ಅವಕಾಶ ಬೇಕು ಅಂದರೆ, ನಿನ್ನ ಜಾತಕ ಕೊಡು ; ನಿರ್ಮಾಪಕನ ವಿಚಿತ್ರ ಬೇಡಿಕೆ - ಬೆಚ್ಚಿ ಬಿದ್ದ ನಟಿ
ವೈಜ್ಞಾನಿಕ ಯುಗದಲ್ಲಿದ್ದರೂ ಕೂಡ ಜ್ಯೋತಿಷ್ಯದ ಮೇಲೆ ಹಲವರಿಗೆ ನಂಬಿಕೆ ಇದೆ. ಜ್ಯೋತಿಷ್ಯ ಹೇಳುವುದೆಲ್ಲಾ ಸತ್ಯನಾ? ಎಲ್ಲವನ್ನೂ ಕುಂಡಲಿಯಲ್ಲಿರುವ ಗ್ರಹಗಳೇ ನಿರ್ಧರಿಸುವುದಾದರೆ ವಿಜ್ಞಾನಿಗಳೇಕೆ ? ವಿಜ್ಞಾನವೇಕೆ ? ಎನ್ನುವ ಪ್ರಶ್ನೆ ಎದ್ದರೂ ಕೂಡ ಜ್ಯೋತಿಷ್ಯದ ಸುತ್ತ ಕುತೂಹಲ ಹೆಚ್ಚಾಗಿದೆ. ಜ್ಯೋತಿಷ್ಯಶಾಸ್ತ್ರವು ವಿಜ್ಞಾನವೇ. ಅದರಲ್ಲಿರುವ ವೈಜ್ಞಾನಿಕ ಅಂಶಗಳನ್ನು ಸಾಕಷ್ಟು ಗ್ರಂಥಗಳಲ್ಲಿ ನೋಡಬಹುದು ಎಂಬ ಅಭಿಪ್ರಾಯ ಕೂಡ ವ್ಯಕ್ತವಾಗುತ್ತದೆ.
ಕೇವಲ ಜ್ಯೋತಿಷ್ಯ ಮಾತ್ರ ಅಲ್ಲ ಸಂಖ್ಯಾಶಾಸ್ತ್ರ ಮತ್ತು ರೇಖಾಶಾಸ್ತ್ರವನ್ನು ಕೂಡ ನಂಬುವ ಬಹುದೊಡ್ಡ ವರ್ಗ ಸದ್ಯ ಇದೆ. ಬೆಳ್ಳಿತೆರೆ ಮತ್ತು ಕಿರುತೆರೆ ಕೂಡ ಇದರಿಂದ ಹೊರತಾಗಿಲ್ಲ. ಮೊದಲಾದರೆ ಇಲ್ಲಿ ಪ್ರತಿಭೆಗೆ ಮನ್ನಣೆ ಸಿಗುತ್ತಿತ್ತು. ಪ್ರತಿಭೆ ಇದ್ದರೆ ಅವಕಾಶಗಳ ಹೆಬ್ಬಾಗಿಲು ತೆರೆಯುತ್ತಿತ್ತು. ಗೆಲ್ಲಲು ಮತ್ತು ಉಳಿಯಲು ಶ್ರಮ ಮಾತ್ರ ಸಾಕಿತ್ತು. ಆದರೆ ಈಗ ಕುಂಡಲಿ ಮುಖ್ಯ. ಚಿತ್ರರಂಗ ಮತ್ತು ಧಾರಾವಾಹಿಯಲ್ಲಿನ ಅವಕಾಶ ಮತ್ತು ಭವಿಷ್ಯವನ್ನು ಈಗ ಈ ಗ್ರಹಗತಿಗಳು ನಿರ್ಧಾರ ಮಾಡುತ್ತಾವೆ. ಇದಕ್ಕೆ ಕೈಗನ್ನಡಿಯೇ ಫಲಕ್ ನಾಜ್ ಅವರ ಮನದ ನೋವು.

