೊಂಡರಂತೆ. ಅತ್ತೆಯೇ ತಮ್ಮ ಸೊಸೆಗೆ ವಿದ್ಯಾಭ್ಯಾಸವನ್ನು ಪ್ರೋತ್ಸಾಹಿಸುವ ಈ ಧಾರಾವಾಹಿಯು ಯಮುನಾ ಅವರಿಗೆ ತುಂಬಾವೇ ಇಷ್ಟವಾಯಿತಂತೆ. ಹಾಗಾಗಿ ಈ ಪಾತ್ರದಲ್ಲಿ ನಟಿಸುವ ಅವಕಾಶ ಬಂದಾಗ ಹಿಂದೆ ಮುಂದೆ ನೋಡದೆ ಒಪ್ಪಿಕೊಂಡರಂತೆ. ಈಗಾಗಲೇ ಯಮುನಾ ಶ್ರಿನಿಧಿ ಅವರು ಶೂಟಿಂಗ್ನಲ್ಲಿ ಭಾಗವಹಿಸಿದ್ದು, ಈ ಧಾರಾವಾಹಿಯ ಭಾಗವಾಗಿರುವುದು ಆಕೆಗೆ ಖುಷಿ ನೀಡಿದೆಯಂತೆ.

ಪ್ರೇಕ್ಷಕರು ನನಗಾಗಿ ಕಾಯುತ್ತಿದ್ದರು
ಸದ್ಯ ಕನ್ನಡ ಕಿರುತೆರೆಯಿಂದ ದೂರವಾಗಿ ಪರಭಾಷೆಯ ಕಿರುತೆರೆಯಲ್ಲಿ ಬ್ಯುಸಿಯಾಗಿರುವ ಯಮುನಾ ಶ್ರೀನಿಧಿ ಅವರ ಕಂ ಬ್ಯಾಕ್ಗೆ ಕಿರುತೆರೆ ವೀಕ್ಷಕರು ಕಾಯುತ್ತಿದ್ದರಂತೆ. ಅವರು ಸಿಕ್ಕಾಗ ಮತ್ಯಾವಾಗ ಕಿರುತೆರೆಗೆ ಮರಳುತ್ತೀರಿ ಎಂದು ಕೇಳುತ್ತಿದ್ದರಂತೆ. ಹಾಗಾಗಿ ಭಾಗ್ಯಲಕ್ಷ್ಮಿ ಧಾರಾವಾಹಿಯಿಂದ ಅವಕಾಶ ಬಂದಾಗ ಮತ್ತೆ ಕನ್ನಡ ಕಿರುತೆರೆಗೆ ಮರಳಲು ಇದು ಸರಿಯಾದ ಸಮಯ ಎಂದು ನಿರ್ಧಾರ ಮಾಡಿದರಂತೆ ಯಮುನಾ ಶ್ರೀನಿಧಿ.
ಮಹಿಳಾ ಶಿಕ್ಷಣದ ಮಹತ್ವ ಸಾರುತ್ತೆ
'ಭಾಗ್ಯಲಕ್ಷ್ಮಿ' ಧಾರಾವಾಹಿಯು ಬೇರೆ ಧಾರಾವಾಹಿಗಳಿಗಿಂತ ಭಿನ್ನವಾಗಿದ್ದು ಅದರಲ್ಲಿ ಮಹಿಳೆಯರ ಶಿಕ್ಷಣಕ್ಕೆ ಇರುವ ಮಹತ್ವವನ್ನು ತುಂಬಾ ಸೊಗಸಾಗಿ ತೋರಿಸಲಾಗಿದೆ. ಇದರ ಜೊತೆಗೆ ಮಹಿಳಾ ಶಿಕ್ಷಣದ ಮಹತ್ವದ ಬಗ್ಗೆ ಗ್ರಾಮೀಣ ಪ್ರದೇಶದ ಜನರಿಗೆ ಅರಿವು ಮೂಡಿಸುವ ಮಹತ್ಕಾರ್ಯದಲ್ಲಿ ಯಮುನಾ ಶ್ರಿನಿಧಿ ಭಾಗಿಯಾಗಿದ್ದಾರೆಯಂತೆ. ಇದೀಗ ರೀಲ್ನಲ್ಲಿ ಕೂಡಾ ಅದೇ ತರಹದ ಪಾತ್ರ ಸಿಕ್ಕಿದ್ದು ಅವರು ಖುಷಿ ಎಂದಿದ್ದಾರೆ.


Click it and Unblock the Notifications











