3 ವರ್ಷದ ಬಳಿಕ ಕಿರುತೆರೆಗೆ ಮರಳಿರೋ ಚಂದು ಗೌಡ.. ಹೊಸ 'ಕಥೆಯೊಂದು ಶುರುವಾಗಿದೆ'
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿ 'ಕಥೆಯೊಂದು ಶುರುವಾಗಿದೆ' ಯಶಸ್ವಿಯಾಗಿ 200 ಸಂಚಿಕೆ ಪೂರೈಸಿ ಮುನ್ನುಗ್ಗುತ್ತಿದೆ. ಧಾರಾವಾಹಿಯಲ್ಲಿ ನಾಯಕ ಯುವರಾಜ್ ಬಹದ್ಧೂರ್ ಆಗಿ ನಟಿಸಿ ವೀಕ್ಷಕರ ಮನ ಸೆಳೆಯುತ್ತಿರುವ ನಟ ಚಂದು ಗೌಡ ಈ ಪಯಣದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
"ಕಥೆಯೊಂದು ಶುರುವಾಗಿದೆ ಧಾರಾವಾಹಿಯು ನನ್ನ ಪಾಲಿಗೆ ತುಂಬಾ ಸುಂದರವಾದ ಅನುಭವ ಅಂಥ ಹೇಳ್ಬಹುದು. ನನಗೆ ಪುರುಷ ಪ್ರಾಮುಖ್ಯತೆ ಇರುವ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಬೇಕು ಎಂಬ ಆಸೆ ಮೊದಲಿನಿಂದಲೂ ಇತ್ತು. ಇದು ಸಂಪೂರ್ಣ ಪುರುಷ ಪ್ರಾಮುಖ್ಯತೆ ಇರುವ ಧಾರಾವಾಹಿ ಅಲ್ಲದಿದ್ದರೂ ನಾಯಕನ ಪಾತ್ರಕ್ಕೆ ಪ್ರಾಮುಖ್ಯತೆ ತುಂಬಾ ಇದೆ. ಅದೇ ಕಾರಣದಿಂದ ನಾನು ಈ ಹಿಂದೆ ತ್ರಿನಯಿನಿ ಧಾರಾವಾಹಿಯನ್ನು ಕೂಡಾ ಒಪ್ಪಿಕೊಂಡಿದ್ದು" ಎಂದು ಫಿಲ್ಮಿಬೀಟ್ ಜೊತೆಗೆ ಹಂಚಿಕೊಳ್ಳುತ್ತಾರೆ ಚಂದು ಗೌಡ.

ಜನರ ಪ್ರೀತಿ ಕಂಡು ಖುಷಿಯಾಗುತ್ತಿದೆ
ಇದರ ಜೊತೆಗೆ "ತೆರೆಯ ಮೇಲೆ ಹೀರೋ ಬಂದು ಸುಮ್ಮನೆ ನಿಂತುಕೊಳ್ಳುವಂತಹ ಪಾತ್ರ ಇದಲ್ಲ. ಏನಾದರೂ ಒಂದು ಮಾಡುತ್ತಲೇ ಇರುತ್ತಾನೆ. ಇದನ್ನು ಚೆನ್ನಾಗಿ ಈ ಧಾರಾವಾಹಿಯಲ್ಲಿ ತೋರಿಸಿದ್ದಾರೆ. ಇದು ನನಗೆ ತುಂಬಾ ಖುಷಿ ನೀಡಿದ ವಿಚಾರ. ಇನ್ನು ವೀಕ್ಷಕರು ಕೂಡಾ ಈ ಧಾರಾವಾಹಿಯನ್ನು ಮೆಚ್ಚಿಕೊಂಡಿದ್ದಾರೆ. ನನ್ನ ಪಾತ್ರವನ್ನು ಇಷ್ಟಪಟ್ಟಿದ್ದಾರೆ. ಟಿಆರ್ಪಿಯಲ್ಲಿಯೂ ಕೂಡಾ ಈ ಧಾರಾವಾಹಿ ಉತ್ತಮ ಸ್ಥಾನದಲ್ಲಿದೆ. ನಾನೆಲ್ಲೇ ಹೋದರೂ ಜನ ನನ್ನ ಬಗ್ಗೆ,ಧಾರಾವಾಹಿಯ ಬಗ್ಗೆ ಮಾತನಾಡುವಾಗ ಖುಷಿಯಾಗುತ್ತದೆ." ಎನ್ನುತ್ತಾರೆ ಚಂದು ಗೌಡ.
"3 ವರ್ಷದ ನಂತರ ಕಿರುತೆರೆಗೆ ಮರಳಿದೆ"
"ಲಕ್ಷ್ಮಿ ಬಾರಮ್ಮ ಧಾರಾವಾಹಿಯ ನಂತರ ನಾನು ಕನ್ನಡ ಕಿರುತೆರೆಯಿಂದ ದೂರವಿದ್ದೆ. ಜೀ ಕನ್ನಡ ವಾಹಿನಿಯಲ್ಲಿ ತ್ರಿನಯಿನಿ ಧಾರಾವಾಹಿ ಪ್ರಸಾರವಾಗುತ್ತಿದ್ದರೂ ಅದು ತೆಲುಗು ಧಾರಾವಾಹಿಯ ಡಬ್ಬಿಂಗ್. ಕನ್ನಡದ ಧಾರಾವಾಹಿಯಲ್ಲಿ ನಾನು ನಟಿಸುತ್ತಿಲ್ಲವಲ್ಲ ಎಂಬ ಕೊರಗಿತ್ತು ನನಗೆ. ಅದು ಈಗ ಕಥೆಯೊಂದು ಶುರುವಾಗಿದೆ ಧಾರಾವಾಹಿಯಿಂದ ದೂರವಾಗಿದೆ" ಎಂದು ಫಿಲ್ಮಿಬೀಟ್ ಜೊತೆಗೆ ಸಂತಸದಿಂದ ಹೇಳಿಕೊಂಡಿದ್ದಾರೆ ಚಂದು ಗೌಡ.