ಹೌದು, ಫಲಕ್ ನಾಜ್ .. ಹಿಂದಿ ಕಿರುತೆರೆಯ ಚೆಲುವೆ. ಶಫಕ್ ನಾಜ್ ಮತ್ತು ಶೀಜಾನ್ ಖಾನ್ ಇವರ ಅಕ್ಕ ತಂಗಿ. ಈ ಮೂವರು ಬಣ್ಣದ ಪ್ರಪಂಚದಲ್ಲಿಯೇ ಬದುಕು ರೂಪಿಸಿಕೊಂಡಿದ್ದಾರೆ. ಬಾಲಿವುಡ್ನ ಪ್ರಖ್ಯಾತ ನೃತ್ಯ ನಿರ್ದೇಶಕಿ ಸರೋಜ್ ಖಾನ್ ಗರಡಿಯಲ್ಲಿ ಡ್ಯಾನ್ಸ್ ಕಲಿತ ಫಲಕ್ ನಾಜ್ ''ದೇವೋನ್ ಕೆ ದೇವ್... ಮಹಾದೇವ್'' ಧಾರಾವಾಹಿಯ ಮೂಲಕ ಕಿರುತೆರೆಯನ್ನು ಪ್ರವೇಶ ಮಾಡಿದರು. ಲಕ್ಷ್ಮೀ ದೇವಿಯ ಪಾತ್ರವನ್ನು ನಿರ್ವಹಿಸಿದ್ದರು.
''ಸಸುರಾಲ್ ಸಿಮರ್ ಕಾ''.. ''ರಾಧಾಕೃಷ್ಣ''.. ''ಮಹಾಕಾಳಿ - ಅಂತ ಹೀ ಆರಂಭ್ ಹೈ''.. ''ರಾಮ ಸೀತಾ ಕೆ ಲವ್ ಕುಶ್''.. ಇವರ ಕೆಲ ಪ್ರಮುಖ ಧಾರಾವಾಹಿಗಳು. ''ಬಿಗ್ ಬಾಸ್ '' ಓಟಿಟಿಯ ಎರಡನೇ ಸೀಸನ್ನಲ್ಲಿ ಕೂಡ ಭಾಗವಹಿಸಿದ್ದ ಫಲಕ್ 36 ದಿನ ಮನೆಯಲ್ಲಿದ್ದರು. ಇಂಥಾ ಪಲಕ್ ನಾಜ್ ಸದ್ಯ ಕಿರುತೆರೆಯಲ್ಲಿ ಕುಂಡಲಿ ಬೇಡಿಕೆಯನ್ನು ಕಂಡು ಕೆರಳಿದ್ದಾರೆ. ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.
ಹೌದು, ಅಸಲಿಗೆ ಫಲಕ್ ನಾಜ್ ಅವರನ್ನು ಇತ್ತೀಚೆಗೆ ನಿರ್ಮಾಣ ಸಂಸ್ಥೆಯೊಂದು ಸಂಪರ್ಕ ಮಾಡಿತ್ತು. ತಮ್ಮ ಮುಂದಿನ ಯೋಜನೆ ಕುರಿತು ಚರ್ಚೆ ಮಾಡಿತು. ಫಲಕ್ ಕೂಡ ಉತ್ಸುಕರಾಗಿದ್ದರು. ಎಲ್ಲರಂತೆ ಆಡಿಷನ್ ನೀಡಲು ಕೂಡ ಮುಂದಾಗಿದ್ದರು. ಆದರೆ.. ನಿರ್ಮಾಣ ಸಂಸ್ಥೆ ಇವರ ಅಭಿನಯ ನೋಡಲಿಲ್ಲ. ಕಲೆಗೆ ಕೂಡ ಗೌರವ ಕೊಡಲಿಲ್ಲ. ಬದಲಿಗೆ ಜನ್ಮ ಜಾತಕ ಕೇಳಿದೆ. ಜನ್ಮ ದಿನಾಂಕ, ಜನ್ಮ ಸ್ಥಳದ ಮಾಹಿತಿಯನ್ನೂ ಹಂಚಿಕೊಳ್ಳುವಂತೆ ತಿಳಿಸಿದೆ.