ಮನಸ್ಸಿಗೆ ಹತ್ತಿರವಾದ ಪಾತ್ರ
"ಯುವರಾಜ್ ಬಹದ್ದೂರ್ ಪಾತ್ರ ನನ್ನ ಮನಸ್ಸಿಗೆ ತುಂಬಾ ಹತ್ತಿರವಾಗಿರುವಂತಹ ಪಾತ್ರವೂ ಹೌದು. ಪ್ರತಿದಿನದ ಪಾತ್ರವೂ ಚಾಲೆಂಜಿಂಗ್ ಆಗಿರುವುದರಿಂದ ನಟಿಸುವುದಕ್ಕೆ ತುಂಬಾ ಖುಷಿಯಾಗುತ್ತದೆ. ಜೊತೆಗೆ ಸೀರಿಯಲ್ ಪ್ರಿಯರ ಪ್ರೋತ್ಸಾಹ, ಬೆಂಬಲವೇ ನಾನಿಂದು ಯುವರಾಜ್ ಬಹದ್ಧೂರ್ ಆಗಿ ಮಿಂಚಲು ಸಾಧ್ಯವಾಯಿತು" ಎಂದು ಹೇಳುತ್ತಾರೆ ಚಂದು ಗೌಡ.
ಲಕ್ ಕೂಡಾ ಮುಖ್ಯ
"ಈ ತರಹದ ಪಾತ್ರದ ಮೂಲಕ ಕಿರುತೆರೆಯಲ್ಲಿ ಗುರುತಿಸಿಕೊಳ್ಳುತ್ತಿರುವುದಕ್ಕೆ ನಾನು ತುಂಬಾನೇ ಅದೃಷ್ಟ ಮಾಡಿದ್ದೆ ಎಂದರೆ ತಪ್ಪಾಗಲಾರದು. ಹಾರ್ಡ್ ವರ್ಕ್, ಟ್ಯಾಲೆಂಟ್ ಒಂದು ಕಡೆ ಇದ್ರೆ, ಲಕ್ ಇನ್ನೊಂದು ಕಡೆ ಇದ್ದರೆ ಮಾತ್ರ ಹೀಗೆ ಗುರುತಿಸಿಕೊಳ್ಳಲು ಸಾಧ್ಯ. ಈ ವಿಚಾರದಲ್ಲಿ ಅದೃಷ್ಟ ನನ್ನ ಪಾಲಿಗಿದೆ. ದೇವರ ನನಗೆ ಒಂದು ಒಳ್ಳೆಯ ಅವಕಾಶವನ್ನು ಕರುಣಿಸಿದ್ದಾನೆ" ಎಂದು ಹೇಳುತ್ತಾರೆ ಚಂದು ಗೌಡ.
ಸಾವಿರ ಸಂಚಿಕೆ ದಾಟಬೇಕು
"ಕಥೆಯೊಂದು ಶುರುವಾಗಿದೆ ಧಾರಾವಾಹಿ ಈಗಾಗಲೇ ಇನ್ನೂರು ಸಂಚಿಕೆ ಪೂರೈಸಿದೆ. ಅದು ಸಾವಿರ ಸಂಚಿಕೆ ಪೂರೈಸಬೇಕು ಎಂಬುದೇ ನನ್ನ ಆಸೆ. ಯಾಕೆಂದರೆ, ನಾನು ನಟಿಸಿರುವ ಲಕ್ಷ್ಮಿ ಬಾರಮ್ಮ ಧಾರಾವಾಹಿ, ತ್ರಿನಯಿನಿ ಧಾರಾವಾಹಿಯು ಸಾವಿರ ಸಂಚಿಕೆ ಪೂರೈಸಿದೆ. ಇದು ಕೂಡಾ ಸಾವಿರ ಸಂಚಿಕೆ ಪೂರೈಸಲಿ ಎಂಬುದೇ ನನ್ನ ಹಾರೈಕೆ" ಎಂದು ಫಿಲ್ಮಿಬೀಟ್ ಜೊತೆಗೆ ಮನ ಬಿಚ್ಚಿ ಮಾತನಾಡಿದ್ದಾರೆ ಚಂದು ಗೌಡ.


Click it and Unblock the Notifications