ಹೀಗಾಗಿ ಕೆರಳಿರುವ ಫಲಕ್ ನಾಜ್ ನಮ್ಮ ಕೆಲಸವನ್ನು ಈಗ ನಮ್ಮ ಜಾತಕ ನಿರ್ಧಾರ ಮಾಡುತ್ತಾ ಎಂದು ಪ್ರಶ್ನೆ ಮಾಡಿದ್ದಾರೆ. ಕಲಾವಿದರ ಅಭಿನಯ ಸಾಮರ್ಥ್ಯಕ್ಕಿಂತ ಜಾತಕಕ್ಕೆ ಈಗೀಗ ಹೆಚ್ಚೆಚ್ಚು ಒತ್ತು ನೀಡಲಾಗುತ್ತಿದೆ ಎಂದು ಹೇಳಿರುವ ಫಲಕ್ ನಾಜ್ ಯಾವತ್ತೂ ಕೆಲಸಕ್ಕೆ ಮೊದಲ ಆದ್ಯತೆ ಸಿಗಬೇಕು, ವೃತ್ತಿಪರತೆ ಇರಬೇಕು ಎಂದು ಕಿಡಿ ಕಾರಿದ್ದಾರೆ.

ಕಳೆದ 14-15 ವರ್ಷಗಳಿಂದ ನಾನು ಇಲ್ಲಿ ಕೆಲಸ ಮಾಡುತ್ತಿದ್ದೇನೆ. ಇಲ್ಲಿಯವರೆಗೆ ನನಗೆ ನನ್ನ ಪ್ರತಿಭೆ, ನಟನಾ ಕೌಶಲ್ಯ ಮತ್ತು ಕಲೆಗಾಗಿ ನನಗೆ ಕೆಲಸ ಸಿಕ್ಕಿದೆಯೇ ಹೊರತು ನನ್ನ ಜನ್ಮ ಜಾತಕದಿಂದಾಗಿ ನನಗೆ ಕೆಲಸ ಸಿಕ್ಕಿಲ್ಲ ಎಂದು ಹೇಳಿರುವ ಫಲಕ್ ಇಂದು ಅನೇಕ ಅನುಭವಿ ಕಲಾವಿದರ ಕೊರತೆ ಎದ್ದು ಕಾಣಲು ಇದೇ ಪ್ರಮುಖ ಕಾರಣ ಎಂಬ ಭಾವನೆ ನನಗೆ ಬರುತ್ತಿದೆ ಎಂದಿದ್ದಾರೆ.
ನನಗೆ ತುಂಬಾ ಕೋಪ ಬಂದಿದೆ. ಆ ದೇವರ ಮೇಲಾಣೆ ಇಷ್ಟು ವರ್ಷ ಕೆಲಸ ಮಾಡಿದ ನಂತರವೂ ಇಂತಹ ಪರಿಸ್ಥಿತಿ ಇರುವುದು ನಮ್ಮ ದೌರ್ಭಾಗ್ಯ, ದುರಂತ ಎಂದು ಹೇಳಿರುವ ಫಲಕ್, ಇದೆಲ್ಲವನ್ನು ಸಹಿಸಿಕೊಳ್ಳಲು ಸಾಧ್ಯ ಇಲ್ಲ ಎಂದು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ನೀವು ನಿರ್ಮಾಪಕರು ನಿರ್ಮಾಪಕರಾಗಿಯೇ ಇರಿ ದೇವರಾಗಬೇಡಿ ಎಂದಿದ್ದಾರೆ. ಫಲಕ್ ನಾಜ್ ಅವರ ಈ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.


Click it and Unblock the Notifications











